ರವೀ ನಿನ್ನೆ ಚಾಟ್ ನಲ್ಲಿ ಸಿಕ್ಕಿದ್ದ.
ಹೀಗೆ ನಾಲ್ಕೈದು ವರ್ಷಗಳ ಹಿಂದೆ ಆತ ಚಾಟ್ ನಲ್ಲಿ ಸಿಕ್ಕಿ ಮಾತಾಡ್ತಾ ಮಾತಾಡ್ತಾ ಒಳ್ಳೆ ಸ್ನೇಹಿತನಾಗಿದ್ದ. ಆಗೊಮ್ಮೆ ಈಗೊಮ್ಮೆ ಮೆಸೆಂಜರ್ ನಲ್ಲಿ ಬಂದಾಗ, ಅಕಸ್ಮಾತ್ತಾಗಿ ತಾನೂ online ಇದ್ದು ಮಾತಿಗೆ ಸಿಕ್ಕಿಬಿಟ್ಟರೆ ಸಾಕು, ನಾವು ಮಾತನಾಡದ ವಿಷಯವೇ ಇಲ್ಲ. ಮನೆ, ಮಕ್ಕಳು, ನಮ್ಮ ನಮ್ಮ ಬದುಕು, ಜಂಜಾಟಗಳು ದೆಹಲಿ ಜೀವನ, ದೆಹಲಿಯ ವಿಪರೀತ ಹವಾಮಾನ, ಅವನ ದೆಹಲಿವಾಸ, ಅವನ ಕೆಲಸ, ಅವನ ಗೆಳತಿಯರು, ರಾಜಕೀಯ, ಸ್ನೇಹಿತರು, ಮತ್ತೆ ನಮಗಷ್ಟೇ ಗೊತ್ತಿರುವ ಗುಟ್ಟುಗಳು, ಪ್ರೇಮ ಕಾಮ ಇತ್ಯಾದಿ ಒಂದೇ ಎರಡೇ ಸಾವಿರ ಸುದ್ದಿಗಳು, ಮಾತಾನಾಡದ ವಿಷಯವೇ ಇಲ್ಲ. ಯಾವತ್ತೂ ಬೋರ್ ಹೊಡೆದಿಲ್ಲ ನಾನು. ಮೊದಮೊದಲು ಅವನೋಂದಿಗೆ ಮಾತನಾಡಲು ವಿಷಯವೇ ಸಿಗುತ್ತಿರಲಿಲ್ಲ, ಈಗ ಯಾಕೋ ರವಿಯೆಂದರೆ ಅಚ್ಚುಮೆಚ್ಚು ನನಗೆ. ಹೆಚ್ಚು ಸಂಪರ್ಕವಿರದಿದ್ದರೂ ಯಾವಾಗಾದರೂ ಒಮ್ಮೆ ಮೆಸೆಂಜರ್ ನಲ್ಲಿ ಕಂಡರೆ ಮಾತನಾಡುವಷ್ಟು ಸ್ನೇಹವಿದೆ. ಕಿವಿಗೊಟ್ಟು ಕೇಳುವ ಅಂತಕರಣವಿದೆ. ಯಾವತ್ತಲೂ ನನಗೆ ಒಂದಿಲ್ಲಾ ಒಂದು ವಿಷಯದ ಬಗ್ಗೆ ಬಹಳ ಮುತುವರ್ಜಿಯಿಂದ ಸಲಹೆ ಕೊಡುತ್ತಾನೆ. ಕಿವಿಗೊಟ್ಟು ಕೇಳುತ್ತಾನೆ, ಎಂದೂ ಬೇಸರಿಸಿಲ್ಲ. ತಾನೆಲ್ಲೋ ಒಂದಿಲ್ಲಾ ಒಂದು ಗೊಂದಲದಲ್ಲಿ, ಚಿಂತೆಯಲ್ಲಿ ಮುಳುಗಿದಾಗ ಆತ ಆಪದ್ಬಂಧುವಂತೆ ಚಾಟ್ ನಲ್ಲಿ ಬಂದು ತನಗೆ ಸಮಾಧಾನ ಪಡಿಸಿರುತ್ತಾನೆ....
ಈಗ ಆಗಿದ್ದೂ ಅದೇ. ಮನೆಯಲ್ಲಿ ಗಂಡನಿಗೆ ಹದಿನೈದು ದಿನಗಟ್ಟಲೇ ಭೇದಿಯಾಗಿ ಹುಷಾರಿಲ್ಲದೇ,ಆತ ತನ್ನ ಯಾವುದೊಂದು ಮಾತು ಕೇಳದೇ, ಎಲ್ಲೂ ತೋರಿಸಿಕೊಳ್ಳದೇ ವಿಪರೀತಕ್ಕೀಡಾದಾಗ ತಾನೇ ಕಣ್ಣೀರಿಡುತ್ತಾ ಅಪೋಲೊದಲ್ಲಿ ದೊಡ್ಡ ಸ್ಪೆಶಿಯಾಲಿಸ್ಟ್ ಕಡೆ ತೋರಿಸಿ ಈಗತಾನೆ ತುಸು ಸುಧಾರಿಸಿಕೊಂಡಿದ್ದಾನೆ. ಆಗೆಲ್ಲ ಕಾಡಿದ ಅಸುರಕ್ಷಾ ಭಾವ, ಒಂಟಿತನ, ತಬ್ಬಲಿಯಂತಾಗಿ ಬಿಡುವ ಭಯ, ತನಗೆ ಯಾರೂ ಇಲ್ಲವೆನ್ನುವ ನೋವು ಯಾರಲ್ಲಿ ಹೇಳಿಕೊಳ್ಳುವುದು. ? ಯಾರೂ ಇಲ್ಲವೆನ್ನುವ ನೋವಿನಲ್ಲೇ ನನ್ನ ಆಪದ್ಬಂಧು ರವೀ ಚಾಟ್ ನಲ್ಲಿ ಕಾಣಿಸಿಕೊಂಡಿದ್ದು. ಅವನಲ್ಲಿ ಎಲ್ಲ ಹೇಳಿಕೊಂಡು, ಅಳುತ್ತಳುತ್ತಲೇ ಟೈಪಿಸುತ್ತಿದ್ದೆ. ಎಲ್ಲ ಕೇಳಿದ ರವಿ ಅಂದಿದ್ದು, ಯಾಕೆ ನಾನಿಲ್ಲವಾ? ನಿನ್ನ ಯಾವದೇ ಸಮಯದಲ್ಲೂ ಒಬ್ಬಳೇ ಎಂದು ತಿಳಿಯಬೇಡಾ, ನಾನಿದ್ದೇನೆ, ಒಂದು ಮಿಸ್ಸ್ಡ್ ಕಾಲ್ ಕೊಡು, ನಾನು ಫೋನಾಯಿಸುತ್ತೇನೆ, ಮೈ ಹೂಂ ನಾ, ಯಾವುದೇ ತೊಂದರೆ ಇರಲಿ, ನನ್ನಲ್ಲಿ ಹೇಳು, ಸಂಕೋಚಿಸಿಕೊಳ್ಳದೇ ಯಾವುದೇ ಸಹಾಯವನ್ನಾದರೂ ಕೇಳು ಅನ್ನುವಾಗ ಎದೆ ತುಂಬಿ ಬಂದು ಕಣ್ಣ ಮೂಲಕ ಹರಿದು ಹಗುರವಾಗತೊಡಗಿತು. ಇಷ್ಟು ದಿನದ ದುಗುಡವನ್ನು ಒಂದೇ ಮಾತಿನಿಂದ ಅಳಿಸಿ ಹಾಕಿದ, ನನ್ನೆಲ್ಲಾ ಆತ್ಮವಿಶ್ವಾಸವನ್ನು ಒಂದುಗೂಡಿಸಿ ಧೈರ್ಯ ನೀಡಿದ ರವಿಗೆ ನನ್ನ ಹೃತ್ಪೂರ್ವಕ ನಮನಗಳು. ಮನ ಒಂದೇ ಸಮನೇ ತುಂಬಿ ಬರುತ್ತಿತ್ತು. ಸಧ್ಯ ದೇವರೇ ಅವನನ್ನು ನನ್ನ ಸಮಾಧಾನ ಪಡಿಸಲೊಸುಗ ಕಳಿಸಿರಬಹುದೆಂದು ಕಾಣದ ದೈವಕ್ಕೆ ಮನದಲ್ಲೇ ವಂದಿಸಿದೆ.
ರವಿ ಕೇಳುತ್ತಿದ್ದ, ಮತ್ತೆ ದೆಹಲಿಯೆನೆನ್ನುತ್ತದೆ. ಇಲ್ಲಿ ತುಂಬಾ ಛಳೀ ಇದೆ, ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿದೆ, ಮಂಜಿನ ತೆಳು ಪರದೆ ಹೊದ್ದ ದೆಹಲಿಯಲ್ಲಿ ನನಗಂತೂ ಎಲ್ಲೂ ಹೋಗೊಕ್ಕೆ ಆಗಲ್ಲ ಆದ್ರೂ ಆಫೀಸಿಗೆ ಬರಲೇ ಬೇಕು. ಥೂ ದರಿದ್ರ ಛಳಿ ಅಂದದ್ದಕ್ಕೆ ಆತನ ದೃಷ್ಟಿಕೋನವೇ ವಿಭಿನ್ನವಾಗಿತ್ತು. ಯಾಕೆ ಹಾಗೇಕೆ ತಿಳಿದುಕೋಬೇಕು ? ನಾವಿರುವ ದೇಶವೆಷ್ಟು ಸುಂದರ. ಇಲ್ಲಿ ಎಲ್ಲಾ ಋತುಮಾನಗಳನ್ನು ನಾವು ಕಾಣುತ್ತೇವೆ. ಬೇರೆ ದೇಶಗಳಲ್ಲಿ ಇಲ್ಲದ ವಿಭಿನ್ನ, ವಿವಿಧ ಹವಾಗುಣ ನಮ್ಮದು. ಬೇಸಿಗೆ, ಮಳೆ, ಛಳಿ, ಬೇಸಿಗೆ ಮತ್ತು ಮಳೆ ನಡುವಿನ ಆಷಾಡದ ಭೊರ್ರೋ ಎನ್ನುವ ಗಾಳಿಯಿದೆ, ಮಳೆ ಮತ್ತು ಛಳಿ ನಡುವಿನ ಶರದೃತುವಿದೆ, ಛಳಿ ಮತ್ತು ಬೇಸಿಗೆ ನಡುವಿನ ವಸಂತ ಋತುವಿದೆ. ಥರಗುಡುವ ಛಳಿಯಲ್ಲೂ ಧನುರ್ಮಾಸ, ಮಾಘಸ್ನಾನ ಪುಣ್ಯದಿನಗಳ ಸಂಕ್ರಮಣವಿದೆ ಎಷ್ಟು ಸೊಗಸಾದ ದೇಶ ನಮ್ಮದು. ಇದಕ್ಕಾಗಿ ಖುಶಿ ಪಡಬೇಕು. ಆಷ್ಟೇ ಖುಶೀ ನಾವು ಪಡೆದು ಕೊಂಡ ಮಾನವ ಜನ್ಮಕ್ಕಾಗಿ. ರವೀ ಚಾಟ್ ಬಾಕ್ಸ್ ನಲ್ಲಿ ಟೈಪಿಸುತ್ತಿದ್ದ, ನನಗೆ ಅವ ನನ್ನ ಹತ್ತಿರವೇ ಕುಳಿತು ಮಾತಾನಾಡಿದಂತೆ, ಅವನ ಒಂದೊಂದು ಮಾತೂ ನನ್ನ ಒಂದೊಂದು ನೋವನ್ನು, ಅವಿವೇಕಿತನವನ್ನು ತೊಡೆದು ಹಾಕುವಂತೆ ಭಾಸವಾಗುತ್ತಿತ್ತು. ಈ ಕ್ಷಣ ಉರುಳದಿರಲಿ ಎಂದು ಮನ ಹಾರೈಸುವಂತೆ. ದೇವರು ನನಗೆ ಇಂಥ ಒಬ್ಬ ಗೆಳೆಯನನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಮೌನದಲ್ಲೇ ಅರ್ಪಿಸುತ್ತ....ಮಾತುಗಳನ್ನು ಕೇಳುತ್ತಾ ಕುಳಿತಿದ್ದೆ. ಹೊರಗೆ ಬಾಲ್ಕನಿಯಲ್ಲಿ ಮಳೆಯ ತುಂತುರು ತುಂತುರು ಹನಿ ನಿಂತು ರವಿ ಮೂಡಿ ಹಿತವಾದ ಎಳೆಬಿಸಿಲು ಅರಳುತ್ತಿತ್ತು.....ನೋಡುತ್ತಲೇ ಇದ್ದೆ.
ರವೀ ಇಂದು ಚಾಟ್ ನಲ್ಲಿ ಬರುತ್ತಾನಾ ಅಂತ ಕಾಯುತ್ತಾ..........ಮುಗಿಸುತ್ತಿದ್ದೇನೆ.
No comments:
Post a Comment