ಇವತ್ತು ತಂಗಿ ಹೇಳುತ್ತಿದ್ದಳು. ನಿನ್ನೆ ಮನೆಗೆ ಅನು ಹುಟ್ಟಿದ ಹಬ್ಬಕ್ಕೆ ಹೇಳಿ ಕಳಿಸಿದವರಂತೆ ಪುಟ್ಟಿ, ಉಷಿ, ಅವಳ ಗೆಳತಿಯರು ಎಲ್ಲ ಬಂದಿದ್ದರಂತೆ. ನಾನು ದೂರದ ದೆಹಲಿಯಲ್ಲಿ ಕುಳಿತು, ಎಷ್ಟೋ ವರ್ಷಗಳಾದವು, ಯುಗಗಳೇ ಕಳೆದು ಹೋದಂತಿವೆ. ನಾನೆಂಥ ಪಾಪಿಗೇಡಿ ಅಂದುಕೊಂಡೆ. ನನಗೆ ಒಮ್ಮೆಯೂ ನನ್ನ ಬಾಲ್ಯದ ಗೆಳತಿಯರು ಸಿಗುವುದಿಲ್ಲ. ಹಾಗೇ ನನ್ನ ಬಾಲ್ಯದ ಒಡನಾಡಿ ಪುಟ್ಟಿ ನೆನಪಾದಳು. ಧಾರವಾಡದಲ್ಲಿ ಮಳೆಯಾಗಿ, ನೆಲವೆಲ್ಲ ಅರಳಿ, ಹಸಿರು ಹಚ್ಚಗೇ ಕೊನರುವುದೇ ತಡ, ನಾವು ಮಕ್ಕಳು ಮನೆ ಅಂಗಳದಲ್ಲಿ ಮಣ್ಣು ಕೆದರಿ ಗುಬ್ಬಿ ಗೂಡು ಕಟ್ಟಲು ತೊಡಗುತ್ತಿದ್ದೇವು. ಮುಂಗೈಯನ್ನು ಡುಬರಿಯಾಕಾರ ವಾಗಿಸಿ ಇಟ್ಟು, ಮೇಲೆ ಮೆದುವಾದ ಮಣ್ನನ್ನು ಹಾಕಿ ಒತ್ತುತ್ತಾ, ಪಿರಮಿಡ್ಡಿನಾಕಾರ ಕೊಟ್ಟು ನಂತರ ಸಾವಕಾಶವಾಗಿ ಕೈ ತೆಗೆದರೆ ಸಾಕು, ಹಾರಿ ಕುಣಿಯುವಂತೆ ಚೆಂದದ ಗುಬ್ಬಿ ಗೂಡು ಎದ್ದು ನಿಲ್ಲುತ್ತಿತ್ತು. ಅದಕ್ಕೆ ಸುತ್ತ ಮುತ್ತ ಕಾಲುದಾರಿ, ಗೇಟು, ಇತ್ಯಾದಿಯಾಗಿ ತರ ತರದ ಅಂದಚೆಂದ ಮಾಡಿ, ನನ್ನ ಗೂಡು ನೋಡ್ಲೇ, ನಿನ್ನ ಗೂಡು ಹ್ಯಾಂಗಿದೆ? ಅಂತಾ ಆಡುತ್ತಿದ್ದುದು ನೆನ್ಪಾಯಿತು.
ಪುಟ್ಟಿ ನಮ್ಮ ಎದುರು ಮನೆ ಇಂದಿರಾ ಕಾಕುನ ಎರಡನೇ ಮಗಳು. ನನಗೆ ಸದಾ ಅವರ ಮನೆಯಲ್ಲೇ ವಾಸ. ತಿಂಡಿತಿಂದು ಪುಟಕ್ ಅಂತಾ ಅವರ ಮನೆಗೆ ಹಾರುತ್ತಿದ್ದೆ. ಪುಟ್ಟಿ ತಂದೆ, ನನ್ನ ಮೆಚ್ಚಿನ ಕಾಕಾ. ಅವರು ನಮಗೆ ಹೇಲುತ್ತಿದ್ದ ಕಥೆಗಳು ಈಗಲೂ ನೆನಪಿವೆ. ಅಲೀ ಬಾಬಾ ಚಾಲೀಸ್ ಚೋರ್ ಕತೆ ಆಗಲೇ ನಾನು ಕೇಳಿದ್ದು. ಬೇಸರವಿಲ್ಲದೇ ಕಥೆ ಹೇಳುತ್ತಿದ್ದರು. ನನ್ನ ಅಪ್ಪನೂ ಕಥೆ ಹೇಳುತ್ತಿದ್ದರು. ಮಂಗ ಮತ್ತು ಸಿಂಪಿಗನ ಕಥೆ, ಹುಲಿ ಮತ್ತು ಮಂಗಮ್ಮನ ಕಥೆ, ಮಂಗ ಮತ್ತು ಮೊಸಳೆ ಕತೆ, ಒಂದೇ ಎರಡೇ ಕೇಳಿದ ಕಥೆಗಳು ಇನ್ನೂ ನೆನಪಿನಾಳದಲ್ಲಿ ಸುಮಧುರ ನೆನಪನ್ನು ಹೆಣೆದಿವೆ. ಕತೆ ಹೇಳಿ ಮಲಗಿಸುವ ಅಪ್ಪ ನೆನಪಾದರೇ ಯಾಕೆ ಬಾಲ್ಯಕ್ಕಿರುವ ನಿಶ್ಚಿಂತ ಬದುಕಿನ ಪ್ರೀತಿ, ಚೆಲುವು, ಚೈತನ್ಯ ಮುಂದೆ ಬೆಳೆದು ದೊಡ್ಡವರಾದಂತೆ ಕ್ಷೀಣವಾಗುತ್ತದೆ. ಚಿಂತೆ -ಜಂಜಾಟಗಳು ಬದುಕಿನ ಮೂಲ ಉಪದ್ರಗಳಾಗುತ್ತವೆ ಎನಿಸುತ್ತಿದೆ. ಪುಟ್ಟಿ, ಉಷಿಯರನ್ನು ನೋಡದೇ ಎರ್ಡು ದಶಕಗಳೇ ಕಳೆದುವು. ಯಾವಾಗ ನೋಡ್ತೇನೋ ಗೊತ್ತಿಲ್ಲ. ಅವರೂ ತಮ್ಮ ತಮ್ಮ ಬದುಕಿನಲ್ಲಿ ಮರೆತುಹೋಗಿರಬಹುದು. ಮರೆತಿಲ್ಲವಾದರೂ ಮರೆಸುವಂಥ ಬದುಕಿನ ತಲ್ಲಣಗಳಿಗೇನು ಕಡಿಮೆಯೇ ? ಮಕ್ಕಳು ಮರೀ, ಸಂಸಾರದ ಹತ್ತು ಹಲವು ಸಮಸ್ಯೆಗಳು. ಇಷ್ಟೆಲ್ಲ ಆದರೂ ಈಗ ಮಾತ್ರ ನಾನು ಜೀವನದಲ್ಲಿ ಏನೋ ಅಮೂಲ್ಯವಾದುದನ್ನು, ಆಪ್ತವಾದುದನ್ನು, ಪಂಚಪ್ರಾಣವಾದುದನ್ನು ಏನೋ ನನ್ನ ಊರಿನಲ್ಲಿ ಬಿಟ್ಟು ಬಂದಿದ್ದೇನೆ. ನನ್ನದಾದುದನ್ನು, ನನ್ನದೆನ್ನುವ ಎಲ್ಲವನ್ನೂ ಬಿಟ್ಟು ಪರದೇಸಿಯಾಗಿದ್ದೇನೆ, ಏಕಾಂಗಿಯಾಗಿದ್ದೇನೆ ಎನಿಸತೊಡಗಿ ಕಳೆದುಕೊಂಡ ದುಃಖ ಒತ್ತತೊಡಗಿತು.
ಕಾಕಾನ ತೊಡೆಯೇರಿ ಕುಳಿತು ಬಾಚಣಿಗೆಯಿಂದ ಅವನ ಕೂದಲು ಬಾಚಿದ್ದೇ ಬಾಚಿದ್ದು. ಕಾಕಾನಿಗೆ ಬಾಚುವುದೆಂದರೇ ಏನೋ ಖುಶಿ. ಒಂದು ದಿನವೂ ಕಾಕಾ ಬೇಸರಿಸಿ ಬೈದಿದ್ದಿಲ್ಲ. ಈಗ ಅದೇ ಕಾಕಾ ಮಾತಾಡುವುದಿಲ್ಲ. ಹಾಗೆಂದುಕೊಳ್ಳಲೂ ಮನಸ್ಸಿಗೆ ನೋವಾಗುತ್ತದೆ. ವಯಸ್ಸಾಗಿ ಹೋಗಿ, ಪಿರಿ ಪಿರಿ ಸ್ವಭಾವವಾಗಿಬಿಟ್ಟಿದೆ. ಕಾಕೂ ತೀರಿಹೋಗಿ ನಾಲಕೈದು ವರ್ಷಗಳೇ ಆದುವು. ಇಡೀ ಮನೆತುಂಬ ಓಡಾಡುತ್ತಿದ್ದುದು, ದತ್ತಾತ್ರಯ ಗುಡಿ ಹತ್ತಿರ ಹೋಗಿ ಹೂವು ಕೊಂಡು ಬರುತ್ತಿದ್ದುದು, ಅಟ್ತ ಹತ್ತಿ ಇಳಿದು ಬೈಸಿಕೊಳ್ಳುವುದು, ಮಣ್ಣಲ್ಲಿ ಗೂಡು ಕಟ್ಟಿ ಆಡುವುದು, ಜಗಳಾಡಿಕೊಂಡು ಒಬ್ಬರ ತಲೆಮೇಲೆ ಇನ್ನೊಬ್ಬರು ,ಮಣ್ಣು ಸುರಿದು, ಅವ್ವಂದಿರ ಕೈಲಿ ಬೈಸಿಕೊಂಡು, ಕೊನೆಗೆ ಅವರೂ ಜಗಳಾಡಿಕೊಳ್ಳುವುದು. ನಾಗರ ಪಂಚಮಿಗೆ ಮನೆ ಮನೆಯಲ್ಲಿ ಕಟ್ಟಿದ ಜೋಕಾಲಿ ತೂಗಿ ತೂಗಿ ಆಡಿ, ತಿಂಗಳುಗಟ್ಟಲೇ ಜೋಕಾಲಿ ಬಿಚ್ಚದೇ ಹಾಗೇ ಆಡಿಕೊಂಡಿರುವುದು. ಎಲ್ಲ ನೆನಪಾಗುತ್ತದೆ.
ಇನ್ನೊಮ್ಮೆ ಊರಿಗೆ ಹೋದರೆ ಎಲ್ಲರನ್ನೂ ಕಂಡು ಭೆಟ್ಟಿಯಾಗಿ ಬರಬೇಕು........
2 comments:
neevoo nenapina santege vyaparakke baruvavare endaytu........! santosha.....
baraha muddagide.....
dhanyavadagalu nanna barahakke pratikriyisiddakke.....
-praveen banagi
ಧನ್ಯವಾದಗಳು ಪ್ರವೀಣ್ ಅವರೇ. ಓದಿ ಪ್ರತಿಕ್ರಿಯಿಸಿದ್ದಕ್ಕೆ.
Post a Comment