Wednesday, April 30, 2008
ವಚನ
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯ
ಹರಿಯುವ ಹೊಳೆಗೆ ಮೈಯೆಲ್ಲ ಕಾಲೇ ಆಗಿರುವಂತೆ, ಉರಿವ ಬೆಂಕಿಗೆ ಮೈಯೆಲ್ಲ ಬಾಯೇ ಆಗಿರುವಂತೆ, ಬೀಸುವ ಗಾಳಿಗೆ ಮೈಯೆಲ್ಲ ಕೈಯೇ ಆಗಿರುವಂತೆ ನಿಜವಾದ ಶರಣ, ಲಿಂಗದೊಡನೆ, ಇಡೀ ಸೃಷ್ಟಿಯೊಡನೆ ಒಂದಾದವನಾದ್ದರಿಂದ ಅವನ ಸರ್ವಾಂಗವೂ ಲಿಂಗವೇ. ಅವನು ಬೇರೆಯಲ್ಲ, ಲಿಂಗ ಬೇರೆಯಲ್ಲ.
ಎರಡಿಲ್ಲದ ಐಕ್ಯದ ಸ್ಥಿತಿಯನ್ನು ಅಲ್ಲಮನ ಈ ವಚನ ವಿವರಿಸುತ್ತದೆ. ( ಕೆಂಡಸಂಪಿಗೆಯಿಂದ)
ಬಿಂದಿಯಾ -೨
Wednesday, April 16, 2008
ಕನಸಿನೊಳಗೊಂದು ಕಣಸು - ಬೇಂದ್ರೆ ಕವನ
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"
"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"
"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"
"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?
"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"
"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"
"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"
"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"
"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"
"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"
"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"
"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"
"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?
"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"
"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ
"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"
"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು
Tuesday, April 15, 2008
ಪುಟ್ಟಿ, ನಾನು ಮತ್ತು ಗುಬ್ಬೀ ಗೂಡು.
Friday, April 11, 2008
ಕನಸು ಮತ್ತು ಹಳವಂಡಗಳ ನಡುವೆ....
ಕುಡಿಗಣ್ಣಿನಲ್ಲಿ ಕದ್ದು ಕದ್ದು ನೋಡುತ್ತ, ಒಳ್ಗೊಳಗೇ ಮುಸಿಮುಸಿ ನಗುವ ಅವಳು, ಮತ್ತೆ ಮತ್ತೆ ಏನನ್ನೋ ನೆನೆದು ಮೀಸೆಯಡಿಯಲ್ಲಿ ಗೆರೆಯಾಗಿ ಮೂಡುವ ನಗುವನ್ನು ತುಟಿ ಬಿಗಿದು ಅಡಗಿಸಲು ಪ್ರಯತ್ನಿಸುವ ಅವನೂ ಅವರಿಬ್ಬರ ಮಧ್ಯೆ ಸುಮ್ಮನೇ ಕುಳಿತ ತುಂಟ ಮೌನ ಬಹಳ ಹೊತ್ತಿನಿಂದ ಕಾಯುತ್ತಿತ್ತು. ಹಾಗೇ ಅವರಿಬ್ಬರನ್ನು ವರ ತುಂಟತನವನ್ನೂ ನೋಡುವುದೆಂದರೆ ತುಂಬಾ ಮಜಾ.ಎಲ್ಲವನ್ನೂ ನೋಡುತ್ತ ಕೊನೆಗೆ ತಾನೇ ಸೋತವಳಂತೆ ಅವನೆದುರು ಬಂದು ಕೂತಳು. ಹಠ ಹಿಡಿದವಳಂತೆ ಅವನನ್ನು ತನ್ನೆಡೆಗೆ ಜಗ್ಗಿಸಿಕೊಂಡು ಕೇಳಿದಳು,
’ಈಗಲಾದರೂ ಹೇಳು, ನಿನಗಾಗಿ ನಾನೇನು ಮಾಡೊಲ್ಲ.? ಎಲ್ಲಾನ್ನೂ ಮಾಡೊಕ್ಕೆ ರೇಡಿ ಕಣೋ. ನೀ ಒಂದ್ಸಲ ನನ್ನ ಇಲ್ಲಿಂದ ಕರಕ್ಕೊಂಡಾದ್ರೂ ಹೋಗು ನೋಡಣ" ಸಾಧ್ಯವಾ?
ಅವ ಬೆಳಗಿನ ಸೂರ್ಯನ ಕೆಂಪಿನಲ್ಲಿ ಮುಳುಗಿದ್ದ. ಕಾಫೀ ಕಪ್ಪಿನಾಚೆ ಅವಳು ಇನ್ನೂ ನಿನ್ನೆಯ ಸಿಹಿಗನಸಿನ ಹಿತದಿಂದ ಹೊರ ಬಂದಿರಲಿಲ್ಲ. ಹೊರಗೆ ಮರದ ಕೊಂಬೆ ಕೊಂಬೆ ಮೇಲೆ ಎಲೆ-ಚಿಗುರು ಇಬ್ಬನಿ ಹೊದ್ದು ಮಲಗಿದ್ದವು. ಅವನ ಕಣ್ಣಲ್ಲಿನ ಆಕಾಶದ ಹರವಿನಲ್ಲಿ ತನ್ನ ಬಿಂಬವನ್ನು ಹುಡುಕುತ್ತಾ, ನಿನ್ನೊಂದಿಗೆ ಬೆಟ್ಟ ಕಾಡು ಸುತ್ತಬೇಕೆಂಬ ಆಸೆ. ಸುತ್ತಿಸ್ತೀಯಾ? ನಾನು ಈ ಜನ್ಮದಲ್ಲೇ ಕಾಡು ಕಂಡಿಲ್ಲ. ದೂರದಿಂದ ನೋಡಿದ್ದೇನೆ ಹತ್ತಿರದಿಂದಾ ಇಲ್ಲ. ಅವನು ಜೊತೆಗಿದ್ದರೇ ಹೀಗೆ ಕನಸುಗಳೇ ಕನಸುಗಳು. ಬಿಟ್ಟಿ ಕನಸುಗಳಿಗೇನು ಹಂಗಿದೆಯಾ?
ನಾನು ಹತ್ತಿರವಿಲ್ಲವಾ? ನನಗಿಂತಾ ಕಾಡು ಇಷ್ಟವಾ. ಉತ್ತರ ಅವಳಲ್ಲಿರಲಿಲ್ಲ. ತುಂಟ ನಗು. ಆ ನಗುವಿನ ಅರ್ಥ ಅವನಿಗೆ ಮಾತ್ರ ಅರ್ಥವಾಗೋದು.
ಕಾಡಲ್ಲೇನಿದೇ ಮಜಾ. ಎಲ್ಲಾದ್ರೂ ಸಮುದ್ರವಿರೋ ಜಾಗಕ್ಕೆ ಹೋಗೋಣ.ಚೆಂದದ ಊರಿಗೆ ಹೋಗೋಣ. ಬ್ಯಾಂಕಾಕ್ ಹೋಗೋಣ್ವಾ? ಈ ಜನ್ಮದಲ್ಲಿ ಒಮ್ಮೆಯಾದರೂ ಹೋಗೋಣ ಜತೆಯಾಗಿ. ಪಾಸ್ಪೋರ್ಟ್ ಎಲ್ಲ ರೆಡಿಮಾಡ್ಕೋಬೇಕು. ಏಯ್, ನೆನಪಿಸ್ತಾ ಇರು ನಂಗೆ. ಇಬ್ಬರ ನಡುವೆ ಇಂಥ ಎಷ್ಟೋ ಕನಸುಗಳು ರಂಗೋಲಿ ಇಟ್ಟಿವೆ.
ನೀನು ಸಮುದ್ರದ ತೆರೆಯಂತೆ ಕಣೋ, ಜೋರಾಗಿ ಭೋರ್ಗೆರೆದು, ದಡಕ್ಕೆ ಅಪ್ಪಳಿಸಿ, ಉರುಳಿಸಿ,ಬೀಳಿಸಿ ಕೊನೆಗೆ ಇಲ್ಲದಂತಾಗುವ ನೊರೆಯಾಗಿ ಬಿಡುತ್ತೇನೆ ನಾನು.
ಥೂ ಕಂತ್ರೀ....ಅವನು ಹಾಗೆನ್ನುವಾಗೆಲ್ಲ ತನ್ನೊಳಗೆ ಚಿಟ್ಟೆಯೊಂದು ಪಟ ಪಟ ಪಕ್ಕ ಬಡಿದು ಹಾರಿದಂತ ಪುಳಕ. ಹಾಗನ್ನುವ ಅವ ತುಂಬಾ ಇಷ್ಟವಾಗ್ತಾನೆ.
2. ನಿಂಗೆ ಗೊತ್ತಾ? ಹೀಗೆ ಚಿಕ್ಕವಳಿದ್ದಾಗ ಚಿಕ್ಕಮ್ಮ ಚಿಕ್ಕಪ್ಪನ ಊರಿಗೆ ಹೋದಾಗ ಅಲ್ಲೇ ಹತ್ತಿರದ ಹಟ್ಟಿಹೊಳೆ ಜಾತ್ರೆಗೆ ಹೋಗಿದ್ದೆ. ಹೊಳೆಯಲ್ಲಿ ಈಜುವ, ಈಜು ಬಾರದಿದ್ದರೂ ಆಷ್ಟೇನೂ ಆಳವಿಲ್ಲದ ಕನ್ನಡಿಯಂತೆ ಹೊಳೆಯುವ ನೀರನ್ನು ತುಂಬಿಕೊಂಡ ಹೊಳೆಯಲ್ಲಿ ಬಿದ್ದು ಬಿದ್ದು ಹೊರಳಾಡಿ ನಲಿಯುವ ಮಕ್ಕಳು, ಅವರನ್ನು ಕೂಗಿ ಕರೆದು ಊಟ ತಿಂಡಿ ಕೊಡುವ ಅಮ್ಮಂದಿರು. ಊರಜನ ತಮ್ಮ ತಮ್ಮ ಚಕ್ಕಡಿಗಾಡಿಗಳನ್ನು ಕಟ್ಟಿಕೊಂಡು ಜಾತ್ರೆಗೆ ಬರುತ್ತಲೇ ಇದ್ದರು. ಅಲ್ಲಲ್ಲಿ ಬೆಂಡು-ಬತ್ತಾಸ, ಚುರುಮರೀ ಸೇವು, ಮೆಣಸಿನಕಾಯಿ ಬೋಂಡಾ ಮಾರೋರು, ಆಟಿಗೆ ಸಾಮಾನು, ಬಳೆ, ಪೀಪಿ, ಬಲೂನು ಮಾರುವವರು, ದೊಂಬ್ರಾಟ, ಮಂಗನಾಟ ತೋರಿಸುವವರು ಹೀಗೆ ಗೌಜೋ ಗೌಜಿ. ಗೊತ್ತಾ ನಿನಗೆ ನಾನು ಆ ಜಾತ್ರೆಯಲ್ಲಿ ಸತ್ತೇ ಹೋಗ್ತಿದ್ದೆ. ಹೊಳೆ ಮುಂದೆ ಹರಿಯುತ್ತಾ ಹರಿಯುತ್ತ ಅಲ್ಲೇ ಹತ್ತಿರದ ಘಟಪ್ರಭೆಯಲ್ಲಿ ಒಂದಾಗುವ ಸಂಗಮವಿದೆಯಲ್ಲ, ಅಲ್ಲೇ ಒಂದು ದೊಡ್ಡ ಸುಳಿ. ನಾನು ಕುಡಿಯಲಿಕ್ಕೇ ನೀರು ಹಿಡಿಯಲು ಹೋಗುವುದಕ್ಕೂ ನೀರಿನ ತಂಬಿಗೆ ನೀರಿನ ರಭಸಕ್ಕೆ ಕೈಯಿಂದ ಕೊಸರಿಕೊಂಡು ಸುಳಿಗೆ ಬಿದ್ದೇ ಬಿಟ್ಟಿತು. ನಾನು ಅದನ್ನು ಇಳಿದು ಎತ್ತಿಕೊಳ್ಳುವವಳಂತೆ ಕಾಲು ನೀರಲ್ಲಿ ಇಳಿಬಿಡುತ್ತಿದ್ದೆ......ಅಷ್ಟರಲ್ಲಿ ಅಗಸರವಳು "ಆ ಹುಡುಗಿನ್ನ ಎಳೀರೋ ...ಸುಳಿ ಐತಿ ಎಂತ ಕಿರುಚಿ’ ನನ್ನ ಬದುಕಿಸಿದ್ದಳು. ಈಗ ನೆನೆಸಿಕೊಂಡರೆ ಅಬ್ಬಾ ಬೆವರು ಕಿತ್ತು ಬರುತ್ತೆ ಭಯದಲ್ಲಿ. ಅವಳು ಹೊಳೆಯ ಗುಂಗಿನಲ್ಲಿ, ಅವನು ಹೊಳೆಯ ಆಳದ ಗುಂಗಿನಲ್ಲಿ ಮೈ ಮರೆತಿದ್ದ.
ಅವಳ ಮುಂಗುರುಳಲ್ಲಿ ಸಂಜೆ ಇಳಿಯುತ್ತಿತ್ತು, ಕೆನ್ನೆಗೆ ಬಂಗಾರ ವರ್ಣದ ಹೊಳಪು, ಇದ್ದಕ್ಕಿದ್ದಂತೆ ಅವಳನ್ನು ವಿಸ್ಕಿಯದೇ ಒಂದು ಹೊಳೆಯಲ್ಲಿ ಅದ್ದಿ ಅದ್ದಿ ತೆಗೆಯಬೇಕು, ಇಂಚು ಇಂಚಾಗಿ ಹೀರಬೇಕೆನ್ನುವ ತುಂಟ ಆಸೆ. ಮತ್ತೆ ಹೊಳೆ ನೆನಪು. ನಮ್ಮೂರಲ್ಲೂ ಹಟ್ಟಿಹೊಳೆಯಿದೆ.
ಗೊತ್ತು.........
ಏನು ಹೊಳೆ ಸೆಳವು ಅಂತೀ, ಏನು ವೈಯ್ಯಾರ, ಏನು ಚೆಲುವು, ಬರೀ ಮೋಹವುಕ್ಕಿಸುವ ಮಾಯದಾಟ. ಎಂಥಾ ಮಜಾ ಅಂತೀ, ನನಗೇನೂ ಅರಿವಿಗೆ ತಾಕಲೇ ಇಲ್ಲ, ಹೊಳೆಯಾಳ ಹೆಚ್ಚಿರಬಹುದು ಅಥವಾ ನನ್ನ ಈಜಿನ ಶಕ್ತಿ, ಸಾಮರ್ಥ್ಯ ಕಡಿಮೆಯಾಗಿರಬಹುದು. ಅವಳ ಮುಸಿ ಮುಸಿ ನಗು ಕೆನ್ನೆಯಲ್ಲಿ ಗುಳಿ ಬೀಳಿಸಿ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಚೂಪುನೋಟ ಅವನನ್ನು ಕೆಣಕುತ್ತಿತ್ತು.ನಾ ಚಿಕ್ಕವಳಿರೋವಾಗ ಕಂಡ ಹೊಳೆಯಲ್ಲೀಗ ನೀರು ಕಡಿಮೆಯಾಗಿರಬುಹುದು. ಅಲ್ಲವಾ?
ಆಗಿರಲಿಕ್ಕಿಲ್ಲ, ಆಗುವುದುಲ್ಲ....ಆಗಲಿಕ್ಕೆ ಸಾಧ್ಯವೇ ಇಲ್ಲ. ನಾನಿರೋವರೆಗೂ ....
ಥೂ ಕಂತ್ರಿ........ಅವಳು ಹೊಟ್ಟೆ ಹಿಡಿದು ನಗತೊಡಗಿದಳು..ಮರಿ ಹಕ್ಕಿಯಂತೆ ಅವನೆದೆ ಗೂಡಲ್ಲಿ ಮುಖ ಮುಚ್ಚಿಕೊಂಡು.
3. ಅವನನ್ನು ಕರೆದುಕೊಂಡು ನೆಕ್ಕುಂದಿಗೆ ಹೋಗಬಾರದಿತ್ತೇನೋ. ನಾವಿಬ್ಬರೂ ಬೈಕ್ನಲ್ಲಿ ಬರೋದನ್ನ ತಂಗಿ ಮೈದುನ ದಯಾನಂದ ನೋಡಿಬಿಟ್ಟಿದ್ದ. ಆತ ಬಸ್ಸಿಗಾಗಿ ಕಾಯುತ್ತಿದ್ದ, ನಮ್ಮ ಬೈಕ್ ಅವನ ಮುಂದೆಯೇ ದಾಟಿಕೊಂಡು ಹೋಯಿತು. ಏನಂದುಕೊಳ್ಳುತ್ತಾನೋ. ಯಾಕೋ ಭಯವೇ ಅನಿಸಲಿಲ್ಲ. ಅದೇ ಮಹಂತ ಚೆನ್ನಾಗಿ ಬೈದು ಈ-ಮೇಲಿಸಿದ. ನೀನು ಹೇಗಾಗಿಬಿಟ್ಟಿದ್ದಿ ಗೊತ್ತಾ? ಇಷ್ಟೊಂದು self centered ಆಗಬೇಡಾ. ಬರೀ ಅವನೊಬ್ಬನೇಯಾ ಬದುಕೆಂದರೆ ? ನಿನ್ನ ಸುತ್ತಲೂ ಗೋಡೆ ಕಟ್ಟಿಕೊಳ್ಳುತ್ತಿದ್ದಿ. ಕೊನೆಗೆ ಯಾರೂ ನಿನ್ನವರೆನ್ನುವರಿರುವುದಿಲ್ಲ. ಸ್ವಲ್ಪ ಆಚೆ ಈಚೆ ಕಣ್ಣಾಡಿಸಿ ನೋಡು. ಬದುಕು ಬಳುವಳಿಯಾಗಿ ನೀಡಿದ ಒಳ್ಳೆ ಸ್ನೇಹಿತರಿದ್ದಾರೆ, ಎಲ್ಲರಲ್ಲೂ ಸ್ನೇಹದಿಂದ ಬೆರೆಯುವ ನಿನ್ನ ಒಂದು image ಮತ್ತು identity ಇದೆಯಲ್ಲ, ಅದನ್ನು ಕಳೆದುಕೊಳ್ಳ್ತಾ ಇದ್ದೀಯ.ಸ್ನೇಹ ಸಂಬಂಧವಿದೆಯಲ್ಲ ಅದುಅಮೂಲ್ಯವಾದುದು.ಎಷ್ಟೋ ಸಂಕಟದಲ್ಲಿ ಸಹಾಯಮಾಡಿದವರಿರಬಹುದು. ಅವರನ್ನೂ ಆಗಾಗ ನೆನೆ. ಬರೀ ಅವನೇಯಾ ನಿನಗೆ? ಒಂದು ಫೋನ್ ಇಲ್ಲ, ಈಮೇಲಿಲ್ಲ. ನಾನು ಭೇಟ್ಟಿಯಾಗಲಿ ಬಿಡಲಿ, ನೀನು ಹೇಳಬಹುದಿತ್ತಲ್ಲ ನಿನ್ನ ಬರುವಿಕೆಯ ಬಗ್ಗೆ. ಮಹಂತ ಹೇಳಿದುದರಲ್ಲಿ ಯಾವುದೂ ತಪ್ಪಿಲ್ಲ. ನನ್ಗೇನೂ ಬೇಜಾರಿಲ್ಲ. ಒಬ್ಬರು ಇನ್ನೊಬ್ಬರನ್ನು ಹೀಗೆ ಅರ್ಥ ಮಾಡಿಕೋ ಬೇಕು ಅಂತೇನಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು. ನನ್ಗೇನೋ ಹಾಗೆ ಕಾಣ್ತಿಲ್ಲ.
4. ಎರಡು ದಶಕಗಳ ಮೇಲೇ ಬದುಕು ಸವೆದು ಹೋಯಿತು. ಹೊಸ ಉಲ್ಲಾಸ ಮೂಡಿಸಿದ್ದು, ವಸಂತಾಗಮನವಾದುದ್ದು ಅವನಿಂದಲೆ ಅಲ್ಲವೇ ? ಕೆಲವರಿಗೆ ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಲಿಕ್ಕಾಗುವುದಿಲ್ಲ. ಇನ್ನು ಅವ್ವನಿಗೇನು ಗೊತ್ತು, ಅವಳು ಹೇಗೆ ಬದುಕಿ ಬಾಳಿದಳೆಂದು, ಹೇಗೆ ಕಣ್ಣಿರು ನುಂಗಿ, ತಮಗೆಲ್ಲ ಚೆನ್ನಾಗಿದ್ದೇನೆಂದು ತೋರಿಸುತ್ತಲೇ ಹೋದಳೆಂದು. ಅಂಗೈಯಲ್ಲಿಟ್ಟು ಬೆಳೆಸಿ ತನ್ನ ಕರಳು ಬಳ್ಳಿ ಬಳ್ಳಿಯೆಂದು ತನ್ನನ್ನು ಬಲಿಪಶುಮಾಡಿದವಳು ಅವಳೇ ಅಲ್ಲವೇ ? ಯೋಚಿಸಿದರೆ ತಲೆ ಸಿಡಿದು ಹೋದಂತಾಗುತ್ತದೆ.
5. ಹೀಗೆ ಬರುವ ಹೋಗುವ ನಡುವೆ ಬದುಕು ಸಾಗುತ್ತಿರಲಿ ಬಿಡು. ಈ ಜೀವನವೂ ಅಮೂಲ್ಯವಾದುದು. ಮತ್ತೆ ಮತ್ತೆ ಪಡೆಯುವುದಿಲ್ಲ ನಾವು. ಬದುಕಿದರೆ ಇನ್ನೆಂದೂ ಬದುಕಿಯೇ ಇರಲಿಲ್ಲವೆನ್ನುವಂತೆ ಬದುಕಬೇಕು. ಹೃದಯದ ಮಾತು ಕೇಳಿ, ಜನರ ಅಭಿಪ್ರಾಯವಲ್ಲ. ನಮ್ಮನ್ನು ನಾವು ವಂಚಿಸಿಕೊಳ್ಳುವುದಿದೆಯಲ್ಲ ಅದರಂಥ ಅಪರಾಧ ಯಾವುದೂ ಇಲ್ಲ.
6. ಅತ್ತೆ ಅನ್ನುತ್ತಿದ್ದರು, ನಿನಗೂ ಬರುವ ಹಠವಿತ್ತಲ್ಲ, ನಮಗೂ ನೋಡುವಾಸೆ. ಜೀವನದಲ್ಲಿ ಮನುಷ್ಯನಿಗೆ ಹಠವಿದ್ದರೆ ಎನೂ ಮಾಡಬಹುದು. ಆಕೆ ದಾರ್ಶನಿಕರಂತೆ ನುಡಿದಿದ್ದರು. ಎಷ್ಟು ಸತ್ಯ. ನನಗೂ ಒಂದು ಪುಟ್ಟ ಕನಸಿತ್ತು. ನನ್ನದಲ್ಲದ ನಿನ್ನ ಅಂಗಳದಲ್ಲೊಂದು ಚುಕ್ಕೆ ಇಟ್ಟು ರಂಗೋಲಿ ಇಡುವ ಆಸೆ. ನಿನ್ನ ಎದೆಯಲ್ಲೊಂದು ಹಣತೆ ಹಚ್ಚಿ ದೀಪವಿಡುವ ಆಸೆ. ನನ್ನ ಕಾಲಡಿಯ ನೆಲವೂ ನನ್ನದಾಗಿರಲಿಲ್ಲ. ನನ್ನವನಲ್ಲದ ನಿನ್ನನ್ನೂ, ನನ್ನವನನ್ನಾಗಿಸಿದ ಕನಸನ್ನೂ ಈ ಕಣ್ಣೊಳಗೆ ಹೊತ್ತಿಸಿಕೊಂಡು ಬದುಕುವ ಕನಸು ಇನ್ನೂ ಚೆನ್ನ.
ಕನಸಿನೊಳಗೊಂದು ಕನಸು, ಮನಸಿನೊಳಗೊಂದು ಪಿಸುನುಡಿಯಾಗಿ, ನಿಟ್ಟುಸಿರಾಗಿ, ಹಂಬಲಿಕೆಯಾಗಿ, ನೀನೆ ಇರುತ್ತಿ ಸದಾ ನನ್ನದೇ ನೆರಳಿನಲಿ.
ನಿನ್ನವಳೇ
ಚಿನ್ನು
Thursday, April 10, 2008
ಮೆಲುಕಾಡುವ ಶೂನ್ಯ
Tuesday, April 8, 2008
ಕಡೆಂಗೋಡ್ಲು ಶಂಕರಭಟ್ಟರು’ ಆರಾದರೇನವರ ಒಳ ಬಾಳು ಬೇರಿಹುದು
ಒರೆ ಬೇರೆ ಒಳ ಬಾಳು ಬೇರೆ
ಜೋಡಾಗಿ ಸೇರಿದರೆ ಒಂದಾಗಿ ತೋರುವುದು
ಅದರಂತೆ ಬಾಳುವೆಯ ಮೋರೆ !
ಅನುಭವವು ಸವಿಯಲ್ಲ ; ಅದರ ನೆನಪೇ ಸವಿಯು. ಅದ ಕದ್ದು ಮೇಯದೇ ಮನವು ?
ಅವನೊಂದಿಗೆ "ಫ್ಯಾಮಿಲಿ ಗಾರ್ಡನ್" ಬಾರ್ ಅಂಡ್ ರೆಸ್ಟ್ಯೂರಾಂಟ್ನಲ್ಲಿ ತಮ್ಮಿಬ್ಬರ ಉಸಿರು ಉಸಿರಿಗೆ ತಾಗುವಂತೆ, ಕಣ್ಣು ಕಣ್ಣಲಿ ಪಿಸುಗುಡುವಂತೆ ಕುಳಿತು, ಅವನೇ ಆರಿಸಿ, ಅವಳಿಗಾಗಿ ಪ್ರೀತಿಯಿಂದ ಆರ್ಡರ್ ಮಾಡಿದ ಜಮೈಕಾವನ್ನು ಅವನೆದೆ ತುಂಬಿ ಉಕ್ಕಿ ಉಕ್ಕಿ ಹರಿಯುವ ಪ್ರೀತಿಯಂತೆ ಈ ಬಾಳ ಬಟ್ಟಲನ್ನು ತುಂಬಿದ ಪ್ರೀತಿಯನ್ನು ಹೀರುತ್ತಾ ನಿಧಾನವಾಗಿ, ಅದರಲ್ಲಿ ಲೀನವಾಗಿ, ಅನನ್ಯತೆಯಿಂದ ಅದರ ರಸವನ್ನು ಆಸ್ವಾದಿಸುತ್ತಾ, ತನ್ನ -ಅವನ ಈ ಜನುಮದ ಪ್ರೇಮದ ಪಯಣ ಬೇಗ ಮುಗಿಯದಂತೆ ಹೇ! ದೇವರೆ, ನಮ್ಮನ್ನು ಜತೆಯಾಗಿಟ್ಟಿರು ಎಂದು ಬೇಡಿಕೊಳ್ಳುತ್ಟಾ, ಸದಾ ಈ ಗುಲಾಬಿ ತುಟಿಗಳ ಅಂಚಿಗೆ ಅವನಿಡುವ ಹೂ ಮುತ್ತು ನವಿರಾಗಿ ತಾಗಿ, ಹಸಿಯಾಗುತ್ತಾ , ಪುಳಕಗೊಳ್ಳುತ್ತಾ, ಅನನ್ಯತೆಯಲಿ ಅವಳ ಒಳಗೆಲ್ಲಾ ಹಸಿ ಹಸಿಯಾಗಿ ಇಳಿಯುತ್ತಾ ಹಾಗೇ ಅವಳ ಕಣ್ಣು ತೇವಗಾಗುತ್ತಿದ್ದವು. ಕಣ್ಣು ತುಂಬಿ ತುಂಬಿ ಈಗಲೋ ಆಗಲೋ ತುಳುಕಲು ಹಾತೊರೆಯುತ್ತಿತ್ತು ಕಂಬನಿಯೊಂದು. ಥೇಟ್ ಅವನ ಸೇರಲು ಹಾತೊರೆಯುವ ತನ್ನಂತೆ !! ಈ ಕ್ಷಣಗಳು ಕಳೆದರೆ ತನ್ನ ಪಾಲಿಗೆ ಮತ್ತೆ ಬರುವುದು ದೀರ್ಘ ಅಗಲಿಕೆ. ಸದಾ ಅವನ ರೂಪವೇ ಕಣ್ಣಲ್ಲಿ, ಕಿವಿಯಲ್ಲಿ ಆತನ ಮಾತುಗಳ ಕಿಣಿಕಿಣಿಸುತ್ತಿರುತ್ತವೇ. ಅವನ ಹಿತವಾದ ಸ್ಪರ್ಶ, ಮಿನುಗುವ ಕಂದು ಕಣ್ಣಿನ ಅಪ್ಯಾಯತೆ,ತನ್ನ ಹಗಲಿರುಳು ಕಾಡುವ ಅವನ ನೋಟ, ಸುರಿಸುವ ಮುತ್ತುಮಳೆ, ಪ್ರೀತಿಯನ್ನುಕ್ಕಿಸುವ ತುಟಿಗಳು,”ನೀನು ಸೌತೆಕಾಯಿ ತಿನ್ನಬೇಡ ಚಿನ್ನಾ, ಗಂಟಲು ನೋವು ನಿನಗೆ’ ಪ್ರೀತಿಯಿಂದಲೆ ಗದರುತ್ತಾ, ಸಲಾಡ್ ತಟ್ಟೆಯನ್ನು ಆಚೆಗೆ ಎತ್ತಿಡುವ ಅವನ ಮಮತೆ, "ಛಳಿಯಾಗ್ತಾ ಇದೆಯಾ?" ತಾವು ಏ.ಸೀ. ಹತ್ತಿರವೇ ಕೂತಿದ್ದಕ್ಕೆ ಅವಳಿಗೆ ಛಳಿಯಾಗುತ್ತಿರಬಹುದೆನ್ನುವ ಅವನ ಕಾಳಜೀ, ಕಕ್ಕುಲತೆ, ಮೋಹ, ಪ್ರೇಮ -ಕಾಮ ಎಲ್ಲವನ್ನೂ ಜಮೈಕಾ ಗ್ಲಾಸಿನಲ್ಲಿ ಕಾಣುತ್ತಾ, ಖಾಲಿ ಖಾಲಿಮ ಮೌನವನ್ನು ತನ್ನೊಳಗೆ ತುಂಬಿಕೊಳ್ಲುತ್ತಾ, ಕನಸಿನಲ್ಲಿ ತೇಲುತ್ತಾ, ನೋವಿನಲ್ಲಿ ನರಳುತ್ತಾ ಒಳಗೊಳಗೇ ಬಿಕ್ಕಳಿಸುತ್ತಾ ಯೋಚಿಸುತ್ತಿದ್ದಳು ಯಾಕೆ ನೆನಪುಗಳು ಸುಂದರವಾಗಿರುತ್ತವೆ ? ಯಾಕೆ ಕಾಡುತ್ತವೆ ? ನೆನಪುಗಳೆ ಹಾಗೇನೋ, ವರ್ತಮಾನಕ್ಕಿಂತ ನೆನಪುಗಳೇ ಸುಂದರ. ಯಾಕೆ ಈ ಕ್ಷಣಗಳು ನೋವನ್ನೂ- ಸುಖವನ್ನೂ ಒಟ್ಟಿಗೇನೀಡುತ್ತವೆ. ಒಮ್ಮೇಲೆ ಕನಸಿನಿಂದ ಎಚ್ಚೆತ್ತ ಭಾವ, ಅವೇ ಕಳೆದ ಸುಂದರ ಕ್ಷಣಗಳು ವಿರಹದ ತಾಪವನ್ನೂ ಅಗಲಿಕೆಯ ನೋವನ್ನೂ ಕೊಡುತ್ತವೆ. ಅವನೆ ನೆನಪೆಂದರೆ ದಿನಕ್ಕೊಮ್ಮೆಯಾದರೂ ಅಳುತ್ತಾಳೆ. ಕಳೆದುಹೋದ ಕ್ಷಣಗಾಳಿಗಾಗಿ ಸಂಕಟಪಡುತ್ತಾಳೆ. ಅವನ ಹಿರಿಮೆ ದೊಡ್ಡದು. ಎಲ್ಲವನ್ನೂ ಅವಳಿಗಾಗಿ ಕೊಟ್ಟಿದ್ದಾನೆ. ತನ್ನದಾದ ಎಲ್ಲವನ್ನೂ ಮತ್ತು ತನ್ನದಲ್ಲದ ಬದುಕಿನಿಂದಲೂ ಆವನು ಬಾಚಿ ಬಾಚಿ ಅವಳ ಮಡಿಲು ತುಂಬಿದ ಪ್ರೀತಿ ನೆನಪು ಒಮ್ಮೆ ತುಟಿಯಂಚಲಿ ನಸು ನಗು ಮೂಡಿಸಿದರೆ, ಇನ್ನೊಮ್ಮೆ ಕಣ್ಣು ಕೊಳಗಳಾಗುತ್ತವೆ. ಅಳು ಒತ್ತರಿಸಿಬರುತ್ತದೆ. ನಿನ್ನ ಬಿಟ್ಟು ಹೇಗೆ ಬದುಕುತ್ತಿದ್ದೇನೆ ಗೊತ್ತಾ? ಬದುಕಬಲ್ಲೇನೆ? ನೀನಿಲ್ಲದ ಬದುಕನ್ನೂ ಹೇಗೆ ಊಹಿಸಲಿ? ನನಗೆ ಬದುಕೆಂದರೆ ನೀನೆ. ನೀನಿಲ್ಲದ ಬದುಕೂ ಒಂದು ಬದುಕಾ? ಬಂದು ಬಿಡು ಒಮ್ಮೆ. ಸದಾ ದೇವರಲ್ಲಿ ಮೊರೆಯಿಡುತ್ತಿರುತ್ತಾಳೆ.”ಅವನ ಸ್ನೇಹ, ಸಾಮಿಪ್ಯ, ಸಾಂಗತ್ಯವನ್ನು ಎಲ್ಲಾ ಜನ್ಮಕ್ಕೂ ನೀಡು’ ಎಂದು.
ಅವನು ಆಗಸದ ಚುಕ್ಕೆಗಳನ್ನು ತಂದು ಕೊಡದಿದ್ದರೂ ಬೆಳದಿಂಗಳ ರಾತ್ರಿ, ಅವಳ ಎದುರು ಕುಳಿತು, ಕಣ್ಣಲ್ಲಿ ಕಣ್ಣಿಟ್ಟು, ತಾನು ಉಣ್ಣುವ ಮೊದಲ ತುತ್ತನ್ನು ಅವಳ ಬಾಯಿಗೆ ಉಣ್ಣಿಸಿದ್ದಾನೆ, ಅಷ್ಟೇ ಪ್ರೀತಿಯಿಂದ ಅವಳುಣಿಸಿದ ಕೈತುತ್ತನ್ನೂ ಪರಮಾನಂದವನ್ನು ಅನುಭವಿಸಿದಂತೆ ಕಣ್ಮುಚ್ಚಿ ಸವಿದಿದ್ದಾನೆ. ಬಾಯಿಂದ ಬಾಯಿಗೆ ಗುಬ್ಬಚ್ಚಿ ಗುಟುಕು ನೀಡಿದಂತೆ ಒಬ್ಬರಿಗೊಬ್ಬರು ಗುಟುಕು ನೀಡಿ ಜೋಡಿಹಕ್ಕಿಗಳಂತೆ ನಲಿದಿದ್ದಾರೆ, ಜಗಳಾಡಿಕೊಂಡರೂ ಮತ್ತೆ ಇನ್ನೆಂದೂ ಜಗಳಾಡುವುದಿಲ್ಲವೆಂದು ತಮ್ಮನ್ನೇ ಬೈದುಕೊಂಡು ಮತ್ತೆ ಒಂದಾಗಿದ್ದಾರೆ.ಏನೆನ್ನಬೇಕು ಈ ಸಂಬಂಧಕ್ಕೆ ? ಯಾಕಿಷ್ಟು ಮೋಹ ಅವನೊಂದಿಗೆ? ಯಾಕಿಂಥ ಪ್ರೇಮ ಅವನ ಮೇಲೆ? ಅರ್ಥವಾಗಿಲ್ಲ ಇನ್ನೂ. ಅವನೆಂದರೆ ತನ್ನ ಬದುಕಿನಲ್ಲಿ ಕನಸು ಮತ್ತು ವಾಸ್ತವದ ಸ್ವರೂಪ.
ಊಟ ಮುಗಿಸಿ ರೂಮಿಗೆ ಬಂದಾಗಲೂ ತಾವು ಹೀಗೆ ಸದಾ ಜೊತೆಯಾಗಿಯೇ ಇದ್ದೇವೇನೋ ಎಂಬಂತೆ ಒಬ್ಬರ ಎದೆ ಮಿಡಿತ ಇನ್ನೊಬ್ಬರು ಆಲಿಸುತ್ತಾ, ಲೆಕ್ಕವಿಲ್ಲದಷ್ಟು ಕನಸುಗಳನ್ನು, ನಾಳೆಗಿಡುವ ಚುಕ್ಕಿಗಳನ್ನು, ಕಡಲಿನಾಳದಿಂದ ಮುತ್ತನ್ನು ಹೆಕ್ಕುತ್ತಾ, ಎಂದೂ ಅಗಲದಂತೆ ತಬ್ಬಿಕೊಳ್ಳುತ್ತಾ ಆಗಾಧ ಸಮುದ್ರದಂತೆ ಭೋರ್ಗರೆಯುತ್ತಿದ್ದ ಪ್ರೇಮಿಗಳು. ಇಬ್ಬರ ಸ್ನೇಹವೂ ಅನನ್ಯವಾದುದು, ಗಾಡವಾದುದು. ಒಬ್ಬರಿಗೊಬ್ಬರು ಸಮರ್ಪಿಸಿಕೊಂಡಾಗಿದೆ, ಒಬ್ಬರಿಗೊಬ್ಬರಲ್ಲಿ ಆಳವಾಗಿ ಇಳಿದುಹೋಗಿದ್ದಾರೆ. ಮನಸು ಮನಸುಗಳು ಬೆರೆತಿವೆ, ದೇಹವೆರಡು ಪ್ರಾಣವೊಂದೇ ಎನ್ನುವಂತೆ. ಒಬ್ಬರ ಮಾತು ಒಬ್ಬರು ಕೇಳುತ್ತಾರೆ ಎರಡಿಲ್ಲದ ಒಮ್ಮತ ಅವರದು. ಅವನು ಹೇಳಿದ್ದು ಅವಳಿಗೆ ಹಿತ, ಅವಳು ತೋರಿದ್ದು ಅವನಿಗೆ ದೇವಿಯ ಆದೇಶ, ದಾರಿ ದೀಪ. ಆತ ಅವಳಿಗೆ ವಿಧೇಯ, ಅವಳು ಅವನಿಗೇ ಮೀಸಲು.
"ಯಾವಾಗ ಬರ್ತೀಯಾ ರಾಜಾ?"
ಆಫೀಸಿಗೆ ಹೋದ ಅವನನ್ನು ಕಾಯುತ್ತಾ, ಬೋರು ಹೊಡೆಯುತ್ತಿದ್ದ ರೂಮಿನಲ್ಲಿ ಏನೂ ಮಾಡದೇ ತೋಚದ ಇವಳು ಕೇಳುತ್ತಿದ್ದಳು.
"ಇರು ಪುಟ್ಟಾss, ಬಂದ್ಬಿಟ್ಟೆ ಇನ್ನೊಂದು ಕಾಲು ಗಂಟೆಯಲ್ಲಿ, ನೀನು ತಯಾರಾಗಿರು ಹೊರಗೆ ಹೋಗೋಣ, ಬರ್ತಾ ಊಟನೂ ಮಾಡ್ಕೊಂಡ್ ಬರೋಣ" ಅವನ ಇಂಪಾದ ದ್ವನಿ ಎದೆಗಿಳಿಯುತ್ತಲೇ ನವಿಲಾಗಿ ಅವಳ ಮನ ಗೆಜ್ಜೆ ಕಟ್ಟಿ ಕುಣಿಯತೊಡಗಿತ್ತು. ಜಿಂಕೆಯಂತೆಹಾರಿ, ತಲೆಬಾಚಿ, ಚೆನ್ನಾಗಿ ಬಿಸಿ ನೀರಿನಲ್ಲಿ ಮುಖತೊಳೆದು, ಬೇರೆ ಡ್ರೆಸ್ ಹಾಕಿ ಕಾಯತೊಡಗಿದ್ದು ಇಂದು ಬರಿ ನೆನಪಾಗಿ ಕಾಡತೊಡಗುತ್ತದೆ. ಎದೆಯಲ್ಲಿ ನೂರು ಶೂಲ ಚುಚ್ಚಿದಂತೆ ಮನ ಮುಳ್ಳಾಗುತ್ತದೆ. ಬರುವ ಇನಿಯನಿಗಾಗಿ ಕಾಯುತ್ತಿರುವುದರಲ್ಲಿ ಎನು ಸುಖವಿದೆ, ಎಂಥಾ ಅಮಲಿದೆ, ಸೊಗಸಿದೆ, ಚೆಲುವಿದೆ, ಮತ್ತೇ ಬಾರವೇ ಆ ಸುದಿನಗಳು ? ಅವನು ಯಾವಾಗ್ಲೂ ಹೇಳ್ತಾನೆ ಇರ್ತಿದ್ದ, "ಸುದಿನಗಳು ನಮಗೆ ಬರ್ತಾವೆ ಇರು, ಕಾಯೋಣ’ ಆದ್ರೆ ಕಾಯೋದು ಎಷ್ಟು ಹಿಂಸೆ ಅಂತಾ ಕಾಯೋರಿಗೆ ಗೊತ್ತು.
ಆಫೀಸಿನಿಂದ ಬರುವ ಅವನನ್ನು ಏದುರುಗೊಳ್ಳುವ ಅವಳ ಕಣ್ಣ ತುಂಬ ಆಗಸದ ನೀಲಿ ನೀಲಿ, ಅವನ ಕಣ್ಣಲ್ಲಿ ಇಣುಕುವ ಮಿನುಗು ನಕ್ಷತ್ರ ನಗೆ. ಒಳಗೆ ಬಂದು ಹಾಸಿಗೆ ಮೇಲೆ ಮೈಚೆಲ್ಲಿದ ಅವನಿಗೆ ’ನೀರು ಕುಡಿ ರಾಜಾ, ಕಾಫಿ ತರಿಸ್ಲಾ? ಎನ್ನುವ ಆಕೆಯ ಎರಡು ಮಾತೇ ಸಾಕು ಆಯಾಸವೆಲ್ಲ ಕಳೆದು ನವ ಉತ್ಸಾಹ ತುಂಬಿಕೊಳ್ಳಲು.
ಬಿಕ್ಕುತ್ತಿತ್ತು ಗತಿಸಿದ ಕ್ಷಣ. ಅವನೊಂದಿಗೆ ಕಳೆದ ಮೂರು ದಿನಗಳು ಗೊತ್ತೇ ಆಗಲಿಲ್ಲ. ನಮ್ಮ ಬದುಕು ಯಾವುದು? ನಾವು ಬಯಸುವ ಬಾಳು ನಮ್ಮದಾಗುವುದಾ? ಜೊತೆಯಾಗಿ ಇಟ್ಟ ಹೆಜ್ಜೆ, ತೋಳಲ್ಲಿ ತೋಳು ಬಳಸಿ ನಡೆದ ನಡೆ, ಹಂಚಿಕೊಂಡ ತುತ್ತು, ಕಾಡಿ-ಬೇಡಿ ಸವಿದ ಸವಿ, ಸರಸ-ವಿರಸ, ಮೋಡವಾಗಿ ಕವಿದು, ಮತ್ತೆ ಮಳೆ ಸುರಿಸಿದ ಅವಳ ಪ್ರೇಮ, ಸಮುದ್ರದಂತೆ ಅವಳ ಮೇಲೆ ಆವರಿಸಿ ಸುರಿದು, ಮುಳುಗಿಸಿ ಎಳಿಸಿದ ಅವನ ಮುತ್ತು ಮಳೆ ಎಲ್ಲ ನೆನಪಾಗಿ ಕಣ್ಣಂಚಿಗೆ ಹನಿ ಮುತ್ತು ಇಣುಕುತ್ತಿರುತ್ತದೆ. ಒಳಗೆಲ್ಲಾ ಮೌನ ತುಂಬಿಕೊಂಡು ಉಸಿರು ಭಾರವಾಗಿ ಕುಳಿತು ಆ ಮೌನದಲ್ಲಿ ಬಿಕ್ಕಳಿಕೆ ಕರಗತೊಡಗುತ್ತದೆ. ಹೊರಗೆ ಬಾರದೇ ಒಳಗೆ ಅದುಮಿಡದ ಸಂಕಟಕ್ಕೇ ಒಳಗೇ ನರಳತೊಡಗುತ್ತಾಳೆ.
ನಿನಗೊಂದಿಷ್ಟು ನೆನಪಿನ ಹೂ ಮುತ್ತುಗಳು. ಎತ್ತಿಕೋ ಮೆಲ್ಲಗೇ.....
ಒಲವಿನಿಂದ ನಿನ್ನವಳು.
ಚಿನ್ನು.
Sunday, April 6, 2008
ಮೂಕ ಹಕ್ಕಿಯು ಹಾಡುತಿದೆ
Friday, April 4, 2008
ಯಾವ ಮೋಹನ ಮುರುಳಿ ಕರೆಯಿತೋ.......
ವಿನಾಕಾರಣ ನಿನ್ನೊಂದಿಗೆ ಮುನಿಸ್ಕೊಂಡು ಮಾತುಬಿಟ್ಟಿದ್ದೆ. ಗೊತ್ತು ನಿನ್ನದೇನೂ ಅಂಥಾ ಮಹಾ ತಪ್ಪಿರಲಿಲ್ಲ ರಾಜಾ. ಮುನಿಸಿಕೊಳ್ಳುವ ಕಾರಣವೂ ಇರಲಿಲ್ಲ. ಆಗಿದ್ದು ಇಷ್ಟೇ ! ನೀನು ಜಯನಗರದ ನಿನ್ನ ಆಫೀಸಿನಿಂದ ದಿನಕ್ಕೊಮ್ಮೆಯಾದರೂ ನಾನುಳಿದುಕೊಂಡ ನನ್ನ ಗೆಳತಿಯ ಮನೆಯಿದ್ದ ವಿಜಯನಗರಕ್ಕೆ ಬರಲಿ, ಬಂದೇ ಬರುತ್ತಿಯೆಂದು ನಿರೀಕ್ಷಿಸಿದ್ದೆ. ಆದರೆ ನಾನಂದುಕೊಂಡಂತೆ ನಿನಗೆ ಬರಲಾಗಿರಲಿಲ್ಲ, ನಿನ್ನವೇ ಆದ ಕೆಲಸದ ಒತ್ತಡಗಳ ನಡುವೆ. ನಾನು ಬೇಸರ, ಮುನಿಸಿನಿಂದಲೇ ತಂಗಿಯ ಮನೆಗೆ, ದೊಡ್ಡನೆಕ್ಕುಂದಿಗೆ ಹೊರಟು ಬಂದಿದ್ದೆ. ನೀನು ಮಾತಾಡಿಸುವ ಪ್ರಯತ್ನ ಪಟ್ಟು, ಕೊನೆಗೆ ಸುಮ್ಮನಾಗಿದ್ದೆ. ನೀನು ನಿನ್ನ ಜಾಗದಲ್ಲಿ ಸರಿಯಿದ್ದೆ, ನಾನು ನನ್ನದೇ ತರ್ಕದಲ್ಲಿ. ಮೊದಮೊದಲು ಸಿಟ್ಟಿನಲ್ಲಿ ಗೊತ್ತಾಗದೇ ಕಳೆದ ದಿನಗಳನ್ನು ಮುಂದೆ ಹಾಗೆ, ನೀನಿಲ್ಲದ ಕ್ಷಣಗಳನ್ನು, ದಿನ ಕಳೆಯುವುದೇ ಕಷ್ಟವಾಗಿ ಹೋಯಿತು. ಕ್ಷಣಗಳು ಯುಗವಾಗಿ ಹಿಂಸಿಸತೊಡಗಿದ್ದವು. ಅಗಲಿಕೆಯ ನೋವು ಕಣ್ಣಿರಾಗಿ ಹರಿಯತೊಡಗಿತ್ತು. ನನ್ನದೇ ಹಠ, ನನ್ನದೇ ಮುನಿಸಿನಲ್ಲಿ ಎಂಥದೋ ದೊಡ್ಡ ಕಾರಣವಿರಬಹುದು ಎಂದೇ ತಿಳಿದಿದ್ದ ನನ್ನ ಭ್ರಮೆ ನೀನು ದೂರವಾಗುತ್ತಲೂ, ಅಲ್ಲ, ನಿನ್ನಿಂದ ನಾನು ದೂರವಾಗುತ್ತಲೇ ಗಾಳಿ ಹೋದ ಬಲೂಲಿನಂತಾಗತೊಡಗಿತ್ತು. ಮನಸ್ಸು ನಿನ್ನನ್ನು ನೆನೆದು ನೆನೆದು ನೋಯುತ್ತಿತ್ತು, ಬೆಂದು ಕರಕಲಾಗತೊಡಗಿತ್ತು. ನೀನಿಲ್ಲದ ಬದುಕು ಇಷ್ಟು ರಸಹೀನವೇ ? ಇದುವರೆಗೆ ಗೊತ್ತಿಲ್ಲದ ಸತ್ಯವೊಂದು ನನ್ನನ್ನು ಇನ್ನಷ್ಟು ನಿನ್ನ ಹತ್ತಿರ ಬರುವಂತೆ ಮಾಡಿತ್ತು. ಆ ನಾಲ್ಕೈದು ದಿನಗಳು ನಾನುಭವಿಸಿದ ನರಕಯಾತನೆಯೇ ಇದಕ್ಕೆ ಸಾಕ್ಷಿ. ನೀನು ಪಟ್ಟ ನೋವು ನಿನ್ನ ಎಸ್.ಎಮ್.ಎಸ್.ನಿಂದ ಗೊತ್ತಾಗುತ್ತಿದ್ದರೂ ನಾನೇ ಸರಿಯೆಂಬ ನನ್ನ ಅಹಂಕಾರ ನಿನ್ನನ್ನು ಕರೆಯುವಂತೆ ಮಾಡಗೊತ್ತಿರಲಿಲ್ಲ. ನನಗೆ ಗೊತ್ತು ನೀನಂಥಾ ಕಟುಕನಲ್ಲ. ನನ್ನ ಒಂದು ಕರೆಗೆ ಕರಗಿಹರಿಯುವ ಸೆಲೆಯಾಗಿಬಿಡುತ್ತಿ. ಮುದ್ದುಗರೆಯುವ ಮೋಡವಾಗಿ ಬಿಡುತ್ತಿ. ನಾನು ನಿನ್ನ ಪ್ರೇಮದ ಬಿಸಿಯಲ್ಲಿ ಮೇಣವಾಗಿ ಕರಗುತ್ತೇನೆ. ನೀನು ನನ್ನನ್ನೂ ನನ್ನ ಅವಿವೇಕವನ್ನೂ ಮನ್ನಿಸಿ, ಮತ್ತೆ ಬಾಚಿಕೊಂಡು ಮುತ್ತಿನ ಮಳೆಗರೆಯುತ್ತಿ. ಮೋಡಗಟ್ಟಿದ ನೋವೆಲ್ಲ ಧಾರಾಕಾರವಾಗಿ ಸುರಿದಾಗಲೇ ಮನಸ್ಸು ಹಗುರವಾಗುವುದು. ಎಂದೆಲ್ಲ ನಾನೇ ನನ್ನ ಯೋಚನೆಯಲ್ಲಿ ಕನಸು ಕಾಣುತ್ತಿದ್ದೇನೆ ಹೊರತು ನಿನ್ನನ್ನು ಹೇಗಿದ್ದೀಯಾ ಅಂತಾ ಕೂಡ ಕೇಳಲು ಧೈರ್ಯಮಾಡಲಿಲ್ಲ ರಾಜಾ. ಆದರೆ ಒಂದು ಕ್ಷಣವೂ ನಿನ್ನನ್ನಗಲಿ ನಾ ಬದುಕಲಿಲ್ಲ, ಉಸಿರಾಡುವ ಶವದಂತಾಗಿದ್ದೆ. ಬದುಕೆಂದರೆ ನೀನು, ನೀನೆಂದರೆ ನನ್ನ ಸುಂದರ ಬದುಕು. ಇದೇ ಸತ್ಯ, ಇದೇ ನಿತ್ಯ.
ಸಹನೆ ಕುಸಿಯತೊಡಗಿತ್ತು,ಮುನಿಸಿನ ಜಾಗವೆಲ್ಲ ಪಶ್ಚಾತ್ತಾಪ ತುಂಬಿಕೊಂಡು ನಿನ್ನನ್ನು ಯಾವಾಗ ನೋಡುವೇನೋ? ಈ ಕಣ್ಣುಗಳು ಎಂದು ನಿನ್ನನ್ನು ಕಣ್ಣತುಂಬ ತುಂಬಿಕೊಂಡು , ಅಲ್ಲೇ ಬಚ್ಚಿಟ್ಟುಕೊಳ್ಳುತಾವೋ ಎನಿಸುವಷ್ಟು ತೀವ್ರವಾದ ವೇದನೆ, ಆಸೆ, ಹಂಬಲ, ನಿನ್ನ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಹರಿಯತೊಡಗಿತ್ತು, ಎದೆಯಲ್ಲಿ ಹಾಗೇ ಹನಿಯತೊಡಗಿತ್ತು. ತಡೆಯಲಾರದೇ ಭಾನುವಾರದಂದು ನಿನ್ನ ಗೆಳೆಯನಿಗೆ ಹೇಳಿದೆ ನಮ್ಮಲ್ಲ ಜಗಳದ ಸುದ್ದಿ, ಆತ ಕೇಳಿ ಸುಮ್ಮನೆ ನಗಾಡಿದ. ಏನು, ನೀವು ಚಿಕ್ಕ ಮಕ್ಕಳಂತೆ ಆಡ್ತೀರಾ. ಬಹುಶಃ ಅವನು ನಿನಗೆ ಹೇಳಿರಬಹುದು,ನಾನು ಕಾಲ್ ಮಾಡಿದ ಬಗ್ಗೆ. ನಿನ್ನಿಂದ ಯಾವ ಕಾಲೂ ಬರಲಿಲ್ಲ. ಇಡೀ ದಿನ ಜಾತಕ ಪಕ್ಷಿಯಂತೆ ಕಾ ದು.. , ಸಂಜೆ ನಾನೇ ನಿನಗೆ ಪೋನಾಯಿಸಿದೆ. ನೊಂದ ಧ್ವನಿಯಲ್ಲಿ. ಬೆಂದ ಮನದಿಂದ ನೋವೇ ಕಣ್ಣೀರಾಗಿ, ಮತ್ತೆ ಮತ್ತೆ ಒಳಗೇ ಬಿಕ್ಕುತ್ತಾ ನಿನ್ನೊಂದಿಗೆ ಮಾತಿಗಿಳಿದಿದ್ದೆ. ನೆನಪಿದೆಯಾ? ಏನೆಲ್ಲ ಮಾತಾಡಿದೆವು? ಯಾವುದೂ ನೆನಪಿಲ್ಲ. ಇಬ್ಬರೂ ಕರಗಿ ನೀರಾಗಿದ್ದೆವು. ಈ ಕ್ಷಣಕ್ಕಾಗಿಯೇ ಹಾತೊರೆಯುತ್ತಿದ್ದೇವು. ಆದರೆ ನೀನು ಕರೆಯ ಕೇಳಿ ಓಡಿ ಬರುವ ಕರುವಿನಂತೆ, ಹಠ ಮರೆತು ಓಡಿ ಬರುವ ಮುದ್ದು ಮಗುವಿನಂತೆ ಬೈಕ್ ಏರಿ ಹೊರಟೇ ಬಿಟ್ಟೆ. ಅಬ್ಬಾ... ನಾಲ್ಕೈದು ದಿನ ಪಟ್ಟ ಸಂಕಟ,ನೋವು, ವನವಾಸ, ಪರಿತಪಿಸಿದ್ದು ಎಲ್ಲ ಕ್ಷಣದಲ್ಲಿ ಮರೆತು ನೀ ಬರುವ ದಾರಿಯನ್ನೇ ಕಾಯತ್ತಿದ್ದೆ.
ಗಾಳಿಯಲ್ಲಿ ಬೈಕ್ ಓಡಿಸಿಕೊಂಡು ಬಂದವನಂತೆ ೧೫-೨೦ ನಿಮಿಷದಲ್ಲಿ ನೀನು ನನ್ನೆದುರಿಗೆ, ಬೈಕ್ ಮೇಲೆ ಹಸಿರು ಜಾಕೆಟ್, ಹೆಲ್ಮೆಟ್ ಹಾಕ್ಕೊಂಡು, ನಿನ್ನ ತೇವದ ಕಣ್ಣುಗಳು ನನ್ನನ್ನು ಅಡಿಯಿಂದ -ಮುಡಿವರೆಗೆ ತೋಯಿಸುತ್ತಿದ್ದವು. ಇನ್ನು ಮುಂದೆ ಹೀಗೆಲ್ಲ ಚಿತ್ರಹಿಂಸೆ ಕೊಡಬೇಡಾ, ನೀನೂ ನರಳಬೇಡ ಎನ್ನುವಂತೆ ಆ ಜೋಡಿ ಕಂಗಳು ಆರ್ದ್ರವಾಗಿ, ಹಿಡಿಯಾಗಿ ನನ್ನ ಕರುಳನ್ನು ಹಿಂಡುತ್ತಿದ್ದವು. ನಾನು ಮರುಮಾತಾಡದೇ ಜತೆಯಲ್ಲಿ ತಂಗಿ ಇದ್ದದ್ದೂ ಮರೆತು ನಾನು ಈಗ ಬರ್ತೀನಿ, ಏ.ಟಿ.ಏಮ್.ಗೆ ಹೋಗ್ಬೇಕು ಎಂದು ನಿನ್ನ ಹಿಂದೆ ಬೈಕ್ ಏರಿ ಕುಳಿತೇ ಬಿಟ್ಟೆ. ಮನೆದಾಟಿ ಮುಂದೆ ಮೇನ್ ರೋಡಿಗೆ ಸೇರುವ ಮೊದಲೇ ನಾನು ಹಿಂದಿನಿಂದ ಗಟ್ಟಿಯಾಗಿ ತಭ್ಬಿಕೊಂಡು ನಿನ್ನ ಬೆನ್ನು ತೋಯಿಸುತ್ತಿದ್ದೆ. ನೀನು ಇಡೀ ದಿನ ಕುಳಿತು, ನೋವ ಮರೆಯಲು ಡ್ರಿಂಕ್ಸ್ ಮಾಡಿದ್ದು ನಿನ್ನ ಹತ್ತಿರಕ್ಕೆ ಬಂದಾಗಲೇ ಗೊತ್ತಾಗಿತ್ತು. ಹೃದಯವೆ ಒಡೆದು ಹೋಗುವಂತಾ ನೋವು, ನರಳಿಕೆ, ಅಗಲಿಕೆ ಮಿಲನದಲ್ಲಿ ಬಿಕ್ಕುತ್ತಿತ್ತು. ನೀನು ಮೌನವಾಗಿ ಗಾಡಿ ಓಡಿಸುತ್ತಿದ್ದರೂ ನೀನು ಆಗಾಗ ಕಣ್ಣು ಒರೆಸಿಕೊಳ್ಳುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು. ಸಾರೀ ರಾಜಾ....ಕ್ಷಮಿಸಿಬಿಡು ಇನ್ನೆಂದು ಹೇಗೆ ಹುಚ್ಚಿ ತರಾ ಆಡಲ್ಲಾ, ನಿನಗೆ ನೋವು ಕೊಡಲ್ಲಾ ..ಏನೇನೋ ಮನ ಬೇಡುತ್ತಿತ್ತು, ಆದರೆ ಮಾತು ಮೌನವಾಗಿ , ಮೌನ -ಮಾತುಗಳು ನಿಶ್ಯಬ್ದವಾಗಿ ನಮ್ಮ ಮಧ್ಯೆ ಕುಳಿತಿತ್ತು, ನಮ್ಮನ್ನೇ ನೋಡುತ್ತಿತ್ತು. ಅಲ್ಲಿ ಇಲ್ಲಿ ಸುತ್ತಾಡಿ , ತಲೆಗೆ ತೋಚಿದ್ದು ಮಾತಾಡಿ ಕೊನೆಗೆ ವಾಪಸ್ಸು ಮನೆಗೆ ಮರಳುವ ಹಾದಿಯಲ್ಲಿ ಏನೂ ತೋಚದೇ ಒಂದು ಕಡೆ ನೀನು ಗಕ್ಕನೇ ಬೈಕ್ ನಿಲ್ಲಿಸಿದೆ, ನಾನು ಬೈಕ್ ಹಾರಿ ಇಳಿದು ಮುಂದೆ ಬಂದು ಗಟ್ಟಿಯಾಗಿ ತಬ್ಬಿಕೊಂಡು, ಮುದ್ದುಗರೆದು, ಒಂದೇ ಒಂದು ಕ್ಷಣ ಕೈ ಜಾರಿ ಹೋಗದಂತೆ , ಹಿಡಿದೇ ಬಿಟ್ಟೆನೆನ್ನುವ ಹಪಿಹಪಿಯಲ್ಲಿ, ಕವ್ವನೇ ಕವಿದ ಕತ್ತಲಲ್ಲಿ, ನಿನ್ನೊಳಗೆ ನನ್ನನ್ನು ತುಂಬಿಕೊಡುವ, ಜೀವ ಜೀವ ಬೆರೆಸುವ, ನಿನ್ನ ನೋವನ್ನೆಲ್ಲ ಹೀರುವಂತಾ ಸಿಹಿ-ಸಿಹಿಯಾದ ಮುತ್ತೊಂದು ರಸನಿಮಿಷದಲ್ಲಿ ಮತ್ತೇರಿ, ಎರಡು ಮನಗಳನ್ನು ಸಾಂತ್ವನಗೊಳಿಸತೊಡಗಿ, ಅಷ್ಟೇ ಚುರುಕಿನಿಂದ ತಟ್ಟನೇ ಬೇರೆಯಾಗಿ, ನಿನ್ನ ಭುಜದಕ್ಕೆ ವಿರಮಿಸಿತು. ಮುಂದೆ ಮಾತುಗಳು ಬೇಕಿರಲಿಲ್ಲ.
ರಾಜಾ....ಅಂದೇ ನಾನು ನಿನ್ನ ಪ್ರೀತಿಯಲ್ಲಿ ನನ್ನ ಬದುಕಿನ ಭರವಸೆಯನ್ನು ಕಂಡಿದ್ದೆ. ಸಾಕಲ್ಲವಾ ಇಷ್ಟು.

