ಫೆಬ್ರುವರಿಯಿಂದ ನಾನು ಬರೆಯುವ ಸಾಹಸವನ್ನೇ ಮಾಡಿಲ್ಲ. ಯಾಕೋ ಒಂದು ತರಹದ ನಿರುತ್ಸಾಹ, ಸದಾ ಮಂಕುತನ ಕವಿದಿರುತ್ತದೆ. ಸಹೃದಯಿ ಸ್ನೇಹಿತರು ಬರೆಯಲು ಪ್ರೋತ್ಸಾಹಿಸುತ್ತಾರೆ, ಆದರೂ ಮನಸ್ಸು ಮನಸ್ಸಿನೊಳಗಿಲ್ಲದೇ ಈ ಶಹರಿನಿಂದ, ಈ ಉಸಿರುಕಟ್ಟುವ ಬೇಜಾರಿನಿಂದ ಬಿಡಿಸಿಕೊಳ್ಳುವ ಬಗೆಯನ್ನೇ ಮೆಲಕು ಹಾಕುತ್ತಿರುತ್ತದೆ. ಜೀವನದಲ್ಲಿ ಮಹತ್ತರವಾದ್ದನ್ನು ಕಳೆದುಕೊಂಡ ಅನುಭವ, ನೋವು ಎರಡನ್ನೂ ಏಕಕಾಲದಲ್ಲಿ ಅನುಭವಿಸುತ್ತಾ, ತಾನು ಯಾವಾಗ ಸರಿಹೋಗುತ್ತೇನೆ ಎಂದು ಮಾನಸಿಕ ರೋಗಿಯಂತೆ ನನ್ನನ್ನೇ ನಾನು ಕೇಳಿಕೊಳ್ಳುತ್ತಾ, ಮನೆ- ಆಫೀಸು, ಆಫೀಸು-ಮನೆ, ಬಸ್ಸಿನಲ್ಲಿ ಜಾಗ ಹಿಡಿದು ಉಸ್ಸೆಂದು ಕೂರುವಷ್ಟು ಸುಸ್ತು, ನಿರುತ್ಸಾಹ. ಇಡೀ ದಿನ ಯಾವುದೋ ಒಂದು ರಸ ನಿಮಿಷಕ್ಕಾಗಿ ಕಾದು ಕುಳಿತಂತೆ ಕಳೆದು, ಸಂಜೆ ಮನೆ ತಲುಪಿದೊಡನೆ ಕೈ ಕಾಲು ಮುಖತೊಳೆದು, ದೇವರಿಗೆ ನಮಿಸಿ, ಟೀ ನೋ, ಹಾರ್ಲಿಕ್ಸೋ ಕುಡಿದು, ಸಂಜೆ ಅಡುಗೆಯ ಬಗ್ಗೆ ಯೋಚಿಸಿ, ಅದು ಮುಗಿದ ನಂತರ ಟೆರೇಸಿಗೆ ಹಾರುತ್ತೇನೆ. ಮಾರ್ಚ್ ತಿಂಗಳ ತಂಪೆರೆಯುವ ಗಾಳೀಗೆ ಮೈಯೊಡ್ಡಿ ಕುಳಿತು, ಮುಖ ಮೇಲೆ ಮಾಡಿ ಕುಳಿತು ನಕ್ಷತ್ರಗಳನ್ನೇ ನೋಡುತ್ತಾ , ನನ್ನ ಆಲೋಚನೆಗಳಲ್ಲೇ ಮುಳುಗಿ ಬಿಡುತ್ತೇನೆ. ಯಾಕೀ ಒಂಟಿತನ, ಬೇಸರ ? ಈ ನೀಲಿಯಾಕಾಶ, ನಕ್ಷತ್ರಗಳ ಮಧ್ಯೆ, ಇಲ್ಲೇ ನನ್ನ ಪಕ್ಕದಲ್ಳೇ ಅವನಿದ್ದಾನೋ ಎಂದು ಭ್ರಮಿಸುವ ನನ್ನ ಸೆಳೆತ ಮತ್ತೆ ಅವನ ಕರೆಗಾಗಿ ಇನ್ನೂ ಎರಡು -ಮೂರು ತಾಸು ಕಾಯಬೇಕಲ್ಲವೆಂಬ ಕಾಯುವಿಕೆಯ ಲವಲವಿಕೆ. ಈಗ ಅನಿಸುತ್ತದೆ ನನ್ನೆಲ್ಲಾ ಬೇಸರದ ಹಾಗೂ ಈ ಸಂಜೆಯ ತಂಪಿನ ಲವಲವಿಕೆಯನ್ನು ತುಂಬಿಕೊಟ್ಟವನಿಗೆ ನೆನಪಿನ ನಮನಗಳು. ಹೀಗೆ ಬೇಸರ ಭಾರವೆನಿಸುವಲ್ಲಿ ನೀ ಮತ್ತೆ ಮತ್ತೆ ನನ್ನನ್ನು ಹಗುರಾಗಿಸಿ, ಹಸಿಯಾಗಿಸುತ್ತಿರು ದೇವ’ಎಂದು.
ನಾಳೆ ಮತ್ತೆ ಬರೆಯುವೆ, ಈ ಬೇಸರ ಹಾಗೂ ಸೋಮಾರಿತನ ಕಾಡದಿರಲಿ ದೇವರೇ...
No comments:
Post a Comment