ಮನಸಿನ ಮಾತು
ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ , ನೆಲೆಯಿರದೇ ತೊಳಲುವುದು ಮನುಜ ಜೀವನವು !! ( ಅಡಿಗರು)
Thursday, April 28, 2011
Wednesday, June 11, 2008
ಸ್ನೇಹ ನೀಡಿ ನಡೆಯುವವರೇ ಸ್ನೇಹಿತರು
ಸುಮಾರು ಬಾರಿ ಯಾರು ಹಿತವರು ಎನಗೆ? ಎಂದು ಪ್ರಶ್ನಿಸಿಕೊಂಡಾಗೆಲ್ಲ, ನನ್ನವರೆನ್ನುವ , ಎಂದುಕೊಂಡ ಅವನು ನನಗೆ ಯಾವತ್ತೂ ಯಾತಕ್ಕೂ ಆಗಿಲ್ಲ, ಮತ್ತು ಆಗುವುದಿಲ್ಲ ಎಂಬ ಸತ್ಯ ಹೊಳೆದು ಮನ ಮುದುಡುತ್ತದೆ. ನಾನು ಸದಾ ಪರಕೀಯರೆಂದು, ನಿರ್ವಿಕಾರಭಾವ ತೋರಿದವರು ನನ್ನ ಕೆಟ್ಟ ಸಮಯಕ್ಕೆ ಒದಗಿ ಬಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತೆ, ಆಗಾಧ ಪಟ್ಟುಕೊಳ್ಳುವಂತೆ, ವಿಚಿತ್ರವಾದ ವಿಸ್ಮಯದಿಂದ ಮೂಕಳಾಗುವಂತೆ ಮಾಡಿ, ನನ್ನನ್ನು ಮತ್ತೆ ಮತ್ತೆ ವಿಸ್ಮಯ ಮತ್ತು ವಿಭ್ರಮೆಗಳ ಸುಳಿಗೆ ಸಿಲುಕಿಸಿದ್ದಾರೆ. ಅವನ ಹತ್ತಿರ ಎನೆಲ್ಲ ಹೇಳಿಕೊಳ್ಳುವುದು ಇರುತ್ತದೆ, ಆದರೆ ಅವನಿಗೆ ನನಗಾಗಿ ಐದು ನಿಮಿಷಗಳೂ ಇಲ್ಲ. ಹೀಗೆ, ಇಂಥ ತೊಂದರೆಯಾಗಿದೆ, ಎಂದು ಉಸುರುವ ನೋವೂ ನನ್ನದೇ ಗಂಟಲಲ್ಲಿ ಉಳಿದು , ಹೇಳಬಾರದ ಇನ್ಯಾರಿಗೋ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತದೆ. ಯಾಕೆ ಅವನಿಗೆ ನನ್ನ ಇರುವಿಕೆಯ ಆಭಾಸವಾಗಲೀ, ಅಗತ್ಯವಾಗಲಿ ಇಲ್ಲವೇ? ಯಾವ ಪುರುಷಾರ್ಥಕ್ಕೆ ನನಗೆ ಅವ ’ನನ್ನವ’ನೆಂದು ಹೇಳಿಕೊಳ್ಳಲಿ ? ಆತನ ಆಗು-ಹೋಗುಗಳ ನಡುವೆ ನಾನಿಲ್ಲ, ಅವನ ಅರಳುವ ಬೆಳಗಿನ ಮುಸುಕಿನಲ್ಲಿ ನನ್ನ ನೆನಪಿಲ್ಲ, ಕಂದುವ ಇರುಳೀನಲ್ಲೂ ನನ್ನ ನೆನೆಯುವಿಕೆಯ ಕುರುಹಿಲ್ಲ. ಅಂಥವನನ್ನು ಇನ್ನೂ ನನ್ನವ ನನ್ನವನೆಂದು ಪರದಾದುತ್ತೇನಲ್ಲವೆನಿಸಿ ನನಗೆ ನಾನೆ ಬೈದುಕೊಳ್ಳುತ್ತೇನೆ. ದೂರದ ಇನ್ಯಾರೋ ನನಗೆ ಬೇಕಿಲ್ಲದ ಇನ್ಯಾರೋ ನನ್ನವರೆಂಬ ಕಳಕಳಿಯಿಂದಲೋ, ಅನುಕಂಪದಿಂದಲೋ, ಯಾವುದೋ ಹೆಸರಿಲ್ಲದ ಭಾವನೆಯೊಂದಿಗೆ ಎನಾದರೂ ಮಾಡಿದಾಗ ನನಗೇ ದಿಕ್ಕು ತಪ್ಪಿದ, ಯಾವುದೋ ಹಾದಿ ತಪ್ಪಿ ಬಂದ ಅನುಭವ ನೋವುಕೊಡುತ್ತದೆ. ಹಾಗೆ ಒಂದು ಥ್ಯಾಂಕ್ಸ್ ಹೇಳಿ, ಮುಗುಳ್ನಕ್ಕು ನನ್ನ ಮಂಜು ಮಾಂಜಾದ ನೋಟದೊಳಗೆ ಅವನು ಮರೆಯಾಗದಂತೆ ಮರುಕಳಿಸಿಕೊಂಡಂತೆ, ಯಾರೋ ನೀಡಿದ ನೋವು ಮೀಟಿ ತಲ್ಲಣಿಸುವಂತೆ ತೊಳಲಾಡುತ್ತಿರುತ್ತೇನೆ. ಇದೆಲ್ಲ ನಿನಗೆ ಯಾಕೆ ಅರ್ಥವಾಗುವುದಿಲ್ಲ?
ಸುಮ್ಮನೆ ಒದ್ದಾಡುವದಕ್ಕಿಂತ, ನಿನ್ನ ಜೊತೆ ವಾದಿಸಿ ,ಸೈಕಿ ಎನ್ನಿಸಿಕೊಳ್ಳುವುದಕ್ಕಿಂತ ಮೌನವಾಗಿರುವುದೇ ಕ್ಷೇಮ, ಸಮಯ ಹೇಗೆ ನಡೆಸಿಕೊಂಡು ಹೋಗುತ್ತದೋ ಹೋಗಲಿ, ಅನುಬಂಧ ಎಲ್ಲಿವರೆಗೆ ಕೈ ಹಿಡಿದು ನಡೆಸುತ್ತದೋ ನಡೆಸಲಿ. ಯಾವಾಗ ನಿನಗೆ ನನ್ನ ಇರುವಿಕೆಯ ನವಿರಾದ ಭಾವ, ಸ್ನೇಹ, ಉಕ್ಕುವ ಪ್ರೇಮ , ಅನುಭವ, ಅಗತ್ಯ ಕಾಣುತ್ತದೋ, ಆಗ ನಾ ಅನುಭವಿಸಿದ ನೋವುಗಳೆಲ್ಲ ನಿನ್ನವಾಗಿ, ಖಾಲಿತನದ ಶೂನ್ಯ ಬಿಂದುವಿನಲ್ಲಿ ನನ್ನನರಸುವ ನಿನ್ನ ಕಣ್ಣುಗಳಿಗಾಗಿ ನಾ ಕಾಯುತ್ತಿರುತ್ತೇನೆ ಇಂಥವೇ ಹಲ ಕೆಲ ಸ್ವಗತಗಳಲ್ಲಿ.
ಇದ್ದೂ ಇಲ್ಲದಂತಿರುವ ನರಳಿಕೆಗಿಂತ ಇಲ್ಲದೆಯೂ ಇದ್ದೆನೆನ್ನುವ ಬೆಚ್ಚನೆಯ ಸ್ನೇಹ ಎಷ್ಟು ಸುಂದರವಲ್ಲವಾ?
Wednesday, May 14, 2008
ಎದೆಯು ಮರಳಿ ತೊಳಲುತಿದೆ
ದೊರೆಯುದದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿಬಾಳು ಚಾಚುತಿದೆ
ತನ್ನ ಕುಡಿಯನು.
ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು.
ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟದಲಿದೆ ಮನದಲಿ !
ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ ?
ಯಾವ ಬಲವು ಯಾವ ಒಲವು
ಕಾಯಬೇಕೋ ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ ?
----- ಎಮ್. ಗೋಪಾಲಕೃಷ್ಣ ಅಡಿಗ.
Wednesday, April 30, 2008
ವಚನ
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯ
ಹರಿಯುವ ಹೊಳೆಗೆ ಮೈಯೆಲ್ಲ ಕಾಲೇ ಆಗಿರುವಂತೆ, ಉರಿವ ಬೆಂಕಿಗೆ ಮೈಯೆಲ್ಲ ಬಾಯೇ ಆಗಿರುವಂತೆ, ಬೀಸುವ ಗಾಳಿಗೆ ಮೈಯೆಲ್ಲ ಕೈಯೇ ಆಗಿರುವಂತೆ ನಿಜವಾದ ಶರಣ, ಲಿಂಗದೊಡನೆ, ಇಡೀ ಸೃಷ್ಟಿಯೊಡನೆ ಒಂದಾದವನಾದ್ದರಿಂದ ಅವನ ಸರ್ವಾಂಗವೂ ಲಿಂಗವೇ. ಅವನು ಬೇರೆಯಲ್ಲ, ಲಿಂಗ ಬೇರೆಯಲ್ಲ.
ಎರಡಿಲ್ಲದ ಐಕ್ಯದ ಸ್ಥಿತಿಯನ್ನು ಅಲ್ಲಮನ ಈ ವಚನ ವಿವರಿಸುತ್ತದೆ. ( ಕೆಂಡಸಂಪಿಗೆಯಿಂದ)
ಬಿಂದಿಯಾ -೨
Wednesday, April 16, 2008
ಕನಸಿನೊಳಗೊಂದು ಕಣಸು - ಬೇಂದ್ರೆ ಕವನ
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"
"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"
"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"
"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?
"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"
"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"
"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"
"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"
"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"
"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"
"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"
"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"
"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?
"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"
"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ
"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"
"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು