ಗಾಣದಲ್ಲಿ ಸಿಲುಕಿದ ಎಳ್ಳು
ನೋಯದೆ ಎಣ್ಣೆಯ ಬಿಡುವುದೆ
ಕಾಯದಲ್ಲಿ ಸಿಲುಕಿದ ಜೀವ
ನೋಯದೆ ಕರಣಂಗಳ ಬಿಡುವನೆ
ಭಾವದಲ್ಲಿ ಸಿಲುಕಿದ ಭ್ರಮೆ
ನೋಯದೆ ವಿಕಾರವ ಬಿಡುವುದೆ
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ
ವೇದ ಎಂದರೆ ಜ್ಞಾನವಂತೆ. ವೇದನೆ ಎಂದರೆ ನೋವು. ನೋಯದೆ ಜ್ಞಾನವಿಲ್ಲ.
ಭಾವಗಳು ಭ್ರಮೆಗೆ ಕಾರಣ. ನಮಗೆ ಇಷ್ಟವಾದದ್ದು, ಪ್ರಿಯವಾದದ್ದು, ಅವು ಮಾತ್ರವೇ ಒಳ್ಳೆಯದು ಎಂದು ತಿಳಿಯುವುದು, ಅವನ್ನೇ ಆಶಿಸುವುದು, ಹೊಂದಲು ಬಯಸುವುದು ಇವೆಲ್ಲ ಸಹಜವೆಂದು ತೋರಿದರೂ ನಿಜವಾಗಿ ಭ್ರಮೆಗಳೇ. ಭ್ರಮೆಗಳು ಹುಟ್ಟುವುದೇ ಇಷ್ಟ, ಇಷ್ಟವಿಲ್ಲ, ಬೇಕು, ಬೇಡ, ಇತ್ಯಾದಿ ಭಾವಗಳಿಂದ. ನೋವಿನಿಂದ ಮಾತ್ರವೇ ಇಂಥ ಭ್ರಮೆ ಇಲ್ಲವಾಗುವುದು. ನೋವನ್ನು ತಿಳಿಯದಿದ್ದರೆ ಜ್ಞಾನದ ಲೇಪ ಇಲ್ಲ. ಲೇಪ ಅಂದರೆ ಮುಲಾಮು ಕೂಡ ಹೌದು. ನೋವಿಗೆ ಔಷಧ ತಿಳಿವಳಿಕೆಯೊಂದೇ.
*********************************
ಇಂದು ಇದು ಅತೀವವಾಗಿ ಮನವನ್ನು ಎಚ್ಚರಿಸಿದ ವಚನ ನಾನು ಕೆಂಡಸಂಪಿಗೆಯಲ್ಲಿ ಓದಿದ್ದು. ಓದಿದ್ದನ್ನು ಸ್ವಲ್ಪವಾದರೂ ಜೀವನದಲ್ಲಿ ಅಳವಡಿಸಿಕೊಳ್ಳಲು , ಒರೆ ಹಚ್ಚಿ ನೋಡಿಕೊಳ್ಳಲು, ಮನಸ್ಸಿಗೆ ಹಿಡಿದ ಭ್ರಮೆಯಲ್ಲಿ ನೊಂದು ಈಗ ಭ್ರಮೆಯೆಂಬ ವಿಕಾರವನ್ನು ತೊಡೆದೆನೆಂಬ ಸಮಾಧಾನಕ್ಕಾಗಿ ಕಾಯುತ್ತಿದ್ದೇನೆ.
1 comment:
ರೇಣುಕಾ ಅವರೆ
"ಬ್ಲಾಗ್ ಪ್ರಪಂಚ"ಕ್ಕೆ ಸ್ವಾಗತ. ತುಂಬಾ ಇಷ್ಟವಾದುವು ನಿಮ್ಮಬರಹಗಳು. ಶೈಲಿ ಇನ್ನೂ ಇಷ್ಟವಾಯ್ತು. ಬರೆಯುತ್ತಿರಿ, ಓದುತ್ತಿರುತ್ತೇನೆ.
Post a Comment