Monday, March 31, 2008

ರೂಪಾ ...

ರೂಪಾ ನನ್ನ ಬಾಲ್ಯದ ಗೆಳತಿ. ಮನೆ ಪಕ್ಕದವಳು. ನಾವಿಬ್ಬರೂ ಜತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಅವಳಮ್ಮ ಯಾವಾಗಲೂ ’ಮಡಿ’ಯಲ್ಲಿರುತ್ತಿದ್ದುದರಿಂದ ನಮಗೆ ಅವರ ಸಂಪರ್ಕ್ ದೂರದಿಂದಲೇ. ಯಾಕೆ ದಿನದ ಅಡುಗೆಯನ್ನೂ ಮಡಿಯಲ್ಲಿ ಮಾಡುತ್ತಿದ್ದರು? ಯಾಕೆ ಮಾಡಬೇಕು? ಮಡಿ ಹೆಸರಿನಲ್ಲಿ ಯಾವಾಗಲೂ ಗಳುವಿನ ಮೇಲೋ, ಗೂಟದ ಮೇಲೋ ತೂಗಾಡುವ ಕೊಳಕಾದ ಸೀರೆಯುಟ್ಟು, ಅದನ್ನು ಮಡಿಯೆಂದು ಯಾಕೆ ಕರೆಯುತ್ತಿದ್ದರೋ ? ಎಂದೆಲ್ಲ ಯೊಚಿಸುತ್ತಿದ್ದೆ ಆದರೆ ಕೇಳುವ ಧೈರ್ಯಬರುತ್ತಿರಲಿಲ್ಲ. ಬದಲಿಗೆ ಜಾತಿಯ ಬಗ್ಗೆ ನನಗೆ ಮುಜುಗರ, ಕಿರಿಕಿರಿಯೆನಿಸುತ್ತಿತ್ತು.
ಅವರಮ್ಮನನ್ನು ನೋಡಿದರೆ ಸದಾ ನಸುನಗುತ್ತಿದ್ದಾರೆನೋ ಅನಿಸುವಂತೆ , ಮಾಸದ ನಗೆಯೊಂದು ಆಕೆಯ ತುಟಿಯಂಚಿನಲ್ಲಿರುತ್ತಿತ್ತು. ನಮ್ಮ ಉಳಿದ ಹುಡುಗರ ಅವ್ವಂದಿರನ್ನು ತೂಗಿ ನೋಡಿದರೆ ರೂಪನ ಅಮ್ಮನೇ ಎಲ್ಲದರಲ್ಲಿ ಮಾಡರ್ನ, ಮತ್ತು ಹೊಸಕಾಲದ ಅಮ್ಮನಂತಿದ್ದಳು. ಗಿಡ್ಡದಾದ ಬ್ಲೌಸ್ ಹಾಕುತ್ತಿದ್ದಳು, ಗಿಡ್ಡದಾದ ಸೆರಗು ತೆಗೆಯುತ್ತಿದ್ದಳು. ಅದು ಆಗಿನ ಫ್ಯಾಶನ್. ಅಪ್ಪ ಯಾವುದೋ ಊರಲ್ಲಿ ಕೆಲಸಕ್ಕೆ ಅಂತಾ ಅಲ್ಲೇ ಇರುತ್ತಿದ್ದರು, ವಾರಕ್ಕೊಮ್ಮೆ ಅವರು ಬರುತ್ತಿದ್ದುದು. ಮನೆಯಲ್ಲಿ ರೂಪಾ ಮತ್ತು ಅವಳ ಅಣ್ಣ ಅನಿಲ್ ನ ಗಲಾಟೆ ಬಿಟ್ಟರೆ ಅವರ ಅಮ್ಮ-ಅಪ್ಪ ಮಾತೇ ಆಡುವುದಿಲ್ಲವೇನೋ ಎಂಬಂತೆ ತಮ್ಮ ತಮ್ಮ ಲೋಕದ ಮೌನದೊಳಗೆ ಇರುತ್ತಿದ್ದರು. ಪ್ರತಿಬಾರಿಯೂ ಅವಳ ತಂದೆ ಶಾಲೆಗೆ ಕರೆಯಲು ಹೋದ ನನಗೆ ’ನಿನ್ನ ಹೆಸರೇನೆಂದು’ಕೇಳುತ್ತಿದ್ದರು, ಮತ್ತು ನಾನು ಉತ್ತರಿಸುತ್ತಿದ್ದೆ. ಮತ್ತೊಮ್ಮೆ ಅವರು ಬರುವುದರಲ್ಲಿ ಮರೆತು ಬಿಟ್ಟಿರುತ್ತಿದ್ದರೋ ಏನೋ ಮತ್ತೆ ಕೇಳುತ್ತಿದ್ದರು. ಕೊನೆಗೆ ಅವರೇ ತಮಗೆ ಸೂಕ್ತವಾಗುವಂತೆ ನನ್ನ ಹೆಸರನ್ನು ’ಕಾಳಿಕಾ’ಎಂದು ಬದಲಾಯಿಸಿಕೊಂಡರು. ನನಗೆ ಕಾಳಿಕಾ ಎಂದರೇನೆಂದು ಗೊತ್ತಿರದ ಕಾರಣ ಸುಮ್ಮನಾದೆ. ಯಾವುದೋ ದೇವಿ ಹೆಸರೆಂದಷ್ಟೇ ಗೊತ್ತು. ಗುಣವಿಶೇಷದ ಬಗ್ಗೆ ಗೊತ್ತಿರಲಿಲ್ಲ. ಈಗ ಅನಿಸುತ್ತದೆ ಅವರು ವ್ಯಂಗತನದಲ್ಲಿ ಹಾಗೇ ಹೆಸರು ಇಟ್ಟರೋ, ನಾನಂತೂ ಕಾಳಿಕಾ ಎಂದು ಗುರುತಿಸುವಷ್ಟರ ವಿರುದ್ಧವಾಗಿ ರೂಪ ಬಣ್ಣದವಳಿದ್ದೆ. ಇರಲಿ ಆ ಮಾತು. ಏನೋ ತೋಚಿರಬಹುದು. ಅಥವಾ ನನ್ನ ಜಾತಿ ಸೂಚಕವಾಗಿ ಅವರು ಅದನ್ನು ಬಳಸಿದ್ದರೋ ಏನೋ ಗೊತ್ತಿಲ್ಲ. ಅವರನ್ನು ಕೇಳಬೇಕೆಂದರೆ ಎಲ್ಲಿದ್ದಾರೋ, ಇದ್ದಾರೋ ಇಲ್ಲವೋ ಈ ಲೋಕದಲ್ಲಿ ಅದೂ ಸಹ ಗೊತ್ತಿಲ್ಲ. ಈಗ ಈ ಪ್ರಶ್ನೆ ಯಾಕೆ ನೆನಪಾಯಿತೋ ಗೊತ್ತಿಲ್ಲ. ಅದಿರಲಿ, ರೂಪಾಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ, ತುಸು ತೊದಲುತ್ತಿದ್ದಳು. ಹಾಗೇ ನಮಗೂ ಅಭ್ಯಾಸವಾಗಿ ಹೋಗಿತ್ತು.
ಅವರಮ್ಮ ’ಕಡಿಗೆ’ಯಾದಾಗ ( ಮುಟ್ಟಾದಾಗ) ಮೂರು ದಿನ ಹೊರಗೆ ಹುಸಿ( ಪಡಸಾಲೇ)ಯಲ್ಲಿ ಕೂರುತ್ತಿದ್ದರು. ಆಗ ಯಾರೋ ಅಜ್ಜಿ ಬರುತ್ತಿತ್ತು ಮಕ್ಕಳೀಗೆ ಬೇಯಿಸಿಹಾಕಲು. ಹಾಲು ಕಾಯಿಸುವುದು, ಟೀ ಮಾಡುವುದು ಇತ್ಯಾದಿ ಈ ಮಕ್ಕಳೇ ಮಾಡಿಕೊಳ್ಳುತ್ತಿದ್ದವು ಬತ್ತಿಸ್ಟೋವ್ ಮೇಲೆ. ಒಮ್ಮ್ಮೆ ನೆರೆಹೊರೆಯಲ್ಲಿ ಹಾಹಾಕಾರವೆದ್ದಿತ್ತು, ಬೊಬ್ಬೆಹಾಕುವುದು ಇತ್ಯಾದಿ ಕೇಳಿಸಿತು, ನಾವೆಲ್ಲ ಮನೆಯಿಂದ ಹೊರಗೋಡಿ ಬಂದಾಗ ತಿಳಿದಿದ್ದು ’ರೂಪಾಳಿಗೆ ಬೆಂಕಿ ಹತ್ತಿಕೊಂಡಿತ್ತೆಂದು. ಓಣಿಯ ಒಕ್ಕಲಿಗ ಹುಡುಗರು ಧಾವಿಸಿ ಆಕೆಯನ್ನು ಉಳಿಸಿದ್ದರು. ತೊಟ್ಟ ಪ್ರಾಕಿಗೆ ಬೆಂಕಿತಾಗಿದೊಡನೆ ಕಿರುಚುತ್ತ ಹಿತ್ತಲಿಗೆ ಓಡಿ, ಬೆಂಕಿ ಇನ್ನಷ್ಟು ಹೊತ್ತಿಕೊಳ್ಳುವಂತಾಗಿತ್ತು. ರೂಪಾಳ ತೊಡೆ, ಕಾಲು , ಸ್ವಲ್ಪ ಹೊಟ್ಟೆ ಸುಟ್ಟಿದ್ದವು, ಮತ್ತೆಲ್ಲೂ ಸುಟ್ಟಿರಲಿಲ್ಲ. ದೈವದ ದಯೆಯಿಂದ ಜೀವಕ್ಕೇನೂ ಅಪಾಯವಿರಲಿಲ್ಲ. ಬೆಂಕಿಯನ್ನು ಬೇಗನೇ ಆರಿಸಿದ್ದರು. ಈ ಘಟನೆಯಿಂದಾಗಿ ಅವಳಿಗೆ ದೀರ್ಘಕಾಲ ರಜೆಯಾಯಿತು. ನಾನು ದಿನಾ ಅವಳಿಗೆ ಭೆಟ್ಟಿಮಾಡಿ ಶಾಲೆಯ ಪಾಠಗಳಬಗ್ಗೆ, ಹೋಂ-ವರ್ಕ , ಅಭ್ಯಾಸ ಇತ್ಯಾದಿಗಳ ಬಗ್ಗೆ ವರದಿಮಾಡುತ್ತಿದ್ದೆ. ನಾನು ಯಾಕೆ ಈ ಘಟನೆಯ ಬಗ್ಗೆ ಹೇಳಿತ್ತಿದ್ದೆನೆಂದರೆ, ಈ ಘಟನೆಯ ನಂತರ ಆಶ್ಚರ್ಯಕರವಾದ ಬದಲಾವಣೆಯಾಗಿದ್ದೆಂದರೆ, ರೂಪಳ ತೊದಲುವಿಕೆ ನಿಂತುಹೋಗಿತ್ತು. ಪೂರ್ತಿ ಅಲ್ಲದಿದ್ದರೂ ಗಂಭೀರ ಪ್ರಮಾಣದಲ್ಲೇ ನಿಂತುಹೋಗಿದ್ದು. ಬೆಂಕಿಹಚ್ಚಿಕೊಂಡಿದ್ದರೆ ಘಾಬರೀ, ಆಘಾತಗಳಲ್ಲಿ ಅವಳ ಇನ್ನೊಂದು ಸಮಸ್ಯೆ ತನ್ನಿಂದತಾನೆ ಬಗೆಹರಿದಿದ್ದುದು ನಮಗೆಲ್ಲ ಕುತೂಹಲ, ಸಂಭ್ರಮದ ಸಂಗತಿಯಾಗಿತ್ತು. ಅಂತೂ-ಇಂತೂ ರೂಪಾ ಬದಲಾದಳು, ಅವಳ ಕೆಲವು ಸುಟ್ಟಗಾಯಗಳನ್ನು ಬಿಟ್ಟರೆ ರೂಪಾ ರೂಪಾನೇ.
ಯಾಕೋ ಇವತ್ತು ರೂಪಾ ನೆನಪಾಗಿ ಇದೆಲ್ಲ ನೆನಪಿನ ಅಂಗಳದಲ್ಲಿ ಬರೆದಿಟ್ಟೆ....

ಬರೆಯಲು ಆಗದ ಮಂಕುತನ

ಫೆಬ್ರುವರಿಯಿಂದ ನಾನು ಬರೆಯುವ ಸಾಹಸವನ್ನೇ ಮಾಡಿಲ್ಲ. ಯಾಕೋ ಒಂದು ತರಹದ ನಿರುತ್ಸಾಹ, ಸದಾ ಮಂಕುತನ ಕವಿದಿರುತ್ತದೆ. ಸಹೃದಯಿ ಸ್ನೇಹಿತರು ಬರೆಯಲು ಪ್ರೋತ್ಸಾಹಿಸುತ್ತಾರೆ, ಆದರೂ ಮನಸ್ಸು ಮನಸ್ಸಿನೊಳಗಿಲ್ಲದೇ ಈ ಶಹರಿನಿಂದ, ಈ ಉಸಿರುಕಟ್ಟುವ ಬೇಜಾರಿನಿಂದ ಬಿಡಿಸಿಕೊಳ್ಳುವ ಬಗೆಯನ್ನೇ ಮೆಲಕು ಹಾಕುತ್ತಿರುತ್ತದೆ. ಜೀವನದಲ್ಲಿ ಮಹತ್ತರವಾದ್ದನ್ನು ಕಳೆದುಕೊಂಡ ಅನುಭವ, ನೋವು ಎರಡನ್ನೂ ಏಕಕಾಲದಲ್ಲಿ ಅನುಭವಿಸುತ್ತಾ, ತಾನು ಯಾವಾಗ ಸರಿಹೋಗುತ್ತೇನೆ ಎಂದು ಮಾನಸಿಕ ರೋಗಿಯಂತೆ ನನ್ನನ್ನೇ ನಾನು ಕೇಳಿಕೊಳ್ಳುತ್ತಾ, ಮನೆ- ಆಫೀಸು, ಆಫೀಸು-ಮನೆ, ಬಸ್ಸಿನಲ್ಲಿ ಜಾಗ ಹಿಡಿದು ಉಸ್ಸೆಂದು ಕೂರುವಷ್ಟು ಸುಸ್ತು, ನಿರುತ್ಸಾಹ. ಇಡೀ ದಿನ ಯಾವುದೋ ಒಂದು ರಸ ನಿಮಿಷಕ್ಕಾಗಿ ಕಾದು ಕುಳಿತಂತೆ ಕಳೆದು, ಸಂಜೆ ಮನೆ ತಲುಪಿದೊಡನೆ ಕೈ ಕಾಲು ಮುಖತೊಳೆದು, ದೇವರಿಗೆ ನಮಿಸಿ, ಟೀ ನೋ, ಹಾರ್ಲಿಕ್ಸೋ ಕುಡಿದು, ಸಂಜೆ ಅಡುಗೆಯ ಬಗ್ಗೆ ಯೋಚಿಸಿ, ಅದು ಮುಗಿದ ನಂತರ ಟೆರೇಸಿಗೆ ಹಾರುತ್ತೇನೆ. ಮಾರ್ಚ್ ತಿಂಗಳ ತಂಪೆರೆಯುವ ಗಾಳೀಗೆ ಮೈಯೊಡ್ಡಿ ಕುಳಿತು, ಮುಖ ಮೇಲೆ ಮಾಡಿ ಕುಳಿತು ನಕ್ಷತ್ರಗಳನ್ನೇ ನೋಡುತ್ತಾ , ನನ್ನ ಆಲೋಚನೆಗಳಲ್ಲೇ ಮುಳುಗಿ ಬಿಡುತ್ತೇನೆ. ಯಾಕೀ ಒಂಟಿತನ, ಬೇಸರ ? ಈ ನೀಲಿಯಾಕಾಶ, ನಕ್ಷತ್ರಗಳ ಮಧ್ಯೆ, ಇಲ್ಲೇ ನನ್ನ ಪಕ್ಕದಲ್ಳೇ ಅವನಿದ್ದಾನೋ ಎಂದು ಭ್ರಮಿಸುವ ನನ್ನ ಸೆಳೆತ ಮತ್ತೆ ಅವನ ಕರೆಗಾಗಿ ಇನ್ನೂ ಎರಡು -ಮೂರು ತಾಸು ಕಾಯಬೇಕಲ್ಲವೆಂಬ ಕಾಯುವಿಕೆಯ ಲವಲವಿಕೆ. ಈಗ ಅನಿಸುತ್ತದೆ ನನ್ನೆಲ್ಲಾ ಬೇಸರದ ಹಾಗೂ ಈ ಸಂಜೆಯ ತಂಪಿನ ಲವಲವಿಕೆಯನ್ನು ತುಂಬಿಕೊಟ್ಟವನಿಗೆ ನೆನಪಿನ ನಮನಗಳು. ಹೀಗೆ ಬೇಸರ ಭಾರವೆನಿಸುವಲ್ಲಿ ನೀ ಮತ್ತೆ ಮತ್ತೆ ನನ್ನನ್ನು ಹಗುರಾಗಿಸಿ, ಹಸಿಯಾಗಿಸುತ್ತಿರು ದೇವ’ಎಂದು.
ನಾಳೆ ಮತ್ತೆ ಬರೆಯುವೆ, ಈ ಬೇಸರ ಹಾಗೂ ಸೋಮಾರಿತನ ಕಾಡದಿರಲಿ ದೇವರೇ...

Saturday, February 9, 2008

ಏನೋ ಒಂಥರಾ...

ಏನು ಹೇಳಲಿ? ಜೀವನವೇ ಒಂಥರಾ ಆಗಿಬಿಟ್ಟಿದೆ. ಮೊನ್ನೆ ಅಪೋಲೋ ದಿಂದ ೪೭೯ ( ಬದರ್ ಪುರದಿಂದ ಪಂಜಾಬಿ ಬಾಗ್ ಹೋಗುವ ಬಸ್ಸು) ಬಸ್ಸು ಏರಿದೆ. ತುಂಬಾ ರಷ್ಯು. ಕೂರಲು ಜಾಗವೇ ಇರಲಿಲ್ಲ, ನಿಂತುಕೊಂಡೆ ಇದ್ದೆ. ಯಾವ ಗಂಡಸೂ ಎದ್ದು ಸೀಟು ಕೊಡಲಿಲ್ಲ, ನಾನು ಆಗ್ರಹ ಪಡಿಸಲೂ ಇಲ್ಲ. ಆದರೆ ಸುತ್ತಲೂ ಸುಮ್ಮನೇ ಕಣ್ನಾಡಿಸಿದೆ. ಯಾರಿಗೂ ಈ ಲೋಕದ ಪರಿವೆಯಿಲ್ಲದಂತೆ, ಯಾರಿಗೂ ಯಾರ ಹಂಗಿಲ್ಲದವರಂತೆ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರಂತೆ ತಮ್ಮ ತಮ್ಮ ಲೋಕದಲ್ಲೇ ಮುಳುಗಿದ್ದರು. ಒಬ್ಬ ಮೋಬೈಲ್ ನಲ್ಲಿ ಜಗತ್ತಿನಲ್ಲಿ ತಾನೊಬ್ಬನೇ ಇದ್ಡೇನೆ, ಎನ್ನುವಂತೆ ಜೋರು, ಜೋರಾಗಿ ಮಾತನಾಡುತ್ತಿದ್ದ, ಅದೇ ರೀತಿ ಒಬ್ಬ ಹುಡುಗಿತ ನ್ನ ಹುಡುಗನೊಂದಿಗೆ ವಾದಕ್ಕಿಳಿದಿದ್ದಳು, ಇನ್ನೊಬ್ಬ ಹೆಂಗಸು ಟೈಮಿಗೆ ಸರಿಯಾಗಿ ಆಫೀಸ್ ತಲುಪಲಾಗದೇ ತನ್ನ ಸಹೋದ್ಯೋಗಿಯೊಬ್ಬರಿಗೆ ತಮ್ಮ ಬಾಸ್ ಗೆ ತಿಳಿಸುವಂತೆ ಅಲವತ್ತುಕೊಳ್ಳುತ್ತಿದ್ದರು. ಇನ್ಯಾರೋ ರಾಜಕೀಯ ಸುದ್ದಿ, ಮಾಯಾವತಿಯ ಸಾಹಸವನ್ನೂ , ಬ್ರಷ್ಟಾಚರದಲ್ಲಿ ಅವಳೇನೂ ಕಮ್ಮಿಯಿಲ್ಲವೆಂದೂ ಒಬ್ಬನೆಂದರೇ ಅವಳಷ್ಟು ಶಿಸ್ತಿನ, ಕಠೋರ ಪ್ರವೃತ್ತಿಯವರೇ ಉತ್ತರ ಪ್ರದೇಶ ಅದರಲ್ಲೂ ಗಾಜಿಯಾಬಾದ್ ದಂತಹ ಗೂಂಡಾಗಿರಿ ಪ್ರದೇಶದಲ್ಲಿ ಮಾಯಾವತೀ ಆಡಳಿತ ನಡೆಸಿದಂತೆ ಮತ್ಯಾರೂ ಅಲ್ಲಿ ಸೈ ಅಲ್ಲ ಬೀಡು ’ಎಂದು ಡಿಬೇಟ್ ನಡೆಸಿದ್ದರು. ಸೀಟು ಸಿಕ್ಕವರು ತಮಗೆ ಸಿಂಹಾಸನವೇ ಸಿಕ್ಕಿದೆ ಎನ್ನುವಂತೆ ವಿರಾಜಮಾನರಾಗಿ ಕುಳಿತಿದ್ದರು. ಸೀಟ್ ಸಿಕ್ಕ ಕೆಲ ಗಂಡಸರು ನಿದ್ದೆ ಮಾಡುತ್ತಿರುವವರಂತೆ ನಾಟಿಸುತ್ತಾ ಕಿಟಕಿಗೆ ತಲೆ ಆನಿಸಿಯೋ, ಇಲ್ಲಾ ತಲೆ ಕೆಳಗೆ ಹಾಕಿಕೊಂಡೋ ಕುಳಿತಿದ್ದರು. ಎಲ್ಲಿ ತಲೆ ಎತ್ತಿದರೇ ನಿಂತುಕೊಂಡ ಹೆಂಗಸರು ಜಾಗ ಖಾಲಿಮಾಡಿಸುತ್ತಾರೋ ಎಂಬ ಹೆದರಿಕೆಯಿಂದ ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡು ನಿದ್ದ್ರೆಯಲ್ಲಿದ್ದರು. ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರನ್ನು ಅವರ ಲೋಕದಲ್ಲಿ ಬಿಟ್ಟರೇ ಉಳಿದವರೆಲ್ಲ ತಮ್ಮ ತಮ್ಮ ಲೋಕದಲ್ಲಿ ವಿಶಿಷ್ಟದವರಂತೆ ತುಂಬಾ ಬಿಸಿಯಾಗಿದ್ದರು. ಎಲ್ಲವನ್ನೂ ನೋಡುತ್ತಾ...ನೋಡುತ್ತಾ...ಯಾಕೋ ಒಂಥರಾ ಅನಿಸತೊಡಗಿತು....ಏನೋ ಒಂಟಿತನಾ, ಶೂನ್ಯತೆ...ಲೋಕವೇ ವಿಚಿತ್ರ ಲೋಕದಂತೆ ಕಾಣಿಸತೊಡಗಿತು. ಈ ಮೊಬೈಲ್ ಲೋಕದಲ್ಲಿ ಮೊಬೈಲ್ ಮೊಬೈಲ್ ಸಮ್ಪರ್ಕವಿದೆ, ಗುರುತು ಪರಿಚಯವಿದೆ ಹೊರತು ಮನುಷ್ಯ ಮನುಷ್ಯರ ನಡುವೆ ಆಸುಪಾಸಿನಲ್ಲೇ ಇಲ್ಲ. ಇದ್ದವರು ನಿರ್ಜೀವಿಗಳಂತೆ ಕಾಣತೊಡಗಿದರು. ಎನೋ ಒಂಥರಾ ಕಸಿವಿಸಿಯಾಗತೊಡಗಿತು........

Friday, February 8, 2008

ಚಾಟ್ ....ಮತ್ತು ’ನಾನಿದ್ದೇನೆ’..... ಮೈ ಹೂಂ ನಾ,,,,,,,

ರವೀ ನಿನ್ನೆ ಚಾಟ್ ನಲ್ಲಿ ಸಿಕ್ಕಿದ್ದ.
ಹೀಗೆ ನಾಲ್ಕೈದು ವರ್ಷಗಳ ಹಿಂದೆ ಆತ ಚಾಟ್ ನಲ್ಲಿ ಸಿಕ್ಕಿ ಮಾತಾಡ್ತಾ ಮಾತಾಡ್ತಾ ಒಳ್ಳೆ ಸ್ನೇಹಿತನಾಗಿದ್ದ. ಆಗೊಮ್ಮೆ ಈಗೊಮ್ಮೆ ಮೆಸೆಂಜರ್ ನಲ್ಲಿ ಬಂದಾಗ, ಅಕಸ್ಮಾತ್ತಾಗಿ ತಾನೂ online ಇದ್ದು ಮಾತಿಗೆ ಸಿಕ್ಕಿಬಿಟ್ಟರೆ ಸಾಕು, ನಾವು ಮಾತನಾಡದ ವಿಷಯವೇ ಇಲ್ಲ. ಮನೆ, ಮಕ್ಕಳು, ನಮ್ಮ ನಮ್ಮ ಬದುಕು, ಜಂಜಾಟಗಳು ದೆಹಲಿ ಜೀವನ, ದೆಹಲಿಯ ವಿಪರೀತ ಹವಾಮಾನ, ಅವನ ದೆಹಲಿವಾಸ, ಅವನ ಕೆಲಸ, ಅವನ ಗೆಳತಿಯರು, ರಾಜಕೀಯ, ಸ್ನೇಹಿತರು, ಮತ್ತೆ ನಮಗಷ್ಟೇ ಗೊತ್ತಿರುವ ಗುಟ್ಟುಗಳು, ಪ್ರೇಮ ಕಾಮ ಇತ್ಯಾದಿ ಒಂದೇ ಎರಡೇ ಸಾವಿರ ಸುದ್ದಿಗಳು, ಮಾತಾನಾಡದ ವಿಷಯವೇ ಇಲ್ಲ. ಯಾವತ್ತೂ ಬೋರ್ ಹೊಡೆದಿಲ್ಲ ನಾನು. ಮೊದಮೊದಲು ಅವನೋಂದಿಗೆ ಮಾತನಾಡಲು ವಿಷಯವೇ ಸಿಗುತ್ತಿರಲಿಲ್ಲ, ಈಗ ಯಾಕೋ ರವಿಯೆಂದರೆ ಅಚ್ಚುಮೆಚ್ಚು ನನಗೆ. ಹೆಚ್ಚು ಸಂಪರ್ಕವಿರದಿದ್ದರೂ ಯಾವಾಗಾದರೂ ಒಮ್ಮೆ ಮೆಸೆಂಜರ್ ನಲ್ಲಿ ಕಂಡರೆ ಮಾತನಾಡುವಷ್ಟು ಸ್ನೇಹವಿದೆ. ಕಿವಿಗೊಟ್ಟು ಕೇಳುವ ಅಂತಕರಣವಿದೆ. ಯಾವತ್ತಲೂ ನನಗೆ ಒಂದಿಲ್ಲಾ ಒಂದು ವಿಷಯದ ಬಗ್ಗೆ ಬಹಳ ಮುತುವರ್ಜಿಯಿಂದ ಸಲಹೆ ಕೊಡುತ್ತಾನೆ. ಕಿವಿಗೊಟ್ಟು ಕೇಳುತ್ತಾನೆ, ಎಂದೂ ಬೇಸರಿಸಿಲ್ಲ. ತಾನೆಲ್ಲೋ ಒಂದಿಲ್ಲಾ ಒಂದು ಗೊಂದಲದಲ್ಲಿ, ಚಿಂತೆಯಲ್ಲಿ ಮುಳುಗಿದಾಗ ಆತ ಆಪದ್ಬಂಧುವಂತೆ ಚಾಟ್ ನಲ್ಲಿ ಬಂದು ತನಗೆ ಸಮಾಧಾನ ಪಡಿಸಿರುತ್ತಾನೆ....
ಈಗ ಆಗಿದ್ದೂ ಅದೇ. ಮನೆಯಲ್ಲಿ ಗಂಡನಿಗೆ ಹದಿನೈದು ದಿನಗಟ್ಟಲೇ ಭೇದಿಯಾಗಿ ಹುಷಾರಿಲ್ಲದೇ,ಆತ ತನ್ನ ಯಾವುದೊಂದು ಮಾತು ಕೇಳದೇ, ಎಲ್ಲೂ ತೋರಿಸಿಕೊಳ್ಳದೇ ವಿಪರೀತಕ್ಕೀಡಾದಾಗ ತಾನೇ ಕಣ್ಣೀರಿಡುತ್ತಾ ಅಪೋಲೊದಲ್ಲಿ ದೊಡ್ಡ ಸ್ಪೆಶಿಯಾಲಿಸ್ಟ್ ಕಡೆ ತೋರಿಸಿ ಈಗತಾನೆ ತುಸು ಸುಧಾರಿಸಿಕೊಂಡಿದ್ದಾನೆ. ಆಗೆಲ್ಲ ಕಾಡಿದ ಅಸುರಕ್ಷಾ ಭಾವ, ಒಂಟಿತನ, ತಬ್ಬಲಿಯಂತಾಗಿ ಬಿಡುವ ಭಯ, ತನಗೆ ಯಾರೂ ಇಲ್ಲವೆನ್ನುವ ನೋವು ಯಾರಲ್ಲಿ ಹೇಳಿಕೊಳ್ಳುವುದು. ? ಯಾರೂ ಇಲ್ಲವೆನ್ನುವ ನೋವಿನಲ್ಲೇ ನನ್ನ ಆಪದ್ಬಂಧು ರವೀ ಚಾಟ್ ನಲ್ಲಿ ಕಾಣಿಸಿಕೊಂಡಿದ್ದು. ಅವನಲ್ಲಿ ಎಲ್ಲ ಹೇಳಿಕೊಂಡು, ಅಳುತ್ತಳುತ್ತಲೇ ಟೈಪಿಸುತ್ತಿದ್ದೆ. ಎಲ್ಲ ಕೇಳಿದ ರವಿ ಅಂದಿದ್ದು, ಯಾಕೆ ನಾನಿಲ್ಲವಾ? ನಿನ್ನ ಯಾವದೇ ಸಮಯದಲ್ಲೂ ಒಬ್ಬಳೇ ಎಂದು ತಿಳಿಯಬೇಡಾ, ನಾನಿದ್ದೇನೆ, ಒಂದು ಮಿಸ್ಸ್ಡ್ ಕಾಲ್ ಕೊಡು, ನಾನು ಫೋನಾಯಿಸುತ್ತೇನೆ, ಮೈ ಹೂಂ ನಾ, ಯಾವುದೇ ತೊಂದರೆ ಇರಲಿ, ನನ್ನಲ್ಲಿ ಹೇಳು, ಸಂಕೋಚಿಸಿಕೊಳ್ಳದೇ ಯಾವುದೇ ಸಹಾಯವನ್ನಾದರೂ ಕೇಳು ಅನ್ನುವಾಗ ಎದೆ ತುಂಬಿ ಬಂದು ಕಣ್ಣ ಮೂಲಕ ಹರಿದು ಹಗುರವಾಗತೊಡಗಿತು. ಇಷ್ಟು ದಿನದ ದುಗುಡವನ್ನು ಒಂದೇ ಮಾತಿನಿಂದ ಅಳಿಸಿ ಹಾಕಿದ, ನನ್ನೆಲ್ಲಾ ಆತ್ಮವಿಶ್ವಾಸವನ್ನು ಒಂದುಗೂಡಿಸಿ ಧೈರ್ಯ ನೀಡಿದ ರವಿಗೆ ನನ್ನ ಹೃತ್ಪೂರ್ವಕ ನಮನಗಳು. ಮನ ಒಂದೇ ಸಮನೇ ತುಂಬಿ ಬರುತ್ತಿತ್ತು. ಸಧ್ಯ ದೇವರೇ ಅವನನ್ನು ನನ್ನ ಸಮಾಧಾನ ಪಡಿಸಲೊಸುಗ ಕಳಿಸಿರಬಹುದೆಂದು ಕಾಣದ ದೈವಕ್ಕೆ ಮನದಲ್ಲೇ ವಂದಿಸಿದೆ.
ರವಿ ಕೇಳುತ್ತಿದ್ದ, ಮತ್ತೆ ದೆಹಲಿಯೆನೆನ್ನುತ್ತದೆ. ಇಲ್ಲಿ ತುಂಬಾ ಛಳೀ ಇದೆ, ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿದೆ, ಮಂಜಿನ ತೆಳು ಪರದೆ ಹೊದ್ದ ದೆಹಲಿಯಲ್ಲಿ ನನಗಂತೂ ಎಲ್ಲೂ ಹೋಗೊಕ್ಕೆ ಆಗಲ್ಲ ಆದ್ರೂ ಆಫೀಸಿಗೆ ಬರಲೇ ಬೇಕು. ಥೂ ದರಿದ್ರ ಛಳಿ ಅಂದದ್ದಕ್ಕೆ ಆತನ ದೃಷ್ಟಿಕೋನವೇ ವಿಭಿನ್ನವಾಗಿತ್ತು. ಯಾಕೆ ಹಾಗೇಕೆ ತಿಳಿದುಕೋಬೇಕು ? ನಾವಿರುವ ದೇಶವೆಷ್ಟು ಸುಂದರ. ಇಲ್ಲಿ ಎಲ್ಲಾ ಋತುಮಾನಗಳನ್ನು ನಾವು ಕಾಣುತ್ತೇವೆ. ಬೇರೆ ದೇಶಗಳಲ್ಲಿ ಇಲ್ಲದ ವಿಭಿನ್ನ, ವಿವಿಧ ಹವಾಗುಣ ನಮ್ಮದು. ಬೇಸಿಗೆ, ಮಳೆ, ಛಳಿ, ಬೇಸಿಗೆ ಮತ್ತು ಮಳೆ ನಡುವಿನ ಆಷಾಡದ ಭೊರ್ರೋ ಎನ್ನುವ ಗಾಳಿಯಿದೆ, ಮಳೆ ಮತ್ತು ಛಳಿ ನಡುವಿನ ಶರದೃತುವಿದೆ, ಛಳಿ ಮತ್ತು ಬೇಸಿಗೆ ನಡುವಿನ ವಸಂತ ಋತುವಿದೆ. ಥರಗುಡುವ ಛಳಿಯಲ್ಲೂ ಧನುರ್ಮಾಸ, ಮಾಘಸ್ನಾನ ಪುಣ್ಯದಿನಗಳ ಸಂಕ್ರಮಣವಿದೆ ಎಷ್ಟು ಸೊಗಸಾದ ದೇಶ ನಮ್ಮದು. ಇದಕ್ಕಾಗಿ ಖುಶಿ ಪಡಬೇಕು. ಆಷ್ಟೇ ಖುಶೀ ನಾವು ಪಡೆದು ಕೊಂಡ ಮಾನವ ಜನ್ಮಕ್ಕಾಗಿ. ರವೀ ಚಾಟ್ ಬಾಕ್ಸ್ ನಲ್ಲಿ ಟೈಪಿಸುತ್ತಿದ್ದ, ನನಗೆ ಅವ ನನ್ನ ಹತ್ತಿರವೇ ಕುಳಿತು ಮಾತಾನಾಡಿದಂತೆ, ಅವನ ಒಂದೊಂದು ಮಾತೂ ನನ್ನ ಒಂದೊಂದು ನೋವನ್ನು, ಅವಿವೇಕಿತನವನ್ನು ತೊಡೆದು ಹಾಕುವಂತೆ ಭಾಸವಾಗುತ್ತಿತ್ತು. ಈ ಕ್ಷಣ ಉರುಳದಿರಲಿ ಎಂದು ಮನ ಹಾರೈಸುವಂತೆ. ದೇವರು ನನಗೆ ಇಂಥ ಒಬ್ಬ ಗೆಳೆಯನನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಮೌನದಲ್ಲೇ ಅರ್ಪಿಸುತ್ತ....ಮಾತುಗಳನ್ನು ಕೇಳುತ್ತಾ ಕುಳಿತಿದ್ದೆ. ಹೊರಗೆ ಬಾಲ್ಕನಿಯಲ್ಲಿ ಮಳೆಯ ತುಂತುರು ತುಂತುರು ಹನಿ ನಿಂತು ರವಿ ಮೂಡಿ ಹಿತವಾದ ಎಳೆಬಿಸಿಲು ಅರಳುತ್ತಿತ್ತು.....ನೋಡುತ್ತಲೇ ಇದ್ದೆ.
ರವೀ ಇಂದು ಚಾಟ್ ನಲ್ಲಿ ಬರುತ್ತಾನಾ ಅಂತ ಕಾಯುತ್ತಾ..........ಮುಗಿಸುತ್ತಿದ್ದೇನೆ.

Thursday, January 24, 2008

ಮನುಷ್ಯನಿಗೆ ನಿರೀಕ್ಷೆ ( expectations) ಗಳೆನ್ನುವುದು ಇರದಿದ್ದರೆ ಬಹುಶಃ ಅವನಷ್ಟು ಸುಖೀ ಇನ್ಯಾವ ಜೀವಿಯೂ ಇರುತ್ತಿರಲಿಲ್ಲವೇನೋ. ಈ ನಿರೀಕ್ಷೆ ಅನ್ನುವುದು ನಾವು ಇನ್ನೊಬ್ಬರಿಂದ , ಆ ಇನ್ನೊಬ್ಬರು ನಮ್ಮಿಂದ ಏನನ್ನೋ ಬಯಸುವದೇ ಆಗಿದೆ. ಅದೇ ಕೆಲವೊಮ್ಮೆ ನೋವು-ನಿರಾಸೆಗೆ ಕಾರಣವೂ ಹೌದು. ಗಂಡ-ಹೆಂದತಿ, ತಾಯಿ ತಂದೆ, ಅಕ್ಕ-ತಂಗಿ, ಅಣ್ಣ - ತಮ್ಮ , ಅತ್ತಿಗೆ, ಸೊಸೆ - ಮಗಳು ಇತ್ಯಾದಿ ಇತ್ಯಾದಿ ಎಲ್ಲಾ ಮಾನವ ಸಂಬಂಧಗಳು , ಎಲ್ಲ ಸಂಬಂಧಗಳನ್ನು ಹೊಸೆದಿರುವ -ಬೆಸೆದಿರುವ ಪ್ರೀತಿ,ವಾತ್ಸಲ್ಯ ,ಮೋಹ- ಮಮತೆ- ಅಂತಕರಣ ಎಂಬ ಕೊಂಡಿ ಗಟ್ಟಿಮುಟ್ಟಾಗಿರುವುದೇ ಈ ನಿರೀಕ್ಷೆಯ ಮೇಲೆನೋ ಅನಿಸುತ್ತದೆ. ನಾವು ಎನನ್ನೂ ಅಪೇಕ್ಷಿಸದೇ ಇರಬಲ್ಲೆವು, ನಿಜವಾದ ಪ್ರೀತಿ- ಸ್ನೇಹದಲ್ಲಿ ನಾವು ಹೆಚ್ಚು ಎನನ್ನೂ ಅಪೇಕ್ಷಿಸಬಾರದು, ಕರ್ಮ ಕರೋ, ಫಲ್ ಕೀ ಅಪೇಕ್ಷಾ ಮತ್ ಕರೋ" ಎನ್ನುವ ಹಿತವಚನವೆಲ್ಲ ಗೊತ್ತಿದ್ದರೂ, ಹಾಗೇ ಎನನ್ನೂ ಅಪೇಕ್ಷಿಸದೇ ಇರುವುದು ಅಸಾಧ್ಯ’. ಕನಿಷ್ಠಪಕ್ಷ ಪ್ರೇಮ ಮತ್ತು ಸ್ನೇಹ ಸಂಬಂಧದಲ್ಲಿ ಅಪೇಕ್ಷಿಸಬಾರದೂ ಅನ್ನುವುದು ಎಲ್ಲವನ್ನೂ ಸುಳ್ಳಾಗಿಸಿಬಿಡುತ್ತದೆ. ಮನಸ್ಸ ಹಠ ಹೂಡುತ್ತದೆ. ಬಯಸುತ್ತದೆ, ಕಾಡುತ್ತದೆ. ನಾನು ಅವನ ಕಷ್ಟಕಾಲದಲ್ಲಿ ಎನೆಲ್ಲ ಮಾಡಿದೆ, ನನ್ನ ಕೆಟ್ಟ ಸಮಯಕ್ಕೆ ಅಂವ ಹೇಗಿದ್ದಿ ಎಂದು ವಿಚಾರಿಸಲೂ ಇಲ್ಲ," ನಾನು ಎಷ್ಟು ಅವಳ ಬಗ್ಗೆ ಕಾಳಜಿ ತೋರುತ್ತೇನೆ , ಮಕ್ಕಳನ್ನು ನೋಡಿಕೊಳ್ತಾ ಇದ್ದೆ , ಅವಳಾ ಹೇಗಿದ್ದಿಯಮ್ಮ ಅಂತಾ ಒಂದು ಫೋನ್ ಕೂಡಾ ಮಾಡಲ್ಲ ಎನ್ನುವ ಅಮ್ಮ. ಹೀಗೆ ನಮ್ಮವರೆನ್ನುವವರೊಂದಿಗೆ, ಕರುಳು ಸಂಬಂಧ, ಸ್ನೇಹ ಸಂಬಂಧದಲ್ಲಿ ಹೀಗೆ ಇಷ್ಟನ್ನಾದರೂ ಅಪೇಕ್ಷಿಸಬಾರದಾ? ಚೂರೇ ಚೂರನ್ನಾದರೂ ಅಪೇಕ್ಷಿಸುವುದು ತಪ್ಪಾ ? ಎನು ದೊಡ್ಡ ಘನವಾದುದನ್ನು ಬೇಡಿದ್ದೇವೆ ? ಒಂದು ಫೋನ್ ಕಾಲ್ ಮಾಡಿ ಹೇಗಿದ್ದಿಯಾ? ಹೇಗಿದ್ದೀ ಅಂದರೆ ಸಾಕು ಖುಶಿಯಾಗುತ್ತದೆ ಜೀವಕ್ಕೆ.



ಅವನಿಗೂ ಹೀಗೆ ತಿಳಿಸಿ ಹೇಳಿ ಎನೂ ಪ್ರಯೋಜನವಿಲ್ಲ. ಒಂದು ಕಾಲ್ ಮಾಡೊಕ್ಕೂ ಪುರಸೊತ್ತಿಲ್ಲವಾ ? ಅಂತಾ ಕೇಳಿದರೆ ಅಯ್ಯೋ ನೀನ್ ಜಾಸ್ತಿ expect ಮಾಡ್ತಿ ಅಂತ ಚುಚ್ಚುತ್ತಾನೆ. ಅದಕ್ಕೆ ಇವತ್ತು ಬೆಳಗ್ಗಿನಿಂದ ಇದನ್ನೆ ಯೋಚಿಸ್ತಾ ಇದ್ದೇನೆ. ಯಾಕೆ ಎಲ್ಲಾ ಸಂಬಂಧಗಳ ನಾಜೂಕಿನ ಎಳೆಗಳು ಈ ಅಪೇಕ್ಷೆಯೆಂಬ ಕತ್ತಿಯಲುಗಿನ ಮೇಲೆ ನಿಂತಿದೆ ಎನಿಸುತ್ತದೆ. ಎನು ಇಷ್ಟು ಚಿಕ್ಕ ಸಲುಗೆಯೂ ಮಾಡಬಾರದ , ಬೇಡಬಾರದ ‘ಅಪೇಕ್ಷೆ’ ಅತಿಯಾಯಿತೇ ? ಇಷ್ಟೂ ಇಲ್ಲದ ಮೇಲೆ ಅರ್ಥವೇನು ಉಳಿಯಿತು ನಾನು -ನೀನು ಎಂಬ ಸಂಬಂಧಕ್ಕೆ ? ಬರೀ ನೀನು ನೀನೆ ಎಂಬ ಸ್ವಾರ್ಥದಲ್ಲಿ ಬದುಕುತ್ತಿರುತ್ತಿ, ನಿನ್ನ ಹಾಗೆ ನನಗೆ ನಾನೆಂಬ ಸ್ವಾರ್ಥದಲ್ಲಿ ಬದುಕಲು ಆಗುತ್ತಿಲ್ಲ, ಮತ್ತೆ ಮತ್ತೆ ನಿನ್ನ ಸಮಸ್ಯೆಗಳಿಗೆ, ಗೋಳುಗಳಿಗೆ ಕಿವಿಯಾಲಿಸತೊಡಗುತ್ತೇನೆ. ನನ್ನವೇನಾದರೂ ನಿನಗೆ ಹೇಳಬೇಕೆಂದರೆ ನಿನಗೆ ನನಗಾಗಿ ಸಮಯವಿಲ್ಲ. ಕೇಳುತ್ತಿಲ್ಲ ಎಂದು ಒಂದೇ ಮಾತು ಹೇಳಿದರೆ ಅದು ನನ್ನ expectations ಜಾಸ್ತಿಯೆಂಬ ಮೊನಚುಮಾತಾಗುತ್ತದೆ.



ಈಗ ಹೇಳಿ ನಾವು ಯಾರಿಂದಲೂ ಏನನ್ನೂ ಅಪೇಕ್ಷಿಸದೇ ಇರಲು ಸಾಧ್ಯವಾ? ಅಪೇಕ್ಷೆಯಿಲ್ಲದ ಯಾವ ಸಂಬಂಧಗಳು ಬದುಕಿ ಉಸಿರಾಡಲು ಸಾಧ್ಯವಾಗಿವೆಯೇ? ನಾವು ಪ್ರೀತಿಸುವವರಲ್ಲಿ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ, ಅವರಲ್ಲಿ ಅಪೇಕ್ಷಿದೇ ದಾರಿಹೋಕರಲ್ಲಿ ಅಪೇಕ್ಷಿಸುತ್ತೇವೆಯಾ ?

Wednesday, January 23, 2008

Lift......

ಲಿಫ್ಟ್.......

ಹಸಿರು ಮರಗಳೆಲ್ಲ ಬಿಳಿ ಚಾದರ್ ಹೊದ್ದು ಮಲಗಿವೆ ಛಳಿಗೆ, ಹಳದಿ, ಕೆಂಪು , ಬಿಳಿ ಬಣ್ಣದ ಚಿಕ್ಕ ಚಿಕ್ಕ ಹೂಗಳು ಮುತ್ತಿನಂಥ ಇಬ್ಬನಿಯನ್ನು ಹೊದೆದು ತುಸುಹೊತ್ತಿನಲ್ಲಿ ಗೌರವರ್ಣದ ಬಿಸಿಲಿಗೆ ಕರಗಲು ಕಾದು ಕುಳಿತಿವೆಯೇನೋ ಎನ್ನುವಂಥಾ ಪ್ರಕೃತಿ ಒಂದು ಸುಂದರ ಪೇಯಿಂಟಿಗನಂತೆ ಹರಡಿ ನಿಂತು ಮನಸ್ಸಿಗೆ ಉಲ್ಲಾಸ ನೀಡುತ್ತಿತ್ತು. ತನಗೆ ಅತ್ಯಂತ ಪ್ರಿಯವಾದ ಗುಲ್ ಮೊಹರ ಮರ ಹೂಗಳಿಲ್ಲದೇ ತನ್ನಂತೆ ಸಪ್ಪಗೇ ನಿಂತಿದೆ. ಈಸ್ಟ್ ಆಫ್ ಕೈಲಾಸ್ನ ’ನೆರುಲಾ’ದಲ್ಲಿ ಬೆಳ್ಗಿನ ಒಂಭತ್ತೂ ವರೆಗೆ ಪೀಕೆನ ಎದುರಿಗೆ ಕುಳಿತು ಬಿಸಿ ಬಿಸಿ ಹಬೆಯಾಡುವ ಟೊಮ್ಯಾಟೋ ಸೂಪ್ ಹಾಗೂ ಹರಾ ಮಟರ್ ಕಾ ಕಬಾಬ್ ಮೆಲ್ಲುತ್ತಿದ್ದ ಅವಳ ಮನಸ್ಸೆಲ್ಲಾ ವ್ಯಗ್ರವಾಗುತ್ತಿತ್ತು. ಒಂಥರಾ ಖಾಲಿತನ. ಒಂಥರಾ ಜುಗುಪ್ಸೆ...ಮಾನಸಿಕವಾದ ಅಸಹನೆ, ಹಿಂಸೆ, ಮನಸ್ಸು ಮನಸ್ಸಿನಾಚೆಗೆ ಎಲ್ಲೋ ಹೋಗಿರುತ್ತದೆ, ಕಿವಿಗೆ ಪೀಕೆನ ಯಾವ ಮಾತುಗಳೂ ಕೇಳುತ್ತಿಲ್ಲವೆಂಬ ಅನಿಸಿಕೆ ಮತ್ತು ನಿರಾಳವಾದ ಸಮಾಧಾನ. ಅವನು ಏನೆನೋ ಹೇಳುತ್ತಿರುತ್ತಾನೆ ಅವೆಲ್ಲಾ ತನಗಿಷ್ಟವಿಲ್ಲದ ಟಾಪಿಕ್ ಗಳೇ ಆಗಿದ್ದಾಗ ಕಿವಿ ಕೇಳಿಸುತ್ತಿದೆಯೆಂದು ನಟಿಸುತ್ತಾ ಇದ್ದರೆ ಮನಸ್ಸೊ ಬೇರೆಲ್ಲೋ ಹಾರಿ ಹೋಗಿರುತ್ತದೆ. ಯಾಕೆ ತಾನು ಈ ಪೀಕೆನೊಂದಿಗೆ ಸೂಪ್ ಕುಡಿಯಲು ಬಂದೆ ? ಗೊತ್ತಾಗುತ್ತಿಲ್ಲ. ಒಲ್ಲೆ ಎನ್ನಲು ಆಗದ ಸೌಜನ್ಯತೆಗೋ , ಅವನು ದಿನಾ ತನ್ನನ್ನು ಆಫೀಸು ತಲುಪಿಸುತ್ತಿದ್ದಾನೆಂಬ ದಾಕ್ಷಿಣ್ಯಕ್ಕೊ ಅರ್ಥವಾಗುತ್ತಿಲ್ಲ.
ಇತ್ತೀಚೆಗೆ ಆರು ತಿಂಗಳಿನಿಂದಾ ಪೀಕೆನೇ ಸೆಕ್ಟರ ಮೂವತ್ತೇಳರಿಂದ ಬೆಳಿಗ್ಗೆ ಪಿಕ್ ಮಾಡ್ತಾನೇ, ಸಂಜೆಗೂ ಅವ ತನ್ನ ಮೆಹರೌಲಿ ಆಫೀಸಿನಿಂದ ಹೊರಟು ಸೌಥ್ ಎಕ್ಸ್ಟ್ ನಲ್ಲಿರುವ ತನ್ನ ಬ್ಯಾಂಕಿನಿಂದ ಪಿಕ್ ಮಾಡುತ್ತಾನೆ. ಯಾಕೆ ತಾನು ಕುರಿಯಂತೆ ಅವನನ್ನು ಹಿಂಬಾಲಿಸುತ್ತೇನೆ? ಅವನೆಂದರೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಮನೆಗೆ ಬೇಗ ತಲುಪುತ್ತೇನೆಂಬ ಒಂದೇ ಒಂದು ಕಾರಣ ಮತ್ತು ಬೇಗ ಮನೆ ಸೇರುವ ತವಕ ಬಿಟ್ಟರೆ ತನ್ನಲ್ಲಿ ಏನೂ ಇಲ್ಲ. ಯಾವ ಭಾವನೆಗಳೂ ಇಲ್ಲ. ಇದೇನು ತನ್ನ ಕೇಡುಗಾಲ ? ಏನಾಗಿದೆ ತನಗೆ ? ಯಾವ ಕೆಟ್ಟ ಘಳಿಗೆಯಲ್ಲಿ ತಾನವನಿಗೆ ತಾನು ನೋಯ್ಡಾದಲ್ಲಿ ವಾಸಿಸುತ್ತೇನೆ ಅಂತಾ ಒದರಿದಳೋ ಅವತ್ತಿನಿಂದಾ ಗಂಟು ಬಿದ್ದಿದ್ದಾನೆ. ಅರ್ರೇ ನಾನು ಅಲ್ಲೇ ಇರುವುದು, ನೀವು ಏನೂ ಯೋಚನೆ ಮಾಡಬೇಡಿ, ’ಐ ವಿಲ್ಲ್ ಡ್ರಾಪ್ ಯೂ’ ಎಂದು ತಾನೇ ಈ ವ್ಯವಸ್ಥೆಯನ್ನು ಮನಸಾರೆ ಒಪ್ಪಿದ್ದೇನೆ ಎನ್ನುವಂತೆ ತನ್ನ ಅಭಿಪ್ರಾಯಕ್ಕೂ ಕೇಳದೇ ತನ್ಗಾಗಿ ಸೆಕ್ಟರ್ ಮೂವತ್ತೇಳರ ಪೆಟ್ರೋಲ್ ಬಂಕಿನೆದುರು ಮರುದಿನ ಕರಾರುವಾಕ್ಕಾಗಿ ಕಾಯುತ್ತಿದ್ದ. ಗಾಜಿಯಾಬಾದ್ ಬಸ್ಸಿನಿಂದ ಕೆಳಗಿಳಿಯುತ್ತಲೇ ಆತನ ಗಾಡಿ ಕಣ್ಣಿಗೆ ಬಿದ್ದು ಹಾಗೆ ನೋಡಿಯೂ ನೋಡದಂತೆ ದಾಟಿ ಹೋಗಬಹುದಿತ್ತು ಎಂದುಕೊಳ್ಳುತ್ತಾ , ಹಾಗೆ ಮಾಡಲು ಮನಸ್ಸು ಒಪ್ಪದೇ ಪೀಕೆನ ಕಾರಿನೆಡೆಗೆ ಯಾವುದೋ ಮೋಡಿಗೊಳಗಾದವಳಂತೆ ಕಾಲು ಹಾಕಿದ್ದಳು.
ಈ ಪೀಕೆ ತನಗೆ ಯಾವ ಸಂಬಂಧಿಕನೂ ಅಲ್ಲ, ಸಹೋದ್ಯೋಗಿಯೂ ಅಲ್ಲ, ಎರಡು ವರ್ಷದ ಹಿಂದೆ ಹಾಗೇ ಒಂದು ದಿನ ತನ್ನ ಬ್ಯಾಂಕ್ ಮ್ಯಾನೇಜರ್ ದೀಪಕ್ ಗುಪ್ತಾನ್ ಛೇಂಬರ್ನಲ್ಲಿ ಕಂಡದ್ದರ ನೆನಪು. ಒಂದೆರಡು ಸಲ ಗ್ಲಾಸ್ ಪೇನ್ ನಿಂದ ಕದ್ದು ಕ್ಯಾಶ ಕೌಂಟರನಲ್ಲಿದ್ದ ತನ್ನನ್ನು ನೋಡಿದ ನೆನಪು. ಇತ್ತೀಚೆಗೆ ಅವನ ಕಂಪನಿಗೆ ನಮ್ಮ ಬ್ಯಾಂಕು ಒಂದು ಕೋಟಿ ಹಣಸಹಾಯ ನೀಡಿದೆ. ದೀಪಕ ಗುಪ್ತಾ ಅವನಿಗೆ ಮೊದಲಿನಿಂದ ಮಿತ್ರನೋ, ಲೋನಿಗಾಗಿ ಈ ಮಿತ್ರತ್ವವೋ ದೇವರಿಗೆ ಗೊತ್ತು. ಈಗೀಗ ಅರ್ಧ ದಿನ ಆತ ನಮ್ಮ ಬ್ಯಾಂಕಿನ ನೌಕರನೇನೋ ಅನ್ನುವಂತೆ ಹೆಚ್ಚು ಸಮಯ ಕಳೆಯುತ್ತಿರುತ್ತಾನೆ. ಏ.ಜಿ.ಎಮ್. ಪ್ರಭುಶಂಕರ ದಯಾಲ್ ನ ಚೇಂಬರನ್ನು ತನ್ನದೇ ಆಫಿಸೇನೋ ಎಂಬಂತೆ ಬಳಸುತ್ತಾನೆ, ತನ್ನ ಲ್ಯಪ್ ಟಾಪ್ ತೆರೆದುಕೊಂಡು ಗಂಭೀರವಾಗಿ ಏನೋ ಲೆಕ್ಕಾಚಾರವನ್ನು ತಾಳೆನೋಡುತ್ತಿರುತ್ತಾನೆ. ಎಲ್ಲರೂ ನೋಡುತ್ತಿರುತ್ತಾರೆ ಯಾರಿಗೆ ಅನ್ನುವುದು. ದೊಡ್ಡವರ ವಿಷಯವಲ್ಲವೇ?
ದಿನಗಳೆದಂತೆ ಎಲ್ಲರ ಜತೆ ಹಾಯ್ , ಹಲೋಗಳ ವಿನಿಮಯವಾಗುತ್ತಿದ್ದವು. ತನ್ನೊಂದಿಗೂ ಹಲೋ ಹೇಳಿದ್ದಿದೆ. ತನಗೆ ಕತ್ತು ಎತ್ತಿ ಮಾತನಾಡಲು ಪುರುಸೊತ್ತಿದ್ದರೆ ತಾನೆ? ಎಲ್ಲೇ ಕಾಣಲಿ ಎಲ್ಲರನ್ನು ಬಿಟ್ಟು ವಿಶೇಷವಾಗಿ ತನ್ನನ್ನು ಕಂಡು ಮೆಲ್ಲಗೇ ಹಾಯ್ ಹೇಳಿ, ಮುಗುಳ್ನಗೆ ಸೂಸಿ ಹೋಗುತ್ತಿದ್ದ. . ಐವತ್ತರ ಅಂಚಿನಲ್ಲಿದ್ದ ಮುದಿಯ. ಸಲ್ಪ ರಷ್ಯ ಇಲ್ಲದೇ ಇದ್ದಾಗ ಟೀ ಬ್ರೇಕ್ನಲ್ಲಿ ಅವನೇ ಒಮ್ಮೆ ತನ್ನ ವಯಸ್ಸನ್ನು ಹೇಳಿ ತಾನಿನ್ನೂ ರಾಜ್ ಬಬ್ಬರ್ ಹಾಗೆ ಇದ್ದೇನಲ್ಲಾ ? ಎಂದು ಎಲ್ಲರೊಂದಿಗೆ ಕೊಚ್ಚಿಕೊಂಡಿದ್ದ. ಹೇಗೆ ತನ್ನ ಜತೆ ಕೇವಲ ಹಾಯ್, ಹಲೋದ ಏಳೆ ಹಿಡಿದು ಇಷ್ಟು ಹತ್ತಿರ ಬಂದ? ಅವನೇ ಹೇಳಿಕೊಳ್ಳುವಂತೆ ವಿ ಆರ್ ಫ್ರಂಡ್ಸ್ ಯಾರ್" ಹೇಗೆ ಪ್ಫ್ರೆಂಡ್ಸ್ ಅರ್ಥವಾಗುವುದಿಲ್ಲ. ಎಲ್ಲರನ್ನು ಬಿಟ್ಟು, ಎಲ್ಲವನ್ನೂ ಆಚೆಗೆ ಹಾಕಿ ತಾನೇ ಯಾಕೆ ಫ್ರೆಂಡ್ ಆಗ್ಬೇಕು? ಯಾವ ಸಾಮ್ಯತೆಯಿಂದ ? ವಯಸ್ಸಿನ ಸಾಮ್ಯತೆಯೋ, ಊರು ಕೇರಿಯ ನೆಂಟಸ್ತಿಕೆಯೋ, ಒಂದೇ ಕಡೆ ಓದಿದವರೋ ? ಯಾವ ಸಂಬಂಧದಿಂದ ತಾನು ಫ್ರೆಂಡ್ ಆಗಿಯೇನು? ತನಗೇನು ಅರ್ಥವಾಗುವುದಿಲ್ಲಾ ಅಂತ ತಿಳಿದ್ದಿದ್ದಾನಾ? ಅಷ್ಟು ಬುದ್ದೂ , ಪೆಕರನಂತೆ ಕಾಣ್ತೀನಾ? ಭಯವಾಯಿತು. ತನ್ನ ರೂಪಿನ ಬಗೆಗೆ, ಮಾದಕತೆಯ ಬಗೆಗೆ, ಮೌನದ ಬಗ್ಗೆ ತನ್ನ ಕಾಲೇಜಿನ ಬಂಡ್ಯಾ ಪದ್ಯ ಬರೆದು ಅದು ಇಂಗ್ಲೀಷ ಮೇಡಂ ಕೈಗೆ ಸಿಕ್ಕಿ ಫಜೀತಿಯಾಗಿದ್ದು, ಅಳು ಮುಖದಿಂದ ಕಣ್ಣೀರನ್ನು ಉಕ್ಕಿಸಿಕೊಂಡು ನಿಂತಿದ್ದ ದೀನವಾದ ಬಂಡ್ಯಾನ ಮುಖ ನೆನೆದು ಮೊದಲು ನಗು ಬರುತ್ತಿತ್ತು. ಈಗ ತನಗೂ ಅಳು ಬರುತ್ತದೆ. ’ಪಾಪ ಬಂಡ್ಯಾ’ ಎನಿಸಿ. ಇಲ್ಲಿ ಹೀಗೆ ಇಷ್ಟವಾಗದ ಒಬ್ಬ ವ್ಯಕ್ತಿಯೊಡನೆ ಸೂಪ್ ಕುಡಿಯುತ್ತೇನೆಂದು ಗೊತ್ತಿತ್ತಾ ತನಗೆ ? ಬ್ಯಾಂಕಿನ ಹಲವರು ಅವನು ತನಗೆ ಹಾಯ್ ಹೇಳಿದ್ದು ಕಂಡು -ಏಯ್ ಬೀನಾ ಮ್ಯಾಡಂ ಆಸಾಮಿ ಗಾಳ ಹಾಕ್ತಾ ಇದೆ’ ಹುಷಾರಾಗಿರು ಎಂದು ಮುಜುಗುರವಾಗುವಷ್ಟು ಎಚ್ಚರಿಕೆ ಕೊಟ್ಟಿದ್ದರು. ಛಳಿಯಲ್ಲೂ ಇದನ್ನು ಯೋಚಿಸಿ ಬೆವತು ಹೋದಳು. ಯಾಕೋ ತಪ್ಪು ಮಾಡುತ್ತಿದ್ದೆನೇಂಬ ಗಿಲ್ಟು ಕಾಡತೊಡಗಿತು.
ಯಾಕೆ ಪೀಕೆನಿಂದ ಲಿಫ್ಟ್ ತಗೋತೇನೆ? ಮುಂಬಾಯಿಯಲ್ಲಿ ಜನ ಗಾಡಿಯಿದ್ದವರು ಒಂದೇ ದಿಕ್ಕು, ಮಾರ್ಗದಲ್ಲಿ ಹೋಗುವವರು ಇನ್ನೊಬ್ಬರನ್ನು ಪಿಕ್ ಮಾಡ್ಕೊಂಡು ಹೋಗ್ತಾರಂತೆ ಎಂದು ಕೇಳಿದ್ದೇನೆ. ಅವರೂ ಇಂಥಾ ಸನ್ನಿವೇಶದಲ್ಲಿ ತೊಳಲಾಡುತ್ತಾರಾ? ಯಾರನ್ನಾದರೂ ಕೇಳಬೇಕು. ನೋಯ್ಡಾದಿಂದ ಇಲ್ಲಿ ದೆಹಲಿಯ ಸೌಥ ಎಕ್ಸ್ ಗೆ ಬರಬೇಕೆಂದರೆ ಸ್ವಂತ ಗಾಡಿಯ ಅಗತ್ಯವಿದೆ. ರಜನೀ ಗಂಧಾ ಚೌಕಿನಿಂದಾ ಸುಮಾರು ಕಾಲ್ ಸೆಂಟರಿನ ಕ್ಯಾಬ್ ಗಳಿವೆ ಮೂಲ್ ಚಂದ್ ಕಡೆ ಬರಲು ಆದರೆ ಹಿಡಿಯಲು ಸರ್ಕಸ್ ಮಾಡಲು ಇಷ್ಟವಿಲ್ಲ. ಇನ್ನು ಪ್ರೈವೇಟ್ ಬಸ್ಸುಗಳು ವಿಪರೀತ ರಷ್ಯು. ತನ್ನ ಓದುವ ಮಕ್ಕಳೂ, ವಯಸ್ಸಾದ ಅತ್ತೆಯ ಆರೈಕೆ, ಡಾಕ್ಟರ್ ಬಿಲ್ಲು, ಗಂಡನ ಸತತ ಅನಾರೋಗ್ಯ. ಆತ ಅನಾರೋಗ್ಯದಲ್ಲೂ ಕೆಲಸ ಮಾಡುತ್ತಿರುತ್ತಾನೆ. ಆತ ಸಿವಿಲ್ ಇಂಜಿನಿಯರ್, ಹೊರಗಡೆ ಸಿಕ್ಕಾಪಟ್ಟೆ ಕನ್ಸ್ಟ್ರಕ್ಷನ್ ಕೆಲಸ ನಡೆಯುತ್ತಿರುತ್ತದೆ ಯೂ.ಪಿ., ಗಾಜಿಯಾಬಾದ್, ಗುರಗಾಂವ್ ಹೀಗೆ. ಇನ್ನ್ಯಾರಾಗಿದ್ರೆ ಲಕ್ಷಗಟ್ಟಲೇ ಗಳಿಸುತ್ತಿದ್ದರು. ಆದರೆ ಅವಳ ಗಂಡನಿಗೆ ಅಸ್ತಮಾ ಅದೂ ಇದೂಂತ ವರ್ಷವಿಡೀ ದವಾಖಾನೆ ಔಷಧಿ ಇರುತ್ತದೆ. ಹೆಚ್ಚು ಉತ್ಸಾಹದಿಂದ ಗಳಿಸಲಾರದವನಾಗಿದ್ದಾನೆ. ಮನೆಯಲ್ಲೇ ಒಂದು ಆಫೀಸ್ ತೆಗೆಯೋಣ, ಇಲ್ಲೇ ಕೂತಲ್ಲೇ ನೀನು ಸಿವಿಲ್ ನಕ್ಷಗಳನ್ನು, ತಾಂತ್ರಿಕ ಸಲಹೆಗಳನ್ನು ನೀಡಿಯೇ ಗಳಿಸಬಹುದು ಎಂದು ಬೀನಾ ಹೇಳಿ ಸೋತಿದ್ದಾಳೆ. ಅವನು ಯಾರ ಮಾತನ್ನೂ ಕೇಳಲಾರದ ವ್ಯಕ್ತಿ. ಬೀನಾ ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ದಿನಾ ನೋಯ್ಡಾ ದೆಹಲಿ ಅಂತಾ ಒದ್ದಾಡುತ್ತಿದ್ದಾಳೆ. ಇದೇ ಕಾರಣಕ್ಕಾಗಿ ಅವಳು ನೋಯ್ಡಾದಿಂದಲೇ ಹೋಗಿ ಬರುವ ಪೀಕೆನ ಜತೆ ಅವನ ಕಾರಲ್ಲಿ ಬರತೊಡಗಿದ್ದು. ಇತ್ತೀಚೆಗೆ ದೀಪಕ್ ಗುಪ್ತಾ ತನ್ನ ವರ್ಗಾವಣೆಯ ಅಹವಾಲನ್ನು ಸೀರಿಯಸ್ಸಾಗಿ ತಗೊಳ್ಳುತ್ತಿಲ್ಲ. ಸೂಪ್ ಹೀರುತ್ತಾ ವರ್ಗಾವಣೆಯ ಯೋಚನೆ ತಲೆಯಲ್ಲಿ ಮಿಂಚುತ್ತಲೇ ಸಾವಿರ ಓಲ್ಟಿನ ಲ್ಯಾಂಪ್ ಹತ್ತಿಕೊಂಡಂತಾಯ್ತು. ದೀಪಕ ಗುಪ್ತಾಗೆ ಹೇಳಿ ಇವನೇ ಆ ಕಾರ್ಯಕ್ಕೆ ಅಡ್ಡಿ ಮಾಡುತ್ತಿರಬಹುದಾ ಎಂಬ ಸಂಶಯವೂ ಬೆನ್ನಲ್ಲಿ ಹರಿಡಾಡಿದಂತಾಗಿ ಛಳಿ ಎನಿಸಿ ಪೀಕೆನ ದೊಗಲೆ ದೊಗಲೆ ಮುಖ, ಪೊದೆ ಪೊದೆ ಹುಬ್ಬು ಅಸಹ್ಯವಾಗಿ ಕಾಣತೊಡಗಿತು. ಅವನು ಒತ್ತಾಯದಿಂದ ನೀಡಿದ, ತಾನಿನ್ನೂ ಬಳಸಿರದ ಚಿಕ್ಕ ಪುಟ್ಟ ಗಿಫ್ಟಗಳು, ತನ್ನ ಪರ್ಸಿನಲಿದ್ದ ಆತ ಮೊನ್ನೆ ನೀಡಿದ ಲಿಪ್ ಸ್ಟಿಕ್ ಎತ್ತಿ ಬಿಸಾಡುವಷ್ಟು ಮಣಭಾರವೆನಿಸ್ತೊಡಗಿತು.
ಸೂಪ್ ಕುಡಿದು ಮುಗಿಸಿ, ’ ಹೊರಡೋಣವಾ ಸರ್ ? ಎಂದು ಎದ್ದೇ ಬಿಟ್ಟ ಬೀನಾಳನ್ನು ವಿಧಿಯಿಲ್ಲದೇ ಹಿಂಬಾಲಿಸಿದ ಪೀಕೆ, ಕಾರಿನಲ್ಲಿ ಕೂರುತ್ತಲೇ ಹೌ ವಾಸ್ ಸೂಪ್ ? ಯೂ ಲೈಕ್ ಇಟ್ ನಾ ? ನಿನಗಿಷ್ಟವಾಗಿದ್ದಕ್ಕೇ ನಾನು ಆರ್ಡರ್ ಮಾಡಿದೆಯೆನ್ನುವ ರೀತಿಯಲ್ಲಿ ನಕ್ಕ. ಅವಳೂ ಒತ್ತಾಯದ ನಗು ನಕ್ಕರೂ ಒಳಗೆಲ್ಲೋ ಏನೋ ಒಂದು ತರಹದ ದಿಗಿಲು, ಗೋಜಲು. ಎಲ್ಲೋ ಎನೋ ತಪ್ಪು ಮಾಡುತ್ತಿದ್ದೇನೆ ಎನ್ನುವ ಅಳುಕು. ಏನು ಮಾಡುವುದು ದಿನಾ ಬಸ್ಸಿನಲ್ಲಿ ನೇತಾಡಿಕೊಂಡು ಬರುವುದಕ್ಕಿಂತ ಆರಾಮವಾಗಿ ಕಾರನಲ್ಲಿ ಬರಬಹುದು ಎಂದುಕೊಂಡಿದ್ದ ಮನಸ್ಸು ಅದು ತಪ್ಪು ಎಂದು ವಾದಿಸತೊಡಗಿದೆ. ಇಷ್ಟು ದೊಡ್ಡವ್ಯಕ್ತಿಗೆ ದುಡ್ಡು ತಗೊಳ್ಳಿ ಅಂತಾ ಹೇಳಿ ಅಪಮಾನಿಸುವುದಕ್ಕಿಂತ ತಾನೇ ತನ್ನ ದಾರಿ ಹುಡುಕಿಕೊಳ್ಳಬೇಕು ಎಂದುಕೊಂಡಳು. ಹೀಗೇ ದಿನಾ ಅಂದುಕೊಳ್ಳುತ್ತಾಳೆ. ಕಾರ್ಯರೂಪಕ್ಕೆ ತರಲು ಅವಳಿರುವ ಸಂಧರ್ಭ, ಕೆಲಸ ಮತ್ತು ಮನೆಯ ಒತ್ತಡಗಳು ಯೋಚನೆಗೆ ಮುಸುಕೆಳೆಯುತ್ತಿವೆ. ಪೀಕೆ ಸುಮ್ಮನೆ ಗಾಡಿ ನಡೆಸುತ್ತಿದ್ದ, ಇವಳ ಮೌನ ಕಂಡೋ ಎನೋ ಪೀಕೆನ ದಪ್ಪ ಕೈ ಅವಳ ಬಲಗೈಯನ್ನು ಹಿಡಿಯಿತು, ಬೀನಾ ಸರಕ್ಕನೇ ಹಿಂತೆಗೆದುಕೊಂಡಳು. ’ಕ್ಯುಂ ಬೇಬಿ, ಎಷ್ಟು ಚೆಂದದ ಹವೆ ಇದೆ, ಪಕ್ಕದಲ್ಲಿ ಇಷ್ಟು ಚೆಂದದ ನೀನಿದ್ದಿ’ ಏನೇನೋ ಬಡಬಡಿಸುತ್ತಿದ್ದ ಪೀಕೆ. ಸಿಟ್ಟು, ಕೋಪ, ವಿಭ್ರಮೆಯಲ್ಲಿ ಕಿವಿಯೆಲ್ಲ ಕಾದು ಮಂದವಾಗತೊಡಗಿತು, ಏನೂ ಕೇಳಿಸದಂತೆ ಶೂನ್ಯತೆ, ಎಲ್ಲಾ ಸ್ತಬ್ದವಾದಂತೆ. ಇದನ್ನು ಅವಳ ಸಂಶಯಾಗ್ರಸ್ತ ಮನ ಬಹು ದಿನಗಳಿಂದಲೇ ಹೀಗಾಗಬಹುದು, ಆಗದಿರಲಿ ದೇವರೇ ಎಂದು ನಿರೀಕ್ಷಿಸುತ್ತಿತ್ತು. ಮೂಲಚಂದ ಕ್ರಾಸ್ ಮಾಡುತ್ತಲೇ ಸೌಥ್ ಎಕ್ಸ ನ ಭವ್ಯ ಕಟ್ಟಡಗಳು, ದೂರದ ತನ್ನ ಬ್ಯಾಂಕಿನ ಬಿಲ್ಡಿಂಗ್ ಕಾಣತೊಡಗಿದವು. ಹೋದ ಜೀವ ಬಂದಂತೆ ಇಲ್ಲಿಯೇ ನಿಲ್ಲಿಸಿಬಿಡಿ ಪೀಕೆ ಜೀ ಎಂದವಳಿಗೆ ತಾನು ಮಾತನಾಡಿದ್ದಕ್ಕಿಂತ ಹೆಚ್ಚು ಚೀರಿದಂತೆನಿಸಿ ಮುಜುಗರವಾಯಿತು. ಹೊರಗೆ ಕಾಲಿಡುತ್ತಲೇ ನಿರಾಳವೆನಿಸಿ, ಶ್ವಚ್ಛ ಹವೆಗೆ ಮುಖವೊಡ್ಡಿ ಉಸಿರೆಳುದೊಂಡು ತುಸು ಹೊತ್ತಿನ ಮುಂಚೆ ಕುಡಿದ ಸೂಪ್ ಹೊಟ್ಟೆಯಲ್ಲಿ ಮಳಮಳಿಸಿದಂತಾಗಿ ಕಣ್ಣೂ ಕತ್ತಲಿಟ್ಟು ಬಂದಂತಾಗಿ ದುಡು ದುಡು ಬ್ಯಾಂಕಿನ ಕಡೆಗೆ ಹೆಜ್ಜೆ ಹಾಕತೊಡಗಿದಳು ಎದೆಯೊಳಗೆ ಮಾತ್ರ ಎಂದೂ ಇಲ್ಲದ ನಿರುಮ್ಮಳತೆಯಿಂದಾ. ಹನಿಗೂಡಿದ ಕಣ್ಣುಗಳಲ್ಲಿ ಆಗ ತಾನೆ ಮೂಡಿದ ಪೇಯಿಂಟಿಂಗ್ ನಂಥಾ ಪರಿಸರ ದೃಶ್ಯ ಪ್ರತಿಫಲಿಸುತ್ತಿತ್ತು.

Friday, January 18, 2008

ಕಾಲ ಬದಲಾಗುತ್ತದೆ



ಹೌದು, ಕಾಲ ಬದಲಾಗುತ್ತದೆ



ಆಗುತ್ತಲೇ ಇರುತ್ತದೆ



ಯಾರ ಹಂಗೂ ಇಲ್ಲದೇ




ಯಾರ ಕಾಯುವಿಕೆಗೂ ದಾಖಲಾಗದೇ




ಅನಂತತೆಯಲ್ಲಿ



ಕಾಲದ ಪರೀಧಿಯೊಳಗಿನ



ವರ್ತುಲದಂತೆ.








ನೀನು ಬದಲಾಗಲಾರೆ



ಅಂತೆ ಕಂತೆಗಳೆಲ್ಲ ಹುಸಿಯಾದವು



ಎಷ್ಟು ಬದಲಾಗಿ ಬಿಟ್ಟೆ ಗೆಳೆಯ



ನನ್ನ ಅಳಲು ನಿನ್ನ ತಟ್ಟಲಿಲ್ಲ



ನನ್ನ ಕನಲು ನಿನ್ನ ಕರಗಿಸಲಿಲ್ಲ.





ಏನೆಲ್ಲ ಕನಸುಗಳ ಚುಕ್ಕೆಗಳನ್ನಿಟ್ಟಿದ್ದೆ



ನೀಲಿಯಗಸದ ತುಂಬೆಲ್ಲ ನಿನ್ನ ನಗು



ಬೆಳದಿಂಗಳುಕ್ಕಿಸುವ ತಂಪಿನಲ್ಲಿ



ನಿನ್ನ ದನಿಯನಷ್ಟೇ ಆಲಿಸಿದ್ದೇ



ನನ್ನ ದನಿಗೆ ಕೊರಳಾಗಲಿಲ್ಲ ನೀನು






ನಿನಗೆ ನಿನ್ನದೇ ಜಂಜಾಟ ನೂರು



ಕನಸುಗಳಾಗಿವೆ ಸಾವಿರ ಚೂರು



ಯಾವ ನಾಳೆಗಳಿಗೆ ಕಾಯಲಿ ಇನ್ನು



ನೀನೆಲ್ಲೋ ನಾನೆಲ್ಲೋ ಬದುಕೆಣಿಸಿದತ್ತ



ಹಾದಿ ಬೇರೆಯಾಗುವ ಕಾಲ ಕಾದಿದೆಯೇನೋ



ಬರುವ ಸುದಿನವ ಎಣಿಸಿ ಕೂರುವ ಕತ್ತಲಲ್ಲಿ



ಆ ಚಂದಿರ ಮೂಡುವನೋ ಈ ರಾತ್ರಿಗೆ



ಕಣ್ಣಾಗಿ ಮುಗಿಲಿಗೆ ಹಗಲಾಗಿ.