Tuesday, April 8, 2008

’ ಆರಾದರೇನವರ ಒಳ ಬಾಳು ಬೇರಿಹುದು

ಒರೆ ಬೇರೆ ಒಳ ಬಾಳು ಬೇರೆ

ಜೋಡಾಗಿ ಸೇರಿದರೆ ಒಂದಾಗಿ ತೋರುವುದು

ಅದರಂತೆ ಬಾಳುವೆಯ ಮೋರೆ !

ಕಡೆಂಗೋಡ್ಲು ಶಂಕರಭಟ್ಟರು

ಅನುಭವವು ಸವಿಯಲ್ಲ ; ಅದರ ನೆನಪೇ ಸವಿಯು. ಅದ ಕದ್ದು ಮೇಯದೇ ಮನವು ?

ಅವನೊಂದಿಗೆ "ಫ್ಯಾಮಿಲಿ ಗಾರ್ಡನ್" ಬಾರ್ ಅಂಡ್ ರೆಸ್ಟ್ಯೂರಾಂಟ್ನಲ್ಲಿ ತಮ್ಮಿಬ್ಬರ ಉಸಿರು ಉಸಿರಿಗೆ ತಾಗುವಂತೆ, ಕಣ್ಣು ಕಣ್ಣಲಿ ಪಿಸುಗುಡುವಂತೆ ಕುಳಿತು, ಅವನೇ ಆರಿಸಿ, ಅವಳಿಗಾಗಿ ಪ್ರೀತಿಯಿಂದ ಆರ್ಡರ್ ಮಾಡಿದ ಜಮೈಕಾವನ್ನು ಅವನೆದೆ ತುಂಬಿ ಉಕ್ಕಿ ಉಕ್ಕಿ ಹರಿಯುವ ಪ್ರೀತಿಯಂತೆ ಈ ಬಾಳ ಬಟ್ಟಲನ್ನು ತುಂಬಿದ ಪ್ರೀತಿಯನ್ನು ಹೀರುತ್ತಾ ನಿಧಾನವಾಗಿ, ಅದರಲ್ಲಿ ಲೀನವಾಗಿ, ಅನನ್ಯತೆಯಿಂದ ಅದರ ರಸವನ್ನು ಆಸ್ವಾದಿಸುತ್ತಾ, ತನ್ನ -ಅವನ ಈ ಜನುಮದ ಪ್ರೇಮದ ಪಯಣ ಬೇಗ ಮುಗಿಯದಂತೆ ಹೇ! ದೇವರೆ, ನಮ್ಮನ್ನು ಜತೆಯಾಗಿಟ್ಟಿರು ಎಂದು ಬೇಡಿಕೊಳ್ಳುತ್ಟಾ, ಸದಾ ಈ ಗುಲಾಬಿ ತುಟಿಗಳ ಅಂಚಿಗೆ ಅವನಿಡುವ ಹೂ ಮುತ್ತು ನವಿರಾಗಿ ತಾಗಿ, ಹಸಿಯಾಗುತ್ತಾ , ಪುಳಕಗೊಳ್ಳುತ್ತಾ, ಅನನ್ಯತೆಯಲಿ ಅವಳ ಒಳಗೆಲ್ಲಾ ಹಸಿ ಹಸಿಯಾಗಿ ಇಳಿಯುತ್ತಾ ಹಾಗೇ ಅವಳ ಕಣ್ಣು ತೇವಗಾಗುತ್ತಿದ್ದವು. ಕಣ್ಣು ತುಂಬಿ ತುಂಬಿ ಈಗಲೋ ಆಗಲೋ ತುಳುಕಲು ಹಾತೊರೆಯುತ್ತಿತ್ತು ಕಂಬನಿಯೊಂದು. ಥೇಟ್ ಅವನ ಸೇರಲು ಹಾತೊರೆಯುವ ತನ್ನಂತೆ !! ಈ ಕ್ಷಣಗಳು ಕಳೆದರೆ ತನ್ನ ಪಾಲಿಗೆ ಮತ್ತೆ ಬರುವುದು ದೀರ್ಘ ಅಗಲಿಕೆ. ಸದಾ ಅವನ ರೂಪವೇ ಕಣ್ಣಲ್ಲಿ, ಕಿವಿಯಲ್ಲಿ ಆತನ ಮಾತುಗಳ ಕಿಣಿಕಿಣಿಸುತ್ತಿರುತ್ತವೇ. ಅವನ ಹಿತವಾದ ಸ್ಪರ್ಶ, ಮಿನುಗುವ ಕಂದು ಕಣ್ಣಿನ ಅಪ್ಯಾಯತೆ,ತನ್ನ ಹಗಲಿರುಳು ಕಾಡುವ ಅವನ ನೋಟ, ಸುರಿಸುವ ಮುತ್ತುಮಳೆ, ಪ್ರೀತಿಯನ್ನುಕ್ಕಿಸುವ ತುಟಿಗಳು,”ನೀನು ಸೌತೆಕಾಯಿ ತಿನ್ನಬೇಡ ಚಿನ್ನಾ, ಗಂಟಲು ನೋವು ನಿನಗೆ’ ಪ್ರೀತಿಯಿಂದಲೆ ಗದರುತ್ತಾ, ಸಲಾಡ್ ತಟ್ಟೆಯನ್ನು ಆಚೆಗೆ ಎತ್ತಿಡುವ ಅವನ ಮಮತೆ, "ಛಳಿಯಾಗ್ತಾ ಇದೆಯಾ?" ತಾವು ಏ.ಸೀ. ಹತ್ತಿರವೇ ಕೂತಿದ್ದಕ್ಕೆ ಅವಳಿಗೆ ಛಳಿಯಾಗುತ್ತಿರಬಹುದೆನ್ನುವ ಅವನ ಕಾಳಜೀ, ಕಕ್ಕುಲತೆ, ಮೋಹ, ಪ್ರೇಮ -ಕಾಮ ಎಲ್ಲವನ್ನೂ ಜಮೈಕಾ ಗ್ಲಾಸಿನಲ್ಲಿ ಕಾಣುತ್ತಾ, ಖಾಲಿ ಖಾಲಿಮ ಮೌನವನ್ನು ತನ್ನೊಳಗೆ ತುಂಬಿಕೊಳ್ಲುತ್ತಾ, ಕನಸಿನಲ್ಲಿ ತೇಲುತ್ತಾ, ನೋವಿನಲ್ಲಿ ನರಳುತ್ತಾ ಒಳಗೊಳಗೇ ಬಿಕ್ಕಳಿಸುತ್ತಾ ಯೋಚಿಸುತ್ತಿದ್ದಳು ಯಾಕೆ ನೆನಪುಗಳು ಸುಂದರವಾಗಿರುತ್ತವೆ ? ಯಾಕೆ ಕಾಡುತ್ತವೆ ? ನೆನಪುಗಳೆ ಹಾಗೇನೋ, ವರ್ತಮಾನಕ್ಕಿಂತ ನೆನಪುಗಳೇ ಸುಂದರ. ಯಾಕೆ ಈ ಕ್ಷಣಗಳು ನೋವನ್ನೂ- ಸುಖವನ್ನೂ ಒಟ್ಟಿಗೇನೀಡುತ್ತವೆ. ಒಮ್ಮೇಲೆ ಕನಸಿನಿಂದ ಎಚ್ಚೆತ್ತ ಭಾವ, ಅವೇ ಕಳೆದ ಸುಂದರ ಕ್ಷಣಗಳು ವಿರಹದ ತಾಪವನ್ನೂ ಅಗಲಿಕೆಯ ನೋವನ್ನೂ ಕೊಡುತ್ತವೆ. ಅವನೆ ನೆನಪೆಂದರೆ ದಿನಕ್ಕೊಮ್ಮೆಯಾದರೂ ಅಳುತ್ತಾಳೆ. ಕಳೆದುಹೋದ ಕ್ಷಣಗಾಳಿಗಾಗಿ ಸಂಕಟಪಡುತ್ತಾಳೆ. ಅವನ ಹಿರಿಮೆ ದೊಡ್ಡದು. ಎಲ್ಲವನ್ನೂ ಅವಳಿಗಾಗಿ ಕೊಟ್ಟಿದ್ದಾನೆ. ತನ್ನದಾದ ಎಲ್ಲವನ್ನೂ ಮತ್ತು ತನ್ನದಲ್ಲದ ಬದುಕಿನಿಂದಲೂ ಆವನು ಬಾಚಿ ಬಾಚಿ ಅವಳ ಮಡಿಲು ತುಂಬಿದ ಪ್ರೀತಿ ನೆನಪು ಒಮ್ಮೆ ತುಟಿಯಂಚಲಿ ನಸು ನಗು ಮೂಡಿಸಿದರೆ, ಇನ್ನೊಮ್ಮೆ ಕಣ್ಣು ಕೊಳಗಳಾಗುತ್ತವೆ. ಅಳು ಒತ್ತರಿಸಿಬರುತ್ತದೆ. ನಿನ್ನ ಬಿಟ್ಟು ಹೇಗೆ ಬದುಕುತ್ತಿದ್ದೇನೆ ಗೊತ್ತಾ? ಬದುಕಬಲ್ಲೇನೆ? ನೀನಿಲ್ಲದ ಬದುಕನ್ನೂ ಹೇಗೆ ಊಹಿಸಲಿ? ನನಗೆ ಬದುಕೆಂದರೆ ನೀನೆ. ನೀನಿಲ್ಲದ ಬದುಕೂ ಒಂದು ಬದುಕಾ? ಬಂದು ಬಿಡು ಒಮ್ಮೆ. ಸದಾ ದೇವರಲ್ಲಿ ಮೊರೆಯಿಡುತ್ತಿರುತ್ತಾಳೆ.”ಅವನ ಸ್ನೇಹ, ಸಾಮಿಪ್ಯ, ಸಾಂಗತ್ಯವನ್ನು ಎಲ್ಲಾ ಜನ್ಮಕ್ಕೂ ನೀಡು’ ಎಂದು.

ಅವನು ಆಗಸದ ಚುಕ್ಕೆಗಳನ್ನು ತಂದು ಕೊಡದಿದ್ದರೂ ಬೆಳದಿಂಗಳ ರಾತ್ರಿ, ಅವಳ ಎದುರು ಕುಳಿತು, ಕಣ್ಣಲ್ಲಿ ಕಣ್ಣಿಟ್ಟು, ತಾನು ಉಣ್ಣುವ ಮೊದಲ ತುತ್ತನ್ನು ಅವಳ ಬಾಯಿಗೆ ಉಣ್ಣಿಸಿದ್ದಾನೆ, ಅಷ್ಟೇ ಪ್ರೀತಿಯಿಂದ ಅವಳುಣಿಸಿದ ಕೈತುತ್ತನ್ನೂ ಪರಮಾನಂದವನ್ನು ಅನುಭವಿಸಿದಂತೆ ಕಣ್ಮುಚ್ಚಿ ಸವಿದಿದ್ದಾನೆ. ಬಾಯಿಂದ ಬಾಯಿಗೆ ಗುಬ್ಬಚ್ಚಿ ಗುಟುಕು ನೀಡಿದಂತೆ ಒಬ್ಬರಿಗೊಬ್ಬರು ಗುಟುಕು ನೀಡಿ ಜೋಡಿಹಕ್ಕಿಗಳಂತೆ ನಲಿದಿದ್ದಾರೆ, ಜಗಳಾಡಿಕೊಂಡರೂ ಮತ್ತೆ ಇನ್ನೆಂದೂ ಜಗಳಾಡುವುದಿಲ್ಲವೆಂದು ತಮ್ಮನ್ನೇ ಬೈದುಕೊಂಡು ಮತ್ತೆ ಒಂದಾಗಿದ್ದಾರೆ.ಏನೆನ್ನಬೇಕು ಈ ಸಂಬಂಧಕ್ಕೆ ? ಯಾಕಿಷ್ಟು ಮೋಹ ಅವನೊಂದಿಗೆ? ಯಾಕಿಂಥ ಪ್ರೇಮ ಅವನ ಮೇಲೆ? ಅರ್ಥವಾಗಿಲ್ಲ ಇನ್ನೂ. ಅವನೆಂದರೆ ತನ್ನ ಬದುಕಿನಲ್ಲಿ ಕನಸು ಮತ್ತು ವಾಸ್ತವದ ಸ್ವರೂಪ.

ಊಟ ಮುಗಿಸಿ ರೂಮಿಗೆ ಬಂದಾಗಲೂ ತಾವು ಹೀಗೆ ಸದಾ ಜೊತೆಯಾಗಿಯೇ ಇದ್ದೇವೇನೋ ಎಂಬಂತೆ ಒಬ್ಬರ ಎದೆ ಮಿಡಿತ ಇನ್ನೊಬ್ಬರು ಆಲಿಸುತ್ತಾ, ಲೆಕ್ಕವಿಲ್ಲದಷ್ಟು ಕನಸುಗಳನ್ನು, ನಾಳೆಗಿಡುವ ಚುಕ್ಕಿಗಳನ್ನು, ಕಡಲಿನಾಳದಿಂದ ಮುತ್ತನ್ನು ಹೆಕ್ಕುತ್ತಾ, ಎಂದೂ ಅಗಲದಂತೆ ತಬ್ಬಿಕೊಳ್ಳುತ್ತಾ ಆಗಾಧ ಸಮುದ್ರದಂತೆ ಭೋರ್ಗರೆಯುತ್ತಿದ್ದ ಪ್ರೇಮಿಗಳು. ಇಬ್ಬರ ಸ್ನೇಹವೂ ಅನನ್ಯವಾದುದು, ಗಾಡವಾದುದು. ಒಬ್ಬರಿಗೊಬ್ಬರು ಸಮರ್ಪಿಸಿಕೊಂಡಾಗಿದೆ, ಒಬ್ಬರಿಗೊಬ್ಬರಲ್ಲಿ ಆಳವಾಗಿ ಇಳಿದುಹೋಗಿದ್ದಾರೆ. ಮನಸು ಮನಸುಗಳು ಬೆರೆತಿವೆ, ದೇಹವೆರಡು ಪ್ರಾಣವೊಂದೇ ಎನ್ನುವಂತೆ. ಒಬ್ಬರ ಮಾತು ಒಬ್ಬರು ಕೇಳುತ್ತಾರೆ ಎರಡಿಲ್ಲದ ಒಮ್ಮತ ಅವರದು. ಅವನು ಹೇಳಿದ್ದು ಅವಳಿಗೆ ಹಿತ, ಅವಳು ತೋರಿದ್ದು ಅವನಿಗೆ ದೇವಿಯ ಆದೇಶ, ದಾರಿ ದೀಪ. ಆತ ಅವಳಿಗೆ ವಿಧೇಯ, ಅವಳು ಅವನಿಗೇ ಮೀಸಲು.

"ಯಾವಾಗ ಬರ್ತೀಯಾ ರಾಜಾ?"

ಆಫೀಸಿಗೆ ಹೋದ ಅವನನ್ನು ಕಾಯುತ್ತಾ, ಬೋರು ಹೊಡೆಯುತ್ತಿದ್ದ ರೂಮಿನಲ್ಲಿ ಏನೂ ಮಾಡದೇ ತೋಚದ ಇವಳು ಕೇಳುತ್ತಿದ್ದಳು.

"ಇರು ಪುಟ್ಟಾss, ಬಂದ್ಬಿಟ್ಟೆ ಇನ್ನೊಂದು ಕಾಲು ಗಂಟೆಯಲ್ಲಿ, ನೀನು ತಯಾರಾಗಿರು ಹೊರಗೆ ಹೋಗೋಣ, ಬರ್ತಾ ಊಟನೂ ಮಾಡ್ಕೊಂಡ್ ಬರೋಣ" ಅವನ ಇಂಪಾದ ದ್ವನಿ ಎದೆಗಿಳಿಯುತ್ತಲೇ ನವಿಲಾಗಿ ಅವಳ ಮನ ಗೆಜ್ಜೆ ಕಟ್ಟಿ ಕುಣಿಯತೊಡಗಿತ್ತು. ಜಿಂಕೆಯಂತೆಹಾರಿ, ತಲೆಬಾಚಿ, ಚೆನ್ನಾಗಿ ಬಿಸಿ ನೀರಿನಲ್ಲಿ ಮುಖತೊಳೆದು, ಬೇರೆ ಡ್ರೆಸ್ ಹಾಕಿ ಕಾಯತೊಡಗಿದ್ದು ಇಂದು ಬರಿ ನೆನಪಾಗಿ ಕಾಡತೊಡಗುತ್ತದೆ. ಎದೆಯಲ್ಲಿ ನೂರು ಶೂಲ ಚುಚ್ಚಿದಂತೆ ಮನ ಮುಳ್ಳಾಗುತ್ತದೆ. ಬರುವ ಇನಿಯನಿಗಾಗಿ ಕಾಯುತ್ತಿರುವುದರಲ್ಲಿ ಎನು ಸುಖವಿದೆ, ಎಂಥಾ ಅಮಲಿದೆ, ಸೊಗಸಿದೆ, ಚೆಲುವಿದೆ, ಮತ್ತೇ ಬಾರವೇ ಆ ಸುದಿನಗಳು ? ಅವನು ಯಾವಾಗ್ಲೂ ಹೇಳ್ತಾನೆ ಇರ್ತಿದ್ದ, "ಸುದಿನಗಳು ನಮಗೆ ಬರ್ತಾವೆ ಇರು, ಕಾಯೋಣ’ ಆದ್ರೆ ಕಾಯೋದು ಎಷ್ಟು ಹಿಂಸೆ ಅಂತಾ ಕಾಯೋರಿಗೆ ಗೊತ್ತು.

ಆಫೀಸಿನಿಂದ ಬರುವ ಅವನನ್ನು ಏದುರುಗೊಳ್ಳುವ ಅವಳ ಕಣ್ಣ ತುಂಬ ಆಗಸದ ನೀಲಿ ನೀಲಿ, ಅವನ ಕಣ್ಣಲ್ಲಿ ಇಣುಕುವ ಮಿನುಗು ನಕ್ಷತ್ರ ನಗೆ. ಒಳಗೆ ಬಂದು ಹಾಸಿಗೆ ಮೇಲೆ ಮೈಚೆಲ್ಲಿದ ಅವನಿಗೆ ’ನೀರು ಕುಡಿ ರಾಜಾ, ಕಾಫಿ ತರಿಸ್ಲಾ? ಎನ್ನುವ ಆಕೆಯ ಎರಡು ಮಾತೇ ಸಾಕು ಆಯಾಸವೆಲ್ಲ ಕಳೆದು ನವ ಉತ್ಸಾಹ ತುಂಬಿಕೊಳ್ಳಲು.

ಬಿಕ್ಕುತ್ತಿತ್ತು ಗತಿಸಿದ ಕ್ಷಣ. ಅವನೊಂದಿಗೆ ಕಳೆದ ಮೂರು ದಿನಗಳು ಗೊತ್ತೇ ಆಗಲಿಲ್ಲ. ನಮ್ಮ ಬದುಕು ಯಾವುದು? ನಾವು ಬಯಸುವ ಬಾಳು ನಮ್ಮದಾಗುವುದಾ? ಜೊತೆಯಾಗಿ ಇಟ್ಟ ಹೆಜ್ಜೆ, ತೋಳಲ್ಲಿ ತೋಳು ಬಳಸಿ ನಡೆದ ನಡೆ, ಹಂಚಿಕೊಂಡ ತುತ್ತು, ಕಾಡಿ-ಬೇಡಿ ಸವಿದ ಸವಿ, ಸರಸ-ವಿರಸ, ಮೋಡವಾಗಿ ಕವಿದು, ಮತ್ತೆ ಮಳೆ ಸುರಿಸಿದ ಅವಳ ಪ್ರೇಮ, ಸಮುದ್ರದಂತೆ ಅವಳ ಮೇಲೆ ಆವರಿಸಿ ಸುರಿದು, ಮುಳುಗಿಸಿ ಎಳಿಸಿದ ಅವನ ಮುತ್ತು ಮಳೆ ಎಲ್ಲ ನೆನಪಾಗಿ ಕಣ್ಣಂಚಿಗೆ ಹನಿ ಮುತ್ತು ಇಣುಕುತ್ತಿರುತ್ತದೆ. ಒಳಗೆಲ್ಲಾ ಮೌನ ತುಂಬಿಕೊಂಡು ಉಸಿರು ಭಾರವಾಗಿ ಕುಳಿತು ಆ ಮೌನದಲ್ಲಿ ಬಿಕ್ಕಳಿಕೆ ಕರಗತೊಡಗುತ್ತದೆ. ಹೊರಗೆ ಬಾರದೇ ಒಳಗೆ ಅದುಮಿಡದ ಸಂಕಟಕ್ಕೇ ಒಳಗೇ ನರಳತೊಡಗುತ್ತಾಳೆ.

ನಿನಗೊಂದಿಷ್ಟು ನೆನಪಿನ ಹೂ ಮುತ್ತುಗಳು. ಎತ್ತಿಕೋ ಮೆಲ್ಲಗೇ.....

ಒಲವಿನಿಂದ ನಿನ್ನವಳು.

ಚಿನ್ನು.

Sunday, April 6, 2008

ಮೂಕ ಹಕ್ಕಿಯು ಹಾಡುತಿದೆ

ಮೂಕ ಹಕ್ಕಿಯು ಹಾಡು, ಮೌನ ರೋಧನ, ಕಣ್ಣು ಕಟ್ಟಿ ಕಾನನದಲ್ಲಿ ಬಿಟ್ಟು ಹಾರು ಎಂದಂತೆ. ಹಾರುವ ವ್ಯಾಪ್ತಿ, ಹರವು ಎಲ್ಲ ಮುರುಟಿಹೋದ ಕನಸುಗಳಾಗಿವೆ. ಕನಸುಗಳೊಳಗೊಂದು ಕನವರಿಕೆ. ಕನವರಿಸುವ ಕನಸು ಗಾವುದ ಗಾವುದ ದೂರ. ನನ್ನ ಧ್ವನಿ ಕೇಳದ ಲೋಕದಲ್ಲಿ ಮನಸಿನ ಮಾತಿಗೆ, ರೋಧಿಸುವ ಹೃದಯಕ್ಕೆ ಸಾಂತ್ವನ ನಿನ್ನ ಎರಡು ಹನಿ ಸವಿಮಾತು. ಪ್ರೀತಿಯ ಗುಟುಕು. ದಿನವೂ ಗುಟುಕುವ ಕಾಳು, ಕಡ್ಡಿ ವಿಷವಾಗಿ, ಒಡಲಲ್ಲೇ ಸಂಕಟ ನುಂಗಿ, ದೈನ್ಯವೇ ಗಂಟಲಲ್ಲಿ ನೋವಾಗಿ ಕುಳಿತು ಅಳುವೇ ತುಟಿಗೆ ಬರುತ್ತದೆ. ಆದರೆ ಕಣ್ಣೀರು ಬತ್ತಿ, ಎದೆ ಹಿಂಗಿ ಹೋದ ಹಾಗೆ ಜೋಡಿ ಹಕ್ಕಿಯ ನೆನಪು ಕಾಡುತ್ತದೆ. ಬೇರಾವುದೋ ದೇಶಕ್ಕೆ ಹೋದ ಜೋಡಿಗಾರ ಹಕ್ಕಿಯ ನೆನೆದು ಹಕ್ಕಿಯ ಮಾತುಕತೆ ಎಲ್ಲ ಮೌನದಲ್ಲಿ, ಮೂಕತೆಯಲ್ಲಿ. ಹಾಡು ಹಾಡುತ್ತಿಲ್ಲ, ಮುಗಿಲು ಮಾತಾಡುತ್ತಿಲ್ಲ, ಮೋಡ ಮುಸುಕಿನಲಿ ಮುಸುಗುಡುತ್ತಿಲ್ಲ, ಗಿಡ ಗಂಟೆಗಳ ಕೊರಳ ಗಾನವೂ ರುಚಿಸುತ್ತಿಲ್ಲ. ಮುಗಿಲ ಬಣ್ಣ, ಮೋಡ, ಮಳೆ. ನವಿಲು ನಾಟ್ಯ, ಎಲ್ಲ ನೀರಸವಾಗಿ ಈ ಹಕ್ಕಿ ಪಿಳಿಪಿಳಿ ಕಣ್ಣು ಬಿಟ್ಟು ಹಕ್ಕಿ ಇನಿಯನ ಆಗಮನದ ಹಾದಿ ಕಾಯುತ್ತಿದೆ. ಒಂಟಿತನ ಇಷ್ಟು ಶಾಪವೇ ? ಅಗಲಿಕೆ ಇಷ್ಟು ಕ್ರೂರಿಯೇ?
ತಾಯಿ ಹಕ್ಕಿ ಮರಿ ಹಕ್ಕಿಗಾಗಿ ದೇವರಲ್ಲಿ ಮೊರೆಯಿಡುತ್ತಿತ್ತು. ಬರುವ ಸುದಿನವನ್ನು ನೆನೆದುಕೊಂಡೇ ಕಾಲ ಕಳೆಯಬೇಕಾಗಿದೆ. ಎಂದು ಬರುವುದು ಆ ಕಾಲ, ನೀ ಹೇಳುವ ಆ ಸುದಿನ ? ಆ ಕನಸು ನನಸಾಗುವ ಸುಮೂಹೂರ್ತ. ? ನನಸಿನಲ್ಲಿ ಆಗದ್ದನ್ನು ಕನಸಿನಲ್ಲಿ ಕಾಣಬೇಕಿದೆ. ಕಂಡು ಸಂತಸಪಡಬೇಕಿದೆ. ಇಷ್ಟೇನಾ ಬದುಕು ?

Friday, April 4, 2008

ಯಾವ ಮೋಹನ ಮುರುಳಿ ಕರೆಯಿತೋ.......

ವಿನಾಕಾರಣ ನಿನ್ನೊಂದಿಗೆ ಮುನಿಸ್ಕೊಂಡು ಮಾತುಬಿಟ್ಟಿದ್ದೆ. ಗೊತ್ತು ನಿನ್ನದೇನೂ ಅಂಥಾ ಮಹಾ ತಪ್ಪಿರಲಿಲ್ಲ ರಾಜಾ. ಮುನಿಸಿಕೊಳ್ಳುವ ಕಾರಣವೂ ಇರಲಿಲ್ಲ. ಆಗಿದ್ದು ಇಷ್ಟೇ ! ನೀನು ಜಯನಗರದ ನಿನ್ನ ಆಫೀಸಿನಿಂದ ದಿನಕ್ಕೊಮ್ಮೆಯಾದರೂ ನಾನುಳಿದುಕೊಂಡ ನನ್ನ ಗೆಳತಿಯ ಮನೆಯಿದ್ದ ವಿಜಯನಗರಕ್ಕೆ ಬರಲಿ, ಬಂದೇ ಬರುತ್ತಿಯೆಂದು ನಿರೀಕ್ಷಿಸಿದ್ದೆ. ಆದರೆ ನಾನಂದುಕೊಂಡಂತೆ ನಿನಗೆ ಬರಲಾಗಿರಲಿಲ್ಲ, ನಿನ್ನವೇ ಆದ ಕೆಲಸದ ಒತ್ತಡಗಳ ನಡುವೆ. ನಾನು ಬೇಸರ, ಮುನಿಸಿನಿಂದಲೇ ತಂಗಿಯ ಮನೆಗೆ, ದೊಡ್ಡನೆಕ್ಕುಂದಿಗೆ ಹೊರಟು ಬಂದಿದ್ದೆ. ನೀನು ಮಾತಾಡಿಸುವ ಪ್ರಯತ್ನ ಪಟ್ಟು, ಕೊನೆಗೆ ಸುಮ್ಮನಾಗಿದ್ದೆ. ನೀನು ನಿನ್ನ ಜಾಗದಲ್ಲಿ ಸರಿಯಿದ್ದೆ, ನಾನು ನನ್ನದೇ ತರ್ಕದಲ್ಲಿ. ಮೊದಮೊದಲು ಸಿಟ್ಟಿನಲ್ಲಿ ಗೊತ್ತಾಗದೇ ಕಳೆದ ದಿನಗಳನ್ನು ಮುಂದೆ ಹಾಗೆ, ನೀನಿಲ್ಲದ ಕ್ಷಣಗಳನ್ನು, ದಿನ ಕಳೆಯುವುದೇ ಕಷ್ಟವಾಗಿ ಹೋಯಿತು. ಕ್ಷಣಗಳು ಯುಗವಾಗಿ ಹಿಂಸಿಸತೊಡಗಿದ್ದವು. ಅಗಲಿಕೆಯ ನೋವು ಕಣ್ಣಿರಾಗಿ ಹರಿಯತೊಡಗಿತ್ತು. ನನ್ನದೇ ಹಠ, ನನ್ನದೇ ಮುನಿಸಿನಲ್ಲಿ ಎಂಥದೋ ದೊಡ್ಡ ಕಾರಣವಿರಬಹುದು ಎಂದೇ ತಿಳಿದಿದ್ದ ನನ್ನ ಭ್ರಮೆ ನೀನು ದೂರವಾಗುತ್ತಲೂ, ಅಲ್ಲ, ನಿನ್ನಿಂದ ನಾನು ದೂರವಾಗುತ್ತಲೇ ಗಾಳಿ ಹೋದ ಬಲೂಲಿನಂತಾಗತೊಡಗಿತ್ತು. ಮನಸ್ಸು ನಿನ್ನನ್ನು ನೆನೆದು ನೆನೆದು ನೋಯುತ್ತಿತ್ತು, ಬೆಂದು ಕರಕಲಾಗತೊಡಗಿತ್ತು. ನೀನಿಲ್ಲದ ಬದುಕು ಇಷ್ಟು ರಸಹೀನವೇ ? ಇದುವರೆಗೆ ಗೊತ್ತಿಲ್ಲದ ಸತ್ಯವೊಂದು ನನ್ನನ್ನು ಇನ್ನಷ್ಟು ನಿನ್ನ ಹತ್ತಿರ ಬರುವಂತೆ ಮಾಡಿತ್ತು. ಆ ನಾಲ್ಕೈದು ದಿನಗಳು ನಾನುಭವಿಸಿದ ನರಕಯಾತನೆಯೇ ಇದಕ್ಕೆ ಸಾಕ್ಷಿ. ನೀನು ಪಟ್ಟ ನೋವು ನಿನ್ನ ಎಸ್.ಎಮ್.ಎಸ್.ನಿಂದ ಗೊತ್ತಾಗುತ್ತಿದ್ದರೂ ನಾನೇ ಸರಿಯೆಂಬ ನನ್ನ ಅಹಂಕಾರ ನಿನ್ನನ್ನು ಕರೆಯುವಂತೆ ಮಾಡಗೊತ್ತಿರಲಿಲ್ಲ. ನನಗೆ ಗೊತ್ತು ನೀನಂಥಾ ಕಟುಕನಲ್ಲ. ನನ್ನ ಒಂದು ಕರೆಗೆ ಕರಗಿಹರಿಯುವ ಸೆಲೆಯಾಗಿಬಿಡುತ್ತಿ. ಮುದ್ದುಗರೆಯುವ ಮೋಡವಾಗಿ ಬಿಡುತ್ತಿ. ನಾನು ನಿನ್ನ ಪ್ರೇಮದ ಬಿಸಿಯಲ್ಲಿ ಮೇಣವಾಗಿ ಕರಗುತ್ತೇನೆ. ನೀನು ನನ್ನನ್ನೂ ನನ್ನ ಅವಿವೇಕವನ್ನೂ ಮನ್ನಿಸಿ, ಮತ್ತೆ ಬಾಚಿಕೊಂಡು ಮುತ್ತಿನ ಮಳೆಗರೆಯುತ್ತಿ. ಮೋಡಗಟ್ಟಿದ ನೋವೆಲ್ಲ ಧಾರಾಕಾರವಾಗಿ ಸುರಿದಾಗಲೇ ಮನಸ್ಸು ಹಗುರವಾಗುವುದು. ಎಂದೆಲ್ಲ ನಾನೇ ನನ್ನ ಯೋಚನೆಯಲ್ಲಿ ಕನಸು ಕಾಣುತ್ತಿದ್ದೇನೆ ಹೊರತು ನಿನ್ನನ್ನು ಹೇಗಿದ್ದೀಯಾ ಅಂತಾ ಕೂಡ ಕೇಳಲು ಧೈರ್ಯಮಾಡಲಿಲ್ಲ ರಾಜಾ. ಆದರೆ ಒಂದು ಕ್ಷಣವೂ ನಿನ್ನನ್ನಗಲಿ ನಾ ಬದುಕಲಿಲ್ಲ, ಉಸಿರಾಡುವ ಶವದಂತಾಗಿದ್ದೆ. ಬದುಕೆಂದರೆ ನೀನು, ನೀನೆಂದರೆ ನನ್ನ ಸುಂದರ ಬದುಕು. ಇದೇ ಸತ್ಯ, ಇದೇ ನಿತ್ಯ.

ಸಹನೆ ಕುಸಿಯತೊಡಗಿತ್ತು,ಮುನಿಸಿನ ಜಾಗವೆಲ್ಲ ಪಶ್ಚಾತ್ತಾಪ ತುಂಬಿಕೊಂಡು ನಿನ್ನನ್ನು ಯಾವಾಗ ನೋಡುವೇನೋ? ಈ ಕಣ್ಣುಗಳು ಎಂದು ನಿನ್ನನ್ನು ಕಣ್ಣತುಂಬ ತುಂಬಿಕೊಂಡು , ಅಲ್ಲೇ ಬಚ್ಚಿಟ್ಟುಕೊಳ್ಳುತಾವೋ ಎನಿಸುವಷ್ಟು ತೀವ್ರವಾದ ವೇದನೆ, ಆಸೆ, ಹಂಬಲ, ನಿನ್ನ ಮೇಲೆ ಪ್ರೀತಿ ಉಕ್ಕಿ ಉಕ್ಕಿ ಹರಿಯತೊಡಗಿತ್ತು, ಎದೆಯಲ್ಲಿ ಹಾಗೇ ಹನಿಯತೊಡಗಿತ್ತು. ತಡೆಯಲಾರದೇ ಭಾನುವಾರದಂದು ನಿನ್ನ ಗೆಳೆಯನಿಗೆ ಹೇಳಿದೆ ನಮ್ಮಲ್ಲ ಜಗಳದ ಸುದ್ದಿ, ಆತ ಕೇಳಿ ಸುಮ್ಮನೆ ನಗಾಡಿದ. ಏನು, ನೀವು ಚಿಕ್ಕ ಮಕ್ಕಳಂತೆ ಆಡ್ತೀರಾ. ಬಹುಶಃ ಅವನು ನಿನಗೆ ಹೇಳಿರಬಹುದು,ನಾನು ಕಾಲ್ ಮಾಡಿದ ಬಗ್ಗೆ. ನಿನ್ನಿಂದ ಯಾವ ಕಾಲೂ ಬರಲಿಲ್ಲ. ಇಡೀ ದಿನ ಜಾತಕ ಪಕ್ಷಿಯಂತೆ ಕಾ ದು.. , ಸಂಜೆ ನಾನೇ ನಿನಗೆ ಪೋನಾಯಿಸಿದೆ. ನೊಂದ ಧ್ವನಿಯಲ್ಲಿ. ಬೆಂದ ಮನದಿಂದ ನೋವೇ ಕಣ್ಣೀರಾಗಿ, ಮತ್ತೆ ಮತ್ತೆ ಒಳಗೇ ಬಿಕ್ಕುತ್ತಾ ನಿನ್ನೊಂದಿಗೆ ಮಾತಿಗಿಳಿದಿದ್ದೆ. ನೆನಪಿದೆಯಾ? ಏನೆಲ್ಲ ಮಾತಾಡಿದೆವು? ಯಾವುದೂ ನೆನಪಿಲ್ಲ. ಇಬ್ಬರೂ ಕರಗಿ ನೀರಾಗಿದ್ದೆವು. ಈ ಕ್ಷಣಕ್ಕಾಗಿಯೇ ಹಾತೊರೆಯುತ್ತಿದ್ದೇವು. ಆದರೆ ನೀನು ಕರೆಯ ಕೇಳಿ ಓಡಿ ಬರುವ ಕರುವಿನಂತೆ, ಹಠ ಮರೆತು ಓಡಿ ಬರುವ ಮುದ್ದು ಮಗುವಿನಂತೆ ಬೈಕ್ ಏರಿ ಹೊರಟೇ ಬಿಟ್ಟೆ. ಅಬ್ಬಾ... ನಾಲ್ಕೈದು ದಿನ ಪಟ್ಟ ಸಂಕಟ,ನೋವು, ವನವಾಸ, ಪರಿತಪಿಸಿದ್ದು ಎಲ್ಲ ಕ್ಷಣದಲ್ಲಿ ಮರೆತು ನೀ ಬರುವ ದಾರಿಯನ್ನೇ ಕಾಯತ್ತಿದ್ದೆ.

ಗಾಳಿಯಲ್ಲಿ ಬೈಕ್ ಓಡಿಸಿಕೊಂಡು ಬಂದವನಂತೆ ೧೫-೨೦ ನಿಮಿಷದಲ್ಲಿ ನೀನು ನನ್ನೆದುರಿಗೆ, ಬೈಕ್ ಮೇಲೆ ಹಸಿರು ಜಾಕೆಟ್, ಹೆಲ್ಮೆಟ್ ಹಾಕ್ಕೊಂಡು, ನಿನ್ನ ತೇವದ ಕಣ್ಣುಗಳು ನನ್ನನ್ನು ಅಡಿಯಿಂದ -ಮುಡಿವರೆಗೆ ತೋಯಿಸುತ್ತಿದ್ದವು. ಇನ್ನು ಮುಂದೆ ಹೀಗೆಲ್ಲ ಚಿತ್ರಹಿಂಸೆ ಕೊಡಬೇಡಾ, ನೀನೂ ನರಳಬೇಡ ಎನ್ನುವಂತೆ ಆ ಜೋಡಿ ಕಂಗಳು ಆರ್ದ್ರವಾಗಿ, ಹಿಡಿಯಾಗಿ ನನ್ನ ಕರುಳನ್ನು ಹಿಂಡುತ್ತಿದ್ದವು. ನಾನು ಮರುಮಾತಾಡದೇ ಜತೆಯಲ್ಲಿ ತಂಗಿ ಇದ್ದದ್ದೂ ಮರೆತು ನಾನು ಈಗ ಬರ್ತೀನಿ, ಏ.ಟಿ.ಏಮ್.ಗೆ ಹೋಗ್ಬೇಕು ಎಂದು ನಿನ್ನ ಹಿಂದೆ ಬೈಕ್ ಏರಿ ಕುಳಿತೇ ಬಿಟ್ಟೆ. ಮನೆದಾಟಿ ಮುಂದೆ ಮೇನ್ ರೋಡಿಗೆ ಸೇರುವ ಮೊದಲೇ ನಾನು ಹಿಂದಿನಿಂದ ಗಟ್ಟಿಯಾಗಿ ತಭ್ಬಿಕೊಂಡು ನಿನ್ನ ಬೆನ್ನು ತೋಯಿಸುತ್ತಿದ್ದೆ. ನೀನು ಇಡೀ ದಿನ ಕುಳಿತು, ನೋವ ಮರೆಯಲು ಡ್ರಿಂಕ್ಸ್ ಮಾಡಿದ್ದು ನಿನ್ನ ಹತ್ತಿರಕ್ಕೆ ಬಂದಾಗಲೇ ಗೊತ್ತಾಗಿತ್ತು. ಹೃ‍ದಯವೆ ಒಡೆದು ಹೋಗುವಂತಾ ನೋವು, ನರಳಿಕೆ, ಅಗಲಿಕೆ ಮಿಲನದಲ್ಲಿ ಬಿಕ್ಕುತ್ತಿತ್ತು. ನೀನು ಮೌನವಾಗಿ ಗಾಡಿ ಓಡಿಸುತ್ತಿದ್ದರೂ ನೀನು ಆಗಾಗ ಕಣ್ಣು ಒರೆಸಿಕೊಳ್ಳುತ್ತಿದ್ದುದು ನನಗೆ ಗೊತ್ತಾಗುತ್ತಿತ್ತು. ಸಾರೀ ರಾಜಾ....ಕ್ಷಮಿಸಿಬಿಡು ಇನ್ನೆಂದು ಹೇಗೆ ಹುಚ್ಚಿ ತರಾ ಆಡಲ್ಲಾ, ನಿನಗೆ ನೋವು ಕೊಡಲ್ಲಾ ..ಏನೇನೋ ಮನ ಬೇಡುತ್ತಿತ್ತು, ಆದರೆ ಮಾತು ಮೌನವಾಗಿ , ಮೌನ -ಮಾತುಗಳು ನಿಶ್ಯಬ್ದವಾಗಿ ನಮ್ಮ ಮಧ್ಯೆ ಕುಳಿತಿತ್ತು, ನಮ್ಮನ್ನೇ ನೋಡುತ್ತಿತ್ತು. ಅಲ್ಲಿ ಇಲ್ಲಿ ಸುತ್ತಾಡಿ , ತಲೆಗೆ ತೋಚಿದ್ದು ಮಾತಾಡಿ ಕೊನೆಗೆ ವಾಪಸ್ಸು ಮನೆಗೆ ಮರಳುವ ಹಾದಿಯಲ್ಲಿ ಏನೂ ತೋಚದೇ ಒಂದು ಕಡೆ ನೀನು ಗಕ್ಕನೇ ಬೈಕ್ ನಿಲ್ಲಿಸಿದೆ, ನಾನು ಬೈಕ್ ಹಾರಿ ಇಳಿದು ಮುಂದೆ ಬಂದು ಗಟ್ಟಿಯಾಗಿ ತಬ್ಬಿಕೊಂಡು, ಮುದ್ದುಗರೆದು, ಒಂದೇ ಒಂದು ಕ್ಷಣ ಕೈ ಜಾರಿ ಹೋಗದಂತೆ , ಹಿಡಿದೇ ಬಿಟ್ಟೆನೆನ್ನುವ ಹಪಿಹಪಿಯಲ್ಲಿ, ಕವ್ವನೇ ಕವಿದ ಕತ್ತಲಲ್ಲಿ, ನಿನ್ನೊಳಗೆ ನನ್ನನ್ನು ತುಂಬಿಕೊಡುವ, ಜೀವ ಜೀವ ಬೆರೆಸುವ, ನಿನ್ನ ನೋವನ್ನೆಲ್ಲ ಹೀರುವಂತಾ ಸಿಹಿ-ಸಿಹಿಯಾದ ಮುತ್ತೊಂದು ರಸನಿಮಿಷದಲ್ಲಿ ಮತ್ತೇರಿ, ಎರಡು ಮನಗಳನ್ನು ಸಾಂತ್ವನಗೊಳಿಸತೊಡಗಿ, ಅಷ್ಟೇ ಚುರುಕಿನಿಂದ ತಟ್ಟನೇ ಬೇರೆಯಾಗಿ, ನಿನ್ನ ಭುಜದಕ್ಕೆ ವಿರಮಿಸಿತು. ಮುಂದೆ ಮಾತುಗಳು ಬೇಕಿರಲಿಲ್ಲ.

ರಾಜಾ....ಅಂದೇ ನಾನು ನಿನ್ನ ಪ್ರೀತಿಯಲ್ಲಿ ನನ್ನ ಬದುಕಿನ ಭರವಸೆಯನ್ನು ಕಂಡಿದ್ದೆ. ಸಾಕಲ್ಲವಾ ಇಷ್ಟು.

Monday, March 31, 2008

ರೂಪಾ ...

ರೂಪಾ ನನ್ನ ಬಾಲ್ಯದ ಗೆಳತಿ. ಮನೆ ಪಕ್ಕದವಳು. ನಾವಿಬ್ಬರೂ ಜತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಅವಳಮ್ಮ ಯಾವಾಗಲೂ ’ಮಡಿ’ಯಲ್ಲಿರುತ್ತಿದ್ದುದರಿಂದ ನಮಗೆ ಅವರ ಸಂಪರ್ಕ್ ದೂರದಿಂದಲೇ. ಯಾಕೆ ದಿನದ ಅಡುಗೆಯನ್ನೂ ಮಡಿಯಲ್ಲಿ ಮಾಡುತ್ತಿದ್ದರು? ಯಾಕೆ ಮಾಡಬೇಕು? ಮಡಿ ಹೆಸರಿನಲ್ಲಿ ಯಾವಾಗಲೂ ಗಳುವಿನ ಮೇಲೋ, ಗೂಟದ ಮೇಲೋ ತೂಗಾಡುವ ಕೊಳಕಾದ ಸೀರೆಯುಟ್ಟು, ಅದನ್ನು ಮಡಿಯೆಂದು ಯಾಕೆ ಕರೆಯುತ್ತಿದ್ದರೋ ? ಎಂದೆಲ್ಲ ಯೊಚಿಸುತ್ತಿದ್ದೆ ಆದರೆ ಕೇಳುವ ಧೈರ್ಯಬರುತ್ತಿರಲಿಲ್ಲ. ಬದಲಿಗೆ ಜಾತಿಯ ಬಗ್ಗೆ ನನಗೆ ಮುಜುಗರ, ಕಿರಿಕಿರಿಯೆನಿಸುತ್ತಿತ್ತು.
ಅವರಮ್ಮನನ್ನು ನೋಡಿದರೆ ಸದಾ ನಸುನಗುತ್ತಿದ್ದಾರೆನೋ ಅನಿಸುವಂತೆ , ಮಾಸದ ನಗೆಯೊಂದು ಆಕೆಯ ತುಟಿಯಂಚಿನಲ್ಲಿರುತ್ತಿತ್ತು. ನಮ್ಮ ಉಳಿದ ಹುಡುಗರ ಅವ್ವಂದಿರನ್ನು ತೂಗಿ ನೋಡಿದರೆ ರೂಪನ ಅಮ್ಮನೇ ಎಲ್ಲದರಲ್ಲಿ ಮಾಡರ್ನ, ಮತ್ತು ಹೊಸಕಾಲದ ಅಮ್ಮನಂತಿದ್ದಳು. ಗಿಡ್ಡದಾದ ಬ್ಲೌಸ್ ಹಾಕುತ್ತಿದ್ದಳು, ಗಿಡ್ಡದಾದ ಸೆರಗು ತೆಗೆಯುತ್ತಿದ್ದಳು. ಅದು ಆಗಿನ ಫ್ಯಾಶನ್. ಅಪ್ಪ ಯಾವುದೋ ಊರಲ್ಲಿ ಕೆಲಸಕ್ಕೆ ಅಂತಾ ಅಲ್ಲೇ ಇರುತ್ತಿದ್ದರು, ವಾರಕ್ಕೊಮ್ಮೆ ಅವರು ಬರುತ್ತಿದ್ದುದು. ಮನೆಯಲ್ಲಿ ರೂಪಾ ಮತ್ತು ಅವಳ ಅಣ್ಣ ಅನಿಲ್ ನ ಗಲಾಟೆ ಬಿಟ್ಟರೆ ಅವರ ಅಮ್ಮ-ಅಪ್ಪ ಮಾತೇ ಆಡುವುದಿಲ್ಲವೇನೋ ಎಂಬಂತೆ ತಮ್ಮ ತಮ್ಮ ಲೋಕದ ಮೌನದೊಳಗೆ ಇರುತ್ತಿದ್ದರು. ಪ್ರತಿಬಾರಿಯೂ ಅವಳ ತಂದೆ ಶಾಲೆಗೆ ಕರೆಯಲು ಹೋದ ನನಗೆ ’ನಿನ್ನ ಹೆಸರೇನೆಂದು’ಕೇಳುತ್ತಿದ್ದರು, ಮತ್ತು ನಾನು ಉತ್ತರಿಸುತ್ತಿದ್ದೆ. ಮತ್ತೊಮ್ಮೆ ಅವರು ಬರುವುದರಲ್ಲಿ ಮರೆತು ಬಿಟ್ಟಿರುತ್ತಿದ್ದರೋ ಏನೋ ಮತ್ತೆ ಕೇಳುತ್ತಿದ್ದರು. ಕೊನೆಗೆ ಅವರೇ ತಮಗೆ ಸೂಕ್ತವಾಗುವಂತೆ ನನ್ನ ಹೆಸರನ್ನು ’ಕಾಳಿಕಾ’ಎಂದು ಬದಲಾಯಿಸಿಕೊಂಡರು. ನನಗೆ ಕಾಳಿಕಾ ಎಂದರೇನೆಂದು ಗೊತ್ತಿರದ ಕಾರಣ ಸುಮ್ಮನಾದೆ. ಯಾವುದೋ ದೇವಿ ಹೆಸರೆಂದಷ್ಟೇ ಗೊತ್ತು. ಗುಣವಿಶೇಷದ ಬಗ್ಗೆ ಗೊತ್ತಿರಲಿಲ್ಲ. ಈಗ ಅನಿಸುತ್ತದೆ ಅವರು ವ್ಯಂಗತನದಲ್ಲಿ ಹಾಗೇ ಹೆಸರು ಇಟ್ಟರೋ, ನಾನಂತೂ ಕಾಳಿಕಾ ಎಂದು ಗುರುತಿಸುವಷ್ಟರ ವಿರುದ್ಧವಾಗಿ ರೂಪ ಬಣ್ಣದವಳಿದ್ದೆ. ಇರಲಿ ಆ ಮಾತು. ಏನೋ ತೋಚಿರಬಹುದು. ಅಥವಾ ನನ್ನ ಜಾತಿ ಸೂಚಕವಾಗಿ ಅವರು ಅದನ್ನು ಬಳಸಿದ್ದರೋ ಏನೋ ಗೊತ್ತಿಲ್ಲ. ಅವರನ್ನು ಕೇಳಬೇಕೆಂದರೆ ಎಲ್ಲಿದ್ದಾರೋ, ಇದ್ದಾರೋ ಇಲ್ಲವೋ ಈ ಲೋಕದಲ್ಲಿ ಅದೂ ಸಹ ಗೊತ್ತಿಲ್ಲ. ಈಗ ಈ ಪ್ರಶ್ನೆ ಯಾಕೆ ನೆನಪಾಯಿತೋ ಗೊತ್ತಿಲ್ಲ. ಅದಿರಲಿ, ರೂಪಾಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ, ತುಸು ತೊದಲುತ್ತಿದ್ದಳು. ಹಾಗೇ ನಮಗೂ ಅಭ್ಯಾಸವಾಗಿ ಹೋಗಿತ್ತು.
ಅವರಮ್ಮ ’ಕಡಿಗೆ’ಯಾದಾಗ ( ಮುಟ್ಟಾದಾಗ) ಮೂರು ದಿನ ಹೊರಗೆ ಹುಸಿ( ಪಡಸಾಲೇ)ಯಲ್ಲಿ ಕೂರುತ್ತಿದ್ದರು. ಆಗ ಯಾರೋ ಅಜ್ಜಿ ಬರುತ್ತಿತ್ತು ಮಕ್ಕಳೀಗೆ ಬೇಯಿಸಿಹಾಕಲು. ಹಾಲು ಕಾಯಿಸುವುದು, ಟೀ ಮಾಡುವುದು ಇತ್ಯಾದಿ ಈ ಮಕ್ಕಳೇ ಮಾಡಿಕೊಳ್ಳುತ್ತಿದ್ದವು ಬತ್ತಿಸ್ಟೋವ್ ಮೇಲೆ. ಒಮ್ಮ್ಮೆ ನೆರೆಹೊರೆಯಲ್ಲಿ ಹಾಹಾಕಾರವೆದ್ದಿತ್ತು, ಬೊಬ್ಬೆಹಾಕುವುದು ಇತ್ಯಾದಿ ಕೇಳಿಸಿತು, ನಾವೆಲ್ಲ ಮನೆಯಿಂದ ಹೊರಗೋಡಿ ಬಂದಾಗ ತಿಳಿದಿದ್ದು ’ರೂಪಾಳಿಗೆ ಬೆಂಕಿ ಹತ್ತಿಕೊಂಡಿತ್ತೆಂದು. ಓಣಿಯ ಒಕ್ಕಲಿಗ ಹುಡುಗರು ಧಾವಿಸಿ ಆಕೆಯನ್ನು ಉಳಿಸಿದ್ದರು. ತೊಟ್ಟ ಪ್ರಾಕಿಗೆ ಬೆಂಕಿತಾಗಿದೊಡನೆ ಕಿರುಚುತ್ತ ಹಿತ್ತಲಿಗೆ ಓಡಿ, ಬೆಂಕಿ ಇನ್ನಷ್ಟು ಹೊತ್ತಿಕೊಳ್ಳುವಂತಾಗಿತ್ತು. ರೂಪಾಳ ತೊಡೆ, ಕಾಲು , ಸ್ವಲ್ಪ ಹೊಟ್ಟೆ ಸುಟ್ಟಿದ್ದವು, ಮತ್ತೆಲ್ಲೂ ಸುಟ್ಟಿರಲಿಲ್ಲ. ದೈವದ ದಯೆಯಿಂದ ಜೀವಕ್ಕೇನೂ ಅಪಾಯವಿರಲಿಲ್ಲ. ಬೆಂಕಿಯನ್ನು ಬೇಗನೇ ಆರಿಸಿದ್ದರು. ಈ ಘಟನೆಯಿಂದಾಗಿ ಅವಳಿಗೆ ದೀರ್ಘಕಾಲ ರಜೆಯಾಯಿತು. ನಾನು ದಿನಾ ಅವಳಿಗೆ ಭೆಟ್ಟಿಮಾಡಿ ಶಾಲೆಯ ಪಾಠಗಳಬಗ್ಗೆ, ಹೋಂ-ವರ್ಕ , ಅಭ್ಯಾಸ ಇತ್ಯಾದಿಗಳ ಬಗ್ಗೆ ವರದಿಮಾಡುತ್ತಿದ್ದೆ. ನಾನು ಯಾಕೆ ಈ ಘಟನೆಯ ಬಗ್ಗೆ ಹೇಳಿತ್ತಿದ್ದೆನೆಂದರೆ, ಈ ಘಟನೆಯ ನಂತರ ಆಶ್ಚರ್ಯಕರವಾದ ಬದಲಾವಣೆಯಾಗಿದ್ದೆಂದರೆ, ರೂಪಳ ತೊದಲುವಿಕೆ ನಿಂತುಹೋಗಿತ್ತು. ಪೂರ್ತಿ ಅಲ್ಲದಿದ್ದರೂ ಗಂಭೀರ ಪ್ರಮಾಣದಲ್ಲೇ ನಿಂತುಹೋಗಿದ್ದು. ಬೆಂಕಿಹಚ್ಚಿಕೊಂಡಿದ್ದರೆ ಘಾಬರೀ, ಆಘಾತಗಳಲ್ಲಿ ಅವಳ ಇನ್ನೊಂದು ಸಮಸ್ಯೆ ತನ್ನಿಂದತಾನೆ ಬಗೆಹರಿದಿದ್ದುದು ನಮಗೆಲ್ಲ ಕುತೂಹಲ, ಸಂಭ್ರಮದ ಸಂಗತಿಯಾಗಿತ್ತು. ಅಂತೂ-ಇಂತೂ ರೂಪಾ ಬದಲಾದಳು, ಅವಳ ಕೆಲವು ಸುಟ್ಟಗಾಯಗಳನ್ನು ಬಿಟ್ಟರೆ ರೂಪಾ ರೂಪಾನೇ.
ಯಾಕೋ ಇವತ್ತು ರೂಪಾ ನೆನಪಾಗಿ ಇದೆಲ್ಲ ನೆನಪಿನ ಅಂಗಳದಲ್ಲಿ ಬರೆದಿಟ್ಟೆ....

ಬರೆಯಲು ಆಗದ ಮಂಕುತನ

ಫೆಬ್ರುವರಿಯಿಂದ ನಾನು ಬರೆಯುವ ಸಾಹಸವನ್ನೇ ಮಾಡಿಲ್ಲ. ಯಾಕೋ ಒಂದು ತರಹದ ನಿರುತ್ಸಾಹ, ಸದಾ ಮಂಕುತನ ಕವಿದಿರುತ್ತದೆ. ಸಹೃದಯಿ ಸ್ನೇಹಿತರು ಬರೆಯಲು ಪ್ರೋತ್ಸಾಹಿಸುತ್ತಾರೆ, ಆದರೂ ಮನಸ್ಸು ಮನಸ್ಸಿನೊಳಗಿಲ್ಲದೇ ಈ ಶಹರಿನಿಂದ, ಈ ಉಸಿರುಕಟ್ಟುವ ಬೇಜಾರಿನಿಂದ ಬಿಡಿಸಿಕೊಳ್ಳುವ ಬಗೆಯನ್ನೇ ಮೆಲಕು ಹಾಕುತ್ತಿರುತ್ತದೆ. ಜೀವನದಲ್ಲಿ ಮಹತ್ತರವಾದ್ದನ್ನು ಕಳೆದುಕೊಂಡ ಅನುಭವ, ನೋವು ಎರಡನ್ನೂ ಏಕಕಾಲದಲ್ಲಿ ಅನುಭವಿಸುತ್ತಾ, ತಾನು ಯಾವಾಗ ಸರಿಹೋಗುತ್ತೇನೆ ಎಂದು ಮಾನಸಿಕ ರೋಗಿಯಂತೆ ನನ್ನನ್ನೇ ನಾನು ಕೇಳಿಕೊಳ್ಳುತ್ತಾ, ಮನೆ- ಆಫೀಸು, ಆಫೀಸು-ಮನೆ, ಬಸ್ಸಿನಲ್ಲಿ ಜಾಗ ಹಿಡಿದು ಉಸ್ಸೆಂದು ಕೂರುವಷ್ಟು ಸುಸ್ತು, ನಿರುತ್ಸಾಹ. ಇಡೀ ದಿನ ಯಾವುದೋ ಒಂದು ರಸ ನಿಮಿಷಕ್ಕಾಗಿ ಕಾದು ಕುಳಿತಂತೆ ಕಳೆದು, ಸಂಜೆ ಮನೆ ತಲುಪಿದೊಡನೆ ಕೈ ಕಾಲು ಮುಖತೊಳೆದು, ದೇವರಿಗೆ ನಮಿಸಿ, ಟೀ ನೋ, ಹಾರ್ಲಿಕ್ಸೋ ಕುಡಿದು, ಸಂಜೆ ಅಡುಗೆಯ ಬಗ್ಗೆ ಯೋಚಿಸಿ, ಅದು ಮುಗಿದ ನಂತರ ಟೆರೇಸಿಗೆ ಹಾರುತ್ತೇನೆ. ಮಾರ್ಚ್ ತಿಂಗಳ ತಂಪೆರೆಯುವ ಗಾಳೀಗೆ ಮೈಯೊಡ್ಡಿ ಕುಳಿತು, ಮುಖ ಮೇಲೆ ಮಾಡಿ ಕುಳಿತು ನಕ್ಷತ್ರಗಳನ್ನೇ ನೋಡುತ್ತಾ , ನನ್ನ ಆಲೋಚನೆಗಳಲ್ಲೇ ಮುಳುಗಿ ಬಿಡುತ್ತೇನೆ. ಯಾಕೀ ಒಂಟಿತನ, ಬೇಸರ ? ಈ ನೀಲಿಯಾಕಾಶ, ನಕ್ಷತ್ರಗಳ ಮಧ್ಯೆ, ಇಲ್ಲೇ ನನ್ನ ಪಕ್ಕದಲ್ಳೇ ಅವನಿದ್ದಾನೋ ಎಂದು ಭ್ರಮಿಸುವ ನನ್ನ ಸೆಳೆತ ಮತ್ತೆ ಅವನ ಕರೆಗಾಗಿ ಇನ್ನೂ ಎರಡು -ಮೂರು ತಾಸು ಕಾಯಬೇಕಲ್ಲವೆಂಬ ಕಾಯುವಿಕೆಯ ಲವಲವಿಕೆ. ಈಗ ಅನಿಸುತ್ತದೆ ನನ್ನೆಲ್ಲಾ ಬೇಸರದ ಹಾಗೂ ಈ ಸಂಜೆಯ ತಂಪಿನ ಲವಲವಿಕೆಯನ್ನು ತುಂಬಿಕೊಟ್ಟವನಿಗೆ ನೆನಪಿನ ನಮನಗಳು. ಹೀಗೆ ಬೇಸರ ಭಾರವೆನಿಸುವಲ್ಲಿ ನೀ ಮತ್ತೆ ಮತ್ತೆ ನನ್ನನ್ನು ಹಗುರಾಗಿಸಿ, ಹಸಿಯಾಗಿಸುತ್ತಿರು ದೇವ’ಎಂದು.
ನಾಳೆ ಮತ್ತೆ ಬರೆಯುವೆ, ಈ ಬೇಸರ ಹಾಗೂ ಸೋಮಾರಿತನ ಕಾಡದಿರಲಿ ದೇವರೇ...

Saturday, February 9, 2008

ಏನೋ ಒಂಥರಾ...

ಏನು ಹೇಳಲಿ? ಜೀವನವೇ ಒಂಥರಾ ಆಗಿಬಿಟ್ಟಿದೆ. ಮೊನ್ನೆ ಅಪೋಲೋ ದಿಂದ ೪೭೯ ( ಬದರ್ ಪುರದಿಂದ ಪಂಜಾಬಿ ಬಾಗ್ ಹೋಗುವ ಬಸ್ಸು) ಬಸ್ಸು ಏರಿದೆ. ತುಂಬಾ ರಷ್ಯು. ಕೂರಲು ಜಾಗವೇ ಇರಲಿಲ್ಲ, ನಿಂತುಕೊಂಡೆ ಇದ್ದೆ. ಯಾವ ಗಂಡಸೂ ಎದ್ದು ಸೀಟು ಕೊಡಲಿಲ್ಲ, ನಾನು ಆಗ್ರಹ ಪಡಿಸಲೂ ಇಲ್ಲ. ಆದರೆ ಸುತ್ತಲೂ ಸುಮ್ಮನೇ ಕಣ್ನಾಡಿಸಿದೆ. ಯಾರಿಗೂ ಈ ಲೋಕದ ಪರಿವೆಯಿಲ್ಲದಂತೆ, ಯಾರಿಗೂ ಯಾರ ಹಂಗಿಲ್ಲದವರಂತೆ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದವರಂತೆ ತಮ್ಮ ತಮ್ಮ ಲೋಕದಲ್ಲೇ ಮುಳುಗಿದ್ದರು. ಒಬ್ಬ ಮೋಬೈಲ್ ನಲ್ಲಿ ಜಗತ್ತಿನಲ್ಲಿ ತಾನೊಬ್ಬನೇ ಇದ್ಡೇನೆ, ಎನ್ನುವಂತೆ ಜೋರು, ಜೋರಾಗಿ ಮಾತನಾಡುತ್ತಿದ್ದ, ಅದೇ ರೀತಿ ಒಬ್ಬ ಹುಡುಗಿತ ನ್ನ ಹುಡುಗನೊಂದಿಗೆ ವಾದಕ್ಕಿಳಿದಿದ್ದಳು, ಇನ್ನೊಬ್ಬ ಹೆಂಗಸು ಟೈಮಿಗೆ ಸರಿಯಾಗಿ ಆಫೀಸ್ ತಲುಪಲಾಗದೇ ತನ್ನ ಸಹೋದ್ಯೋಗಿಯೊಬ್ಬರಿಗೆ ತಮ್ಮ ಬಾಸ್ ಗೆ ತಿಳಿಸುವಂತೆ ಅಲವತ್ತುಕೊಳ್ಳುತ್ತಿದ್ದರು. ಇನ್ಯಾರೋ ರಾಜಕೀಯ ಸುದ್ದಿ, ಮಾಯಾವತಿಯ ಸಾಹಸವನ್ನೂ , ಬ್ರಷ್ಟಾಚರದಲ್ಲಿ ಅವಳೇನೂ ಕಮ್ಮಿಯಿಲ್ಲವೆಂದೂ ಒಬ್ಬನೆಂದರೇ ಅವಳಷ್ಟು ಶಿಸ್ತಿನ, ಕಠೋರ ಪ್ರವೃತ್ತಿಯವರೇ ಉತ್ತರ ಪ್ರದೇಶ ಅದರಲ್ಲೂ ಗಾಜಿಯಾಬಾದ್ ದಂತಹ ಗೂಂಡಾಗಿರಿ ಪ್ರದೇಶದಲ್ಲಿ ಮಾಯಾವತೀ ಆಡಳಿತ ನಡೆಸಿದಂತೆ ಮತ್ಯಾರೂ ಅಲ್ಲಿ ಸೈ ಅಲ್ಲ ಬೀಡು ’ಎಂದು ಡಿಬೇಟ್ ನಡೆಸಿದ್ದರು. ಸೀಟು ಸಿಕ್ಕವರು ತಮಗೆ ಸಿಂಹಾಸನವೇ ಸಿಕ್ಕಿದೆ ಎನ್ನುವಂತೆ ವಿರಾಜಮಾನರಾಗಿ ಕುಳಿತಿದ್ದರು. ಸೀಟ್ ಸಿಕ್ಕ ಕೆಲ ಗಂಡಸರು ನಿದ್ದೆ ಮಾಡುತ್ತಿರುವವರಂತೆ ನಾಟಿಸುತ್ತಾ ಕಿಟಕಿಗೆ ತಲೆ ಆನಿಸಿಯೋ, ಇಲ್ಲಾ ತಲೆ ಕೆಳಗೆ ಹಾಕಿಕೊಂಡೋ ಕುಳಿತಿದ್ದರು. ಎಲ್ಲಿ ತಲೆ ಎತ್ತಿದರೇ ನಿಂತುಕೊಂಡ ಹೆಂಗಸರು ಜಾಗ ಖಾಲಿಮಾಡಿಸುತ್ತಾರೋ ಎಂಬ ಹೆದರಿಕೆಯಿಂದ ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡು ನಿದ್ದ್ರೆಯಲ್ಲಿದ್ದರು. ಡ್ರೈವರ್ ಮತ್ತು ಕಂಡಕ್ಟರ್ ಇಬ್ಬರನ್ನು ಅವರ ಲೋಕದಲ್ಲಿ ಬಿಟ್ಟರೇ ಉಳಿದವರೆಲ್ಲ ತಮ್ಮ ತಮ್ಮ ಲೋಕದಲ್ಲಿ ವಿಶಿಷ್ಟದವರಂತೆ ತುಂಬಾ ಬಿಸಿಯಾಗಿದ್ದರು. ಎಲ್ಲವನ್ನೂ ನೋಡುತ್ತಾ...ನೋಡುತ್ತಾ...ಯಾಕೋ ಒಂಥರಾ ಅನಿಸತೊಡಗಿತು....ಏನೋ ಒಂಟಿತನಾ, ಶೂನ್ಯತೆ...ಲೋಕವೇ ವಿಚಿತ್ರ ಲೋಕದಂತೆ ಕಾಣಿಸತೊಡಗಿತು. ಈ ಮೊಬೈಲ್ ಲೋಕದಲ್ಲಿ ಮೊಬೈಲ್ ಮೊಬೈಲ್ ಸಮ್ಪರ್ಕವಿದೆ, ಗುರುತು ಪರಿಚಯವಿದೆ ಹೊರತು ಮನುಷ್ಯ ಮನುಷ್ಯರ ನಡುವೆ ಆಸುಪಾಸಿನಲ್ಲೇ ಇಲ್ಲ. ಇದ್ದವರು ನಿರ್ಜೀವಿಗಳಂತೆ ಕಾಣತೊಡಗಿದರು. ಎನೋ ಒಂಥರಾ ಕಸಿವಿಸಿಯಾಗತೊಡಗಿತು........

Friday, February 8, 2008

ಚಾಟ್ ....ಮತ್ತು ’ನಾನಿದ್ದೇನೆ’..... ಮೈ ಹೂಂ ನಾ,,,,,,,

ರವೀ ನಿನ್ನೆ ಚಾಟ್ ನಲ್ಲಿ ಸಿಕ್ಕಿದ್ದ.
ಹೀಗೆ ನಾಲ್ಕೈದು ವರ್ಷಗಳ ಹಿಂದೆ ಆತ ಚಾಟ್ ನಲ್ಲಿ ಸಿಕ್ಕಿ ಮಾತಾಡ್ತಾ ಮಾತಾಡ್ತಾ ಒಳ್ಳೆ ಸ್ನೇಹಿತನಾಗಿದ್ದ. ಆಗೊಮ್ಮೆ ಈಗೊಮ್ಮೆ ಮೆಸೆಂಜರ್ ನಲ್ಲಿ ಬಂದಾಗ, ಅಕಸ್ಮಾತ್ತಾಗಿ ತಾನೂ online ಇದ್ದು ಮಾತಿಗೆ ಸಿಕ್ಕಿಬಿಟ್ಟರೆ ಸಾಕು, ನಾವು ಮಾತನಾಡದ ವಿಷಯವೇ ಇಲ್ಲ. ಮನೆ, ಮಕ್ಕಳು, ನಮ್ಮ ನಮ್ಮ ಬದುಕು, ಜಂಜಾಟಗಳು ದೆಹಲಿ ಜೀವನ, ದೆಹಲಿಯ ವಿಪರೀತ ಹವಾಮಾನ, ಅವನ ದೆಹಲಿವಾಸ, ಅವನ ಕೆಲಸ, ಅವನ ಗೆಳತಿಯರು, ರಾಜಕೀಯ, ಸ್ನೇಹಿತರು, ಮತ್ತೆ ನಮಗಷ್ಟೇ ಗೊತ್ತಿರುವ ಗುಟ್ಟುಗಳು, ಪ್ರೇಮ ಕಾಮ ಇತ್ಯಾದಿ ಒಂದೇ ಎರಡೇ ಸಾವಿರ ಸುದ್ದಿಗಳು, ಮಾತಾನಾಡದ ವಿಷಯವೇ ಇಲ್ಲ. ಯಾವತ್ತೂ ಬೋರ್ ಹೊಡೆದಿಲ್ಲ ನಾನು. ಮೊದಮೊದಲು ಅವನೋಂದಿಗೆ ಮಾತನಾಡಲು ವಿಷಯವೇ ಸಿಗುತ್ತಿರಲಿಲ್ಲ, ಈಗ ಯಾಕೋ ರವಿಯೆಂದರೆ ಅಚ್ಚುಮೆಚ್ಚು ನನಗೆ. ಹೆಚ್ಚು ಸಂಪರ್ಕವಿರದಿದ್ದರೂ ಯಾವಾಗಾದರೂ ಒಮ್ಮೆ ಮೆಸೆಂಜರ್ ನಲ್ಲಿ ಕಂಡರೆ ಮಾತನಾಡುವಷ್ಟು ಸ್ನೇಹವಿದೆ. ಕಿವಿಗೊಟ್ಟು ಕೇಳುವ ಅಂತಕರಣವಿದೆ. ಯಾವತ್ತಲೂ ನನಗೆ ಒಂದಿಲ್ಲಾ ಒಂದು ವಿಷಯದ ಬಗ್ಗೆ ಬಹಳ ಮುತುವರ್ಜಿಯಿಂದ ಸಲಹೆ ಕೊಡುತ್ತಾನೆ. ಕಿವಿಗೊಟ್ಟು ಕೇಳುತ್ತಾನೆ, ಎಂದೂ ಬೇಸರಿಸಿಲ್ಲ. ತಾನೆಲ್ಲೋ ಒಂದಿಲ್ಲಾ ಒಂದು ಗೊಂದಲದಲ್ಲಿ, ಚಿಂತೆಯಲ್ಲಿ ಮುಳುಗಿದಾಗ ಆತ ಆಪದ್ಬಂಧುವಂತೆ ಚಾಟ್ ನಲ್ಲಿ ಬಂದು ತನಗೆ ಸಮಾಧಾನ ಪಡಿಸಿರುತ್ತಾನೆ....
ಈಗ ಆಗಿದ್ದೂ ಅದೇ. ಮನೆಯಲ್ಲಿ ಗಂಡನಿಗೆ ಹದಿನೈದು ದಿನಗಟ್ಟಲೇ ಭೇದಿಯಾಗಿ ಹುಷಾರಿಲ್ಲದೇ,ಆತ ತನ್ನ ಯಾವುದೊಂದು ಮಾತು ಕೇಳದೇ, ಎಲ್ಲೂ ತೋರಿಸಿಕೊಳ್ಳದೇ ವಿಪರೀತಕ್ಕೀಡಾದಾಗ ತಾನೇ ಕಣ್ಣೀರಿಡುತ್ತಾ ಅಪೋಲೊದಲ್ಲಿ ದೊಡ್ಡ ಸ್ಪೆಶಿಯಾಲಿಸ್ಟ್ ಕಡೆ ತೋರಿಸಿ ಈಗತಾನೆ ತುಸು ಸುಧಾರಿಸಿಕೊಂಡಿದ್ದಾನೆ. ಆಗೆಲ್ಲ ಕಾಡಿದ ಅಸುರಕ್ಷಾ ಭಾವ, ಒಂಟಿತನ, ತಬ್ಬಲಿಯಂತಾಗಿ ಬಿಡುವ ಭಯ, ತನಗೆ ಯಾರೂ ಇಲ್ಲವೆನ್ನುವ ನೋವು ಯಾರಲ್ಲಿ ಹೇಳಿಕೊಳ್ಳುವುದು. ? ಯಾರೂ ಇಲ್ಲವೆನ್ನುವ ನೋವಿನಲ್ಲೇ ನನ್ನ ಆಪದ್ಬಂಧು ರವೀ ಚಾಟ್ ನಲ್ಲಿ ಕಾಣಿಸಿಕೊಂಡಿದ್ದು. ಅವನಲ್ಲಿ ಎಲ್ಲ ಹೇಳಿಕೊಂಡು, ಅಳುತ್ತಳುತ್ತಲೇ ಟೈಪಿಸುತ್ತಿದ್ದೆ. ಎಲ್ಲ ಕೇಳಿದ ರವಿ ಅಂದಿದ್ದು, ಯಾಕೆ ನಾನಿಲ್ಲವಾ? ನಿನ್ನ ಯಾವದೇ ಸಮಯದಲ್ಲೂ ಒಬ್ಬಳೇ ಎಂದು ತಿಳಿಯಬೇಡಾ, ನಾನಿದ್ದೇನೆ, ಒಂದು ಮಿಸ್ಸ್ಡ್ ಕಾಲ್ ಕೊಡು, ನಾನು ಫೋನಾಯಿಸುತ್ತೇನೆ, ಮೈ ಹೂಂ ನಾ, ಯಾವುದೇ ತೊಂದರೆ ಇರಲಿ, ನನ್ನಲ್ಲಿ ಹೇಳು, ಸಂಕೋಚಿಸಿಕೊಳ್ಳದೇ ಯಾವುದೇ ಸಹಾಯವನ್ನಾದರೂ ಕೇಳು ಅನ್ನುವಾಗ ಎದೆ ತುಂಬಿ ಬಂದು ಕಣ್ಣ ಮೂಲಕ ಹರಿದು ಹಗುರವಾಗತೊಡಗಿತು. ಇಷ್ಟು ದಿನದ ದುಗುಡವನ್ನು ಒಂದೇ ಮಾತಿನಿಂದ ಅಳಿಸಿ ಹಾಕಿದ, ನನ್ನೆಲ್ಲಾ ಆತ್ಮವಿಶ್ವಾಸವನ್ನು ಒಂದುಗೂಡಿಸಿ ಧೈರ್ಯ ನೀಡಿದ ರವಿಗೆ ನನ್ನ ಹೃತ್ಪೂರ್ವಕ ನಮನಗಳು. ಮನ ಒಂದೇ ಸಮನೇ ತುಂಬಿ ಬರುತ್ತಿತ್ತು. ಸಧ್ಯ ದೇವರೇ ಅವನನ್ನು ನನ್ನ ಸಮಾಧಾನ ಪಡಿಸಲೊಸುಗ ಕಳಿಸಿರಬಹುದೆಂದು ಕಾಣದ ದೈವಕ್ಕೆ ಮನದಲ್ಲೇ ವಂದಿಸಿದೆ.
ರವಿ ಕೇಳುತ್ತಿದ್ದ, ಮತ್ತೆ ದೆಹಲಿಯೆನೆನ್ನುತ್ತದೆ. ಇಲ್ಲಿ ತುಂಬಾ ಛಳೀ ಇದೆ, ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿದೆ, ಮಂಜಿನ ತೆಳು ಪರದೆ ಹೊದ್ದ ದೆಹಲಿಯಲ್ಲಿ ನನಗಂತೂ ಎಲ್ಲೂ ಹೋಗೊಕ್ಕೆ ಆಗಲ್ಲ ಆದ್ರೂ ಆಫೀಸಿಗೆ ಬರಲೇ ಬೇಕು. ಥೂ ದರಿದ್ರ ಛಳಿ ಅಂದದ್ದಕ್ಕೆ ಆತನ ದೃಷ್ಟಿಕೋನವೇ ವಿಭಿನ್ನವಾಗಿತ್ತು. ಯಾಕೆ ಹಾಗೇಕೆ ತಿಳಿದುಕೋಬೇಕು ? ನಾವಿರುವ ದೇಶವೆಷ್ಟು ಸುಂದರ. ಇಲ್ಲಿ ಎಲ್ಲಾ ಋತುಮಾನಗಳನ್ನು ನಾವು ಕಾಣುತ್ತೇವೆ. ಬೇರೆ ದೇಶಗಳಲ್ಲಿ ಇಲ್ಲದ ವಿಭಿನ್ನ, ವಿವಿಧ ಹವಾಗುಣ ನಮ್ಮದು. ಬೇಸಿಗೆ, ಮಳೆ, ಛಳಿ, ಬೇಸಿಗೆ ಮತ್ತು ಮಳೆ ನಡುವಿನ ಆಷಾಡದ ಭೊರ್ರೋ ಎನ್ನುವ ಗಾಳಿಯಿದೆ, ಮಳೆ ಮತ್ತು ಛಳಿ ನಡುವಿನ ಶರದೃತುವಿದೆ, ಛಳಿ ಮತ್ತು ಬೇಸಿಗೆ ನಡುವಿನ ವಸಂತ ಋತುವಿದೆ. ಥರಗುಡುವ ಛಳಿಯಲ್ಲೂ ಧನುರ್ಮಾಸ, ಮಾಘಸ್ನಾನ ಪುಣ್ಯದಿನಗಳ ಸಂಕ್ರಮಣವಿದೆ ಎಷ್ಟು ಸೊಗಸಾದ ದೇಶ ನಮ್ಮದು. ಇದಕ್ಕಾಗಿ ಖುಶಿ ಪಡಬೇಕು. ಆಷ್ಟೇ ಖುಶೀ ನಾವು ಪಡೆದು ಕೊಂಡ ಮಾನವ ಜನ್ಮಕ್ಕಾಗಿ. ರವೀ ಚಾಟ್ ಬಾಕ್ಸ್ ನಲ್ಲಿ ಟೈಪಿಸುತ್ತಿದ್ದ, ನನಗೆ ಅವ ನನ್ನ ಹತ್ತಿರವೇ ಕುಳಿತು ಮಾತಾನಾಡಿದಂತೆ, ಅವನ ಒಂದೊಂದು ಮಾತೂ ನನ್ನ ಒಂದೊಂದು ನೋವನ್ನು, ಅವಿವೇಕಿತನವನ್ನು ತೊಡೆದು ಹಾಕುವಂತೆ ಭಾಸವಾಗುತ್ತಿತ್ತು. ಈ ಕ್ಷಣ ಉರುಳದಿರಲಿ ಎಂದು ಮನ ಹಾರೈಸುವಂತೆ. ದೇವರು ನನಗೆ ಇಂಥ ಒಬ್ಬ ಗೆಳೆಯನನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಮೌನದಲ್ಲೇ ಅರ್ಪಿಸುತ್ತ....ಮಾತುಗಳನ್ನು ಕೇಳುತ್ತಾ ಕುಳಿತಿದ್ದೆ. ಹೊರಗೆ ಬಾಲ್ಕನಿಯಲ್ಲಿ ಮಳೆಯ ತುಂತುರು ತುಂತುರು ಹನಿ ನಿಂತು ರವಿ ಮೂಡಿ ಹಿತವಾದ ಎಳೆಬಿಸಿಲು ಅರಳುತ್ತಿತ್ತು.....ನೋಡುತ್ತಲೇ ಇದ್ದೆ.
ರವೀ ಇಂದು ಚಾಟ್ ನಲ್ಲಿ ಬರುತ್ತಾನಾ ಅಂತ ಕಾಯುತ್ತಾ..........ಮುಗಿಸುತ್ತಿದ್ದೇನೆ.