ಕಡೆಂಗೋಡ್ಲು ಶಂಕರಭಟ್ಟರು’ ಆರಾದರೇನವರ ಒಳ ಬಾಳು ಬೇರಿಹುದು
ಒರೆ ಬೇರೆ ಒಳ ಬಾಳು ಬೇರೆ
ಜೋಡಾಗಿ ಸೇರಿದರೆ ಒಂದಾಗಿ ತೋರುವುದು
ಅದರಂತೆ ಬಾಳುವೆಯ ಮೋರೆ !
ಅನುಭವವು ಸವಿಯಲ್ಲ ; ಅದರ ನೆನಪೇ ಸವಿಯು. ಅದ ಕದ್ದು ಮೇಯದೇ ಮನವು ?
ಅವನೊಂದಿಗೆ "ಫ್ಯಾಮಿಲಿ ಗಾರ್ಡನ್" ಬಾರ್ ಅಂಡ್ ರೆಸ್ಟ್ಯೂರಾಂಟ್ನಲ್ಲಿ ತಮ್ಮಿಬ್ಬರ ಉಸಿರು ಉಸಿರಿಗೆ ತಾಗುವಂತೆ, ಕಣ್ಣು ಕಣ್ಣಲಿ ಪಿಸುಗುಡುವಂತೆ ಕುಳಿತು, ಅವನೇ ಆರಿಸಿ, ಅವಳಿಗಾಗಿ ಪ್ರೀತಿಯಿಂದ ಆರ್ಡರ್ ಮಾಡಿದ ಜಮೈಕಾವನ್ನು ಅವನೆದೆ ತುಂಬಿ ಉಕ್ಕಿ ಉಕ್ಕಿ ಹರಿಯುವ ಪ್ರೀತಿಯಂತೆ ಈ ಬಾಳ ಬಟ್ಟಲನ್ನು ತುಂಬಿದ ಪ್ರೀತಿಯನ್ನು ಹೀರುತ್ತಾ ನಿಧಾನವಾಗಿ, ಅದರಲ್ಲಿ ಲೀನವಾಗಿ, ಅನನ್ಯತೆಯಿಂದ ಅದರ ರಸವನ್ನು ಆಸ್ವಾದಿಸುತ್ತಾ, ತನ್ನ -ಅವನ ಈ ಜನುಮದ ಪ್ರೇಮದ ಪಯಣ ಬೇಗ ಮುಗಿಯದಂತೆ ಹೇ! ದೇವರೆ, ನಮ್ಮನ್ನು ಜತೆಯಾಗಿಟ್ಟಿರು ಎಂದು ಬೇಡಿಕೊಳ್ಳುತ್ಟಾ, ಸದಾ ಈ ಗುಲಾಬಿ ತುಟಿಗಳ ಅಂಚಿಗೆ ಅವನಿಡುವ ಹೂ ಮುತ್ತು ನವಿರಾಗಿ ತಾಗಿ, ಹಸಿಯಾಗುತ್ತಾ , ಪುಳಕಗೊಳ್ಳುತ್ತಾ, ಅನನ್ಯತೆಯಲಿ ಅವಳ ಒಳಗೆಲ್ಲಾ ಹಸಿ ಹಸಿಯಾಗಿ ಇಳಿಯುತ್ತಾ ಹಾಗೇ ಅವಳ ಕಣ್ಣು ತೇವಗಾಗುತ್ತಿದ್ದವು. ಕಣ್ಣು ತುಂಬಿ ತುಂಬಿ ಈಗಲೋ ಆಗಲೋ ತುಳುಕಲು ಹಾತೊರೆಯುತ್ತಿತ್ತು ಕಂಬನಿಯೊಂದು. ಥೇಟ್ ಅವನ ಸೇರಲು ಹಾತೊರೆಯುವ ತನ್ನಂತೆ !! ಈ ಕ್ಷಣಗಳು ಕಳೆದರೆ ತನ್ನ ಪಾಲಿಗೆ ಮತ್ತೆ ಬರುವುದು ದೀರ್ಘ ಅಗಲಿಕೆ. ಸದಾ ಅವನ ರೂಪವೇ ಕಣ್ಣಲ್ಲಿ, ಕಿವಿಯಲ್ಲಿ ಆತನ ಮಾತುಗಳ ಕಿಣಿಕಿಣಿಸುತ್ತಿರುತ್ತವೇ. ಅವನ ಹಿತವಾದ ಸ್ಪರ್ಶ, ಮಿನುಗುವ ಕಂದು ಕಣ್ಣಿನ ಅಪ್ಯಾಯತೆ,ತನ್ನ ಹಗಲಿರುಳು ಕಾಡುವ ಅವನ ನೋಟ, ಸುರಿಸುವ ಮುತ್ತುಮಳೆ, ಪ್ರೀತಿಯನ್ನುಕ್ಕಿಸುವ ತುಟಿಗಳು,”ನೀನು ಸೌತೆಕಾಯಿ ತಿನ್ನಬೇಡ ಚಿನ್ನಾ, ಗಂಟಲು ನೋವು ನಿನಗೆ’ ಪ್ರೀತಿಯಿಂದಲೆ ಗದರುತ್ತಾ, ಸಲಾಡ್ ತಟ್ಟೆಯನ್ನು ಆಚೆಗೆ ಎತ್ತಿಡುವ ಅವನ ಮಮತೆ, "ಛಳಿಯಾಗ್ತಾ ಇದೆಯಾ?" ತಾವು ಏ.ಸೀ. ಹತ್ತಿರವೇ ಕೂತಿದ್ದಕ್ಕೆ ಅವಳಿಗೆ ಛಳಿಯಾಗುತ್ತಿರಬಹುದೆನ್ನುವ ಅವನ ಕಾಳಜೀ, ಕಕ್ಕುಲತೆ, ಮೋಹ, ಪ್ರೇಮ -ಕಾಮ ಎಲ್ಲವನ್ನೂ ಜಮೈಕಾ ಗ್ಲಾಸಿನಲ್ಲಿ ಕಾಣುತ್ತಾ, ಖಾಲಿ ಖಾಲಿಮ ಮೌನವನ್ನು ತನ್ನೊಳಗೆ ತುಂಬಿಕೊಳ್ಲುತ್ತಾ, ಕನಸಿನಲ್ಲಿ ತೇಲುತ್ತಾ, ನೋವಿನಲ್ಲಿ ನರಳುತ್ತಾ ಒಳಗೊಳಗೇ ಬಿಕ್ಕಳಿಸುತ್ತಾ ಯೋಚಿಸುತ್ತಿದ್ದಳು ಯಾಕೆ ನೆನಪುಗಳು ಸುಂದರವಾಗಿರುತ್ತವೆ ? ಯಾಕೆ ಕಾಡುತ್ತವೆ ? ನೆನಪುಗಳೆ ಹಾಗೇನೋ, ವರ್ತಮಾನಕ್ಕಿಂತ ನೆನಪುಗಳೇ ಸುಂದರ. ಯಾಕೆ ಈ ಕ್ಷಣಗಳು ನೋವನ್ನೂ- ಸುಖವನ್ನೂ ಒಟ್ಟಿಗೇನೀಡುತ್ತವೆ. ಒಮ್ಮೇಲೆ ಕನಸಿನಿಂದ ಎಚ್ಚೆತ್ತ ಭಾವ, ಅವೇ ಕಳೆದ ಸುಂದರ ಕ್ಷಣಗಳು ವಿರಹದ ತಾಪವನ್ನೂ ಅಗಲಿಕೆಯ ನೋವನ್ನೂ ಕೊಡುತ್ತವೆ. ಅವನೆ ನೆನಪೆಂದರೆ ದಿನಕ್ಕೊಮ್ಮೆಯಾದರೂ ಅಳುತ್ತಾಳೆ. ಕಳೆದುಹೋದ ಕ್ಷಣಗಾಳಿಗಾಗಿ ಸಂಕಟಪಡುತ್ತಾಳೆ. ಅವನ ಹಿರಿಮೆ ದೊಡ್ಡದು. ಎಲ್ಲವನ್ನೂ ಅವಳಿಗಾಗಿ ಕೊಟ್ಟಿದ್ದಾನೆ. ತನ್ನದಾದ ಎಲ್ಲವನ್ನೂ ಮತ್ತು ತನ್ನದಲ್ಲದ ಬದುಕಿನಿಂದಲೂ ಆವನು ಬಾಚಿ ಬಾಚಿ ಅವಳ ಮಡಿಲು ತುಂಬಿದ ಪ್ರೀತಿ ನೆನಪು ಒಮ್ಮೆ ತುಟಿಯಂಚಲಿ ನಸು ನಗು ಮೂಡಿಸಿದರೆ, ಇನ್ನೊಮ್ಮೆ ಕಣ್ಣು ಕೊಳಗಳಾಗುತ್ತವೆ. ಅಳು ಒತ್ತರಿಸಿಬರುತ್ತದೆ. ನಿನ್ನ ಬಿಟ್ಟು ಹೇಗೆ ಬದುಕುತ್ತಿದ್ದೇನೆ ಗೊತ್ತಾ? ಬದುಕಬಲ್ಲೇನೆ? ನೀನಿಲ್ಲದ ಬದುಕನ್ನೂ ಹೇಗೆ ಊಹಿಸಲಿ? ನನಗೆ ಬದುಕೆಂದರೆ ನೀನೆ. ನೀನಿಲ್ಲದ ಬದುಕೂ ಒಂದು ಬದುಕಾ? ಬಂದು ಬಿಡು ಒಮ್ಮೆ. ಸದಾ ದೇವರಲ್ಲಿ ಮೊರೆಯಿಡುತ್ತಿರುತ್ತಾಳೆ.”ಅವನ ಸ್ನೇಹ, ಸಾಮಿಪ್ಯ, ಸಾಂಗತ್ಯವನ್ನು ಎಲ್ಲಾ ಜನ್ಮಕ್ಕೂ ನೀಡು’ ಎಂದು.
ಅವನು ಆಗಸದ ಚುಕ್ಕೆಗಳನ್ನು ತಂದು ಕೊಡದಿದ್ದರೂ ಬೆಳದಿಂಗಳ ರಾತ್ರಿ, ಅವಳ ಎದುರು ಕುಳಿತು, ಕಣ್ಣಲ್ಲಿ ಕಣ್ಣಿಟ್ಟು, ತಾನು ಉಣ್ಣುವ ಮೊದಲ ತುತ್ತನ್ನು ಅವಳ ಬಾಯಿಗೆ ಉಣ್ಣಿಸಿದ್ದಾನೆ, ಅಷ್ಟೇ ಪ್ರೀತಿಯಿಂದ ಅವಳುಣಿಸಿದ ಕೈತುತ್ತನ್ನೂ ಪರಮಾನಂದವನ್ನು ಅನುಭವಿಸಿದಂತೆ ಕಣ್ಮುಚ್ಚಿ ಸವಿದಿದ್ದಾನೆ. ಬಾಯಿಂದ ಬಾಯಿಗೆ ಗುಬ್ಬಚ್ಚಿ ಗುಟುಕು ನೀಡಿದಂತೆ ಒಬ್ಬರಿಗೊಬ್ಬರು ಗುಟುಕು ನೀಡಿ ಜೋಡಿಹಕ್ಕಿಗಳಂತೆ ನಲಿದಿದ್ದಾರೆ, ಜಗಳಾಡಿಕೊಂಡರೂ ಮತ್ತೆ ಇನ್ನೆಂದೂ ಜಗಳಾಡುವುದಿಲ್ಲವೆಂದು ತಮ್ಮನ್ನೇ ಬೈದುಕೊಂಡು ಮತ್ತೆ ಒಂದಾಗಿದ್ದಾರೆ.ಏನೆನ್ನಬೇಕು ಈ ಸಂಬಂಧಕ್ಕೆ ? ಯಾಕಿಷ್ಟು ಮೋಹ ಅವನೊಂದಿಗೆ? ಯಾಕಿಂಥ ಪ್ರೇಮ ಅವನ ಮೇಲೆ? ಅರ್ಥವಾಗಿಲ್ಲ ಇನ್ನೂ. ಅವನೆಂದರೆ ತನ್ನ ಬದುಕಿನಲ್ಲಿ ಕನಸು ಮತ್ತು ವಾಸ್ತವದ ಸ್ವರೂಪ.
ಊಟ ಮುಗಿಸಿ ರೂಮಿಗೆ ಬಂದಾಗಲೂ ತಾವು ಹೀಗೆ ಸದಾ ಜೊತೆಯಾಗಿಯೇ ಇದ್ದೇವೇನೋ ಎಂಬಂತೆ ಒಬ್ಬರ ಎದೆ ಮಿಡಿತ ಇನ್ನೊಬ್ಬರು ಆಲಿಸುತ್ತಾ, ಲೆಕ್ಕವಿಲ್ಲದಷ್ಟು ಕನಸುಗಳನ್ನು, ನಾಳೆಗಿಡುವ ಚುಕ್ಕಿಗಳನ್ನು, ಕಡಲಿನಾಳದಿಂದ ಮುತ್ತನ್ನು ಹೆಕ್ಕುತ್ತಾ, ಎಂದೂ ಅಗಲದಂತೆ ತಬ್ಬಿಕೊಳ್ಳುತ್ತಾ ಆಗಾಧ ಸಮುದ್ರದಂತೆ ಭೋರ್ಗರೆಯುತ್ತಿದ್ದ ಪ್ರೇಮಿಗಳು. ಇಬ್ಬರ ಸ್ನೇಹವೂ ಅನನ್ಯವಾದುದು, ಗಾಡವಾದುದು. ಒಬ್ಬರಿಗೊಬ್ಬರು ಸಮರ್ಪಿಸಿಕೊಂಡಾಗಿದೆ, ಒಬ್ಬರಿಗೊಬ್ಬರಲ್ಲಿ ಆಳವಾಗಿ ಇಳಿದುಹೋಗಿದ್ದಾರೆ. ಮನಸು ಮನಸುಗಳು ಬೆರೆತಿವೆ, ದೇಹವೆರಡು ಪ್ರಾಣವೊಂದೇ ಎನ್ನುವಂತೆ. ಒಬ್ಬರ ಮಾತು ಒಬ್ಬರು ಕೇಳುತ್ತಾರೆ ಎರಡಿಲ್ಲದ ಒಮ್ಮತ ಅವರದು. ಅವನು ಹೇಳಿದ್ದು ಅವಳಿಗೆ ಹಿತ, ಅವಳು ತೋರಿದ್ದು ಅವನಿಗೆ ದೇವಿಯ ಆದೇಶ, ದಾರಿ ದೀಪ. ಆತ ಅವಳಿಗೆ ವಿಧೇಯ, ಅವಳು ಅವನಿಗೇ ಮೀಸಲು.
"ಯಾವಾಗ ಬರ್ತೀಯಾ ರಾಜಾ?"
ಆಫೀಸಿಗೆ ಹೋದ ಅವನನ್ನು ಕಾಯುತ್ತಾ, ಬೋರು ಹೊಡೆಯುತ್ತಿದ್ದ ರೂಮಿನಲ್ಲಿ ಏನೂ ಮಾಡದೇ ತೋಚದ ಇವಳು ಕೇಳುತ್ತಿದ್ದಳು.
"ಇರು ಪುಟ್ಟಾss, ಬಂದ್ಬಿಟ್ಟೆ ಇನ್ನೊಂದು ಕಾಲು ಗಂಟೆಯಲ್ಲಿ, ನೀನು ತಯಾರಾಗಿರು ಹೊರಗೆ ಹೋಗೋಣ, ಬರ್ತಾ ಊಟನೂ ಮಾಡ್ಕೊಂಡ್ ಬರೋಣ" ಅವನ ಇಂಪಾದ ದ್ವನಿ ಎದೆಗಿಳಿಯುತ್ತಲೇ ನವಿಲಾಗಿ ಅವಳ ಮನ ಗೆಜ್ಜೆ ಕಟ್ಟಿ ಕುಣಿಯತೊಡಗಿತ್ತು. ಜಿಂಕೆಯಂತೆಹಾರಿ, ತಲೆಬಾಚಿ, ಚೆನ್ನಾಗಿ ಬಿಸಿ ನೀರಿನಲ್ಲಿ ಮುಖತೊಳೆದು, ಬೇರೆ ಡ್ರೆಸ್ ಹಾಕಿ ಕಾಯತೊಡಗಿದ್ದು ಇಂದು ಬರಿ ನೆನಪಾಗಿ ಕಾಡತೊಡಗುತ್ತದೆ. ಎದೆಯಲ್ಲಿ ನೂರು ಶೂಲ ಚುಚ್ಚಿದಂತೆ ಮನ ಮುಳ್ಳಾಗುತ್ತದೆ. ಬರುವ ಇನಿಯನಿಗಾಗಿ ಕಾಯುತ್ತಿರುವುದರಲ್ಲಿ ಎನು ಸುಖವಿದೆ, ಎಂಥಾ ಅಮಲಿದೆ, ಸೊಗಸಿದೆ, ಚೆಲುವಿದೆ, ಮತ್ತೇ ಬಾರವೇ ಆ ಸುದಿನಗಳು ? ಅವನು ಯಾವಾಗ್ಲೂ ಹೇಳ್ತಾನೆ ಇರ್ತಿದ್ದ, "ಸುದಿನಗಳು ನಮಗೆ ಬರ್ತಾವೆ ಇರು, ಕಾಯೋಣ’ ಆದ್ರೆ ಕಾಯೋದು ಎಷ್ಟು ಹಿಂಸೆ ಅಂತಾ ಕಾಯೋರಿಗೆ ಗೊತ್ತು.
ಆಫೀಸಿನಿಂದ ಬರುವ ಅವನನ್ನು ಏದುರುಗೊಳ್ಳುವ ಅವಳ ಕಣ್ಣ ತುಂಬ ಆಗಸದ ನೀಲಿ ನೀಲಿ, ಅವನ ಕಣ್ಣಲ್ಲಿ ಇಣುಕುವ ಮಿನುಗು ನಕ್ಷತ್ರ ನಗೆ. ಒಳಗೆ ಬಂದು ಹಾಸಿಗೆ ಮೇಲೆ ಮೈಚೆಲ್ಲಿದ ಅವನಿಗೆ ’ನೀರು ಕುಡಿ ರಾಜಾ, ಕಾಫಿ ತರಿಸ್ಲಾ? ಎನ್ನುವ ಆಕೆಯ ಎರಡು ಮಾತೇ ಸಾಕು ಆಯಾಸವೆಲ್ಲ ಕಳೆದು ನವ ಉತ್ಸಾಹ ತುಂಬಿಕೊಳ್ಳಲು.
ಬಿಕ್ಕುತ್ತಿತ್ತು ಗತಿಸಿದ ಕ್ಷಣ. ಅವನೊಂದಿಗೆ ಕಳೆದ ಮೂರು ದಿನಗಳು ಗೊತ್ತೇ ಆಗಲಿಲ್ಲ. ನಮ್ಮ ಬದುಕು ಯಾವುದು? ನಾವು ಬಯಸುವ ಬಾಳು ನಮ್ಮದಾಗುವುದಾ? ಜೊತೆಯಾಗಿ ಇಟ್ಟ ಹೆಜ್ಜೆ, ತೋಳಲ್ಲಿ ತೋಳು ಬಳಸಿ ನಡೆದ ನಡೆ, ಹಂಚಿಕೊಂಡ ತುತ್ತು, ಕಾಡಿ-ಬೇಡಿ ಸವಿದ ಸವಿ, ಸರಸ-ವಿರಸ, ಮೋಡವಾಗಿ ಕವಿದು, ಮತ್ತೆ ಮಳೆ ಸುರಿಸಿದ ಅವಳ ಪ್ರೇಮ, ಸಮುದ್ರದಂತೆ ಅವಳ ಮೇಲೆ ಆವರಿಸಿ ಸುರಿದು, ಮುಳುಗಿಸಿ ಎಳಿಸಿದ ಅವನ ಮುತ್ತು ಮಳೆ ಎಲ್ಲ ನೆನಪಾಗಿ ಕಣ್ಣಂಚಿಗೆ ಹನಿ ಮುತ್ತು ಇಣುಕುತ್ತಿರುತ್ತದೆ. ಒಳಗೆಲ್ಲಾ ಮೌನ ತುಂಬಿಕೊಂಡು ಉಸಿರು ಭಾರವಾಗಿ ಕುಳಿತು ಆ ಮೌನದಲ್ಲಿ ಬಿಕ್ಕಳಿಕೆ ಕರಗತೊಡಗುತ್ತದೆ. ಹೊರಗೆ ಬಾರದೇ ಒಳಗೆ ಅದುಮಿಡದ ಸಂಕಟಕ್ಕೇ ಒಳಗೇ ನರಳತೊಡಗುತ್ತಾಳೆ.
ನಿನಗೊಂದಿಷ್ಟು ನೆನಪಿನ ಹೂ ಮುತ್ತುಗಳು. ಎತ್ತಿಕೋ ಮೆಲ್ಲಗೇ.....
ಒಲವಿನಿಂದ ನಿನ್ನವಳು.
ಚಿನ್ನು.