Wednesday, April 30, 2008

ವಚನ

ಹರಿವ ನದಿಗೆ ಮೈಯೆಲ್ಲ ಕಾಲು
ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಬೀಸುವ ಗಾಳಿಗೆ ಮೈಯೆಲ್ಲ ಕೈ
ಇದು ಕಾರಣ ಗುಹೇಶ್ವರ
ನಿಮ್ಮ ಶರಣಂಗೆ ಸರ್ವಾಂಗವೆಲ್ಲ ಲಿಂಗಮಯ


ಹರಿಯುವ ಹೊಳೆಗೆ ಮೈಯೆಲ್ಲ ಕಾಲೇ ಆಗಿರುವಂತೆ, ಉರಿವ ಬೆಂಕಿಗೆ ಮೈಯೆಲ್ಲ ಬಾಯೇ ಆಗಿರುವಂತೆ, ಬೀಸುವ ಗಾಳಿಗೆ ಮೈಯೆಲ್ಲ ಕೈಯೇ ಆಗಿರುವಂತೆ ನಿಜವಾದ ಶರಣ, ಲಿಂಗದೊಡನೆ, ಇಡೀ ಸೃಷ್ಟಿಯೊಡನೆ ಒಂದಾದವನಾದ್ದರಿಂದ ಅವನ ಸರ್ವಾಂಗವೂ ಲಿಂಗವೇ. ಅವನು ಬೇರೆಯಲ್ಲ, ಲಿಂಗ ಬೇರೆಯಲ್ಲ.
ಎರಡಿಲ್ಲದ ಐಕ್ಯದ ಸ್ಥಿತಿಯನ್ನು ಅಲ್ಲಮನ ಈ ವಚನ ವಿವರಿಸುತ್ತದೆ. ( ಕೆಂಡಸಂಪಿಗೆಯಿಂದ)

ಬಿಂದಿಯಾ -೨

ದಿನವೂ ಹೊಸತು, ಪ್ರತಿದಿನ ಉದಯಿಸುವ ಸೂರ್ಯ ಹೊಸತು, ಚಂದ್ರನ ಬೆಳಕು ಹೊಸತು, ದಿನವೂ ಅರಳುವ ಹೂವು ಹೊಸತು, ಮಿನುಗುವ ಚುಕ್ಕಿ , ಕೋಗಿಲೆ ಹಾಡಿನ ಜಾಡು, ನಾವು ಆಡುವ ಮಾತು ಹೊಸತಾಗಿಯೇ ಇರುತ್ತದೆ. ಹಳತಾಗಿರುವುದಿಲ್ಲ. ಹಾಗೆ ನೋಡಿದರೆ ಹಳತಾವುದೂ ಇಲ್ಲವೇ ಇಲ್ಲ. ದಿನವೂ ಚುಮು ಚುಮು ಮುಂಜಾನೆ ಸುಪ್ರಭಾತದ ಮೊದಲ ಕಿರಣ ನೆಲಕ್ಕೆ ತಾಕುವವರೆಗೂ ಹಳತಾಗಿ ಕತ್ತಲೆಯಲ್ಲಿ ಅಡಗಿದ್ದ ಎಲ್ಲವೂ ಹೊಸತಾಗಿ ನಳನಳಿಸತೊಡಗುತ್ತದೆ. ಆದರೂ ಹಳತಾಗಿರುವುದು ನಮ್ಮ ಮನದಲ್ಲಿನ ಹಳಹಳಿಕೆ, ಅಪೂರ್ಣವಾದ ಕನಸು ಪೂರ್ತಿಯಾಗದ ಹಳಹಳಿಕೆಯಲ್ಲಿ ಮನಸ್ಸಿಗೆ ಮಾತ್ರ ಮುತ್ತಿರುತ್ತೆ. ಹೀಗೆ ಯೋಚಿಸುವ ಮನಸ್ಸು ಬುದ್ಧಿಗೆ ಕಡಿವಾಣ ಹಾಕಬೇಕೆಂದರೂ ಅದೂ ನಮ್ಮ ಕೈಲಿಲ್ಲವಲ್ಲ. ಯೋಚನೆಗಳ ಉಗ್ರಾಣ ಈ ಮನಸ್ಸು. ಸದಾ ಕಾರ್ಖಾನೆಯಂತೆ ನಡೆಯುತ್ತಲೇ ಇರುತ್ತದೆ. ಕಿರಿ ಕಿರಿಯಾಗಿ ಒಮ್ಮೆ, ಹಿರಿ ಹಿರಿ ಹಿಗ್ಗಾಗಿ ಒಮ್ಮೆ.
ನಿನ್ನೆ ತನಗೆ ಫ್ರೆಂಚ್ ಕೋರ್ಸ ನಲ್ಲಿ ಒಳ್ಳೆ ಅಂಕ ಬಂದಿದೆಯೆಂದು ಬಿಂದಿಯಾ ಟ್ರೀಟ್ ಕೊಟ್ಟಳು. ಹಾಗೇ ಅವಳ ಇನ್ನೂ ಕೆಲವು ಟ್ರೀಟ್ ಗಳು ಬಾಕಿ ಇವೆ. ನಾನು ಹಾಗೆ ತಿಂಡಿಪೋತಿಯೂ ಅಲ್ಲ, ನನಗೆ ಟ್ರೀಟ್ ಹೆಸರಿನಲ್ಲಿ ಸುಮ್ಮ ಸುಮ್ಮನೇ ಖರ್ಚುಮಾಡುವುದೂ, ಮಾಡಿಸುವುದೂ ಇಷ್ಟವಿಲ್ಲ. ಆಫೀಸಿನ ಹತ್ತಿರದ ಕೈಲಾಸ್ ಕಾಲೋನಿ ಮಾರ್ಕೆಟ್ಟಿನಲ್ಲಿನ’ಅನುಪಮ್’ ರೆಸ್ಟೋರಾಂಟ್ ನಲ್ಲಿ ಇಬ್ಬರೂ ಛೋಲೆ ಭಟೂರಾ, ಹಾಗೂ ಒನ್ ಬೈ ಟೂ ಮಾಡಿ ಅನ್ನ- ಮಖನೀ ದಾಲ್ ತಗೊಂಡೆವು. ಅದೂ ಇದೂ ಆಫೀಸಿನ ಗಾಸಿಪ್ ಮಾಡುತ್ತಾ, ಅವರಿವರ ರೆಸಿಗ್ನೇಶನ್ನು, ಪ್ರೋಮೋಶನ್ನು ಇತ್ಯಾದಿಗಳನ್ನು ಮಾತಾಡುತ್ತಾ ಉಣ್ಣುತ್ತಿದ್ದೇವು.
ನಡುವೆಯೇ ನೆನಪಾಯಿತು ಮೊನ್ನೆ ಮೊನ್ನೆ ಬಿಂದಿಯ ವೇದನ ಬಗ್ಗೆ ಹೇಳುತ್ತಿದ್ದಳು- ಅವನಿಗೆ ಹುಷಾರಿಲ್ಲ, ಬ್ರಿಟನ್ನಿಂದಾ ಮಾತಾಡಿದ, ತುಂಬಾ ಮಿಸ್ ಮಾಡ್ತಾನಂತೆ ಅವಳನ್ನು, SMS ಮಾಡ್ತಾ ಇರ್ತಾನೆ, ನಾನೂ ಅವನಿಗೆ ಸಮಾಧಾನ ಹೇಳಿದೆ, Afterall , ನಾನವನೊಂದಿಗೆ ಭಾವಹೀನಳಂತಿರಲು ಹೇಗೆ ಸಾಧ್ಯ? ಮಗೂನ ನೋಡ್ಕೊತಾನಲ್ಲಾ, ಚೆನ್ನಾಗಿ ನೋಡ್ಕೊಬೇಕು. ನಾನಿದ್ದರೇ ಅವನನ್ನು ಚೆನ್ನಾಗಿ ನೋಡ್ಕೊತಿದ್ದೆ. ಈಗ ಅವನಿಗೆ ಹಾಗನ್ನಿಸುತ್ತಿದೆ. ನನಗೂ ಅನ್ನಿಸುತ್ತದೆ ಯಾರ್, ಕಡೇ ಪಕ್ಷ ಅವನಿಗೆ ನಾನು ಇಂಪಾರ್ಟೆನ್ಸ್ ಕೋಡ್ತಿನಿ, ಈಗ ಅವನಿಗೆ ನನ್ನ ಬಗ್ಗೆ ತುಂಬಾ ಪ್ರೀತಿ, ಅನುಕಂಪ. ನನಗೆ ವಾಪಸ್ಸು ಬಾ’ ಅಂದಾ.....ಹಾಗೇ ಬೇರೆ ಪ್ರೋಪೋಸಲ್ ಗಳೂ ಬಂದಿದ್ವು, ಆದ್ರೆ ನಾನೇ ಯಾವುದಕ್ಕೂ ಮನಸ್ಸು ಮಾಡ್ತಿಲ್ಲ. ವೇದನನ್ನು ಗೊತ್ತಿರುವಂತೆ, ಹೊಸಬನೊಂದಿಗೆ ಹೊಸ ಜೀವನ ಯೋಚಿಸುವುದಕ್ಕೆ ಸಮಯ ಬೇಕು ಎನ್ನುತ್ತಿದ್ದಳು. ನಾನೂ ಹೇಳಿದೆ, ಹೌದು, dont take any hasty decision at any condition ಎಂದು ಮಾತು ಮುಗಿಸಿದೆ.
ಇದೇ ಬಿಂದಿಯಾ ಎಂಟು ತಿಂಗಳ ಹಿಂದೆ , ತುಂಬಾ ಖುಶಿಯಲ್ಲಿ ಓಡಿ ಬಂದು ತನಗೆ ವೇದನಿಂದ ಡೈವೋರ್ಸ್ ಸಿಕ್ಕಿತೆಂದೂ ಹೇಳಿ, ನಾನವಳೀಗೆ ಗುಡ್ ಎಂದು ಕೈ ಕುಲುಕಿ ಶುಭ ಕೋರಿ, ಹಾರ್ದಿಕವಾಗಿ ಅಭಿನಂದಿಸಿ ಕಳಿಸಿದ್ದೆ. ನನಗೇನಂತೆ ಅಲ್ಲವಾ? ಅದು ಅವಳ ಬದುಕು. ಅವಳಿಗೆ ಹೇಗೆ ಬೇಕೋ ಹಾಗೆ ಬದುಕಲಿ. ಆದರೆ ಆಶ್ಚರ್ಯವುಂಟಾಗಿದ್ದು- ಇಷ್ಟು ಬೇಗ ಅವಳಿಗೆ ಡೈವೋರ್ಸ್ ಸಿಕ್ಕಿ ಬಿಟ್ಟಿತಾ? ಅದೂ ನಮ್ಮ ಭಾರತದಂಥ ದೇಶದಲ್ಲಿ. ಎಷ್ಟೋ ವರುಷಗಳೇ ನ್ಯಾಯದ ಹಾದಿ ಕಾಯುತ್ತ ಕುಳಿತ ಕೇಸುಗಳು, ಆರೋಪಗಳು. ಆಯುಷ್ಯ ಮುಗಿದರೂ ತೀರದ ವ್ಯಾಜ್ಯಗಳು ತುಂಬಿದ ನಮ್ಮ ವ್ಯವಸ್ಥೆಯಲ್ಲಿ ಬಿಂದಿಯಾಗೆ ಇಷ್ಟು ಬೇಗ ಡೈವೊರ್ಸ್ ಸಿಕ್ಕಿ ಬಿಟ್ಟಿತಾ ಎಂಬ ಆಶ್ಚರ್ಯ ನನ್ನ ಮನದಲ್ಲಿ ಇದೆ. ನಾನು ಅವಳಲ್ಲಿ ಅಸಭ್ಯವಾದೀತೆಂದು ಹೆದರಿ ಬಾಯಿಬಿಟ್ಟು ಕೇಳಲಿಲ್ಲ. ಅವಳ ಸಂತೋಷದೊಂದಿಗೆ ನನ್ನ ಸಂತಸವನ್ನೂ ಬೆರೆಸಿ ಟ್ರೀಟ್ ಯಾವಾಗ ಮತ್ತೆ ಎಂದು ನಕ್ಕು, be careful this time, dont take any hasty decision ಅಂತಾ ಮತ್ತೊಮ್ಮೆ ಎಚ್ಚರಿಸಿದ್ದೆ. ಏನೋ ಅರ್ಥವಾಗುವುದಿಲ್ಲ. ಈಗೀನ ಹುಡುಗಿಯರು ನಿಜ ಹೇಳುತ್ತಾರೋ ಅಥ್ವಾ ನನ್ನಂತಾ ಎಲ್ಲ ನಂಬುವ ಗೂಬೆಯೊಂದು ಸಿಕ್ಕಿದೆಯೆಂಡು ತನ್ನ ಕಪೋಲಕಲ್ಪಿತ ಕಥೆಗಳನ್ನು, ಕನಸುಗಳನ್ನು ಹೀಗೆ ಮುಕ್ತವಾಗಿ, ಇತರರಿಗೆ ನಿಜವೆಂದು ತೋರುವ ಕತೆಯನ್ನಾಗಿಸಿ ಹೇಳುತ್ತಾರೋ ಗೊತ್ತಾಗಲಿಲ್ಲ. ಖಂಡಿತ ನನಗೆ ಅಂಥ ಕಥೆಗಳಲ್ಲಿ ಆಸಕ್ತಿ ಇಲ್ಲ. ನನ್ನ ಕಿವಿ ಕೇಳಿದ ಮೇಲೆ ಅವು ಇತರರಿಗೆ ರವಾನೆಯಾಗುವುದಿಲ್ಲ. ನನ್ನಲ್ಲೇ ಅಡಗಿಸಿಡುತ್ತೇನೆ. ಯಾಕೆ ಬೇಕು ಇಲ್ಲದ ಉಸಾಬರೀ ? ಆಫಿಸಿನ ಗಾಸಿಪ್ ರಂಗಾಗುವುದೇ ಹೀಗೆ. ಹೇಸಿಗೆ ಬರುತ್ತದೆ.
ಬಸ್ ಸ್ಟಾಪ್ ನಲ್ಲಿ ಸಿಕ್ಕ ಮಲೆಯಾಳಿ ವಸಂತಾ, ನೀನು ಬಿಂದಿಯಾಳೊಂದಿಗೆ ಜಾಸ್ತಿ ಮಾತಾಡಬೇಡ, ಎಲ್ಲಾ ಸುಳ್ಳು ಸುಳ್ಳು ಸುದ್ದಿ ಹಬ್ಬಿಸ್ತಾಳೇ. ಅವರಿವರ ಬಗ್ಗೆ ಚಾಡಿ, ಅಲ್ಲಿಂದ ಇಲ್ಲಿ, ಇಲ್ಲಿಂದಾ ಅಲ್ಲಿ’ ಎಂದು ಎಚ್ಚರಿಸಿ ಹೋದಳು. ಅಬ್ಬಾ ಅಂದುಕೊಂಡೆ. ಅವಳು ನನ್ನ ಹತ್ತಿರ ಬಂದು ಹೋದ ಸುದ್ದಿ ಇವರಿಗೆಲ್ಲ ಸಿಕ್ಕಿರುತ್ತೆ. ಇವಳು ಕೂರುವುದು ಮೊದಲನೇ ಮಹಡಿಯಲ್ಲಿ, ನಾನಿರುವುದು ನಾಲ್ಕನೇ ಮಹಡಿ, ಹೇಗೆ ವಾಸನೆ ಬಡಿದಿದೆ’ ಎಂದುಕೊಂಡು ಸುಮ್ಮನುಳಿದೆ. ಇವತ್ತು ನಾನು -ಬಿಂದಿಯಾ ಅನುಪಮ್ ಗೆ ಹೋದ ನಂತರ ಏನು ಸುದ್ದಿ ಮಾಡ್ತಾರೋ ಗೊತ್ತಿಲ್ಲ. ಯಾಕೋ ಅವಳಿಗೆ ನನ್ನ ಮೇಲೆ ಒಂಥರಾ ಸಲುಗೆ, ನಂಬಿಕೆ. ಅವಳ ಬಕವಾಸ್ ಮಾತುಗಳಿಗೆ ಕಿವಿಯಾಗುತ್ತೇನೆ. ಮೌನವಾಗುತ್ತೇನೆ, ಖಾಲಿಯಾಗಿಬಿಡುತ್ತೇನೆ. ಹೇಳಿಕೊಳ್ಳಲಿ ಬಿಡು ಎನ್ನುವಂತೆ. ಅವಳು ಏನಾದರೂ ಇದ್ದುಕೊಳ್ಳಲಿ ನನ್ನ ಒಂಟಿತನದಲ್ಲಿ ಯಾರಾದರೊಬ್ಬರೊಡನೆ ಹರಟ ಬೇಕು ಎನ್ಸಿದಾಗೆಲ್ಲ ಅವಳು ನನಗೆ, ಯಾರಾದರೊಬ್ಬರ ಹ ತ್ತಿರ ಕೊಚ್ಚಿಕೊಳ್ಳಬೇಕು ಎಂದು ಅವಳಿಗೆ ಅನಿಸಿದಾಗ ನಾನು -ಹೀಗೆ ಒಬ್ಬರೊಬ್ಬರಿಗೆ ಹಿತವಾಗಿದ್ದೇವೆ. ಉಳಿದ ಹೆಣ್ಣು ಕಲೀಗ್ಸ್ ತರಹಾ ಜಗಳಾಟವೂ ಇಲ್ಲ, ಕಚ್ಚಾಟವೂ ಇಲ್ಲ.
ಊಟ ಮಾಡುತ್ತಲೂ ನಾನು ಅವಳ ಮತ್ತು ವೇದನ ಕುರಿತೇ ಯೋಚಿಸುತ್ತಿದ್ದೆ. ಬಿಂದಿಯಾ ನಿನಗೆ ವೇದನ ಜೊತೆಗೇ ಇರಬೇಕೂ ಅಂದ್ರೆ ಇರು, ಇದು ಒಳ್ಳೆ ನಿರ್ಧಾರ. ನಿನ್ನ ಮಗನೂ ನಿನ್ನ ಹತ್ತಿರವಿರ್ತಾನೆ. ’ಎಂದಿಷ್ಟೇ ಹೇಳಿ. ಅವಳ ಕತೆ ಕಟ್ಟಿಕೊಂಡು ನನಗೆ ಏನಾಗಬೇಕಿದೆ. ನಾವು ಕಳಕಳಿ ತೋರಿಸಿದರೇ ಅವಳಿಗೆ ಅದು ಅಸಹಜ ಕುತೂಹಲವೆನ್ನಿಸಬಹುದು. ಸದಾ ನಿಗೂಡವಾಗಿ, ಸದಾ ಹೊಸದಾಗಿ , ಕಾಣುವ ಬಿಂದಿಯಾಳ ಮೊಗವನ್ನೇ ನೋಡುತ್ತಾ ಯೋಚನೆಯಲ್ಲಿ ಮುಳುಗಿದೆ.

Wednesday, April 16, 2008

ಕನಸಿನೊಳಗೊಂದು ಕಣಸು - ಬೇಂದ್ರೆ ಕವನ

ಕನಸಿನೊಳಗೊಂದು ಕಣಸು
ತಾಯಿ-ಮಕ್ಕಳ ಸಂವಾದ)
(ಗರಿ - ಕವನ ಸಂಗ್ರಹ)
"ಯಾರು ನಿಂದವರಲ್ಲಿ ತಾಯಿ" ಎಂದೆ"

"ಯಾರು ಕೇಳುವರೆನಗೆ, ಯಾಕೆ ತಂದೆ?"
"ಬೇಸರದ ದನಿಯೇಕೆ ಹೆಸರ ಹೇಳಲ್ಲ"

"ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ"
"ನೀನಾರ ಮನೆಯಳೊ ಮುತ್ತೈದೆ ಹೇಳು"

"ನಾನಾರ ಮನೆಯವಳೊ ಬಯಲನ್ನೆ ಕೇಳು"
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?

"ಗುಪ್ತರಾದರೊ ಏನೊ ಇಷ್ಟರಲ್ಲೇ"
"ಇರುವರೇ ಇದ್ದರೇ ಮಕ್ಕಳೆಂಬವರು?"

"ಇರುವರೆಂದರು ಕೂಡ ಯಾರು ನಂಬುವರು?"
"ಮನೆಯಿಲ್ಲವೇ ಇರಲು ಪರದೇಶಿಯೇನು?"

"ಮನೆಯೆ ಮುನಿದೆದ್ದಿರಲು ಯಾ ದೇಶವೇನು?"
"ನಿನ್ನ ಮಾತಿನಲಿಹುದು ಒಡಪಿನಂದ"

"ನನ್ನ ಹತ್ತಿರದೊಂದೆ ಉಳಿದಿಹುದು ಕಂದ"
"ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!"

"ಸಾಜವಾದರು ಪಕ್ಷವಿದಿ ವ್ದ್ಯವಹುದು!"
"ಯಾವುದಾದರು ನಾಡದೇವಿಯೇ ನೀನು?"

"ಭಾವುಕರ ಕಂಗಳಿಗೆ ದೇವಿಯೇ ನಾನು"
"ಈಗ ಬಂದಿಹುದೇಕೆ ಏನು ಬೆಸನ?"

"ಯೋಗವಿಲ್ಲದೆ ತಿಳಿಯದೆನ್ನ ವ್ಯಸನ"
"ಹಾದಿ ಯಾವುದು ಹೇಳು, ಯಾವ ಯೋಗ?"

"ಆದಿ ಅಂತವು ಇಲ್ಲದಂಥ ತ್ಯಾಗ"
"ಬೇಡ ಬಂದಿಹೆಯೇನು ಏನಾದರೊಂದು?"

"ಬೇಡಿದರೆ ಬೇಡಿದುದ ಕೊಡುವೆಯಾ ಇಂದು?"
"ಅಹುದು ಕೊಡುವೆನು ಎಂದು ನಾನೆನ್ನಬಹುದೇ?

"ಬಹುದು-ಗಿಹುದಿನ ಶಂಕಿ ವೀರನಹುದೇ?"
"ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ"

"ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!"
"ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ

"ಬಲ್ಲವರು ದೈವವನು ಪರಿಕಿಸುವರೊಮ್ಮೆ!"
"ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?"

"ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?"
ಮನವು ನಡುಗಿತು ತನುವು ನವಿರಿಗೊಳಗಾಯ್ತು

ನೆನವು ನುಗ್ಗಿತು -- ಹೊರಗೆ ಕಂಡೆ -- ಬೆಳಗಾಯ್ತು

Tuesday, April 15, 2008

ಪುಟ್ಟಿ, ನಾನು ಮತ್ತು ಗುಬ್ಬೀ ಗೂಡು.

ಇವತ್ತು ತಂಗಿ ಹೇಳುತ್ತಿದ್ದಳು. ನಿನ್ನೆ ಮನೆಗೆ ಅನು ಹುಟ್ಟಿದ ಹಬ್ಬಕ್ಕೆ ಹೇಳಿ ಕಳಿಸಿದವರಂತೆ ಪುಟ್ಟಿ, ಉಷಿ, ಅವಳ ಗೆಳತಿಯರು ಎಲ್ಲ ಬಂದಿದ್ದರಂತೆ. ನಾನು ದೂರದ ದೆಹಲಿಯಲ್ಲಿ ಕುಳಿತು, ಎಷ್ಟೋ ವರ್ಷಗಳಾದವು, ಯುಗಗಳೇ ಕಳೆದು ಹೋದಂತಿವೆ. ನಾನೆಂಥ ಪಾಪಿಗೇಡಿ ಅಂದುಕೊಂಡೆ. ನನಗೆ ಒಮ್ಮೆಯೂ ನನ್ನ ಬಾಲ್ಯದ ಗೆಳತಿಯರು ಸಿಗುವುದಿಲ್ಲ. ಹಾಗೇ ನನ್ನ ಬಾಲ್ಯದ ಒಡನಾಡಿ ಪುಟ್ಟಿ ನೆನಪಾದಳು. ಧಾರವಾಡದಲ್ಲಿ ಮಳೆಯಾಗಿ, ನೆಲವೆಲ್ಲ ಅರಳಿ, ಹಸಿರು ಹಚ್ಚಗೇ ಕೊನರುವುದೇ ತಡ, ನಾವು ಮಕ್ಕಳು ಮನೆ ಅಂಗಳದಲ್ಲಿ ಮಣ್ಣು ಕೆದರಿ ಗುಬ್ಬಿ ಗೂಡು ಕಟ್ಟಲು ತೊಡಗುತ್ತಿದ್ದೇವು. ಮುಂಗೈಯನ್ನು ಡುಬರಿಯಾಕಾರ ವಾಗಿಸಿ ಇಟ್ಟು, ಮೇಲೆ ಮೆದುವಾದ ಮಣ್ನನ್ನು ಹಾಕಿ ಒತ್ತುತ್ತಾ, ಪಿರಮಿಡ್ಡಿನಾಕಾರ ಕೊಟ್ಟು ನಂತರ ಸಾವಕಾಶವಾಗಿ ಕೈ ತೆಗೆದರೆ ಸಾಕು, ಹಾರಿ ಕುಣಿಯುವಂತೆ ಚೆಂದದ ಗುಬ್ಬಿ ಗೂಡು ಎದ್ದು ನಿಲ್ಲುತ್ತಿತ್ತು. ಅದಕ್ಕೆ ಸುತ್ತ ಮುತ್ತ ಕಾಲುದಾರಿ, ಗೇಟು, ಇತ್ಯಾದಿಯಾಗಿ ತರ ತರದ ಅಂದಚೆಂದ ಮಾಡಿ, ನನ್ನ ಗೂಡು ನೋಡ್ಲೇ, ನಿನ್ನ ಗೂಡು ಹ್ಯಾಂಗಿದೆ? ಅಂತಾ ಆಡುತ್ತಿದ್ದುದು ನೆನ್ಪಾಯಿತು.
ಪುಟ್ಟಿ ನಮ್ಮ ಎದುರು ಮನೆ ಇಂದಿರಾ ಕಾಕುನ ಎರಡನೇ ಮಗಳು. ನನಗೆ ಸದಾ ಅವರ ಮನೆಯಲ್ಲೇ ವಾಸ. ತಿಂಡಿತಿಂದು ಪುಟಕ್ ಅಂತಾ ಅವರ ಮನೆಗೆ ಹಾರುತ್ತಿದ್ದೆ. ಪುಟ್ಟಿ ತಂದೆ, ನನ್ನ ಮೆಚ್ಚಿನ ಕಾಕಾ. ಅವರು ನಮಗೆ ಹೇಲುತ್ತಿದ್ದ ಕಥೆಗಳು ಈಗಲೂ ನೆನಪಿವೆ. ಅಲೀ ಬಾಬಾ ಚಾಲೀಸ್ ಚೋರ್ ಕತೆ ಆಗಲೇ ನಾನು ಕೇಳಿದ್ದು. ಬೇಸರವಿಲ್ಲದೇ ಕಥೆ ಹೇಳುತ್ತಿದ್ದರು. ನನ್ನ ಅಪ್ಪನೂ ಕಥೆ ಹೇಳುತ್ತಿದ್ದರು. ಮಂಗ ಮತ್ತು ಸಿಂಪಿಗನ ಕಥೆ, ಹುಲಿ ಮತ್ತು ಮಂಗಮ್ಮನ ಕಥೆ, ಮಂಗ ಮತ್ತು ಮೊಸಳೆ ಕತೆ, ಒಂದೇ ಎರಡೇ ಕೇಳಿದ ಕಥೆಗಳು ಇನ್ನೂ ನೆನಪಿನಾಳದಲ್ಲಿ ಸುಮಧುರ ನೆನಪನ್ನು ಹೆಣೆದಿವೆ. ಕತೆ ಹೇಳಿ ಮಲಗಿಸುವ ಅಪ್ಪ ನೆನಪಾದರೇ ಯಾಕೆ ಬಾಲ್ಯಕ್ಕಿರುವ ನಿಶ್ಚಿಂತ ಬದುಕಿನ ಪ್ರೀತಿ, ಚೆಲುವು, ಚೈತನ್ಯ ಮುಂದೆ ಬೆಳೆದು ದೊಡ್ಡವರಾದಂತೆ ಕ್ಷೀಣವಾಗುತ್ತದೆ. ಚಿಂತೆ -ಜಂಜಾಟಗಳು ಬದುಕಿನ ಮೂಲ ಉಪದ್ರಗಳಾಗುತ್ತವೆ ಎನಿಸುತ್ತಿದೆ. ಪುಟ್ಟಿ, ಉಷಿಯರನ್ನು ನೋಡದೇ ಎರ್ಡು ದಶಕಗಳೇ ಕಳೆದುವು. ಯಾವಾಗ ನೋಡ್ತೇನೋ ಗೊತ್ತಿಲ್ಲ. ಅವರೂ ತಮ್ಮ ತಮ್ಮ ಬದುಕಿನಲ್ಲಿ ಮರೆತುಹೋಗಿರಬಹುದು. ಮರೆತಿಲ್ಲವಾದರೂ ಮರೆಸುವಂಥ ಬದುಕಿನ ತಲ್ಲಣಗಳಿಗೇನು ಕಡಿಮೆಯೇ ? ಮಕ್ಕಳು ಮರೀ, ಸಂಸಾರದ ಹತ್ತು ಹಲವು ಸಮಸ್ಯೆಗಳು. ಇಷ್ಟೆಲ್ಲ ಆದರೂ ಈಗ ಮಾತ್ರ ನಾನು ಜೀವನದಲ್ಲಿ ಏನೋ ಅಮೂಲ್ಯವಾದುದನ್ನು, ಆಪ್ತವಾದುದನ್ನು, ಪಂಚಪ್ರಾಣವಾದುದನ್ನು ಏನೋ ನನ್ನ ಊರಿನಲ್ಲಿ ಬಿಟ್ಟು ಬಂದಿದ್ದೇನೆ. ನನ್ನದಾದುದನ್ನು, ನನ್ನದೆನ್ನುವ ಎಲ್ಲವನ್ನೂ ಬಿಟ್ಟು ಪರದೇಸಿಯಾಗಿದ್ದೇನೆ, ಏಕಾಂಗಿಯಾಗಿದ್ದೇನೆ ಎನಿಸತೊಡಗಿ ಕಳೆದುಕೊಂಡ ದುಃಖ ಒತ್ತತೊಡಗಿತು.
ಕಾಕಾನ ತೊಡೆಯೇರಿ ಕುಳಿತು ಬಾಚಣಿಗೆಯಿಂದ ಅವನ ಕೂದಲು ಬಾಚಿದ್ದೇ ಬಾಚಿದ್ದು. ಕಾಕಾನಿಗೆ ಬಾಚುವುದೆಂದರೇ ಏನೋ ಖುಶಿ. ಒಂದು ದಿನವೂ ಕಾಕಾ ಬೇಸರಿಸಿ ಬೈದಿದ್ದಿಲ್ಲ. ಈಗ ಅದೇ ಕಾಕಾ ಮಾತಾಡುವುದಿಲ್ಲ. ಹಾಗೆಂದುಕೊಳ್ಳಲೂ ಮನಸ್ಸಿಗೆ ನೋವಾಗುತ್ತದೆ. ವಯಸ್ಸಾಗಿ ಹೋಗಿ, ಪಿರಿ ಪಿರಿ ಸ್ವಭಾವವಾಗಿಬಿಟ್ಟಿದೆ. ಕಾಕೂ ತೀರಿಹೋಗಿ ನಾಲಕೈದು ವರ್ಷಗಳೇ ಆದುವು. ಇಡೀ ಮನೆತುಂಬ ಓಡಾಡುತ್ತಿದ್ದುದು, ದತ್ತಾತ್ರಯ ಗುಡಿ ಹತ್ತಿರ ಹೋಗಿ ಹೂವು ಕೊಂಡು ಬರುತ್ತಿದ್ದುದು, ಅಟ್ತ ಹತ್ತಿ ಇಳಿದು ಬೈಸಿಕೊಳ್ಳುವುದು, ಮಣ್ಣಲ್ಲಿ ಗೂಡು ಕಟ್ಟಿ ಆಡುವುದು, ಜಗಳಾಡಿಕೊಂಡು ಒಬ್ಬರ ತಲೆಮೇಲೆ ಇನ್ನೊಬ್ಬರು ,ಮಣ್ಣು ಸುರಿದು, ಅವ್ವಂದಿರ ಕೈಲಿ ಬೈಸಿಕೊಂಡು, ಕೊನೆಗೆ ಅವರೂ ಜಗಳಾಡಿಕೊಳ್ಳುವುದು. ನಾಗರ ಪಂಚಮಿಗೆ ಮನೆ ಮನೆಯಲ್ಲಿ ಕಟ್ಟಿದ ಜೋಕಾಲಿ ತೂಗಿ ತೂಗಿ ಆಡಿ, ತಿಂಗಳುಗಟ್ಟಲೇ ಜೋಕಾಲಿ ಬಿಚ್ಚದೇ ಹಾಗೇ ಆಡಿಕೊಂಡಿರುವುದು. ಎಲ್ಲ ನೆನಪಾಗುತ್ತದೆ.
ಇನ್ನೊಮ್ಮೆ ಊರಿಗೆ ಹೋದರೆ ಎಲ್ಲರನ್ನೂ ಕಂಡು ಭೆಟ್ಟಿಯಾಗಿ ಬರಬೇಕು........

Friday, April 11, 2008

ಕನಸು ಮತ್ತು ಹಳವಂಡಗಳ ನಡುವೆ....

ಕುಡಿಗಣ್ಣಿನಲ್ಲಿ ಕದ್ದು ಕದ್ದು ನೋಡುತ್ತ, ಒಳ್ಗೊಳಗೇ ಮುಸಿಮುಸಿ ನಗುವ ಅವಳು, ಮತ್ತೆ ಮತ್ತೆ ಏನನ್ನೋ ನೆನೆದು ಮೀಸೆಯಡಿಯಲ್ಲಿ ಗೆರೆಯಾಗಿ ಮೂಡುವ ನಗುವನ್ನು ತುಟಿ ಬಿಗಿದು ಅಡಗಿಸಲು ಪ್ರಯತ್ನಿಸುವ ಅವನೂ ಅವರಿಬ್ಬರ ಮಧ್ಯೆ ಸುಮ್ಮನೇ ಕುಳಿತ ತುಂಟ ಮೌನ ಬಹಳ ಹೊತ್ತಿನಿಂದ ಕಾಯುತ್ತಿತ್ತು. ಹಾಗೇ ಅವರಿಬ್ಬರನ್ನು ವರ ತುಂಟತನವನ್ನೂ ನೋಡುವುದೆಂದರೆ ತುಂಬಾ ಮಜಾ.ಎಲ್ಲವನ್ನೂ ನೋಡುತ್ತ ಕೊನೆಗೆ ತಾನೇ ಸೋತವಳಂತೆ ಅವನೆದುರು ಬಂದು ಕೂತಳು. ಹಠ ಹಿಡಿದವಳಂತೆ ಅವನನ್ನು ತನ್ನೆಡೆಗೆ ಜಗ್ಗಿಸಿಕೊಂಡು ಕೇಳಿದಳು,

’ಈಗಲಾದರೂ ಹೇಳು, ನಿನಗಾಗಿ ನಾನೇನು ಮಾಡೊಲ್ಲ.? ಎಲ್ಲಾನ್ನೂ ಮಾಡೊಕ್ಕೆ ರೇಡಿ ಕಣೋ. ನೀ ಒಂದ್ಸಲ ನನ್ನ ಇಲ್ಲಿಂದ ಕರಕ್ಕೊಂಡಾದ್ರೂ ಹೋಗು ನೋಡಣ" ಸಾಧ್ಯವಾ?

ಅವ ಬೆಳಗಿನ ಸೂರ್ಯನ ಕೆಂಪಿನಲ್ಲಿ ಮುಳುಗಿದ್ದ. ಕಾಫೀ ಕಪ್ಪಿನಾಚೆ ಅವಳು ಇನ್ನೂ ನಿನ್ನೆಯ ಸಿಹಿಗನಸಿನ ಹಿತದಿಂದ ಹೊರ ಬಂದಿರಲಿಲ್ಲ. ಹೊರಗೆ ಮರದ ಕೊಂಬೆ ಕೊಂಬೆ ಮೇಲೆ ಎಲೆ-ಚಿಗುರು ಇಬ್ಬನಿ ಹೊದ್ದು ಮಲಗಿದ್ದವು. ಅವನ ಕಣ್ಣಲ್ಲಿನ ಆಕಾಶದ ಹರವಿನಲ್ಲಿ ತನ್ನ ಬಿಂಬವನ್ನು ಹುಡುಕುತ್ತಾ, ನಿನ್ನೊಂದಿಗೆ ಬೆಟ್ಟ ಕಾಡು ಸುತ್ತಬೇಕೆಂಬ ಆಸೆ. ಸುತ್ತಿಸ್ತೀಯಾ? ನಾನು ಈ ಜನ್ಮದಲ್ಲೇ ಕಾಡು ಕಂಡಿಲ್ಲ. ದೂರದಿಂದ ನೋಡಿದ್ದೇನೆ ಹತ್ತಿರದಿಂದಾ ಇಲ್ಲ. ಅವನು ಜೊತೆಗಿದ್ದರೇ ಹೀಗೆ ಕನಸುಗಳೇ ಕನಸುಗಳು. ಬಿಟ್ಟಿ ಕನಸುಗಳಿಗೇನು ಹಂಗಿದೆಯಾ?

ನಾನು ಹತ್ತಿರವಿಲ್ಲವಾ? ನನಗಿಂತಾ ಕಾಡು ಇಷ್ಟವಾ. ಉತ್ತರ ಅವಳಲ್ಲಿರಲಿಲ್ಲ. ತುಂಟ ನಗು. ಆ ನಗುವಿನ ಅರ್ಥ ಅವನಿಗೆ ಮಾತ್ರ ಅರ್ಥವಾಗೋದು.

ಕಾಡಲ್ಲೇನಿದೇ ಮಜಾ. ಎಲ್ಲಾದ್ರೂ ಸಮುದ್ರವಿರೋ ಜಾಗಕ್ಕೆ ಹೋಗೋಣ.ಚೆಂದದ ಊರಿಗೆ ಹೋಗೋಣ. ಬ್ಯಾಂಕಾಕ್ ಹೋಗೋಣ್ವಾ? ಈ ಜನ್ಮದಲ್ಲಿ ಒಮ್ಮೆಯಾದರೂ ಹೋಗೋಣ ಜತೆಯಾಗಿ. ಪಾಸ್ಪೋರ್ಟ್ ಎಲ್ಲ ರೆಡಿಮಾಡ್ಕೋಬೇಕು. ಏಯ್, ನೆನಪಿಸ್ತಾ ಇರು ನಂಗೆ. ಇಬ್ಬರ ನಡುವೆ ಇಂಥ ಎಷ್ಟೋ ಕನಸುಗಳು ರಂಗೋಲಿ ಇಟ್ಟಿವೆ.

ನೀನು ಸಮುದ್ರದ ತೆರೆಯಂತೆ ಕಣೋ, ಜೋರಾಗಿ ಭೋರ್ಗೆರೆದು, ದಡಕ್ಕೆ ಅಪ್ಪಳಿಸಿ, ಉರುಳಿಸಿ,ಬೀಳಿಸಿ ಕೊನೆಗೆ ಇಲ್ಲದಂತಾಗುವ ನೊರೆಯಾಗಿ ಬಿಡುತ್ತೇನೆ ನಾನು.

ಥೂ ಕಂತ್ರೀ....ಅವನು ಹಾಗೆನ್ನುವಾಗೆಲ್ಲ ತನ್ನೊಳಗೆ ಚಿಟ್ಟೆಯೊಂದು ಪಟ ಪಟ ಪಕ್ಕ ಬಡಿದು ಹಾರಿದಂತ ಪುಳಕ. ಹಾಗನ್ನುವ ಅವ ತುಂಬಾ ಇಷ್ಟವಾಗ್ತಾನೆ.

2. ನಿಂಗೆ ಗೊತ್ತಾ? ಹೀಗೆ ಚಿಕ್ಕವಳಿದ್ದಾಗ ಚಿಕ್ಕಮ್ಮ ಚಿಕ್ಕಪ್ಪನ ಊರಿಗೆ ಹೋದಾಗ ಅಲ್ಲೇ ಹತ್ತಿರದ ಹಟ್ಟಿಹೊಳೆ ಜಾತ್ರೆಗೆ ಹೋಗಿದ್ದೆ. ಹೊಳೆಯಲ್ಲಿ ಈಜುವ, ಈಜು ಬಾರದಿದ್ದರೂ ಆಷ್ಟೇನೂ ಆಳವಿಲ್ಲದ ಕನ್ನಡಿಯಂತೆ ಹೊಳೆಯುವ ನೀರನ್ನು ತುಂಬಿಕೊಂಡ ಹೊಳೆಯಲ್ಲಿ ಬಿದ್ದು ಬಿದ್ದು ಹೊರಳಾಡಿ ನಲಿಯುವ ಮಕ್ಕಳು, ಅವರನ್ನು ಕೂಗಿ ಕರೆದು ಊಟ ತಿಂಡಿ ಕೊಡುವ ಅಮ್ಮಂದಿರು. ಊರಜನ ತಮ್ಮ ತಮ್ಮ ಚಕ್ಕಡಿಗಾಡಿಗಳನ್ನು ಕಟ್ಟಿಕೊಂಡು ಜಾತ್ರೆಗೆ ಬರುತ್ತಲೇ ಇದ್ದರು. ಅಲ್ಲಲ್ಲಿ ಬೆಂಡು-ಬತ್ತಾಸ, ಚುರುಮರೀ ಸೇವು, ಮೆಣಸಿನಕಾಯಿ ಬೋಂಡಾ ಮಾರೋರು, ಆಟಿಗೆ ಸಾಮಾನು, ಬಳೆ, ಪೀಪಿ, ಬಲೂನು ಮಾರುವವರು, ದೊಂಬ್ರಾಟ, ಮಂಗನಾಟ ತೋರಿಸುವವರು ಹೀಗೆ ಗೌಜೋ ಗೌಜಿ. ಗೊತ್ತಾ ನಿನಗೆ ನಾನು ಆ ಜಾತ್ರೆಯಲ್ಲಿ ಸತ್ತೇ ಹೋಗ್ತಿದ್ದೆ. ಹೊಳೆ ಮುಂದೆ ಹರಿಯುತ್ತಾ ಹರಿಯುತ್ತ ಅಲ್ಲೇ ಹತ್ತಿರದ ಘಟಪ್ರಭೆಯಲ್ಲಿ ಒಂದಾಗುವ ಸಂಗಮವಿದೆಯಲ್ಲ, ಅಲ್ಲೇ ಒಂದು ದೊಡ್ಡ ಸುಳಿ. ನಾನು ಕುಡಿಯಲಿಕ್ಕೇ ನೀರು ಹಿಡಿಯಲು ಹೋಗುವುದಕ್ಕೂ ನೀರಿನ ತಂಬಿಗೆ ನೀರಿನ ರಭಸಕ್ಕೆ ಕೈಯಿಂದ ಕೊಸರಿಕೊಂಡು ಸುಳಿಗೆ ಬಿದ್ದೇ ಬಿಟ್ಟಿತು. ನಾನು ಅದನ್ನು ಇಳಿದು ಎತ್ತಿಕೊಳ್ಳುವವಳಂತೆ ಕಾಲು ನೀರಲ್ಲಿ ಇಳಿಬಿಡುತ್ತಿದ್ದೆ......ಅಷ್ಟರಲ್ಲಿ ಅಗಸರವಳು "ಆ ಹುಡುಗಿನ್ನ ಎಳೀರೋ ...ಸುಳಿ ಐತಿ ಎಂತ ಕಿರುಚಿ’ ನನ್ನ ಬದುಕಿಸಿದ್ದಳು. ಈಗ ನೆನೆಸಿಕೊಂಡರೆ ಅಬ್ಬಾ ಬೆವರು ಕಿತ್ತು ಬರುತ್ತೆ ಭಯದಲ್ಲಿ. ಅವಳು ಹೊಳೆಯ ಗುಂಗಿನಲ್ಲಿ, ಅವನು ಹೊಳೆಯ ಆಳದ ಗುಂಗಿನಲ್ಲಿ ಮೈ ಮರೆತಿದ್ದ.

ಅವಳ ಮುಂಗುರುಳಲ್ಲಿ ಸಂಜೆ ಇಳಿಯುತ್ತಿತ್ತು, ಕೆನ್ನೆಗೆ ಬಂಗಾರ ವರ್ಣದ ಹೊಳಪು, ಇದ್ದಕ್ಕಿದ್ದಂತೆ ಅವಳನ್ನು ವಿಸ್ಕಿಯದೇ ಒಂದು ಹೊಳೆಯಲ್ಲಿ ಅದ್ದಿ ಅದ್ದಿ ತೆಗೆಯಬೇಕು, ಇಂಚು ಇಂಚಾಗಿ ಹೀರಬೇಕೆನ್ನುವ ತುಂಟ ಆಸೆ. ಮತ್ತೆ ಹೊಳೆ ನೆನಪು. ನಮ್ಮೂರಲ್ಲೂ ಹಟ್ಟಿಹೊಳೆಯಿದೆ.

ಗೊತ್ತು.........

ಏನು ಹೊಳೆ ಸೆಳವು ಅಂತೀ, ಏನು ವೈಯ್ಯಾರ, ಏನು ಚೆಲುವು, ಬರೀ ಮೋಹವುಕ್ಕಿಸುವ ಮಾಯದಾಟ. ಎಂಥಾ ಮಜಾ ಅಂತೀ, ನನಗೇನೂ ಅರಿವಿಗೆ ತಾಕಲೇ ಇಲ್ಲ, ಹೊಳೆಯಾಳ ಹೆಚ್ಚಿರಬಹುದು ಅಥವಾ ನನ್ನ ಈಜಿನ ಶಕ್ತಿ, ಸಾಮರ್ಥ್ಯ ಕಡಿಮೆಯಾಗಿರಬಹುದು. ಅವಳ ಮುಸಿ ಮುಸಿ ನಗು ಕೆನ್ನೆಯಲ್ಲಿ ಗುಳಿ ಬೀಳಿಸಿ ಕಣ್ಣಲ್ಲಿ ನೀರುಕ್ಕಿಸಿತು. ಅವಳ ಚೂಪುನೋಟ ಅವನನ್ನು ಕೆಣಕುತ್ತಿತ್ತು.ನಾ ಚಿಕ್ಕವಳಿರೋವಾಗ ಕಂಡ ಹೊಳೆಯಲ್ಲೀಗ ನೀರು ಕಡಿಮೆಯಾಗಿರಬುಹುದು. ಅಲ್ಲವಾ?

ಆಗಿರಲಿಕ್ಕಿಲ್ಲ, ಆಗುವುದುಲ್ಲ....ಆಗಲಿಕ್ಕೆ ಸಾಧ್ಯವೇ ಇಲ್ಲ. ನಾನಿರೋವರೆಗೂ ....

ಥೂ ಕಂತ್ರಿ........ಅವಳು ಹೊಟ್ಟೆ ಹಿಡಿದು ನಗತೊಡಗಿದಳು..ಮರಿ ಹಕ್ಕಿಯಂತೆ ಅವನೆದೆ ಗೂಡಲ್ಲಿ ಮುಖ ಮುಚ್ಚಿಕೊಂಡು.

3. ಅವನನ್ನು ಕರೆದುಕೊಂಡು ನೆಕ್ಕುಂದಿಗೆ ಹೋಗಬಾರದಿತ್ತೇನೋ. ನಾವಿಬ್ಬರೂ ಬೈಕ್ನಲ್ಲಿ ಬರೋದನ್ನ ತಂಗಿ ಮೈದುನ ದಯಾನಂದ ನೋಡಿಬಿಟ್ಟಿದ್ದ. ಆತ ಬಸ್ಸಿಗಾಗಿ ಕಾಯುತ್ತಿದ್ದ, ನಮ್ಮ ಬೈಕ್ ಅವನ ಮುಂದೆಯೇ ದಾಟಿಕೊಂಡು ಹೋಯಿತು. ಏನಂದುಕೊಳ್ಳುತ್ತಾನೋ. ಯಾಕೋ ಭಯವೇ ಅನಿಸಲಿಲ್ಲ. ಅದೇ ಮಹಂತ ಚೆನ್ನಾಗಿ ಬೈದು ಈ-ಮೇಲಿಸಿದ. ನೀನು ಹೇಗಾಗಿಬಿಟ್ಟಿದ್ದಿ ಗೊತ್ತಾ? ಇಷ್ಟೊಂದು self centered ಆಗಬೇಡಾ. ಬರೀ ಅವನೊಬ್ಬನೇಯಾ ಬದುಕೆಂದರೆ ? ನಿನ್ನ ಸುತ್ತಲೂ ಗೋಡೆ ಕಟ್ಟಿಕೊಳ್ಳುತ್ತಿದ್ದಿ. ಕೊನೆಗೆ ಯಾರೂ ನಿನ್ನವರೆನ್ನುವರಿರುವುದಿಲ್ಲ. ಸ್ವಲ್ಪ ಆಚೆ ಈಚೆ ಕಣ್ಣಾಡಿಸಿ ನೋಡು. ಬದುಕು ಬಳುವಳಿಯಾಗಿ ನೀಡಿದ ಒಳ್ಳೆ ಸ್ನೇಹಿತರಿದ್ದಾರೆ, ಎಲ್ಲರಲ್ಲೂ ಸ್ನೇಹದಿಂದ ಬೆರೆಯುವ ನಿನ್ನ ಒಂದು image ಮತ್ತು identity ಇದೆಯಲ್ಲ, ಅದನ್ನು ಕಳೆದುಕೊಳ್ಳ್ತಾ ಇದ್ದೀಯ.ಸ್ನೇಹ ಸಂಬಂಧವಿದೆಯಲ್ಲ ಅದುಅಮೂಲ್ಯವಾದುದು.ಎಷ್ಟೋ ಸಂಕಟದಲ್ಲಿ ಸಹಾಯಮಾಡಿದವರಿರಬಹುದು. ಅವರನ್ನೂ ಆಗಾಗ ನೆನೆ. ಬರೀ ಅವನೇಯಾ ನಿನಗೆ? ಒಂದು ಫೋನ್ ಇಲ್ಲ, ಈಮೇಲಿಲ್ಲ. ನಾನು ಭೇಟ್ಟಿಯಾಗಲಿ ಬಿಡಲಿ, ನೀನು ಹೇಳಬಹುದಿತ್ತಲ್ಲ ನಿನ್ನ ಬರುವಿಕೆಯ ಬಗ್ಗೆ. ಮಹಂತ ಹೇಳಿದುದರಲ್ಲಿ ಯಾವುದೂ ತಪ್ಪಿಲ್ಲ. ನನ್ಗೇನೂ ಬೇಜಾರಿಲ್ಲ. ಒಬ್ಬರು ಇನ್ನೊಬ್ಬರನ್ನು ಹೀಗೆ ಅರ್ಥ ಮಾಡಿಕೋ ಬೇಕು ಅಂತೇನಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟದ್ದು. ನನ್ಗೇನೋ ಹಾಗೆ ಕಾಣ್ತಿಲ್ಲ.

4. ಎರಡು ದಶಕಗಳ ಮೇಲೇ ಬದುಕು ಸವೆದು ಹೋಯಿತು. ಹೊಸ ಉಲ್ಲಾಸ ಮೂಡಿಸಿದ್ದು, ವಸಂತಾಗಮನವಾದುದ್ದು ಅವನಿಂದಲೆ ಅಲ್ಲವೇ ? ಕೆಲವರಿಗೆ ಇನ್ನೊಬ್ಬರು ಸಂತೋಷವಾಗಿರುವುದನ್ನು ನೋಡಲಿಕ್ಕಾಗುವುದಿಲ್ಲ. ಇನ್ನು ಅವ್ವನಿಗೇನು ಗೊತ್ತು, ಅವಳು ಹೇಗೆ ಬದುಕಿ ಬಾಳಿದಳೆಂದು, ಹೇಗೆ ಕಣ್ಣಿರು ನುಂಗಿ, ತಮಗೆಲ್ಲ ಚೆನ್ನಾಗಿದ್ದೇನೆಂದು ತೋರಿಸುತ್ತಲೇ ಹೋದಳೆಂದು. ಅಂಗೈಯಲ್ಲಿಟ್ಟು ಬೆಳೆಸಿ ತನ್ನ ಕರಳು ಬಳ್ಳಿ ಬಳ್ಳಿಯೆಂದು ತನ್ನನ್ನು ಬಲಿಪಶುಮಾಡಿದವಳು ಅವಳೇ ಅಲ್ಲವೇ ? ಯೋಚಿಸಿದರೆ ತಲೆ ಸಿಡಿದು ಹೋದಂತಾಗುತ್ತದೆ.

5. ಹೀಗೆ ಬರುವ ಹೋಗುವ ನಡುವೆ ಬದುಕು ಸಾಗುತ್ತಿರಲಿ ಬಿಡು. ಈ ಜೀವನವೂ ಅಮೂಲ್ಯವಾದುದು. ಮತ್ತೆ ಮತ್ತೆ ಪಡೆಯುವುದಿಲ್ಲ ನಾವು. ಬದುಕಿದರೆ ಇನ್ನೆಂದೂ ಬದುಕಿಯೇ ಇರಲಿಲ್ಲವೆನ್ನುವಂತೆ ಬದುಕಬೇಕು. ಹೃದಯದ ಮಾತು ಕೇಳಿ, ಜನರ ಅಭಿಪ್ರಾಯವಲ್ಲ. ನಮ್ಮನ್ನು ನಾವು ವಂಚಿಸಿಕೊಳ್ಳುವುದಿದೆಯಲ್ಲ ಅದರಂಥ ಅಪರಾಧ ಯಾವುದೂ ಇಲ್ಲ.

6. ಅತ್ತೆ ಅನ್ನುತ್ತಿದ್ದರು, ನಿನಗೂ ಬರುವ ಹಠವಿತ್ತಲ್ಲ, ನಮಗೂ ನೋಡುವಾಸೆ. ಜೀವನದಲ್ಲಿ ಮನುಷ್ಯನಿಗೆ ಹಠವಿದ್ದರೆ ಎನೂ ಮಾಡಬಹುದು. ಆಕೆ ದಾರ್ಶನಿಕರಂತೆ ನುಡಿದಿದ್ದರು. ಎಷ್ಟು ಸತ್ಯ. ನನಗೂ ಒಂದು ಪುಟ್ಟ ಕನಸಿತ್ತು. ನನ್ನದಲ್ಲದ ನಿನ್ನ ಅಂಗಳದಲ್ಲೊಂದು ಚುಕ್ಕೆ ಇಟ್ಟು ರಂಗೋಲಿ ಇಡುವ ಆಸೆ. ನಿನ್ನ ಎದೆಯಲ್ಲೊಂದು ಹಣತೆ ಹಚ್ಚಿ ದೀಪವಿಡುವ ಆಸೆ. ನನ್ನ ಕಾಲಡಿಯ ನೆಲವೂ ನನ್ನದಾಗಿರಲಿಲ್ಲ. ನನ್ನವನಲ್ಲದ ನಿನ್ನನ್ನೂ, ನನ್ನವನನ್ನಾಗಿಸಿದ ಕನಸನ್ನೂ ಈ ಕಣ್ಣೊಳಗೆ ಹೊತ್ತಿಸಿಕೊಂಡು ಬದುಕುವ ಕನಸು ಇನ್ನೂ ಚೆನ್ನ.

ಕನಸಿನೊಳಗೊಂದು ಕನಸು, ಮನಸಿನೊಳಗೊಂದು ಪಿಸುನುಡಿಯಾಗಿ, ನಿಟ್ಟುಸಿರಾಗಿ, ಹಂಬಲಿಕೆಯಾಗಿ, ನೀನೆ ಇರುತ್ತಿ ಸದಾ ನನ್ನದೇ ನೆರಳಿನಲಿ.

ನಿನ್ನವಳೇ

ಚಿನ್ನು




ಅಂತರ್ಮನದಲ್ಲರಳಿದ ಗುಲಾಬಿ


Thursday, April 10, 2008

ಮೆಲುಕಾಡುವ ಶೂನ್ಯ

ಏನೂ ಮಾಡಲು ತೋಚದೇ, ಮನಸ್ಸಿಗೆ ಯಾವ ಹದವೂ ಸಿಗದೇ, ಬುದ್ಧಿಗೂ ತಾಕದೇ ಬರೀ ಶೂನ್ಯದಲ್ಲಿ ಕಳೆದುಹೋಗುವ ಒಂದು ಕ್ರಿಯೆಯಿದೆಯಲ್ಲ, ಅದು ತಾಕಲಾಟದ್ದು. ನಮಗರಿವಿಲ್ಲದ ಶೂನ್ಯದಲ್ಲೇ ನಾವು ಮೆಲುಕಾಡುತ್ತಿರುತ್ತೇವೆ ಸುಮ್ಮನೇ. ಹಾಗೇ ಇದ್ದುಬಿಡೋಣ ಎಂದರೂ ಏನಾದರೂ ಸಂಭವಿಸಬೇಕು, ಏನೋ ಆಗಲಿದೆ ಸಧ್ಯಕ್ಕೆ ಎನ್ನುವ ಅನ್ನುವ ಯೋಚನೆಯಿದೆಯಲ್ಲ ಅದು ಕಾಯುವಿಕೆ ಹಚ್ಚುತ್ತದೆ. ಸರೀ ಕಾಯುತ್ತ ಕೂರುವ ಕ್ರಿಯೆಯೂ ಬೇಡದ್ದು. ಈ ಚಡಪಡಿಕೆಯೇ ವಿಚಿತ್ರವೆಂದುಕೊಳ್ಳುತ್ತಿರುವಾಗಲೇ ನೆನಪಾಯಿತು ನನ್ನ ಬಾಲ್ಯದ ಗೆಳೆಯನೊಬ್ಬ ತಿಂಗಳ ಹಿಂದೆ ಆರನೇ ತರಗತಿಯ ಹಿಂದಿ, ನಾನ್ ಡಿಟೇಲ್ N.C.E.R.T. ಯ ಪಠ್ಯಪುಸ್ತಕವೊಂದು ಊರಲ್ಲಿ ಸಿಗ್ತಾ ಇಲ್ಲ,ದೆಹಲಿಯಲ್ಲಿ NCERT ಗೆ ಹೋಗಿ ವಿಚಾರಿಸು, ಅಲ್ಲಿ ಖಂಡಿತ ದೊರೆಯುತ್ತವ. ಸಿಕ್ಕರೆ ಒಂದಷ್ಟು ಕೊಂಡು ಕೋರಿಯರ್ ಮಾಡು ಅಂದಿದ್ದ. ಆದ್ರೆ ನನಗೆ ಅರಬಿಂದೋ ಮಾರ್ಗನಲ್ಲಿರುವ NCERT ಆಫೀಸಿಗೆ ಹೋಗಿ ಅವನ ಕೆಲಸ ಮಾಡುವುದಾಗಲಿಲ್ಲ. ಶಾಲೆಯ ಮಕ್ಕಳಿಗೆ ಒಂದು ಪುಟ್ಟ ಸಹಾಯ ಮಾಡುವ ಅವಕಾಶವನ್ನೂ ನಾನು ಕಳೆದುಕೊಂಡೆ ಎನಿಸಿ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಏನು ಮಾಡೋದು ಈ ಊರೇ ಹಾಗೆ. ಈ ಊರೊಂದೆ ಯಾಕೆ ಎಲ್ಲಾ ಮಹಾನಗರಗಳೂ ಹಾಗೇನೆ. ಬೆಳಿಗ್ಗೆ ಎದ್ದರೆ ಗಡಿಬಿಡಿಯಲ್ಲಿ ಆಡುಗೆ ಕೆಲಸ ಮುಗಿಸಿ, ಡಬ್ಬಕ್ಕೆ ತುಂಬಿಸಿಕೊಂಡು. ಮನೆಯವರದ್ದೆಲ್ಲಾ ಡಬ್ಬ ಪ್ಯಾಕ್ ಮಾಡಿ, ಬಸ್ಸಿಗೆ ಓಡಿ, ನೋಯ್ಡಾ ದಿಂದ ಗ್ರೇಟರ್ ಕೈಲಾಶ್ ತಲುಪುವುದರಲ್ಲೇ ಸಾಕೋ ಬೇಕಾಗಿರುತ್ತೆ. ಆಫೀಸಿನಲ್ಲಿ ಗಾಣದೆತ್ತಿನಂತೆ ದುಡಿದು ಸಂಜೆ ಮತ್ತೆ ಸತ್ತೆನೋ ಕೆಟ್ಟೆನೋ ಎಂಡು ಬಸ್ಸಿಗಾಗಿ ಓಡುವ ಗೋಳು. ಇವೆಲ್ಲವನ್ನೂ ನಾವು ನಮ್ಮಿಷ್ಟದಂತೆ ಮಾಡುತ್ತೇವಾ? ಮಾಡಬೇಕು ಅನಿವಾರ್ಯ, ಬದುಕುವುದಕ್ಕಾಗಿ ಇವೆಲ್ಲವನ್ನೂ ನಾವು ಯಂತ್ರದಂತೆ ತಿರುಗುತ್ತಾ ಸವೆಯುತ್ತಾ ಹೋಗುತ್ತಿರುತ್ತೇವೆ. ನಿಲ್ಲಲು ಪುರುಸೊತ್ತಿಲ್ಲದೇ. ಇನ್ನು ಇತರ ಕೆಲಸಗಳನ್ನು ಅದೂ ಸುತ್ತಾಡುವ- ಹುಡುಕುವ ಕೆಲಸವೆಂದರೆ ಬೇಡವೆನಿಸುತ್ತದೆ. ಹೀಗಾಗಿ ಪುಸ್ತಕಕ್ಕಾಗಿ ನನಗೆ ಓಡಾಡಲು, ಶ್ರಮಪಡಲು ಆಗಲೇ ಇಲ್ಲ. ಆಗಲಿಲ್ಲ ಎನ್ನುವುದಕ್ಕಿಂತ ನಾನೇ ಹೆಚ್ಚು ಒತ್ತು ಕೊಟ್ಟು ಮನಸ್ಸಿನಿಂದ ಮಾಡಲು ಪ್ರಯತ್ನಿಸಲಿಲ್ಲವೆನ್ನಬಹುದು. ಈಗ ಹೀಗೆ ಸುಮ್ಮನೇ ಶೂನ್ಯತೆಯಲ್ಲಿ ಮೆಲಕಾಡುವಾಗ ಈ ಗಿಲ್ಟು ಕಾಡತೊಡಗಿ ಕಸಿವಿಸಿ ಹೆಚ್ಚಾಗತೊಡಗಿತು. ಪಾಪ ಅವನು ಏನು ತಿಳಿದುಕೊಂಡನೋ ಎನೋ? ಮಕ್ಕಳ ಪರೀಕ್ಷೆಯ ಕಾಲ ಬೇರೆ. ಮನಸ್ಸು ತಡೆಯದೇ ಫೋನಾಯಿಸಿದೆ. ಆಗ ಮಾತನಾಡಲಾಗಲಿಲ್ಲ. ಕೊನೆಗೆ ಅವನೇ ಫೋನಾಯಿಸಿದಾಗ ನನ್ನ ಅಪರಾಧೀ ಭಾವನೆಗಳನ್ನೆಲ್ಲಾ ಅವನ ಮುಂದೆ ತೋಡಿಕೊಂಡು ಕ್ಷಮೆ ಬೇಡಿದೆ. ಅಯ್ಯೋ ಇರಲಿ ಬಿಡು, ಕೊನೆಗೂ ಆ ಪುಸ್ತಕಗಳು ಸಿಗಲಿಲ್ಲ. ಬೇರೆ ಎರ್ಪಾಟು ಮಾಡಲಾಯಿತು. ನೀನೇನೂ ಬೇಸರ ಪಡಬೇಡಾ ಎಂದು ಸಮಾಧಾನಿಸಿದ.
ಇದೇ ಕಸಿವಿಸಿಯನ್ನು ಎದೆಯಲ್ಲಿ ಬಚ್ಚಿಟುಕೊಂಡೇ ಊರಿಗೆ ಹೋದೆ, ಊರಿಗೆ ಬಂದರೆ ಹೇಳು ಮಾರಾಯ್ತಿ, ನಾನೇ ಅಂಕೋಲಾದಿಂದ ಬಂದು ಭೆಟ್ಟಿಯಾಗ್ತಿನಿ, ಎಷ್ಟೊಂದು ವರುಷಗಳಾದವು ನಿನ್ನ ನೋಡಿ. ಎಂದಿದ್ದ ಅವನ ಮಾತುಗಳು ನೆನಪಿದ್ದರೂ ಕೂಡ ಒಂದು ಬರಿಯೂ ಅವನಿಗೆ ಪೋನಾಯಿಸಲಿಲ್ಲ, ನಾ ಬಂದ ಸುಳಿವೂ ಕೊಡಲಿಲ್ಲ.ಅದೇ ಸಮಯಕ್ಕೆ ಊರಲ್ಲಿ ನಡೆದ ಮುನೇಶ್ವರನ ಗುಡಿ ಜಾತ್ರೆಗೂ ನನ್ನ ಮೌನಕ್ಕೂ , ತಲೆಮರೆಸಿಕೊಳ್ಳುವುದಕ್ಕೂ ಸೇರಿಸಿ ಥಳಕು ಹಾಕಿಬಿಟ್ಟೆ.
ಏಯ್..ಬಾರೋ ನಾನು ಊರಲ್ಲಿದ್ದೇನೆ, ನಿನ್ನ ನೋಡ್ಬೇಕು ಅನಿಸಿದೆ, ಬಂದು ಹೋಗು ಒಮ್ಮೆ’ ಎಂದು ಬಾಲ್ಯ ಸಹಜ ಸಲುಗೆಯಿಂದ ಕೂಡ ಹೇಳಲಾರದೇ, ಬಂದು ಹೋಗಿದ್ದು ಕೂಡ ಸುಳಿವು ಸಿಗದಂತೆ, ಗಾಳಿಯಂತೆ ಹೋಗಿ, ಗಾಳಿಯಂತೆ ಹಾರಿ ಬಂದಿದ್ದೆ ಮತ್ತೆ ದೆಹಲಿಗೆ.
ಈಗ ಅದ್ನ್ನೇ ನೆನ್ಸಿಕೊಂಡು ಥೂ ದರಿದ್ರದ ಮನಸ್ಸಿದು ಎನ್ಸಿ ಬೈದುಕೊಳ್ತಾ ಇದ್ದಿನಿ. ಎನಾದ್ರೂ ಹರ ಸಾಹಸ ಮಾಡಿಯಾದ್ರೂ ಅವನೋದಿಸುವ ಶಾಲೆ ಮಕ್ಕಳಿಗಾಗಿ ಪುಸ್ತಕಗಳನ್ನು ಖರೀದಿಸಿ ಕಳಿಸಬಹುದಿತ್ತು. ಆಗಿದ್ದು ಆಯಿತು ಇನ್ನೂ ಮುಂದಾದರೂ ಹೀಗೆ ಶೂನ್ಯದಲ್ಲಿ ತಡಕಾಡುವ ಬದಲು, ಬಂದ ಅವಕಾಶ, ಆಶಯಕ್ಕೆ ಅನುಗುಣವಾಗಿ ಇನ್ನೊಬ್ಬರಿಗಾಗಿ ತುಸುವಾದರೂ ಶ್ರಮಪಡುವ ಮನೋಬಲ, ಧಾವಂತದ ನಡುವೆಯೂ ಎಲೆಯ ಮರೆಯಂತೆ ಮರೆಯಾದ,ಸೆಲೆಯಂತೆ ಆಗಾಗ ಎದೆಗೆ ಚಿಮ್ಮುವ ಹೊಮ್ಮಿ ಮುದನೀಡುವ ಸ್ನೇಹವನ್ನು ಉಳಿಸಿಕೊಳ್ಳುವ ಬೆಳೆಸಿಕೊಳ್ಳುವ ಹುನ್ನಾರನ್ನು ತುಸುವಾದರೂ ಮೈಗೂಡಿಸಿಕೊಳ್ಳಬೇಕೆಂದು ನಿರ್ಧರಿಸಿದೆ.
ಇನ್ನೊಮ್ಮೆ ಊರಿಗೆ ಬಂದರೆ ಖಂಡಿತ ನಿನಗೆ ತಿಳಿಸಿ ಬರುವೆ. ನೆನಪಾದಾಗ, ಸಮಯ ಸಿಕ್ಕಾಗ ಮಾತಾಡ್ತಾ ಇರೋಣ.
ಸ್ನೇಹದಿಂದ.....