Thursday, April 28, 2011

Wednesday, June 11, 2008

ಸ್ನೇಹ ನೀಡಿ ನಡೆಯುವವರೇ ಸ್ನೇಹಿತರು

ಸುಮಾರು ಬಾರಿ ಯಾರು ಹಿತವರು ಎನಗೆ? ಎಂದು ಪ್ರಶ್ನಿಸಿಕೊಂಡಾಗೆಲ್ಲ, ನನ್ನವರೆನ್ನುವ , ಎಂದುಕೊಂಡ ಅವನು ನನಗೆ ಯಾವತ್ತೂ ಯಾತಕ್ಕೂ ಆಗಿಲ್ಲ, ಮತ್ತು ಆಗುವುದಿಲ್ಲ ಎಂಬ ಸತ್ಯ ಹೊಳೆದು ಮನ ಮುದುಡುತ್ತದೆ. ನಾನು ಸದಾ ಪರಕೀಯರೆಂದು, ನಿರ್ವಿಕಾರಭಾವ ತೋರಿದವರು ನನ್ನ ಕೆಟ್ಟ ಸಮಯಕ್ಕೆ ಒದಗಿ ಬಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಂತೆ, ಆಗಾಧ ಪಟ್ಟುಕೊಳ್ಳುವಂತೆ, ವಿಚಿತ್ರವಾದ ವಿಸ್ಮಯದಿಂದ ಮೂಕಳಾಗುವಂತೆ ಮಾಡಿ, ನನ್ನನ್ನು ಮತ್ತೆ ಮತ್ತೆ ವಿಸ್ಮಯ ಮತ್ತು ವಿಭ್ರಮೆಗಳ ಸುಳಿಗೆ ಸಿಲುಕಿಸಿದ್ದಾರೆ. ಅವನ ಹತ್ತಿರ ಎನೆಲ್ಲ ಹೇಳಿಕೊಳ್ಳುವುದು ಇರುತ್ತದೆ, ಆದರೆ ಅವನಿಗೆ ನನಗಾಗಿ ಐದು ನಿಮಿಷಗಳೂ ಇಲ್ಲ. ಹೀಗೆ, ಇಂಥ ತೊಂದರೆಯಾಗಿದೆ, ಎಂದು ಉಸುರುವ ನೋವೂ ನನ್ನದೇ ಗಂಟಲಲ್ಲಿ ಉಳಿದು , ಹೇಳಬಾರದ ಇನ್ಯಾರಿಗೋ ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತದೆ. ಯಾಕೆ ಅವನಿಗೆ ನನ್ನ ಇರುವಿಕೆಯ ಆಭಾಸವಾಗಲೀ, ಅಗತ್ಯವಾಗಲಿ ಇಲ್ಲವೇ? ಯಾವ ಪುರುಷಾರ್ಥಕ್ಕೆ ನನಗೆ ಅವ ’ನನ್ನವ’ನೆಂದು ಹೇಳಿಕೊಳ್ಳಲಿ ? ಆತನ ಆಗು-ಹೋಗುಗಳ ನಡುವೆ ನಾನಿಲ್ಲ, ಅವನ ಅರಳುವ ಬೆಳಗಿನ ಮುಸುಕಿನಲ್ಲಿ ನನ್ನ ನೆನಪಿಲ್ಲ, ಕಂದುವ ಇರುಳೀನಲ್ಲೂ ನನ್ನ ನೆನೆಯುವಿಕೆಯ ಕುರುಹಿಲ್ಲ. ಅಂಥವನನ್ನು ಇನ್ನೂ ನನ್ನವ ನನ್ನವನೆಂದು ಪರದಾದುತ್ತೇನಲ್ಲವೆನಿಸಿ ನನಗೆ ನಾನೆ ಬೈದುಕೊಳ್ಳುತ್ತೇನೆ. ದೂರದ ಇನ್ಯಾರೋ ನನಗೆ ಬೇಕಿಲ್ಲದ ಇನ್ಯಾರೋ ನನ್ನವರೆಂಬ ಕಳಕಳಿಯಿಂದಲೋ, ಅನುಕಂಪದಿಂದಲೋ, ಯಾವುದೋ ಹೆಸರಿಲ್ಲದ ಭಾವನೆಯೊಂದಿಗೆ ಎನಾದರೂ ಮಾಡಿದಾಗ ನನಗೇ ದಿಕ್ಕು ತಪ್ಪಿದ, ಯಾವುದೋ ಹಾದಿ ತಪ್ಪಿ ಬಂದ ಅನುಭವ ನೋವುಕೊಡುತ್ತದೆ. ಹಾಗೆ ಒಂದು ಥ್ಯಾಂಕ್ಸ್ ಹೇಳಿ, ಮುಗುಳ್ನಕ್ಕು ನನ್ನ ಮಂಜು ಮಾಂಜಾದ ನೋಟದೊಳಗೆ ಅವನು ಮರೆಯಾಗದಂತೆ ಮರುಕಳಿಸಿಕೊಂಡಂತೆ, ಯಾರೋ ನೀಡಿದ ನೋವು ಮೀಟಿ ತಲ್ಲಣಿಸುವಂತೆ ತೊಳಲಾಡುತ್ತಿರುತ್ತೇನೆ. ಇದೆಲ್ಲ ನಿನಗೆ ಯಾಕೆ ಅರ್ಥವಾಗುವುದಿಲ್ಲ?

ಸುಮ್ಮನೆ ಒದ್ದಾಡುವದಕ್ಕಿಂತ, ನಿನ್ನ ಜೊತೆ ವಾದಿಸಿ ,ಸೈಕಿ ಎನ್ನಿಸಿಕೊಳ್ಳುವುದಕ್ಕಿಂತ ಮೌನವಾಗಿರುವುದೇ ಕ್ಷೇಮ, ಸಮಯ ಹೇಗೆ ನಡೆಸಿಕೊಂಡು ಹೋಗುತ್ತದೋ ಹೋಗಲಿ, ಅನುಬಂಧ ಎಲ್ಲಿವರೆಗೆ ಕೈ ಹಿಡಿದು ನಡೆಸುತ್ತದೋ ನಡೆಸಲಿ. ಯಾವಾಗ ನಿನಗೆ ನನ್ನ ಇರುವಿಕೆಯ ನವಿರಾದ ಭಾವ, ಸ್ನೇಹ, ಉಕ್ಕುವ ಪ್ರೇಮ , ಅನುಭವ, ಅಗತ್ಯ ಕಾಣುತ್ತದೋ, ಆಗ ನಾ ಅನುಭವಿಸಿದ ನೋವುಗಳೆಲ್ಲ ನಿನ್ನವಾಗಿ, ಖಾಲಿತನದ ಶೂನ್ಯ ಬಿಂದುವಿನಲ್ಲಿ ನನ್ನನರಸುವ ನಿನ್ನ ಕಣ್ಣುಗಳಿಗಾಗಿ ನಾ ಕಾಯುತ್ತಿರುತ್ತೇನೆ ಇಂಥವೇ ಹಲ ಕೆಲ ಸ್ವಗತಗಳಲ್ಲಿ.
ಇದ್ದೂ ಇಲ್ಲದಂತಿರುವ ನರಳಿಕೆಗಿಂತ ಇಲ್ಲದೆಯೂ ಇದ್ದೆನೆನ್ನುವ ಬೆಚ್ಚನೆಯ ಸ್ನೇಹ ಎಷ್ಟು ಸುಂದರವಲ್ಲವಾ?

Wednesday, May 14, 2008

ಎದೆಯು ಮರಳಿ ತೊಳಲುತಿದೆ

ಎದೆಯು ಮರಳಿ ತೊಳಲುತಿದೆ,
ದೊರೆಯುದದನೆ ಹುಡುಕುತಿದೆ;
ಅತ್ತ ಇತ್ತ ದಿಕ್ಕುಗೆಟ್ಟು
ಬಳ್ಳಿಬಾಳು ಚಾಚುತಿದೆ
ತನ್ನ ಕುಡಿಯನು.

ಸಿಗಲಾರದ ಆಸರಕೆ
ಕಾದ ಕಾವ ಬೇಸರಕೆ
ಮಿಡುಕಿ ದುಡುಕಲೆಳಸುತಿದೆ
ತನ್ನ ಗಡಿಯನು.

ಅದಕು ಇದಕು ಅಂಗಲಾಚಿ
ತನ್ನೊಲವಿಗೆ ತಾನೆ ನಾಚಿ
ದಡವ ಮುಟ್ಟಿ ಮುಟ್ಟದೊಲು
ಹಿಂದೆಗೆಯುವ ವೀಚಿ ವೀಚಿ
ಮುರುಟದಲಿದೆ ಮನದಲಿ !

ನೀರದಗಳ ದೂರತೀರ
ಕರೆಯುತಲಿದೆ ಎದೆಯ ನೀರ,
ಮೀರುತಲಿದೆ ಹೃದಯಭಾರ
ತಾಳಲೆಂತು ನಾ ?

ಯಾವ ಬಲವು ಯಾವ ಒಲವು
ಕಾಯಬೇಕೋ ಅದರ ಹೊಳವು
ಕಾಣದೆ ದಳ್ಳಿಸಲು ಮನವು
ಬಾಳಲೆಂತು ನಾ ?

----- ಎಮ್. ಗೋಪಾಲಕೃಷ್ಣ ಅಡಿಗ.

Wednesday, April 30, 2008

ವಚನ

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯ


ಹರಿಯುವ ಹೊಳೆಗೆ ಮೈಯೆಲ್ಲ ಕಾಲೇ ಆಗಿರುವಂತೆ, ಉರಿವ ಬೆಂಕಿಗೆ ಮೈಯೆಲ್ಲ ಬಾಯೇ ಆಗಿರುವಂತೆ, ಬೀಸುವ ಗಾಳಿಗೆ ಮೈಯೆಲ್ಲ ಕೈಯೇ ಆಗಿರುವಂತೆ ನಿಜವಾದ ಶರಣ, ಲಿಂಗದೊಡನೆ, ಇಡೀ ಸೃಷ್ಟಿಯೊಡನೆ ಒಂದಾದವನಾದ್ದರಿಂದ ಅವನ ಸರ್ವಾಂಗವೂ ಲಿಂಗವೇ. ಅವನು ಬೇರೆಯಲ್ಲ, ಲಿಂಗ ಬೇರೆಯಲ್ಲ.
ಎರಡಿಲ್ಲದ ಐಕ್ಯದ ಸ್ಥಿತಿಯನ್ನು ಅಲ್ಲಮನ ಈ ವಚನ ವಿವರಿಸುತ್ತದೆ. ( ಕೆಂಡಸಂಪಿಗೆಯಿಂದ)

ಬಿಂದಿಯಾ -೨

ದಿನವೂ ಹೊಸತು, ಪ್ರತಿದಿನ ಉದಯಿಸುವ ಸೂರ್ಯ ಹೊಸತು, ಚಂದ್ರನ ಬೆಳಕು ಹೊಸತು, ದಿನವೂ ಅರಳುವ ಹೂವು ಹೊಸತು, ಮಿನುಗುವ ಚುಕ್ಕಿ , ಕೋಗಿಲೆ ಹಾಡಿನ ಜಾಡು, ನಾವು ಆಡುವ ಮಾತು ಹೊಸತಾಗಿಯೇ ಇರುತ್ತದೆ. ಹಳತಾಗಿರುವುದಿಲ್ಲ. ಹಾಗೆ ನೋಡಿದರೆ ಹಳತಾವುದೂ ಇಲ್ಲವೇ ಇಲ್ಲ. ದಿನವೂ ಚುಮು ಚುಮು ಮುಂಜಾನೆ ಸುಪ್ರಭಾತದ ಮೊದಲ ಕಿರಣ ನೆಲಕ್ಕೆ ತಾಕುವವರೆಗೂ ಹಳತಾಗಿ ಕತ್ತಲೆಯಲ್ಲಿ ಅಡಗಿದ್ದ ಎಲ್ಲವೂ ಹೊಸತಾಗಿ ನಳನಳಿಸತೊಡಗುತ್ತದೆ. ಆದರೂ ಹಳತಾಗಿರುವುದು ನಮ್ಮ ಮನದಲ್ಲಿನ ಹಳಹಳಿಕೆ, ಅಪೂರ್ಣವಾದ ಕನಸು ಪೂರ್ತಿಯಾಗದ ಹಳಹಳಿಕೆಯಲ್ಲಿ ಮನಸ್ಸಿಗೆ ಮಾತ್ರ ಮುತ್ತಿರುತ್ತೆ. ಹೀಗೆ ಯೋಚಿಸುವ ಮನಸ್ಸು ಬುದ್ಧಿಗೆ ಕಡಿವಾಣ ಹಾಕಬೇಕೆಂದರೂ ಅದೂ ನಮ್ಮ ಕೈಲಿಲ್ಲವಲ್ಲ. ಯೋಚನೆಗಳ ಉಗ್ರಾಣ ಈ ಮನಸ್ಸು. ಸದಾ ಕಾರ್ಖಾನೆಯಂತೆ ನಡೆಯುತ್ತಲೇ ಇರುತ್ತದೆ. ಕಿರಿ ಕಿರಿಯಾಗಿ ಒಮ್ಮೆ, ಹಿರಿ ಹಿರಿ ಹಿಗ್ಗಾಗಿ ಒಮ್ಮೆ.
ನಿನ್ನೆ ತನಗೆ ಫ್ರೆಂಚ್ ಕೋರ್ಸ ನಲ್ಲಿ ಒಳ್ಳೆ ಅಂಕ ಬಂದಿದೆಯೆಂದು ಬಿಂದಿಯಾ ಟ್ರೀಟ್ ಕೊಟ್ಟಳು. ಹಾಗೇ ಅವಳ ಇನ್ನೂ ಕೆಲವು ಟ್ರೀಟ್ ಗಳು ಬಾಕಿ ಇವೆ. ನಾನು ಹಾಗೆ ತಿಂಡಿಪೋತಿಯೂ ಅಲ್ಲ, ನನಗೆ ಟ್ರೀಟ್ ಹೆಸರಿನಲ್ಲಿ ಸುಮ್ಮ ಸುಮ್ಮನೇ ಖರ್ಚುಮಾಡುವುದೂ, ಮಾಡಿಸುವುದೂ ಇಷ್ಟವಿಲ್ಲ. ಆಫೀಸಿನ ಹತ್ತಿರದ ಕೈಲಾಸ್ ಕಾಲೋನಿ ಮಾರ್ಕೆಟ್ಟಿನಲ್ಲಿನ’ಅನುಪಮ್’ ರೆಸ್ಟೋರಾಂಟ್ ನಲ್ಲಿ ಇಬ್ಬರೂ ಛೋಲೆ ಭಟೂರಾ, ಹಾಗೂ ಒನ್ ಬೈ ಟೂ ಮಾಡಿ ಅನ್ನ- ಮಖನೀ ದಾಲ್ ತಗೊಂಡೆವು. ಅದೂ ಇದೂ ಆಫೀಸಿನ ಗಾಸಿಪ್ ಮಾಡುತ್ತಾ, ಅವರಿವರ ರೆಸಿಗ್ನೇಶನ್ನು, ಪ್ರೋಮೋಶನ್ನು ಇತ್ಯಾದಿಗಳನ್ನು ಮಾತಾಡುತ್ತಾ ಉಣ್ಣುತ್ತಿದ್ದೇವು.
ನಡುವೆಯೇ ನೆನಪಾಯಿತು ಮೊನ್ನೆ ಮೊನ್ನೆ ಬಿಂದಿಯ ವೇದನ ಬಗ್ಗೆ ಹೇಳುತ್ತಿದ್ದಳು- ಅವನಿಗೆ ಹುಷಾರಿಲ್ಲ, ಬ್ರಿಟನ್ನಿಂದಾ ಮಾತಾಡಿದ, ತುಂಬಾ ಮಿಸ್ ಮಾಡ್ತಾನಂತೆ ಅವಳನ್ನು, SMS ಮಾಡ್ತಾ ಇರ್ತಾನೆ, ನಾನೂ ಅವನಿಗೆ ಸಮಾಧಾನ ಹೇಳಿದೆ, Afterall , ನಾನವನೊಂದಿಗೆ ಭಾವಹೀನಳಂತಿರಲು ಹೇಗೆ ಸಾಧ್ಯ? ಮಗೂನ ನೋಡ್ಕೊತಾನಲ್ಲಾ, ಚೆನ್ನಾಗಿ ನೋಡ್ಕೊಬೇಕು. ನಾನಿದ್ದರೇ ಅವನನ್ನು ಚೆನ್ನಾಗಿ ನೋಡ್ಕೊತಿದ್ದೆ. ಈಗ ಅವನಿಗೆ ಹಾಗನ್ನಿಸುತ್ತಿದೆ. ನನಗೂ ಅನ್ನಿಸುತ್ತದೆ ಯಾರ್, ಕಡೇ ಪಕ್ಷ ಅವನಿಗೆ ನಾನು ಇಂಪಾರ್ಟೆನ್ಸ್ ಕೋಡ್ತಿನಿ, ಈಗ ಅವನಿಗೆ ನನ್ನ ಬಗ್ಗೆ ತುಂಬಾ ಪ್ರೀತಿ, ಅನುಕಂಪ. ನನಗೆ ವಾಪಸ್ಸು ಬಾ’ ಅಂದಾ.....ಹಾಗೇ ಬೇರೆ ಪ್ರೋಪೋಸಲ್ ಗಳೂ ಬಂದಿದ್ವು, ಆದ್ರೆ ನಾನೇ ಯಾವುದಕ್ಕೂ ಮನಸ್ಸು ಮಾಡ್ತಿಲ್ಲ. ವೇದನನ್ನು ಗೊತ್ತಿರುವಂತೆ, ಹೊಸಬನೊಂದಿಗೆ ಹೊಸ ಜೀವನ ಯೋಚಿಸುವುದಕ್ಕೆ ಸಮಯ ಬೇಕು ಎನ್ನುತ್ತಿದ್ದಳು. ನಾನೂ ಹೇಳಿದೆ, ಹೌದು, dont take any hasty decision at any condition ಎಂದು ಮಾತು ಮುಗಿಸಿದೆ.
ಇದೇ ಬಿಂದಿಯಾ ಎಂಟು ತಿಂಗಳ ಹಿಂದೆ , ತುಂಬಾ ಖುಶಿಯಲ್ಲಿ ಓಡಿ ಬಂದು ತನಗೆ ವೇದನಿಂದ ಡೈವೋರ್ಸ್ ಸಿಕ್ಕಿತೆಂದೂ ಹೇಳಿ, ನಾನವಳೀಗೆ ಗುಡ್ ಎಂದು ಕೈ ಕುಲುಕಿ ಶುಭ ಕೋರಿ, ಹಾರ್ದಿಕವಾಗಿ ಅಭಿನಂದಿಸಿ ಕಳಿಸಿದ್ದೆ. ನನಗೇನಂತೆ ಅಲ್ಲವಾ? ಅದು ಅವಳ ಬದುಕು. ಅವಳಿಗೆ ಹೇಗೆ ಬೇಕೋ ಹಾಗೆ ಬದುಕಲಿ. ಆದರೆ ಆಶ್ಚರ್ಯವುಂಟಾಗಿದ್ದು- ಇಷ್ಟು ಬೇಗ ಅವಳಿಗೆ ಡೈವೋರ್ಸ್ ಸಿಕ್ಕಿ ಬಿಟ್ಟಿತಾ? ಅದೂ ನಮ್ಮ ಭಾರತದಂಥ ದೇಶದಲ್ಲಿ. ಎಷ್ಟೋ ವರುಷಗಳೇ ನ್ಯಾಯದ ಹಾದಿ ಕಾಯುತ್ತ ಕುಳಿತ ಕೇಸುಗಳು, ಆರೋಪಗಳು. ಆಯುಷ್ಯ ಮುಗಿದರೂ ತೀರದ ವ್ಯಾಜ್ಯಗಳು ತುಂಬಿದ ನಮ್ಮ ವ್ಯವಸ್ಥೆಯಲ್ಲಿ ಬಿಂದಿಯಾಗೆ ಇಷ್ಟು ಬೇಗ ಡೈವೊರ್ಸ್ ಸಿಕ್ಕಿ ಬಿಟ್ಟಿತಾ ಎಂಬ ಆಶ್ಚರ್ಯ ನನ್ನ ಮನದಲ್ಲಿ ಇದೆ. ನಾನು ಅವಳಲ್ಲಿ ಅಸಭ್ಯವಾದೀತೆಂದು ಹೆದರಿ ಬಾಯಿಬಿಟ್ಟು ಕೇಳಲಿಲ್ಲ. ಅವಳ ಸಂತೋಷದೊಂದಿಗೆ ನನ್ನ ಸಂತಸವನ್ನೂ ಬೆರೆಸಿ ಟ್ರೀಟ್ ಯಾವಾಗ ಮತ್ತೆ ಎಂದು ನಕ್ಕು, be careful this time, dont take any hasty decision ಅಂತಾ ಮತ್ತೊಮ್ಮೆ ಎಚ್ಚರಿಸಿದ್ದೆ. ಏನೋ ಅರ್ಥವಾಗುವುದಿಲ್ಲ. ಈಗೀನ ಹುಡುಗಿಯರು ನಿಜ ಹೇಳುತ್ತಾರೋ ಅಥ್ವಾ ನನ್ನಂತಾ ಎಲ್ಲ ನಂಬುವ ಗೂಬೆಯೊಂದು ಸಿಕ್ಕಿದೆಯೆಂಡು ತನ್ನ ಕಪೋಲಕಲ್ಪಿತ ಕಥೆಗಳನ್ನು, ಕನಸುಗಳನ್ನು ಹೀಗೆ ಮುಕ್ತವಾಗಿ, ಇತರರಿಗೆ ನಿಜವೆಂದು ತೋರುವ ಕತೆಯನ್ನಾಗಿಸಿ ಹೇಳುತ್ತಾರೋ ಗೊತ್ತಾಗಲಿಲ್ಲ. ಖಂಡಿತ ನನಗೆ ಅಂಥ ಕಥೆಗಳಲ್ಲಿ ಆಸಕ್ತಿ ಇಲ್ಲ. ನನ್ನ ಕಿವಿ ಕೇಳಿದ ಮೇಲೆ ಅವು ಇತರರಿಗೆ ರವಾನೆಯಾಗುವುದಿಲ್ಲ. ನನ್ನಲ್ಲೇ ಅಡಗಿಸಿಡುತ್ತೇನೆ. ಯಾಕೆ ಬೇಕು ಇಲ್ಲದ ಉಸಾಬರೀ ? ಆಫಿಸಿನ ಗಾಸಿಪ್ ರಂಗಾಗುವುದೇ ಹೀಗೆ. ಹೇಸಿಗೆ ಬರುತ್ತದೆ.
ಬಸ್ ಸ್ಟಾಪ್ ನಲ್ಲಿ ಸಿಕ್ಕ ಮಲೆಯಾಳಿ ವಸಂತಾ, ನೀನು ಬಿಂದಿಯಾಳೊಂದಿಗೆ ಜಾಸ್ತಿ ಮಾತಾಡಬೇಡ, ಎಲ್ಲಾ ಸುಳ್ಳು ಸುಳ್ಳು ಸುದ್ದಿ ಹಬ್ಬಿಸ್ತಾಳೇ. ಅವರಿವರ ಬಗ್ಗೆ ಚಾಡಿ, ಅಲ್ಲಿಂದ ಇಲ್ಲಿ, ಇಲ್ಲಿಂದಾ ಅಲ್ಲಿ’ ಎಂದು ಎಚ್ಚರಿಸಿ ಹೋದಳು. ಅಬ್ಬಾ ಅಂದುಕೊಂಡೆ. ಅವಳು ನನ್ನ ಹತ್ತಿರ ಬಂದು ಹೋದ ಸುದ್ದಿ ಇವರಿಗೆಲ್ಲ ಸಿಕ್ಕಿರುತ್ತೆ. ಇವಳು ಕೂರುವುದು ಮೊದಲನೇ ಮಹಡಿಯಲ್ಲಿ, ನಾನಿರುವುದು ನಾಲ್ಕನೇ ಮಹಡಿ, ಹೇಗೆ ವಾಸನೆ ಬಡಿದಿದೆ’ ಎಂದುಕೊಂಡು ಸುಮ್ಮನುಳಿದೆ. ಇವತ್ತು ನಾನು -ಬಿಂದಿಯಾ ಅನುಪಮ್ ಗೆ ಹೋದ ನಂತರ ಏನು ಸುದ್ದಿ ಮಾಡ್ತಾರೋ ಗೊತ್ತಿಲ್ಲ. ಯಾಕೋ ಅವಳಿಗೆ ನನ್ನ ಮೇಲೆ ಒಂಥರಾ ಸಲುಗೆ, ನಂಬಿಕೆ. ಅವಳ ಬಕವಾಸ್ ಮಾತುಗಳಿಗೆ ಕಿವಿಯಾಗುತ್ತೇನೆ. ಮೌನವಾಗುತ್ತೇನೆ, ಖಾಲಿಯಾಗಿಬಿಡುತ್ತೇನೆ. ಹೇಳಿಕೊಳ್ಳಲಿ ಬಿಡು ಎನ್ನುವಂತೆ. ಅವಳು ಏನಾದರೂ ಇದ್ದುಕೊಳ್ಳಲಿ ನನ್ನ ಒಂಟಿತನದಲ್ಲಿ ಯಾರಾದರೊಬ್ಬರೊಡನೆ ಹರಟ ಬೇಕು ಎನ್ಸಿದಾಗೆಲ್ಲ ಅವಳು ನನಗೆ, ಯಾರಾದರೊಬ್ಬರ ಹ ತ್ತಿರ ಕೊಚ್ಚಿಕೊಳ್ಳಬೇಕು ಎಂದು ಅವಳಿಗೆ ಅನಿಸಿದಾಗ ನಾನು -ಹೀಗೆ ಒಬ್ಬರೊಬ್ಬರಿಗೆ ಹಿತವಾಗಿದ್ದೇವೆ. ಉಳಿದ ಹೆಣ್ಣು ಕಲೀಗ್ಸ್ ತರಹಾ ಜಗಳಾಟವೂ ಇಲ್ಲ, ಕಚ್ಚಾಟವೂ ಇಲ್ಲ.
ಊಟ ಮಾಡುತ್ತಲೂ ನಾನು ಅವಳ ಮತ್ತು ವೇದನ ಕುರಿತೇ ಯೋಚಿಸುತ್ತಿದ್ದೆ. ಬಿಂದಿಯಾ ನಿನಗೆ ವೇದನ ಜೊತೆಗೇ ಇರಬೇಕೂ ಅಂದ್ರೆ ಇರು, ಇದು ಒಳ್ಳೆ ನಿರ್ಧಾರ. ನಿನ್ನ ಮಗನೂ ನಿನ್ನ ಹತ್ತಿರವಿರ್ತಾನೆ. ’ಎಂದಿಷ್ಟೇ ಹೇಳಿ. ಅವಳ ಕತೆ ಕಟ್ಟಿಕೊಂಡು ನನಗೆ ಏನಾಗಬೇಕಿದೆ. ನಾವು ಕಳಕಳಿ ತೋರಿಸಿದರೇ ಅವಳಿಗೆ ಅದು ಅಸಹಜ ಕುತೂಹಲವೆನ್ನಿಸಬಹುದು. ಸದಾ ನಿಗೂಡವಾಗಿ, ಸದಾ ಹೊಸದಾಗಿ , ಕಾಣುವ ಬಿಂದಿಯಾಳ ಮೊಗವನ್ನೇ ನೋಡುತ್ತಾ ಯೋಚನೆಯಲ್ಲಿ ಮುಳುಗಿದೆ.

Wednesday, April 16, 2008

ಕನಸಿನೊಳಗೊಂದು ಕಣಸು - ಬೇಂದ್ರೆ ಕವನ

ಕನಸಿನೊಳಗೊಂದು ಕಣಸು
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"

"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"

"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"

"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?

"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"

"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"

"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"

"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"

"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"

"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"

"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"

"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"

"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?

"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"

"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ

"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"

"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು

ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

Tuesday, April 15, 2008

ಪುಟ್ಟಿ, ನಾನು ಮತ್ತು ಗುಬ್ಬೀ ಗೂಡು.

ಇವತ್ತು ತಂಗಿ ಹೇಳುತ್ತಿದ್ದಳು. ನಿನ್ನೆ ಮನೆಗೆ ಅನು ಹುಟ್ಟಿದ ಹಬ್ಬಕ್ಕೆ ಹೇಳಿ ಕಳಿಸಿದವರಂತೆ ಪುಟ್ಟಿ, ಉಷಿ, ಅವಳ ಗೆಳತಿಯರು ಎಲ್ಲ ಬಂದಿದ್ದರಂತೆ. ನಾನು ದೂರದ ದೆಹಲಿಯಲ್ಲಿ ಕುಳಿತು, ಎಷ್ಟೋ ವರ್ಷಗಳಾದವು, ಯುಗಗಳೇ ಕಳೆದು ಹೋದಂತಿವೆ. ನಾನೆಂಥ ಪಾಪಿಗೇಡಿ ಅಂದುಕೊಂಡೆ. ನನಗೆ ಒಮ್ಮೆಯೂ ನನ್ನ ಬಾಲ್ಯದ ಗೆಳತಿಯರು ಸಿಗುವುದಿಲ್ಲ. ಹಾಗೇ ನನ್ನ ಬಾಲ್ಯದ ಒಡನಾಡಿ ಪುಟ್ಟಿ ನೆನಪಾದಳು. ಧಾರವಾಡದಲ್ಲಿ ಮಳೆಯಾಗಿ, ನೆಲವೆಲ್ಲ ಅರಳಿ, ಹಸಿರು ಹಚ್ಚಗೇ ಕೊನರುವುದೇ ತಡ, ನಾವು ಮಕ್ಕಳು ಮನೆ ಅಂಗಳದಲ್ಲಿ ಮಣ್ಣು ಕೆದರಿ ಗುಬ್ಬಿ ಗೂಡು ಕಟ್ಟಲು ತೊಡಗುತ್ತಿದ್ದೇವು. ಮುಂಗೈಯನ್ನು ಡುಬರಿಯಾಕಾರ ವಾಗಿಸಿ ಇಟ್ಟು, ಮೇಲೆ ಮೆದುವಾದ ಮಣ್ನನ್ನು ಹಾಕಿ ಒತ್ತುತ್ತಾ, ಪಿರಮಿಡ್ಡಿನಾಕಾರ ಕೊಟ್ಟು ನಂತರ ಸಾವಕಾಶವಾಗಿ ಕೈ ತೆಗೆದರೆ ಸಾಕು, ಹಾರಿ ಕುಣಿಯುವಂತೆ ಚೆಂದದ ಗುಬ್ಬಿ ಗೂಡು ಎದ್ದು ನಿಲ್ಲುತ್ತಿತ್ತು. ಅದಕ್ಕೆ ಸುತ್ತ ಮುತ್ತ ಕಾಲುದಾರಿ, ಗೇಟು, ಇತ್ಯಾದಿಯಾಗಿ ತರ ತರದ ಅಂದಚೆಂದ ಮಾಡಿ, ನನ್ನ ಗೂಡು ನೋಡ್ಲೇ, ನಿನ್ನ ಗೂಡು ಹ್ಯಾಂಗಿದೆ? ಅಂತಾ ಆಡುತ್ತಿದ್ದುದು ನೆನ್ಪಾಯಿತು.
ಪುಟ್ಟಿ ನಮ್ಮ ಎದುರು ಮನೆ ಇಂದಿರಾ ಕಾಕುನ ಎರಡನೇ ಮಗಳು. ನನಗೆ ಸದಾ ಅವರ ಮನೆಯಲ್ಲೇ ವಾಸ. ತಿಂಡಿತಿಂದು ಪುಟಕ್ ಅಂತಾ ಅವರ ಮನೆಗೆ ಹಾರುತ್ತಿದ್ದೆ. ಪುಟ್ಟಿ ತಂದೆ, ನನ್ನ ಮೆಚ್ಚಿನ ಕಾಕಾ. ಅವರು ನಮಗೆ ಹೇಲುತ್ತಿದ್ದ ಕಥೆಗಳು ಈಗಲೂ ನೆನಪಿವೆ. ಅಲೀ ಬಾಬಾ ಚಾಲೀಸ್ ಚೋರ್ ಕತೆ ಆಗಲೇ ನಾನು ಕೇಳಿದ್ದು. ಬೇಸರವಿಲ್ಲದೇ ಕಥೆ ಹೇಳುತ್ತಿದ್ದರು. ನನ್ನ ಅಪ್ಪನೂ ಕಥೆ ಹೇಳುತ್ತಿದ್ದರು. ಮಂಗ ಮತ್ತು ಸಿಂಪಿಗನ ಕಥೆ, ಹುಲಿ ಮತ್ತು ಮಂಗಮ್ಮನ ಕಥೆ, ಮಂಗ ಮತ್ತು ಮೊಸಳೆ ಕತೆ, ಒಂದೇ ಎರಡೇ ಕೇಳಿದ ಕಥೆಗಳು ಇನ್ನೂ ನೆನಪಿನಾಳದಲ್ಲಿ ಸುಮಧುರ ನೆನಪನ್ನು ಹೆಣೆದಿವೆ. ಕತೆ ಹೇಳಿ ಮಲಗಿಸುವ ಅಪ್ಪ ನೆನಪಾದರೇ ಯಾಕೆ ಬಾಲ್ಯಕ್ಕಿರುವ ನಿಶ್ಚಿಂತ ಬದುಕಿನ ಪ್ರೀತಿ, ಚೆಲುವು, ಚೈತನ್ಯ ಮುಂದೆ ಬೆಳೆದು ದೊಡ್ಡವರಾದಂತೆ ಕ್ಷೀಣವಾಗುತ್ತದೆ. ಚಿಂತೆ -ಜಂಜಾಟಗಳು ಬದುಕಿನ ಮೂಲ ಉಪದ್ರಗಳಾಗುತ್ತವೆ ಎನಿಸುತ್ತಿದೆ. ಪುಟ್ಟಿ, ಉಷಿಯರನ್ನು ನೋಡದೇ ಎರ್ಡು ದಶಕಗಳೇ ಕಳೆದುವು. ಯಾವಾಗ ನೋಡ್ತೇನೋ ಗೊತ್ತಿಲ್ಲ. ಅವರೂ ತಮ್ಮ ತಮ್ಮ ಬದುಕಿನಲ್ಲಿ ಮರೆತುಹೋಗಿರಬಹುದು. ಮರೆತಿಲ್ಲವಾದರೂ ಮರೆಸುವಂಥ ಬದುಕಿನ ತಲ್ಲಣಗಳಿಗೇನು ಕಡಿಮೆಯೇ ? ಮಕ್ಕಳು ಮರೀ, ಸಂಸಾರದ ಹತ್ತು ಹಲವು ಸಮಸ್ಯೆಗಳು. ಇಷ್ಟೆಲ್ಲ ಆದರೂ ಈಗ ಮಾತ್ರ ನಾನು ಜೀವನದಲ್ಲಿ ಏನೋ ಅಮೂಲ್ಯವಾದುದನ್ನು, ಆಪ್ತವಾದುದನ್ನು, ಪಂಚಪ್ರಾಣವಾದುದನ್ನು ಏನೋ ನನ್ನ ಊರಿನಲ್ಲಿ ಬಿಟ್ಟು ಬಂದಿದ್ದೇನೆ. ನನ್ನದಾದುದನ್ನು, ನನ್ನದೆನ್ನುವ ಎಲ್ಲವನ್ನೂ ಬಿಟ್ಟು ಪರದೇಸಿಯಾಗಿದ್ದೇನೆ, ಏಕಾಂಗಿಯಾಗಿದ್ದೇನೆ ಎನಿಸತೊಡಗಿ ಕಳೆದುಕೊಂಡ ದುಃಖ ಒತ್ತತೊಡಗಿತು.
ಕಾಕಾನ ತೊಡೆಯೇರಿ ಕುಳಿತು ಬಾಚಣಿಗೆಯಿಂದ ಅವನ ಕೂದಲು ಬಾಚಿದ್ದೇ ಬಾಚಿದ್ದು. ಕಾಕಾನಿಗೆ ಬಾಚುವುದೆಂದರೇ ಏನೋ ಖುಶಿ. ಒಂದು ದಿನವೂ ಕಾಕಾ ಬೇಸರಿಸಿ ಬೈದಿದ್ದಿಲ್ಲ. ಈಗ ಅದೇ ಕಾಕಾ ಮಾತಾಡುವುದಿಲ್ಲ. ಹಾಗೆಂದುಕೊಳ್ಳಲೂ ಮನಸ್ಸಿಗೆ ನೋವಾಗುತ್ತದೆ. ವಯಸ್ಸಾಗಿ ಹೋಗಿ, ಪಿರಿ ಪಿರಿ ಸ್ವಭಾವವಾಗಿಬಿಟ್ಟಿದೆ. ಕಾಕೂ ತೀರಿಹೋಗಿ ನಾಲಕೈದು ವರ್ಷಗಳೇ ಆದುವು. ಇಡೀ ಮನೆತುಂಬ ಓಡಾಡುತ್ತಿದ್ದುದು, ದತ್ತಾತ್ರಯ ಗುಡಿ ಹತ್ತಿರ ಹೋಗಿ ಹೂವು ಕೊಂಡು ಬರುತ್ತಿದ್ದುದು, ಅಟ್ತ ಹತ್ತಿ ಇಳಿದು ಬೈಸಿಕೊಳ್ಳುವುದು, ಮಣ್ಣಲ್ಲಿ ಗೂಡು ಕಟ್ಟಿ ಆಡುವುದು, ಜಗಳಾಡಿಕೊಂಡು ಒಬ್ಬರ ತಲೆಮೇಲೆ ಇನ್ನೊಬ್ಬರು ,ಮಣ್ಣು ಸುರಿದು, ಅವ್ವಂದಿರ ಕೈಲಿ ಬೈಸಿಕೊಂಡು, ಕೊನೆಗೆ ಅವರೂ ಜಗಳಾಡಿಕೊಳ್ಳುವುದು. ನಾಗರ ಪಂಚಮಿಗೆ ಮನೆ ಮನೆಯಲ್ಲಿ ಕಟ್ಟಿದ ಜೋಕಾಲಿ ತೂಗಿ ತೂಗಿ ಆಡಿ, ತಿಂಗಳುಗಟ್ಟಲೇ ಜೋಕಾಲಿ ಬಿಚ್ಚದೇ ಹಾಗೇ ಆಡಿಕೊಂಡಿರುವುದು. ಎಲ್ಲ ನೆನಪಾಗುತ್ತದೆ.
ಇನ್ನೊಮ್ಮೆ ಊರಿಗೆ ಹೋದರೆ ಎಲ್ಲರನ್ನೂ ಕಂಡು ಭೆಟ್ಟಿಯಾಗಿ ಬರಬೇಕು........