Friday, April 11, 2008

ಕನಸು ಮತ್ತು ಹಳವಂಡಗಳ ನಡುವೆ....

ಕುಡಿಗಣ್ಣಿನಲ್ಲಿ ಕದ್ದು ಕದ್ದು ನೋಡುತ್ತ, ಒಳ್ಗೊಳಗೇ ಮುಸಿಮುಸಿ ನಗುವ ಅವಳು, ಮತ್ತೆ ಮತ್ತೆ ಏನನ್ನೋ ನೆನೆದು ಮೀಸೆಯಡಿಯಲ್ಲಿ ಗೆರೆಯಾಗಿ ಮೂಡುವ ನಗುವನ್ನು ತುಟಿ ಬಿಗಿದು ಅಡಗಿಸಲು ಪ್ರಯತ್ನಿಸುವ ಅವನೂ ಅವರಿಬ್ಬರ ಮಧ್ಯೆ ಸುಮ್ಮನೇ ಕುಳಿತ ತುಂಟ ಮೌನ ಬಹಳ ಹೊತ್ತಿನಿಂದ ಕಾಯುತ್ತಿತ್ತು. ಹಾಗೇ ಅವರಿಬ್ಬರನ್ನು ವರ ತುಂಟತನವನ್ನೂ ನೋಡುವುದೆಂದರೆ ತುಂಬಾ ಮಜಾ.ಎಲ್ಲವನ್ನೂ ನೋಡುತ್ತ ಕೊನೆಗೆ ತಾನೇ ಸೋತವಳಂತೆ ಅವನೆದುರು ಬಂದು ಕೂತಳು. ಹಠ ಹಿಡಿದವಳಂತೆ ಅವನನ್ನು ತನ್ನೆಡೆಗೆ ಜಗ್ಗಿಸಿಕೊಂಡು ಕೇಳಿದಳು,

’ಈಗಲಾದರೂ ಹೇಳು, ನಿನಗಾಗಿ ನಾನೇನು ಮಾಡೊಲ್ಲ.? ಎಲ್ಲಾನ್ನೂ ಮಾಡೊಕ್ಕೆ ರೇಡಿ ಕಣೋ. ನೀ ಒಂದ್ಸಲ ನನ್ನ ಇಲ್ಲಿಂದ ಕರಕ್ಕೊಂಡಾದ್ರೂ ಹೋಗು ನೋಡಣ" ಸಾಧ್ಯವಾ?

ಅವ ಬೆಳಗಿನ ಸೂರ್ಯನ ಕೆಂಪಿನಲ್ಲಿ ಮುಳುಗಿದ್ದ. ಕಾಫೀ ಕಪ್ಪಿನಾಚೆ ಅವಳು ಇನ್ನೂ ನಿನ್ನೆಯ ಸಿಹಿಗನಸಿನ ಹಿತದಿಂದ ಹೊರ ಬಂದಿರಲಿಲ್ಲ. ಹೊರಗೆ ಮರದ ಕೊಂಬೆ ಕೊಂಬೆ ಮೇಲೆ ಎಲೆ-ಚಿಗುರು ಇಬ್ಬನಿ ಹೊದ್ದು ಮಲಗಿದ್ದವು. ಅವನ ಕಣ್ಣಲ್ಲಿನ ಆಕಾಶದ ಹರವಿನಲ್ಲಿ ತನ್ನ ಬಿಂಬವನ್ನು ಹುಡುಕುತ್ತಾ, ನಿನ್ನೊಂದಿಗೆ ಬೆಟ್ಟ ಕಾಡು ಸುತ್ತಬೇಕೆಂಬ ಆಸೆ. ಸುತ್ತಿಸ್ತೀಯಾ? ನಾನು ಈ ಜನ್ಮದಲ್ಲೇ ಕಾಡು ಕಂಡಿಲ್ಲ. ದೂರದಿಂದ ನೋಡಿದ್ದೇನೆ ಹತ್ತಿರದಿಂದಾ ಇಲ್ಲ. ಅವನು ಜೊತೆಗಿದ್ದರೇ ಹೀಗೆ ಕನಸುಗಳೇ ಕನಸುಗಳು. ಬಿಟ್ಟಿ ಕನಸುಗಳಿಗೇನು ಹಂಗಿದೆಯಾ?

ನಾನು ಹತ್ತಿರವಿಲ್ಲವಾ? ನನಗಿಂತಾ ಕಾಡು ಇಷ್ಟವಾ. ಉತ್ತರ ಅವಳಲ್ಲಿರಲಿಲ್ಲ. ತುಂಟ ನಗು. ಆ ನಗುವಿನ ಅರ್ಥ ಅವನಿಗೆ ಮಾತ್ರ ಅರ್ಥವಾಗೋದು.

ಕಾಡಲ್ಲೇನಿದೇ ಮಜಾ. ಎಲ್ಲಾದ್ರೂ ಸಮುದ್ರವಿರೋ ಜಾಗಕ್ಕೆ ಹೋಗೋಣ.ಚೆಂದದ ಊರಿಗೆ ಹೋಗೋಣ. ಬ್ಯಾಂಕಾಕ್ ಹೋಗೋಣ್ವಾ? ಈ ಜನ್ಮದಲ್ಲಿ ಒಮ್ಮೆಯಾದರೂ ಹೋಗೋಣ ಜತೆಯಾಗಿ. ಪಾಸ್ಪೋರ್ಟ್ ಎಲ್ಲ ರೆಡಿಮಾಡ್ಕೋಬೇಕು. ಏಯ್, ನೆನಪಿಸ್ತಾ ಇರು ನಂಗೆ. ಇಬ್ಬರ ನಡುವೆ ಇಂಥ ಎಷ್ಟೋ ಕನಸುಗಳು ರಂಗೋಲಿ ಇಟ್ಟಿವೆ.

ನೀನು ಸಮುದ್ರದ ತೆರೆಯಂತೆ ಕಣೋ, ಜೋರಾಗಿ ಭೋರ್ಗೆರೆದು, ದಡಕ್ಕೆ ಅಪ್ಪಳಿಸಿ, ಉರುಳಿಸಿ,ಬೀಳಿಸಿ ಕೊನೆಗೆ ಇಲ್ಲದಂತಾಗುವ ನೊರೆಯಾಗಿ ಬಿಡುತ್ತೇನೆ ನಾನು.

ಥೂ ಕಂತ್ರೀ....ಅವನು ಹಾಗೆನ್ನುವಾಗೆಲ್ಲ ತನ್ನೊಳಗೆ ಚಿಟ್ಟೆಯೊಂದು ಪಟ ಪಟ ಪಕ್ಕ ಬಡಿದು ಹಾರಿದಂತ ಪುಳಕ. ಹಾಗನ್ನುವ ಅವ ತುಂಬಾ ಇಷ್ಟವಾಗ್ತಾನೆ.

2. ನಿಂಗೆ ಗೊತ್ತಾ? ಹೀಗೆ ಚಿಕ್ಕವಳಿದ್ದಾಗ ಚಿಕ್ಕಮ್ಮ ಚಿಕ್ಕಪ್ಪನ ಊರಿಗೆ ಹೋದಾಗ ಅಲ್ಲೇ ಹತ್ತಿರದ ಹಟ್ಟಿಹೊಳೆ ಜಾತ್ರೆಗೆ ಹೋಗಿದ್ದೆ. ಹೊಳೆಯಲ್ಲಿ ಈಜುವ, ಈಜು ಬಾರದಿದ್ದರೂ ಆಷ್ಟೇನೂ ಆಳವಿಲ್ಲದ ಕನ್ನಡಿಯಂತೆ ಹೊಳೆಯುವ ನೀರನ್ನು ತುಂಬಿಕೊಂಡ ಹೊಳೆಯಲ್ಲಿ ಬಿದ್ದು ಬಿದ್ದು ಹೊರಳಾಡಿ ನಲಿಯುವ ಮಕ್ಕಳು, ಅವರನ್ನು ಕೂಗಿ ಕರೆದು ಊಟ ತಿಂಡಿ ಕೊಡುವ ಅಮ್ಮಂದಿರು. ಊರಜನ ತಮ್ಮ ತಮ್ಮ ಚಕ್ಕಡಿಗಾಡಿಗಳನ್ನು ಕಟ್ಟಿಕೊಂಡು ಜಾತ್ರೆಗೆ ಬರುತ್ತಲೇ ಇದ್ದರು. ಅಲ್ಲಲ್ಲಿ ಬೆಂಡು-ಬತ್ತಾಸ, ಚುರುಮರೀ ಸೇವು, ಮೆಣಸಿನಕಾಯಿ ಬೋಂಡಾ ಮಾರೋರು, ಆಟಿಗೆ ಸಾಮಾನು, ಬಳೆ, ಪೀಪಿ, ಬಲೂನು ಮಾರುವವರು, ದೊಂಬ್ರಾಟ, ಮಂಗನಾಟ ತೋರಿಸುವವರು ಹೀಗೆ ಗೌಜೋ ಗೌಜಿ. ಗೊತ್ತಾ ನಿನಗೆ ನಾನು ಆ ಜಾತ್ರೆಯಲ್ಲಿ ಸತ್ತೇ ಹೋಗ್ತಿದ್ದೆ. ಹೊಳೆ ಮುಂದೆ ಹರಿಯುತ್ತಾ ಹರಿಯುತ್ತ ಅಲ್ಲೇ ಹತ್ತಿರದ ಘಟಪ್ರಭೆಯಲ್ಲಿ ಒಂದಾಗುವ ಸಂಗಮವಿದೆಯಲ್ಲ, ಅಲ್ಲೇ ಒಂದು ದೊಡ್ಡ ಸುಳಿ. ನಾನು ಕುಡಿಯಲಿಕ್ಕೇ ನೀರು ಹಿಡಿಯಲು ಹೋಗುವುದಕ್ಕೂ ನೀರಿನ ತಂಬಿಗೆ ನೀರಿನ ರಭಸಕ್ಕೆ ಕೈಯಿಂದ ಕೊಸರಿಕೊಂಡು ಸುಳಿಗೆ ಬಿದ್ದೇ ಬಿಟ್ಟಿತು. ನಾನು ಅದನ್ನು ಇಳಿದು ಎತ್ತಿಕೊಳ್ಳುವವಳಂತೆ ಕಾಲು ನೀರಲ್ಲಿ ಇಳಿಬಿಡುತ್ತಿದ್ದೆ......ಅಷ್ಟರಲ್ಲಿ ಅಗಸರವಳು "ಆ ಹುಡುಗಿನ್ನ ಎಳೀರೋ ...ಸುಳಿ ಐತಿ ಎಂತ ಕಿರುಚಿ’ ನನ್ನ ಬದುಕಿಸಿದ್ದಳು. ಈಗ ನೆನೆಸಿಕೊಂಡರೆ ಅಬ್ಬಾ ಬೆವರು ಕಿತ್ತು ಬರುತ್ತೆ ಭಯದಲ್ಲಿ. ಅವಳು ಹೊಳೆಯ ಗುಂಗಿನಲ್ಲಿ, ಅವನು ಹೊಳೆಯ ಆಳದ ಗುಂಗಿನಲ್ಲಿ ಮೈ ಮರೆತಿದ್ದ.

ಅವಳ ಮುಂಗುರುಳಲ್ಲಿ ಸಂಜೆ ಇಳಿಯುತ್ತಿತ್ತು, ಕೆನ್ನೆಗೆ ಬಂಗಾರ ವರ್ಣದ ಹೊಳಪು, ಇದ್ದಕ್ಕಿದ್ದಂತೆ ಅವಳನ್ನು ವಿಸ್ಕಿಯದೇ ಒಂದು ಹೊಳೆಯಲ್ಲಿ ಅದ್ದಿ ಅದ್ದಿ ತೆಗೆಯಬೇಕು, ಇಂಚು ಇಂಚಾಗಿ ಹೀರಬೇಕೆನ್ನುವ ತುಂಟ ಆಸೆ. ಮತ್ತೆ ಹೊಳೆ ನೆನಪು. ನಮ್ಮೂರಲ್ಲೂ ಹಟ್ಟಿಹೊಳೆಯಿದೆ.

ಗೊತ್ತು.........

ಏನು ಹೊಳೆ ಸೆಳವು ಅಂತೀ, ಏನು ವೈಯ್ಯಾರ, ಏನು ಚೆಲುವು, ಬರೀ ಮೋಹವುಕ್ಕಿಸುವ ಮಾಯದಾಟ. ಎಂಥಾ ಮಜಾ ಅಂತೀ, ನನಗೇನೂ ಅರಿವಿಗೆ ತಾಕಲೇ ಇಲ್ಲ, ಹೊಳೆಯಾಳ ಹೆಚ್ಚಿರಬಹುದು ಅಥವಾ ನನ್ನ ಈಜಿನ ಶಕ್ತಿ, ಸಾಮರ್ಥ್ಯ ಕಡಿಮೆಯಾಗಿರಬಹುದು. ಅವಳ ಮುಸಿ ಮುಸಿ ನಗು ಕೆನ್ನೆಯಲ್ಲಿ ಗುಳಿ ಬೀಳಿಸಿ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಚೂಪುನೋಟ ಅವನನ್ನು ಕೆಣಕುತ್ತಿತ್ತು.ನಾ ಚಿಕ್ಕವಳಿರೋವಾಗ ಕಂಡ ಹೊಳೆಯಲ್ಲೀಗ ನೀರು ಕಡಿಮೆಯಾಗಿರಬುಹುದು. ಅಲ್ಲವಾ?

ಆಗಿರಲಿಕ್ಕಿಲ್ಲ, ಆಗುವುದುಲ್ಲ....ಆಗಲಿಕ್ಕೆ ಸಾಧ್ಯವೇ ಇಲ್ಲ. ನಾನಿರೋವರೆಗೂ ....

ಥೂ ಕಂತ್ರಿ........ಅವಳು ಹೊಟ್ಟೆ ಹಿಡಿದು ನಗತೊಡಗಿದಳು..ಮರಿ ಹಕ್ಕಿಯಂತೆ ಅವನೆದೆ ಗೂಡಲ್ಲಿ ಮುಖ ಮುಚ್ಚಿಕೊಂಡು.

3. ಅವನನ್ನು ಕರೆದುಕೊಂಡು ನೆಕ್ಕುಂದಿಗೆ ಹೋಗಬಾರದಿತ್ತೇನೋ. ನಾವಿಬ್ಬರೂ ಬೈಕ್ನಲ್ಲಿ ಬರೋದನ್ನ ತಂಗಿ ಮೈದುನ ದಯಾನಂದ ನೋಡಿಬಿಟ್ಟಿದ್ದ. ಆತ ಬಸ್ಸಿಗಾಗಿ ಕಾಯುತ್ತಿದ್ದ, ನಮ್ಮ ಬೈಕ್ ಅವನ ಮುಂದೆಯೇ ದಾಟಿಕೊಂಡು ಹೋಯಿತು. ಏನಂದುಕೊಳ್ಳುತ್ತಾನೋ. ಯಾಕೋ ಭಯವೇ ಅನಿಸಲಿಲ್ಲ. ಅದೇ ಮಹಂತ ಚೆನ್ನಾಗಿ ಬೈದು ಈ-ಮೇಲಿಸಿದ. ನೀನು ಹೇಗಾಗಿಬಿಟ್ಟಿದ್ದಿ ಗೊತ್ತಾ? ಇಷ್ಟೊಂದು self centered ಆಗಬೇಡಾ. ಬರೀ ಅವನೊಬ್ಬನೇಯಾ ಬದುಕೆಂದರೆ ? ನಿನ್ನ ಸುತ್ತಲೂ ಗೋಡೆ ಕಟ್ಟಿಕೊಳ್ಳುತ್ತಿದ್ದಿ. ಕೊನೆಗೆ ಯಾರೂ ನಿನ್ನವರೆನ್ನುವರಿರುವುದಿಲ್ಲ. ಸ್ವಲ್ಪ ಆಚೆ ಈಚೆ ಕಣ್ಣಾಡಿಸಿ ನೋಡು. ಬದುಕು ಬಳುವಳಿಯಾಗಿ ನೀಡಿದ ಒಳ್ಳೆ ಸ್ನೇಹಿತರಿದ್ದಾರೆ, ಎಲ್ಲರಲ್ಲೂ ಸ್ನೇಹದಿಂದ ಬೆರೆಯುವ ನಿನ್ನ ಒಂದು image ಮತ್ತು identity ಇದೆಯಲ್ಲ, ಅದನ್ನು ಕಳೆದುಕೊಳ್ಳ್ತಾ ಇದ್ದೀಯ.ಸ್ನೇಹ ಸಂಬಂಧವಿದೆಯಲ್ಲ ಅದುಅಮೂಲ್ಯವಾದುದು.ಎಷ್ಟೋ ಸಂಕಟದಲ್ಲಿ ಸಹಾಯಮಾಡಿದವರಿರಬಹುದು. ಅವರನ್ನೂ ಆಗಾಗ ನೆನೆ. ಬರೀ ಅವನೇಯಾ ನಿನಗೆ? ಒಂದು ಫೋನ್ ಇಲ್ಲ, ಈಮೇಲಿಲ್ಲ. ನಾನು ಭೇಟ್ಟಿಯಾಗಲಿ ಬಿಡಲಿ, ನೀನು ಹೇಳಬಹುದಿತ್ತಲ್ಲ ನಿನ್ನ ಬರುವಿಕೆಯ ಬಗ್ಗೆ. ಮಹಂತ ಹೇಳಿದುದರಲ್ಲಿ ಯಾವುದೂ ತಪ್ಪಿಲ್ಲ. ನನ್ಗೇನೂ ಬೇಜಾರಿಲ್ಲ. ಒಬ್ಬರು ಇನ್ನೊಬ್ಬರನ್ನು ಹೀಗೆ ಅರ್ಥ ಮಾಡಿಕೋ ಬೇಕು ಅಂತೇನಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು. ನನ್ಗೇನೋ ಹಾಗೆ ಕಾಣ್ತಿಲ್ಲ.

4. ಎರಡು ದಶಕಗಳ ಮೇಲೇ ಬದುಕು ಸವೆದು ಹೋಯಿತು. ಹೊಸ ಉಲ್ಲಾಸ ಮೂಡಿಸಿದ್ದು, ವಸಂತಾಗಮನವಾದುದ್ದು ಅವನಿಂದಲೆ ಅಲ್ಲವೇ ? ಕೆಲವರಿಗೆ ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಲಿಕ್ಕಾಗುವುದಿಲ್ಲ. ಇನ್ನು ಅವ್ವನಿಗೇನು ಗೊತ್ತು, ಅವಳು ಹೇಗೆ ಬದುಕಿ ಬಾಳಿದಳೆಂದು, ಹೇಗೆ ಕಣ್ಣಿರು ನುಂಗಿ, ತಮಗೆಲ್ಲ ಚೆನ್ನಾಗಿದ್ದೇನೆಂದು ತೋರಿಸುತ್ತಲೇ ಹೋದಳೆಂದು. ಅಂಗೈಯಲ್ಲಿಟ್ಟು ಬೆಳೆಸಿ ತನ್ನ ಕರಳು ಬಳ್ಳಿ ಬಳ್ಳಿಯೆಂದು ತನ್ನನ್ನು ಬಲಿಪಶುಮಾಡಿದವಳು ಅವಳೇ ಅಲ್ಲವೇ ? ಯೋಚಿಸಿದರೆ ತಲೆ ಸಿಡಿದು ಹೋದಂತಾಗುತ್ತದೆ.

5. ಹೀಗೆ ಬರುವ ಹೋಗುವ ನಡುವೆ ಬದುಕು ಸಾಗುತ್ತಿರಲಿ ಬಿಡು. ಈ ಜೀವನವೂ ಅಮೂಲ್ಯವಾದುದು. ಮತ್ತೆ ಮತ್ತೆ ಪಡೆಯುವುದಿಲ್ಲ ನಾವು. ಬದುಕಿದರೆ ಇನ್ನೆಂದೂ ಬದುಕಿಯೇ ಇರಲಿಲ್ಲವೆನ್ನುವಂತೆ ಬದುಕಬೇಕು. ಹೃದಯದ ಮಾತು ಕೇಳಿ, ಜನರ ಅಭಿಪ್ರಾಯವಲ್ಲ. ನಮ್ಮನ್ನು ನಾವು ವಂಚಿಸಿಕೊಳ್ಳುವುದಿದೆಯಲ್ಲ ಅದರಂಥ ಅಪರಾಧ ಯಾವುದೂ ಇಲ್ಲ.

6. ಅತ್ತೆ ಅನ್ನುತ್ತಿದ್ದರು, ನಿನಗೂ ಬರುವ ಹಠವಿತ್ತಲ್ಲ, ನಮಗೂ ನೋಡುವಾಸೆ. ಜೀವನದಲ್ಲಿ ಮನುಷ್ಯನಿಗೆ ಹಠವಿದ್ದರೆ ಎನೂ ಮಾಡಬಹುದು. ಆಕೆ ದಾರ್ಶನಿಕರಂತೆ ನುಡಿದಿದ್ದರು. ಎಷ್ಟು ಸತ್ಯ. ನನಗೂ ಒಂದು ಪುಟ್ಟ ಕನಸಿತ್ತು. ನನ್ನದಲ್ಲದ ನಿನ್ನ ಅಂಗಳದಲ್ಲೊಂದು ಚುಕ್ಕೆ ಇಟ್ಟು ರಂಗೋಲಿ ಇಡುವ ಆಸೆ. ನಿನ್ನ ಎದೆಯಲ್ಲೊಂದು ಹಣತೆ ಹಚ್ಚಿ ದೀಪವಿಡುವ ಆಸೆ. ನನ್ನ ಕಾಲಡಿಯ ನೆಲವೂ ನನ್ನದಾಗಿರಲಿಲ್ಲ. ನನ್ನವನಲ್ಲದ ನಿನ್ನನ್ನೂ, ನನ್ನವನನ್ನಾಗಿಸಿದ ಕನಸನ್ನೂ ಈ ಕಣ್ಣೊಳಗೆ ಹೊತ್ತಿಸಿಕೊಂಡು ಬದುಕುವ ಕನಸು ಇನ್ನೂ ಚೆನ್ನ.

ಕನಸಿನೊಳಗೊಂದು ಕನಸು, ಮನಸಿನೊಳಗೊಂದು ಪಿಸುನುಡಿಯಾಗಿ, ನಿಟ್ಟುಸಿರಾಗಿ, ಹಂಬಲಿಕೆಯಾಗಿ, ನೀನೆ ಇರುತ್ತಿ ಸದಾ ನನ್ನದೇ ನೆರಳಿನಲಿ.

ನಿನ್ನವಳೇ

ಚಿನ್ನು




No comments: