Wednesday, January 23, 2008

Lift......

ಲಿಫ್ಟ್.......

ಹಸಿರು ಮರಗಳೆಲ್ಲ ಬಿಳಿ ಚಾದರ್ ಹೊದ್ದು ಮಲಗಿವೆ ಛಳಿಗೆ, ಹಳದಿ, ಕೆಂಪು , ಬಿಳಿ ಬಣ್ಣದ ಚಿಕ್ಕ ಚಿಕ್ಕ ಹೂಗಳು ಮುತ್ತಿನಂಥ ಇಬ್ಬನಿಯನ್ನು ಹೊದೆದು ತುಸುಹೊತ್ತಿನಲ್ಲಿ ಗೌರವರ್ಣದ ಬಿಸಿಲಿಗೆ ಕರಗಲು ಕಾದು ಕುಳಿತಿವೆಯೇನೋ ಎನ್ನುವಂಥಾ ಪ್ರಕೃತಿ ಒಂದು ಸುಂದರ ಪೇಯಿಂಟಿಗನಂತೆ ಹರಡಿ ನಿಂತು ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು. ತನಗೆ ಅತ್ಯಂತ ಪ್ರಿಯವಾದ ಗುಲ್ ಮೊಹರ ಮರ ಹೂಗಳಿಲ್ಲದೇ ತನ್ನಂತೆ ಸಪ್ಪಗೇ ನಿಂತಿದೆ. ಈಸ್ಟ್ ಆಫ್ ಕೈಲಾಸ್ನ ’ನೆರುಲಾ’ದಲ್ಲಿ ಬೆಳ್ಗಿನ ಒಂಭತ್ತೂ ವರೆಗೆ ಪೀಕೆನ ಎದುರಿಗೆ ಕುಳಿತು ಬಿಸಿ ಬಿಸಿ ಹಬೆಯಾಡುವ ಟೊಮ್ಯಾಟೋ ಸೂಪ್ ಹಾಗೂ ಹರಾ ಮಟರ್ ಕಾ ಕಬಾಬ್ ಮೆಲ್ಲುತ್ತಿದ್ದ ಅವಳ ಮನಸ್ಸೆಲ್ಲಾ ವ್ಯಗ್ರವಾಗುತ್ತಿತ್ತು. ಒಂಥರಾ ಖಾಲಿತನ. ಒಂಥರಾ ಜುಗುಪ್ಸೆ...ಮಾನಸಿಕವಾದ ಅಸಹನೆ, ಹಿಂಸೆ, ಮನಸ್ಸು ಮನಸ್ಸಿನಾಚೆಗೆ ಎಲ್ಲೋ ಹೋಗಿರುತ್ತದೆ, ಕಿವಿಗೆ ಪೀಕೆನ ಯಾವ ಮಾತುಗಳೂ ಕೇಳುತ್ತಿಲ್ಲವೆಂಬ ಅನಿಸಿಕೆ ಮತ್ತು ನಿರಾಳವಾದ ಸಮಾಧಾನ. ಅವನು ಏನೆನೋ ಹೇಳುತ್ತಿರುತ್ತಾನೆ ಅವೆಲ್ಲಾ ತನಗಿಷ್ಟವಿಲ್ಲದ ಟಾಪಿಕ್ ಗಳೇ ಆಗಿದ್ದಾಗ ಕಿವಿ ಕೇಳಿಸುತ್ತಿದೆಯೆಂದು ನಟಿಸುತ್ತಾ ಇದ್ದರೆ ಮನಸ್ಸೊ ಬೇರೆಲ್ಲೋ ಹಾರಿ ಹೋಗಿರುತ್ತದೆ. ಯಾಕೆ ತಾನು ಈ ಪೀಕೆನೊಂದಿಗೆ ಸೂಪ್ ಕುಡಿಯಲು ಬಂದೆ ? ಗೊತ್ತಾಗುತ್ತಿಲ್ಲ. ಒಲ್ಲೆ ಎನ್ನಲು ಆಗದ ಸೌಜನ್ಯತೆಗೋ , ಅವನು ದಿನಾ ತನ್ನನ್ನು ಆಫೀಸು ತಲುಪಿಸುತ್ತಿದ್ದಾನೆಂಬ ದಾಕ್ಷಿಣ್ಯಕ್ಕೊ ಅರ್ಥವಾಗುತ್ತಿಲ್ಲ.
ಇತ್ತೀಚೆಗೆ ಆರು ತಿಂಗಳಿನಿಂದಾ ಪೀಕೆನೇ ಸೆಕ್ಟರ ಮೂವತ್ತೇಳರಿಂದ ಬೆಳಿಗ್ಗೆ ಪಿಕ್ ಮಾಡ್ತಾನೇ, ಸಂಜೆಗೂ ಅವ ತನ್ನ ಮೆಹರೌಲಿ ಆಫೀಸಿನಿಂದ ಹೊರಟು ಸೌಥ್ ಎಕ್ಸ್ಟ್ ನಲ್ಲಿರುವ ತನ್ನ ಬ್ಯಾಂಕಿನಿಂದ ಪಿಕ್ ಮಾಡುತ್ತಾನೆ. ಯಾಕೆ ತಾನು ಕುರಿಯಂತೆ ಅವನನ್ನು ಹಿಂಬಾಲಿಸುತ್ತೇನೆ? ಅವನೆಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಮನೆಗೆ ಬೇಗ ತಲುಪುತ್ತೇನೆಂಬ ಒಂದೇ ಒಂದು ಕಾರಣ ಮತ್ತು ಬೇಗ ಮನೆ ಸೇರುವ ತವಕ ಬಿಟ್ಟರೆ ತನ್ನಲ್ಲಿ ಏನೂ ಇಲ್ಲ. ಯಾವ ಭಾವನೆಗಳೂ ಇಲ್ಲ. ಇದೇನು ತನ್ನ ಕೇಡುಗಾಲ ? ಏನಾಗಿದೆ ತನಗೆ ? ಯಾವ ಕೆಟ್ಟ ಘಳಿಗೆಯಲ್ಲಿ ತಾನವನಿಗೆ ತಾನು ನೋಯ್ಡಾದಲ್ಲಿ ವಾಸಿಸುತ್ತೇನೆ ಅಂತಾ ಒದರಿದಳೋ ಅವತ್ತಿನಿಂದಾ ಗಂಟು ಬಿದ್ದಿದ್ದಾನೆ. ಅರ್ರೇ ನಾನು ಅಲ್ಲೇ ಇರುವುದು, ನೀವು ಏನೂ ಯೋಚನೆ ಮಾಡಬೇಡಿ, ’ಐ ವಿಲ್ಲ್ ಡ್ರಾಪ್ ಯೂ’ ಎಂದು ತಾನೇ ಈ ವ್ಯವಸ್ಥೆಯನ್ನು ಮನಸಾರೆ ಒಪ್ಪಿದ್ದೇನೆ ಎನ್ನುವಂತೆ ತನ್ನ ಅಭಿಪ್ರಾಯಕ್ಕೂ ಕೇಳದೇ ತನ್ಗಾಗಿ ಸೆಕ್ಟರ್ ಮೂವತ್ತೇಳರ ಪೆಟ್ರೋಲ್ ಬಂಕಿನೆದುರು ಮರುದಿನ ಕರಾರುವಾಕ್ಕಾಗಿ ಕಾಯುತ್ತಿದ್ದ. ಗಾಜಿಯಾಬಾದ್ ಬಸ್ಸಿನಿಂದ ಕೆಳಗಿಳಿಯುತ್ತಲೇ ಆತನ ಗಾಡಿ ಕಣ್ಣಿಗೆ ಬಿದ್ದು ಹಾಗೆ ನೋಡಿಯೂ ನೋಡದಂತೆ ದಾಟಿ ಹೋಗಬಹುದಿತ್ತು ಎಂದುಕೊಳ್ಳುತ್ತಾ , ಹಾಗೆ ಮಾಡಲು ಮನಸ್ಸು ಒಪ್ಪದೇ ಪೀಕೆನ ಕಾರಿನೆಡೆಗೆ ಯಾವುದೋ ಮೋಡಿಗೊಳಗಾದವಳಂತೆ ಕಾಲು ಹಾಕಿದ್ದಳು.
ಈ ಪೀಕೆ ತನಗೆ ಯಾವ ಸಂಬಂಧಿಕನೂ ಅಲ್ಲ, ಸಹೋದ್ಯೋಗಿಯೂ ಅಲ್ಲ, ಎರಡು ವರ್ಷದ ಹಿಂದೆ ಹಾಗೇ ಒಂದು ದಿನ ತನ್ನ ಬ್ಯಾಂಕ್ ಮ್ಯಾನೇಜರ್ ದೀಪಕ್ ಗುಪ್ತಾನ್ ಛೇಂಬರ್ನಲ್ಲಿ ಕಂಡದ್ದರ ನೆನಪು. ಒಂದೆರಡು ಸಲ ಗ್ಲಾಸ್ ಪೇನ್ ನಿಂದ ಕದ್ದು ಕ್ಯಾಶ ಕೌಂಟರನಲ್ಲಿದ್ದ ತನ್ನನ್ನು ನೋಡಿದ ನೆನಪು. ಇತ್ತೀಚೆಗೆ ಅವನ ಕಂಪನಿಗೆ ನಮ್ಮ ಬ್ಯಾಂಕು ಒಂದು ಕೋಟಿ ಹಣಸಹಾಯ ನೀಡಿದೆ. ದೀಪಕ ಗುಪ್ತಾ ಅವನಿಗೆ ಮೊದಲಿನಿಂದ ಮಿತ್ರನೋ, ಲೋನಿಗಾಗಿ ಈ ಮಿತ್ರತ್ವವೋ ದೇವರಿಗೆ ಗೊತ್ತು. ಈಗೀಗ ಅರ್ಧ ದಿನ ಆತ ನಮ್ಮ ಬ್ಯಾಂಕಿನ ನೌಕರನೇನೋ ಅನ್ನುವಂತೆ ಹೆಚ್ಚು ಸಮಯ ಕಳೆಯುತ್ತಿರುತ್ತಾನೆ. ಏ.ಜಿ.ಎಮ್. ಪ್ರಭುಶಂಕರ ದಯಾಲ್ ನ ಚೇಂಬರನ್ನು ತನ್ನದೇ ಆಫಿಸೇನೋ ಎಂಬಂತೆ ಬಳಸುತ್ತಾನೆ, ತನ್ನ ಲ್ಯಪ್ ಟಾಪ್ ತೆರೆದುಕೊಂಡು ಗಂಭೀರವಾಗಿ ಏನೋ ಲೆಕ್ಕಾಚಾರವನ್ನು ತಾಳೆನೋಡುತ್ತಿರುತ್ತಾನೆ. ಎಲ್ಲರೂ ನೋಡುತ್ತಿರುತ್ತಾರೆ ಯಾರಿಗೆ ಅನ್ನುವುದು. ದೊಡ್ಡವರ ವಿಷಯವಲ್ಲವೇ?
ದಿನಗಳೆದಂತೆ ಎಲ್ಲರ ಜತೆ ಹಾಯ್ , ಹಲೋಗಳ ವಿನಿಮಯವಾಗುತ್ತಿದ್ದವು. ತನ್ನೊಂದಿಗೂ ಹಲೋ ಹೇಳಿದ್ದಿದೆ. ತನಗೆ ಕತ್ತು ಎತ್ತಿ ಮಾತನಾಡಲು ಪುರುಸೊತ್ತಿದ್ದರೆ ತಾನೆ? ಎಲ್ಲೇ ಕಾಣಲಿ ಎಲ್ಲರನ್ನು ಬಿಟ್ಟು ವಿಶೇಷವಾಗಿ ತನ್ನನ್ನು ಕಂಡು ಮೆಲ್ಲಗೇ ಹಾಯ್ ಹೇಳಿ, ಮುಗುಳ್ನಗೆ ಸೂಸಿ ಹೋಗುತ್ತಿದ್ದ. . ಐವತ್ತರ ಅಂಚಿನಲ್ಲಿದ್ದ ಮುದಿಯ. ಸಲ್ಪ ರಷ್ಯ ಇಲ್ಲದೇ ಇದ್ದಾಗ ಟೀ ಬ್ರೇಕ್ನಲ್ಲಿ ಅವನೇ ಒಮ್ಮೆ ತನ್ನ ವಯಸ್ಸನ್ನು ಹೇಳಿ ತಾನಿನ್ನೂ ರಾಜ್ ಬಬ್ಬರ್ ಹಾಗೆ ಇದ್ದೇನಲ್ಲಾ ? ಎಂದು ಎಲ್ಲರೊಂದಿಗೆ ಕೊಚ್ಚಿಕೊಂಡಿದ್ದ. ಹೇಗೆ ತನ್ನ ಜತೆ ಕೇವಲ ಹಾಯ್, ಹಲೋದ ಏಳೆ ಹಿಡಿದು ಇಷ್ಟು ಹತ್ತಿರ ಬಂದ? ಅವನೇ ಹೇಳಿಕೊಳ್ಳುವಂತೆ ವಿ ಆರ್ ಫ್ರಂಡ್ಸ್ ಯಾರ್" ಹೇಗೆ ಪ್ಫ್ರೆಂಡ್ಸ್ ಅರ್ಥವಾಗುವುದಿಲ್ಲ. ಎಲ್ಲರನ್ನು ಬಿಟ್ಟು, ಎಲ್ಲವನ್ನೂ ಆಚೆಗೆ ಹಾಕಿ ತಾನೇ ಯಾಕೆ ಫ್ರೆಂಡ್ ಆಗ್ಬೇಕು? ಯಾವ ಸಾಮ್ಯತೆಯಿಂದ ? ವಯಸ್ಸಿನ ಸಾಮ್ಯತೆಯೋ, ಊರು ಕೇರಿಯ ನೆಂಟಸ್ತಿಕೆಯೋ, ಒಂದೇ ಕಡೆ ಓದಿದವರೋ ? ಯಾವ ಸಂಬಂಧದಿಂದ ತಾನು ಫ್ರೆಂಡ್ ಆಗಿಯೇನು? ತನಗೇನು ಅರ್ಥವಾಗುವುದಿಲ್ಲಾ ಅಂತ ತಿಳಿದ್ದಿದ್ದಾನಾ? ಅಷ್ಟು ಬುದ್ದೂ , ಪೆಕರನಂತೆ ಕಾಣ್ತೀನಾ? ಭಯವಾಯಿತು. ತನ್ನ ರೂಪಿನ ಬಗೆಗೆ, ಮಾದಕತೆಯ ಬಗೆಗೆ, ಮೌನದ ಬಗ್ಗೆ ತನ್ನ ಕಾಲೇಜಿನ ಬಂಡ್ಯಾ ಪದ್ಯ ಬರೆದು ಅದು ಇಂಗ್ಲೀಷ ಮೇಡಂ ಕೈಗೆ ಸಿಕ್ಕಿ ಫಜೀತಿಯಾಗಿದ್ದು, ಅಳು ಮುಖದಿಂದ ಕಣ್ಣೀರನ್ನು ಉಕ್ಕಿಸಿಕೊಂಡು ನಿಂತಿದ್ದ ದೀನವಾದ ಬಂಡ್ಯಾನ ಮುಖ ನೆನೆದು ಮೊದಲು ನಗು ಬರುತ್ತಿತ್ತು. ಈಗ ತನಗೂ ಅಳು ಬರುತ್ತದೆ. ’ಪಾಪ ಬಂಡ್ಯಾ’ ಎನಿಸಿ. ಇಲ್ಲಿ ಹೀಗೆ ಇಷ್ಟವಾಗದ ಒಬ್ಬ ವ್ಯಕ್ತಿಯೊಡನೆ ಸೂಪ್ ಕುಡಿಯುತ್ತೇನೆಂದು ಗೊತ್ತಿತ್ತಾ ತನಗೆ ? ಬ್ಯಾಂಕಿನ ಹಲವರು ಅವನು ತನಗೆ ಹಾಯ್ ಹೇಳಿದ್ದು ಕಂಡು -ಏಯ್ ಬೀನಾ ಮ್ಯಾಡಂ ಆಸಾಮಿ ಗಾಳ ಹಾಕ್ತಾ ಇದೆ’ ಹುಷಾರಾಗಿರು ಎಂದು ಮುಜುಗುರವಾಗುವಷ್ಟು ಎಚ್ಚರಿಕೆ ಕೊಟ್ಟಿದ್ದರು. ಛಳಿಯಲ್ಲೂ ಇದನ್ನು ಯೋಚಿಸಿ ಬೆವತು ಹೋದಳು. ಯಾಕೋ ತಪ್ಪು ಮಾಡುತ್ತಿದ್ದೆನೇಂಬ ಗಿಲ್ಟು ಕಾಡತೊಡಗಿತು.
ಯಾಕೆ ಪೀಕೆನಿಂದ ಲಿಫ್ಟ್ ತಗೋತೇನೆ? ಮುಂಬಾಯಿಯಲ್ಲಿ ಜನ ಗಾಡಿಯಿದ್ದವರು ಒಂದೇ ದಿಕ್ಕು, ಮಾರ್ಗದಲ್ಲಿ ಹೋಗುವವರು ಇನ್ನೊಬ್ಬರನ್ನು ಪಿಕ್ ಮಾಡ್ಕೊಂಡು ಹೋಗ್ತಾರಂತೆ ಎಂದು ಕೇಳಿದ್ದೇನೆ. ಅವರೂ ಇಂಥಾ ಸನ್ನಿವೇಶದಲ್ಲಿ ತೊಳಲಾಡುತ್ತಾರಾ? ಯಾರನ್ನಾದರೂ ಕೇಳಬೇಕು. ನೋಯ್ಡಾದಿಂದ ಇಲ್ಲಿ ದೆಹಲಿಯ ಸೌಥ ಎಕ್ಸ್ ಗೆ ಬರಬೇಕೆಂದರೆ ಸ್ವಂತ ಗಾಡಿಯ ಅಗತ್ಯವಿದೆ. ರಜನೀ ಗಂಧಾ ಚೌಕಿನಿಂದಾ ಸುಮಾರು ಕಾಲ್ ಸೆಂಟರಿನ ಕ್ಯಾಬ್ ಗಳಿವೆ ಮೂಲ್ ಚಂದ್ ಕಡೆ ಬರಲು ಆದರೆ ಹಿಡಿಯಲು ಸರ್ಕಸ್ ಮಾಡಲು ಇಷ್ಟವಿಲ್ಲ. ಇನ್ನು ಪ್ರೈವೇಟ್ ಬಸ್ಸುಗಳು ವಿಪರೀತ ರಷ್ಯು. ತನ್ನ ಓದುವ ಮಕ್ಕಳೂ, ವಯಸ್ಸಾದ ಅತ್ತೆಯ ಆರೈಕೆ, ಡಾಕ್ಟರ್ ಬಿಲ್ಲು, ಗಂಡನ ಸತತ ಅನಾರೋಗ್ಯ. ಆತ ಅನಾರೋಗ್ಯದಲ್ಲೂ ಕೆಲಸ ಮಾಡುತ್ತಿರುತ್ತಾನೆ. ಆತ ಸಿವಿಲ್ ಇಂಜಿನಿಯರ್, ಹೊರಗಡೆ ಸಿಕ್ಕಾಪಟ್ಟೆ ಕನ್ಸ್ಟ್ರಕ್ಷನ್ ಕೆಲಸ ನಡೆಯುತ್ತಿರುತ್ತದೆ ಯೂ.ಪಿ., ಗಾಜಿಯಾಬಾದ್, ಗುರಗಾಂವ್ ಹೀಗೆ. ಇನ್ನ್ಯಾರಾಗಿದ್ರೆ ಲಕ್ಷಗಟ್ಟಲೇ ಗಳಿಸುತ್ತಿದ್ದರು. ಆದರೆ ಅವಳ ಗಂಡನಿಗೆ ಅಸ್ತಮಾ ಅದೂ ಇದೂಂತ ವರ್ಷವಿಡೀ ದವಾಖಾನೆ ಔಷಧಿ ಇರುತ್ತದೆ. ಹೆಚ್ಚು ಉತ್ಸಾಹದಿಂದ ಗಳಿಸಲಾರದವನಾಗಿದ್ದಾನೆ. ಮನೆಯಲ್ಲೇ ಒಂದು ಆಫೀಸ್ ತೆಗೆಯೋಣ, ಇಲ್ಲೇ ಕೂತಲ್ಲೇ ನೀನು ಸಿವಿಲ್ ನಕ್ಷಗಳನ್ನು, ತಾಂತ್ರಿಕ ಸಲಹೆಗಳನ್ನು ನೀಡಿಯೇ ಗಳಿಸಬಹುದು ಎಂದು ಬೀನಾ ಹೇಳಿ ಸೋತಿದ್ದಾಳೆ. ಅವನು ಯಾರ ಮಾತನ್ನೂ ಕೇಳಲಾರದ ವ್ಯಕ್ತಿ. ಬೀನಾ ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ದಿನಾ ನೋಯ್ಡಾ ದೆಹಲಿ ಅಂತಾ ಒದ್ದಾಡುತ್ತಿದ್ದಾಳೆ. ಇದೇ ಕಾರಣಕ್ಕಾಗಿ ಅವಳು ನೋಯ್ಡಾದಿಂದಲೇ ಹೋಗಿ ಬರುವ ಪೀಕೆನ ಜತೆ ಅವನ ಕಾರಲ್ಲಿ ಬರತೊಡಗಿದ್ದು. ಇತ್ತೀಚೆಗೆ ದೀಪಕ್ ಗುಪ್ತಾ ತನ್ನ ವರ್ಗಾವಣೆಯ ಅಹವಾಲನ್ನು ಸೀರಿಯಸ್ಸಾಗಿ ತಗೊಳ್ಳುತ್ತಿಲ್ಲ. ಸೂಪ್ ಹೀರುತ್ತಾ ವರ್ಗಾವಣೆಯ ಯೋಚನೆ ತಲೆಯಲ್ಲಿ ಮಿಂಚುತ್ತಲೇ ಸಾವಿರ ಓಲ್ಟಿನ ಲ್ಯಾಂಪ್ ಹತ್ತಿಕೊಂಡಂತಾಯ್ತು. ದೀಪಕ ಗುಪ್ತಾಗೆ ಹೇಳಿ ಇವನೇ ಆ ಕಾರ್ಯಕ್ಕೆ ಅಡ್ಡಿ ಮಾಡುತ್ತಿರಬಹುದಾ ಎಂಬ ಸಂಶಯವೂ ಬೆನ್ನಲ್ಲಿ ಹರಿಡಾಡಿದಂತಾಗಿ ಛಳಿ ಎನಿಸಿ ಪೀಕೆನ ದೊಗಲೆ ದೊಗಲೆ ಮುಖ, ಪೊದೆ ಪೊದೆ ಹುಬ್ಬು ಅಸಹ್ಯವಾಗಿ ಕಾಣತೊಡಗಿತು. ಅವನು ಒತ್ತಾಯದಿಂದ ನೀಡಿದ, ತಾನಿನ್ನೂ ಬಳಸಿರದ ಚಿಕ್ಕ ಪುಟ್ಟ ಗಿಫ್ಟಗಳು, ತನ್ನ ಪರ್ಸಿನಲಿದ್ದ ಆತ ಮೊನ್ನೆ ನೀಡಿದ ಲಿಪ್ ಸ್ಟಿಕ್ ಎತ್ತಿ ಬಿಸಾಡುವಷ್ಟು ಮಣಭಾರವೆನಿಸ್ತೊಡಗಿತು.
ಸೂಪ್ ಕುಡಿದು ಮುಗಿಸಿ, ’ ಹೊರಡೋಣವಾ ಸರ್ ? ಎಂದು ಎದ್ದೇ ಬಿಟ್ಟ ಬೀನಾಳನ್ನು ವಿಧಿಯಿಲ್ಲದೇ ಹಿಂಬಾಲಿಸಿದ ಪೀಕೆ, ಕಾರಿನಲ್ಲಿ ಕೂರುತ್ತಲೇ ಹೌ ವಾಸ್ ಸೂಪ್ ? ಯೂ ಲೈಕ್ ಇಟ್ ನಾ ? ನಿನಗಿಷ್ಟವಾಗಿದ್ದಕ್ಕೇ ನಾನು ಆರ್ಡರ್ ಮಾಡಿದೆಯೆನ್ನುವ ರೀತಿಯಲ್ಲಿ ನಕ್ಕ. ಅವಳೂ ಒತ್ತಾಯದ ನಗು ನಕ್ಕರೂ ಒಳಗೆಲ್ಲೋ ಏನೋ ಒಂದು ತರಹದ ದಿಗಿಲು, ಗೋಜಲು. ಎಲ್ಲೋ ಎನೋ ತಪ್ಪು ಮಾಡುತ್ತಿದ್ದೇನೆ ಎನ್ನುವ ಅಳುಕು. ಏನು ಮಾಡುವುದು ದಿನಾ ಬಸ್ಸಿನಲ್ಲಿ ನೇತಾಡಿಕೊಂಡು ಬರುವುದಕ್ಕಿಂತ ಆರಾಮವಾಗಿ ಕಾರನಲ್ಲಿ ಬರಬಹುದು ಎಂದುಕೊಂಡಿದ್ದ ಮನಸ್ಸು ಅದು ತಪ್ಪು ಎಂದು ವಾದಿಸತೊಡಗಿದೆ. ಇಷ್ಟು ದೊಡ್ಡವ್ಯಕ್ತಿಗೆ ದುಡ್ಡು ತಗೊಳ್ಳಿ ಅಂತಾ ಹೇಳಿ ಅಪಮಾನಿಸುವುದಕ್ಕಿಂತ ತಾನೇ ತನ್ನ ದಾರಿ ಹುಡುಕಿಕೊಳ್ಳಬೇಕು ಎಂದುಕೊಂಡಳು. ಹೀಗೇ ದಿನಾ ಅಂದುಕೊಳ್ಳುತ್ತಾಳೆ. ಕಾರ್ಯರೂಪಕ್ಕೆ ತರಲು ಅವಳಿರುವ ಸಂಧರ್ಭ, ಕೆಲಸ ಮತ್ತು ಮನೆಯ ಒತ್ತಡಗಳು ಯೋಚನೆಗೆ ಮುಸುಕೆಳೆಯುತ್ತಿವೆ. ಪೀಕೆ ಸುಮ್ಮನೆ ಗಾಡಿ ನಡೆಸುತ್ತಿದ್ದ, ಇವಳ ಮೌನ ಕಂಡೋ ಎನೋ ಪೀಕೆನ ದಪ್ಪ ಕೈ ಅವಳ ಬಲಗೈಯನ್ನು ಹಿಡಿಯಿತು, ಬೀನಾ ಸರಕ್ಕನೇ ಹಿಂತೆಗೆದುಕೊಂಡಳು. ’ಕ್ಯುಂ ಬೇಬಿ, ಎಷ್ಟು ಚೆಂದದ ಹವೆ ಇದೆ, ಪಕ್ಕದಲ್ಲಿ ಇಷ್ಟು ಚೆಂದದ ನೀನಿದ್ದಿ’ ಏನೇನೋ ಬಡಬಡಿಸುತ್ತಿದ್ದ ಪೀಕೆ. ಸಿಟ್ಟು, ಕೋಪ, ವಿಭ್ರಮೆಯಲ್ಲಿ ಕಿವಿಯೆಲ್ಲ ಕಾದು ಮಂದವಾಗತೊಡಗಿತು, ಏನೂ ಕೇಳಿಸದಂತೆ ಶೂನ್ಯತೆ, ಎಲ್ಲಾ ಸ್ತಬ್ದವಾದಂತೆ. ಇದನ್ನು ಅವಳ ಸಂಶಯಾಗ್ರಸ್ತ ಮನ ಬಹು ದಿನಗಳಿಂದಲೇ ಹೀಗಾಗಬಹುದು, ಆಗದಿರಲಿ ದೇವರೇ ಎಂದು ನಿರೀಕ್ಷಿಸುತ್ತಿತ್ತು. ಮೂಲಚಂದ ಕ್ರಾಸ್ ಮಾಡುತ್ತಲೇ ಸೌಥ್ ಎಕ್ಸ ನ ಭವ್ಯ ಕಟ್ಟಡಗಳು, ದೂರದ ತನ್ನ ಬ್ಯಾಂಕಿನ ಬಿಲ್ಡಿಂಗ್ ಕಾಣತೊಡಗಿದವು. ಹೋದ ಜೀವ ಬಂದಂತೆ ಇಲ್ಲಿಯೇ ನಿಲ್ಲಿಸಿಬಿಡಿ ಪೀಕೆ ಜೀ ಎಂದವಳಿಗೆ ತಾನು ಮಾತನಾಡಿದ್ದಕ್ಕಿಂತ ಹೆಚ್ಚು ಚೀರಿದಂತೆನಿಸಿ ಮುಜುಗರವಾಯಿತು. ಹೊರಗೆ ಕಾಲಿಡುತ್ತಲೇ ನಿರಾಳವೆನಿಸಿ, ಶ್ವಚ್ಛ ಹವೆಗೆ ಮುಖವೊಡ್ಡಿ ಉಸಿರೆಳುದೊಂಡು ತುಸು ಹೊತ್ತಿನ ಮುಂಚೆ ಕುಡಿದ ಸೂಪ್ ಹೊಟ್ಟೆಯಲ್ಲಿ ಮಳಮಳಿಸಿದಂತಾಗಿ ಕಣ್ಣೂ ಕತ್ತಲಿಟ್ಟು ಬಂದಂತಾಗಿ ದುಡು ದುಡು ಬ್ಯಾಂಕಿನ ಕಡೆಗೆ ಹೆಜ್ಜೆ ಹಾಕತೊಡಗಿದಳು ಎದೆಯೊಳಗೆ ಮಾತ್ರ ಎಂದೂ ಇಲ್ಲದ ನಿರುಮ್ಮಳತೆಯಿಂದಾ. ಹನಿಗೂಡಿದ ಕಣ್ಣುಗಳಲ್ಲಿ ಆಗ ತಾನೆ ಮೂಡಿದ ಪೇಯಿಂಟಿಂಗ್ ನಂಥಾ ಪರಿಸರ ದೃಶ್ಯ ಪ್ರತಿಫಲಿಸುತ್ತಿತ್ತು.

2 comments:

dinesh said...

ಬರವಣಿಗೆ ತುಂಬಾ ಇಷ್ಟವಾಯ್ತು.

ರೇಣುಕಾ ನಿಡಗುಂದಿ said...

thanx, am new to this blog world...